Thursday, 29 August 2013

ಬರಹವೆಂಬ ನುಡಿತೋರಣಕೆ 'ಶೀರ್ಷಿಕೆ 'ಎಂಬ ಚಿತ್ತಾಕರ್ಷಕ ನಾಮದ ಬಲವೊಂದಿದ್ದರೆ ಸಾಕೇ?

ಇತ್ತೀಚೆಗೆ ಅಂತರ್ಜಾಲ ತಾಣದಲ್ಲಿಯೋ ಅಥವಾ ನಮ್ಮ ಇತರೇ ಮಾಧ್ಯಮಗಳಲ್ಲಿಯೋ ಕಂಡುಬರುತ್ತಿರುವ ಒಂದು ಸೂಕ್ಷ್ಮವನ್ನು ನಾವೆಲ್ಲರೂ ಗಮನಿಸಿರಬಹುದೆಂದಾದರೆ ಅದು ಶೀರ್ಷಿಕೆ. ಯಾವುದೇ ಸುದ್ದಿ ಅಥವಾ ಬರಹಗಾರನೊಬ್ಬನ ರಚನೆಗೆ ಅವರು ಕೊಡುವ ಶೀರ್ಷಿಕೆ ಹೆಚ್ಚು ಮಹತ್ವ ಪಡೆಯುತ್ತಿದೆಯೇನೋ ಎಂದನಿಸುತ್ತಿರಬಹುದು. ಶೀರ್ಷಿಕೆಗೆ ಇರುವ ಮಹತ್ವವನ್ನು ಅಲ್ಲಗಳೆಯದೇ ಮಾತು ಮುಂದುವರಿಸುವುದಾದಲ್ಲಿ, ಒಂದು ಸುದ್ದಿ ಇಲ್ಲವೇ ಬರಹದ ಆಕರ್ಷಣೆಯ 'ಮುಂಡಾಸು' ಅಥವಾ ಕಿರೀಟಪ್ರಾಯವೆಂದರೆ ಅದರ ತಲೆಬರಹ ಅಥವಾ ಶೀರ್ಷಿಕೆ ಯಾನೆ ಶಿರೋನಾಮೆ! ಆದರೆ ಅದು ಆದರ್ಶಪ್ರಾಯವೂ ಆಗಿರಲೇಬೇಕಾದುದು ಅನಿವಾರ್ಯವೂ ಕೂಡ. ಇಲ್ಲವೆಂದಾದಲ್ಲಿ ಕಟ್ಟಿದ ಆ ಮುಂಡಾಸಿನ ಮೌಲ್ಯ, ಬರಹದ ದೇಹಕ್ಕೆ ಒಪ್ಪಿತವಾಗದೆ ಆಭಾಸವಾದೀತು!

ಹಾಗಾದರೆ ಶೀರ್ಷಿಕೆ ಯಾವ ರೀತಿಯಲ್ಲಿರಬೇಕು ಎನ್ನುವ ಕಟ್ಟುಪಾಡೇನಾದರೂ ಇದೆಯೇ ಎಂಬ ಪ್ರಶ್ನೆಗಂತೂ ಉತ್ತರವಿಲ್ಲ. ಸುದ್ದಿಲೋಕವನ್ನು ಈ ನಿಟ್ಟಿನಲ್ಲಿ ಹೊರಗಿಟ್ಟು, ಕೇವಲ ಬರಹಲೋಕಕ್ಕೆ ಸೀಮಿತಗೊಳಿಸಿಕೊಂಡು ಮುಂದಿನ ಮಾತುಗಳನ್ನು ಆಡುವುದಾದರೆ, ಒಂದು ಲೇಖನ ಅಥವಾ ಬರಹದ ಒಳಗಿನ ಪ್ರಸ್ತಾಪ, ವಿಚಾರ, ಚಿಂತನೆಗಳಿಗೆ ಪ್ರತಿಬಿಂಬವಾಗಿ ನಿಲ್ಲಬೇಕಾಗುತ್ತದೆ ತಲೆಬರಹ. ಹನಿಯೋ, ಕವನವೋ, ಕವಿತೆಯೋ, ಕಾವ್ಯವೋ, ಪದ್ಯವೋ, ಹಾಸ್ಯವೋ, ಕಥೆಯೋ, ಗದ್ಯವೋ, ಲೇಖನವೋ, ಕಾದಂಬರಿಯೋ ಒಟ್ಟಿನಲ್ಲಿ ಎಲ್ಲ ಪ್ರಕಾರಗಳೂ ಕೂಡ, ಗುರುತಿಸಿಕೊಳ್ಳುವುದು ತಮ್ಮ ತಲೆಬರಹ, ಶೀರ್ಷಿಕೆಗಳಿಂದ! ಓದುಗ ಪ್ರಪಂಚದ ಮನದಾಳದಲ್ಲಿ ಯಾವುದೇ ಬರಹ/ಪುಸ್ತಕದ ನೆನಪನ್ನು ಅಚ್ಚಳಿಯದಂತೆ ಉಳಿಸುವುದೂ ನಮ್ಮ ನಿಮ್ಮೆಲ್ಲರಿಗಿರುವ ನಾಮದ ಬಲದಂತೆ ಅದರ ಶೀರ್ಷಿಕೆ.

ಮೇಲಿನ ಮಾತನ್ನು ಎತ್ತಿಹಿಡಿಯುತ್ತಾ ಬರಹಕೆ ಮೇರು 'ತಲೆಬರಹ' ಎನ್ನಬಹುದಾದರೂ; ತನ್ನ ಅತೀವ ಪ್ರಭಾವದಿಂದ ಕೆಲವೊಮ್ಮೆ ಬರಹಗಳೊಳಗಿನ ಅಂಶಗಳಿಗಿಂತಲೂ ಹೆಚ್ಚಿನ ಚಿಂತನೆಗೆ, ಒಳತೋಟಿಗೆ ಗ್ರಾಸವಾಗಿ, ಹಲವಾರೂ ಬಾರಿ ಚರ್ಚೆಗೂ, ವಾದ ವಾಗ್ವಾದಗಳಿಗೂ ಅನುವು ಮಾಡಿಕೊಡುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆಯೆಂದರೆ ತಪ್ಪಾಗಲಾರದು. ಇದಕ್ಕಿಂತಲೂ ಮಿಗಿಲಾಗಿ ಇಕ್ಕಟ್ಟು. ಮುಜುಗರ ಇಲ್ಲವೇ ಬೇಸರ ತರಿಸುವಂಥ ಇನ್ನೊಂದು ಅಂಶವೆಂದರೆ ಶೀರ್ಷಿಕೆ ಹಾಗೂ ಬರಹದ ನಡುವೆ ನಂಟು ಬೆಸೆಯದಿರುವುದು. 

ಪ್ರಸಕ್ತ ದಿನಗಳಲ್ಲಿ ಸರ್ವೇಸಾಮಾನ್ಯವಾದ ಒಂದು ಪ್ರವೃತ್ತಿ ಬೆಳೆದಿದೆ ಎಂದಾದರೆ ಅದು ಬಹು ಆಕರ್ಷಣೀಯವಾದ ಶೀರ್ಷಿಕೆಯೊಂದನ್ನು ಇಟ್ಟು ಎಲ್ಲರನ್ನೂ ಸೆಳೆಯಬಹುದೆಂಬ ಹುಸಿ ಜಾಯಮಾನ. ಬರಹದೊಳಗಿನ ಅಂಶಗಳಿಗೂ ಶಿರೋನಾಮೆಯ ಚೆಂದಕ್ಕೂ ಕುರಿಮಂದೆಯ ನಡುವೆ ಕೋಳಿಮರಿಯೊಂದನ್ನು ಬಿಟ್ಟಂತೆ ಆಗಿ, ಬರಹದ ಲೇಖಕ ಓದುಗನ ತೆಕ್ಕೆಯಲ್ಲಿ ಅಪಹಾಸ್ಯಕ್ಕೆ ಈಡಾಗುವುದು ಖಂಡಿತ. ಉದಾಹರಿಸುತ್ತಾ ಹೇಳುವುದಾದಲ್ಲಿ, 'ನಾಗಾರಾಧನೆ ಮತ್ತು ತುಳುನಾಡು' ಎಂಬ ಶೀರ್ಷಿಕೆಯೊಂದನು ಕೊಟ್ಟ ಲೇಖನವೊಂದರ ಒಳಗೆ "ಮೈಸೂರು ಪ್ರಾಂತ್ಯದಲ್ಲಿ ನಾಗರ ಪಂಚಮಿ''ಯನ್ನು ಹೇಗೆ ಆಚರಿಸುತ್ತಾರೆ ಎಂದು ಬರೆದರೆ, ಓದುಗನಾಗಿ ಯಾರೇ ಬಂದರೂ ಬಹುಶಃ ಬುಸುಗುಡುವ ಸಾಧ್ಯತೆಗಳೇ ಜಾಸ್ತಿ! ಅದಲ್ಲದೇ ಕುತೂಹಲದಿಂದ ಓದಲೂ ಬರುವವರಿಗೆ ನಿರಾಸೆಯೋ, ಅಥವಾ ನಾಗಾರಾಧನೆ ಮತ್ತು ತುಳುನಾಡನ್ನು ಅರಿಯದವನಿಗೆ ತಪ್ಪು ಮಾಹಿತಿ ಕೊಡುವ ತಪ್ಪೆಸಗಿದಂತಾಗುತ್ತದೆ ಬರಹಗಾರ. 

ಒಟ್ಟಿನಲ್ಲಿ, ಬರಹಗಾರ ತಾನು ಹೇಳಲಿಚ್ಚಿಸುವ ಮಾತುಗಳನ್ನು ಕ್ರೋಢೀಕರಿಸಿ, ಬರಹರೂಪಕ್ಕಿಳಿಸಿ ಅದಕ್ಕೊಂದು ಶಿರೋನಾಮೆ ಬಳಸಬೇಕೆನ್ನುವ ನಿರ್ಧಾರಕ್ಕೆ ಬಂದಾಗ ತನ್ನ ಬರಹದ 'ದನಿ'ಯಾಗಿ ಅದನ್ನಾಯ್ದುಕೊಳ್ಳಬೇಕೇ ವಿನಃ, ಒಂದಕ್ಕೊಂದು ಸಂಬಂಧವಿಲ್ಲದ, ಅಜಗಜಾಂತರ ವ್ಯತ್ಯಾಸದ ಶೀರ್ಷಿಕೆಯ ಮೂಲಕವೇ ತನ್ನ ಬರಹಗಳಿಗೆ ಓದುಗ ಮಹಾಶಯನನ್ನು ಆಕರ್ಷಿಸುವ ಮನಸ್ಥಿತಿಗೆ ತಲುಪಬಾರದು. ಆ ದನಿಯೆನ್ನುವುದು ಓದುಗನ ಮನದಲ್ಲಿ ಅನುರಣನವಾಗುವಂತಿರಬೇಕು ಅನುದಿನವೂ, ಅನುಕ್ಷಣವೂ! 

ಹಾಗಾಗಿ ನಾಮದ ಬಲವೊಂದಿದ್ದರೆ ಸಾಕೇ? ಅನುಗುಣವಾದ ವಿಚಾರವೂ ಒಳಗಿರಬೇಕಲ್ಲವೇ?

ವಿಚಾರವಂತಿಕೆಯನ್ನು ರೂಢಿಸಿಕೊಳ್ಳುವಲ್ಲಿ ನಮ್ಮ ಚಿತ್ತವಿರಲಿ ಎನ್ನುತಾ...

ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಬೆಂಗಳೂರು
[ಸಲಹೆ ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Wednesday, 31 July 2013

'ಚಿತ್ತಿಮಳಿ ತತ್ತಿ' ಮುತ್ತಾಗಲು ವಿಮರ್ಶೆಯೆಂಬ ಸಿಂಪಿ!

ಆಗ ತಾನೆ ಜೋಗುಳದ ಲಾಲಿಗೆ ತಲೆದೂಗುವ ಕೂಸಿಗೆ ಹೆತ್ತ ತಾಯಿ ಮುಖ್ಯವೋ? ಹೊತ್ತ ತಂದೆ ಮುಖ್ಯವೋ? ಎಂಬ ತರ್ಕವಿದ್ದರೂ ಬೆಳೆಯುವ ಕೂಸಿಗೆ ತಾಯಿಯ ಮಮತೆಯೂ ಅವಶ್ಯ, ತಂದೆಯ ಮಾರ್ಗದರ್ಶನವೂ ಅವಶ್ಯ. ಹೆತ್ತ ತಾಯಿ ಒಲವಲಿ ಮುದ್ದಾಡಿ, ಕೂಸಿಗೊಂದು ಮೂರ್ತ ರೂಪವನ್ನಿತ್ತರೆ, ತಂದೆಯು ಬೆಳೆಯುವ ಮಗುವಿನ ತಪ್ಪು-ಒಪ್ಪುಗಳನ್ನು ತಿದ್ದುತ್ತಾ ಕೂಸಿನ ಆಗು-ಹೋಗುಗಳಲ್ಲಿ ಭಾಗಿಯಾಗುತ್ತಾರೆ. ಸಾಹಿತ್ಯ ಪ್ರಪಂಚವೂ ಇದರಿಂದ ಹೊರತಾಗಿಲ್ಲ. ಕರ್ತೃ, ಕೃತಿಯೊಂದನು ಹೆತ್ತು ತಾಯಿಯಾದರೆ, ಅದರ ಓರೆ-ಕೋರೆಗಳನ್ನು ತಿದ್ದುವ ವಿಮರ್ಶಕರು ತಂದೆಯಂತೆ. ತಂದೆ, ತಾಯಿ ಇಬ್ಬರ ಪೋಷಣೆಯಿಂದಲೇ ಕೂಸು ಸಮೃದ್ಧವಾಗಿ ಬೆಳೆಯುತ್ತಾ ಸಾಗುತ್ತದೆ.

ಸಾಹಿತ್ಯ ಪ್ರಪಂಚದಲ್ಲಿ ವಿಮರ್ಶಾ ಸಾಹಿತ್ಯವನ್ನು ಸೃಜನಾತ್ಮಕ ಸಾಹಿತ್ಯ ಪಂಥದಿಂದ ದೂರವಿರಿಸಲಾಗುತ್ತಿದೆ. ವಿಮರ್ಶಕರೆನಿಸಿಕೊಳ್ಳುವವರು ತಮ್ಮ ತಮ್ಮ ಮೂಗಿನ ನೇರಕ್ಕೆ ಯೋಚಿಸಿ ಇಲ್ಲದಿರುವುದನ್ನು ಇದೆಯೆಂದೋ, ಇರುವುದನ್ನು ಇಲ್ಲವೆಂದೋ ಹೇಳಿಬಿಡುವುದನ್ನು ವಿಮರ್ಶೆ ಎನ್ನುತ್ತಾರೆ ಎಂದು ಕೆಲವರು ಕೊಂಕನಾಡುತ್ತಾರೆ. ಆದರೆ ನಿಜವಾಗಿಯೂ ವಿಮರ್ಶೆ ಎಂದರೇನು? ಅದರ ವಿಸ್ತಾರ ಮಿತಿಗಳು ಎಂತಹುದ್ದು ಎಂಬ ತರ್ಕಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ವಿಮರ್ಶಕರು ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ. ಬರಹಗಳೊಳಗಿನ ಸೂಕ್ಷ್ಮತೆಗಳನ್ನು ಪದರು ಪದರಾಗಿ ಬಿಡಿಸುತ್ತಾ ಬರಹವನ್ನು ವಿಶ್ಲೇಷಿಸುವ ಕಾರ್ಯಕ್ಕೆ ವಿಮರ್ಶೆ ಎಂದು ಹೆಸರು.

ಕೃತಿ, ಕರ್ತೃ, ವಿಮರ್ಶಕನ ನಡುವಿನ ಸಂಬಂಧವನ್ನು ತರ್ಕಿಸುವಾಗ ವರಕವಿ ಬೇಂದ್ರೆಯವರ ನಾಕುತಂತಿಯ ಸಾಲುಗಳು ನೆನಪಾಗುತ್ತವೆ. ಬೇಂದ್ರೆ ಬರೆಯುತ್ತಾರೆ;

‘ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತೀsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

ಮುಂಗಾರು ಮಳೆಯ ಕೊನೆಯ ಪಾದದಲ್ಲಿ ಬರುವುದು ಚಿತ್ತಿ ಮಳೆ. ಇದು ಅನಿಶ್ಚಿತ ಮಳೆ, ಆದುದರಿಂದಲೇ ರೈತಾಪಿ ಜನರು ಈ ಮಳೆಗೆ 'ಕುರುಡು ಚಿತ್ತಿ' ಎಂದೇ ಕರೆಯುತ್ತಾರೆ. ಅದರಂತೆ ಕೃತಿಯ ಹುಟ್ಟೂ ಸಹ ಅನಿಶ್ಚಿತವೇ. ಸ್ವಾತಿ ಮಳೆಯ ಹನಿಯು ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತಾಗುವಂತೆ, ಮುತ್ತನ್ನು ನೀಡಿದ ಸಿಂಪಿನ ಹುಳ ಮರಣ ಹೊಂದುವಂತೆ, ಕೃತಿಗೆ ಜನ್ಮ ನೀಡಿದ ಕರ್ತೃ ಆ ಘಳಿಗೆಯಲ್ಲಿ ಗೌಣವಾಗುತ್ತಾನೆ. ಸ್ವಾತಿ ಮಳೆ ಸುರಿದು ಮುತ್ತು ಮೂಡುವ ಸುಸಮಯದಲ್ಲಿ ಸಿಂಪಿನ ಹುಳು ತನ್ನ ಸೂರನ್ನು ಮುತ್ತೊಂದಕ್ಕೆ ಧಾರೆಯಿತ್ತು ಮರಣಿಸಿದಂತೆ., ಕೃತಿಯ ಕರ್ತೃ ಕೃತಿಯ ಸೃಷ್ಟಿಯ ನಂತರ ಅದನ್ನು ಓದುಗರ ಹಾಗೂ ವಿಮರ್ಶಕರ ಕೈಗಿತ್ತು ಸ್ತಬ್ಧವಾಗಿಬಿಡುತ್ತಾರೆ. ಆದುದರಿಂದಲೇ ಸಾವೀ ಮಗಳು ಹಾಗು ಭಾವೀ ಮಗಳು ‘ಸತ್ತೀಯೊ ಮಗನೆ’ ಎಂದು ಕವಿ ಎಚ್ಚರಿಸುತ್ತಾರೆ. ಸಾವೀ ಮಗಳು ಅಂದರೆ ಭೂತದ ಪ್ರತಿನಿಧಿ, ಭಾವೀ ಮಗಳು ಅಂದರೆ ಭವಿಷ್ಯದ ಪ್ರತಿನಿಧಿ.

ಅನುಭವದಿಂದಲೋ, ಅನುಭಾವದಿಂದಲೋ ಒದಗಿದ ವಿಷಯಗಳನ್ನು ಭಾವಗಳನ್ನು ಬರವಣಿಗೆಯ ರೂಪಕ್ಕಿಳಿಸಿ ವಿಷಯಗಳು ಉಸಿರಾಡುವಂತೆ ಮಾಡುವ ಕರ್ತೃವಿನ ಭಾವಸಾರವನ್ನು ಓದುಗ ಕೂಡ ಸವಿದರೆ ಆ ಬರಹ ಸಾರ್ಥಕ್ಯ ಕಂಡಂತೆ. ಕೆಲವೊಮ್ಮೆ ಕೆಲವೊಂದು ಸೂಕ್ಷ್ಮಗಳು ಕವಿಯ ಮತಿಯನ್ನೂ ಮೀರಿ ಕೃತಿಯೊಳಗೆ ಸೇರಿಕೊಂಡಿರುತ್ತವೆ. ಆ ತೆರನಾದ ಸೂಕ್ಷ್ಮಗಳನ್ನು ವಿಮರ್ಶಕರು ಹೆಕ್ಕಿ ತೆಗೆಯುತ್ತಾರೆ. ಆ ವಿಮರ್ಶೆಗಳು ಕೆಲವೊಮ್ಮೆ ಆರೋಗ್ಯಕರ ಚರ್ಚೆಗಳಾಗಿ ಕೃತಿಯ ವಿಸ್ತಾರಗಳನ್ನು ವಿಸ್ತರಿಸುತ್ತಾ ಸಾಗಿದರೆ ಕೆಲವೊಮ್ಮೆ ಮಿತಿ ಮೀರಿ ಹೋಗುತ್ತವೆ. ಅದು ಕರ್ತೃ ಮತ್ತು ವಿಮರ್ಶಕರ ನಡುವಿನ ವೈಮನಸ್ಸುಗಳಿಗೂ ಕಾರಣವಾಗಿರುವ ಉದಾಹರಣೆಗಳೂ ಇವೆ.

ಹೆಸರಾಂತ ಕವಿಯಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಮಕ್ಕಳ ಗೀತ ರಚನೆಕಾರರಾಗಿ ಗುರುತಿಸಿಕೊಂಡಿರುವ ಎಚ್.ಎಸ್.ವೆಂಕಟೇಶ ಮೂರ್ತಿಯವರು ವಿಮರ್ಶೆಯಿಂದ ತಾವು ಪೇಚಿಗೆ ಸಿಲುಕಿಕೊಂಡ ಬಗೆಯನ್ನು ತಮ್ಮ ’ಮರೆಯುವ ಮೊದಲು ’ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಕಾಳಿದಾಸನ ’ಋತುಸಂಹಾರ’ ಕೃತಿಯನ್ನು ಕನ್ನಡಕ್ಕೆ ’ಋತುವಿಲಾಸ’ವನ್ನಾಗಿಸಿ  ಎಚ್ಚೆಸ್ವಿ ಅನುವಾದಿಸಿದಾಗ, ಅದಕ್ಕೆ ತುಂಬಾ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ’ಋತುವಿಲಾಸ’ಕ್ಕೆ ಬಂದ ವಿಮರ್ಶೆಗಳಲ್ಲಿ, ಗೌರೀಶ ಕಾಯ್ಕಿಣಿಯವರು ಕೃತಿಯನ್ನು ತುಂಬಾ ಇಷ್ಟಪಟ್ಟು, "ಅನುವಾದ ಇಲ್ಲಿ ಒಂದು ಪುನರ್ ಸೃಷ್ಟಿಯಾಗಿದೆ" ಎಂದು ಹೇಳಿದರೆ, ಅತ್ತ ಕೆ.ನರಸಿಂಹ ಮೂರ್ತಿಗಳು "ಅನುವಾದವು ಮೂಲಕ್ಕೆ ವಿಶೇಷ ಗೌರವ ತೋರಿಲ್ಲ" ಎಂದು ಹೇಳಿದರು. ಒಂದೇ ಕೃತಿಗೆ ಎರಡು ವಿಭಿನ್ನ ವಿಮರ್ಶೆಗಳನ್ನು ನೋಡಿದ ಎಚ್ಚೆಸ್ವಿಯವರು. ಯಾವುದನ್ನು ಸ್ವೀಕರಿಸುವುದು? ಯಾವುದನ್ನು ಬಿಡುವುದು? ಎಂದು ಪೇಚಿಗೆ ಸಿಲುಕಿಕೊಂಡರೂ ಏನನ್ನೂ ಮಾತನಾಡದೆ ಮೌನವಾಗಿಯೇ ಎರಡು ವಿಭಿನ್ನ ವಿಮರ್ಶೆಗಳನ್ನು ಸ್ವೀಕರಿಸಿದ್ದರು. ನಂತರ ಋತುವಿಲಾಸಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಕೊಡಮಾಡುವ 'ಅನುವಾದ ಪುರಸ್ಕಾರ' ದೊರೆತಿತ್ತು!

ವಿಮರ್ಶೆಯ ಹೆಸರಿನಲ್ಲಿ ಕರ್ತೃವಿನ ಬರವಣಿಗೆಯನ್ನು ಪ್ರಶ್ನಿಸುವುದು ಎಷ್ಟು ಸರಿ? ಅವರವರ ಬರವಣಿಗೆ ಅವರವರ ಸ್ವಾತಂತ್ರ್ಯವಲ್ಲವೇ ಎಂದು ಕೆಲವರ ಅಂಬೋಣವಿರಬಹುದು. ಆದರೆ ಯಾವುದೇ ಕೃತಿಗಳು ಸಾರ್ಥಕ್ಯ ಕಾಣುವುದು ಓದುಗರು ಹಾಗೂ ವಿಮರ್ಶಕರಿಂದ, ಆದ್ದರಿಂದ ಕೃತಿ ಪ್ರಕಟಣೆ ಕಂಡ ನಂತರ ಕೃತಿಯ ಕುರಿತು ಅಭಿಪ್ರಾಯಿಸುವುದನ್ನೂ, ತೆಗಳುವುದನ್ನೂ ಯಾರೂ ಪ್ರಶ್ನಿಸುವಂತಿಲ್ಲ. ಏಕೆಂದರೆ ಆ ವಿಮರ್ಶೆಗಳಾಗಲಿ, ಅಭಿಪ್ರಾಯಗಳಾಗಲಿ ವಿಮರ್ಶಕರ ಸ್ವಂತದ್ದು. ಅವರ ಅನುಭವಕ್ಕೆ ಗೋಚರಿಸಿದ್ದನ್ನು ಅವರು ಹೇಳಿಕೊಂಡಿರುವುದರಿಂದ ಅದನ್ನು ಪ್ರಶ್ನಿಸುವುದು ಕರ್ತೃವಿಗೂ ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಸ್ವತಂತ್ರರು! ಕೃತಿ, ಕರ್ತೃ, ವಿಮರ್ಶಕರು ಒಬ್ಬರನ್ನು ಬಿಟ್ಟು ಒಬ್ಬರಿರಲಾರರು. ವಿಮರ್ಶಕರು ಸಕ್ರಿಯರಾದಂತೆಲ್ಲಾ ಕರ್ತೃಗಳು ಮಾಗುತ್ತಾ ಸಾಗುತ್ತಾರೆ. ಆದ್ದರಿಂದಲೇ ಒಂದಕ್ಕೊಂದು ಬೆಸೆದುಕೊಳ್ಳಬೇಕು. ಮೂರರ ನಡುವೆ ಸಾಮರಸ್ಯ ಒಡಮೂಡಬೇಕು. ಆಗಲೇ ಒಂದು ಸಶಕ್ತ ಸಾಹಿತ್ಯ ಪ್ರಪಂಚ ನಿರ್ಮಾಣ ಸಾಧ್ಯ.

"ವರ್ಣ ಮಾತ್ರಂ ಕಲಿಸಿದಾತಂ ಗುರು'' ಎನ್ನುವಂತೆ ಪ್ರತಿಯೊಂದನ್ನೂ, ಪ್ರತಿಯೊಬ್ಬರಲ್ಲಿಯೂ ಕಲಿಯುತ್ತಾ ಎಲ್ಲರಲ್ಲೂ ಗುರುವನ್ನು ಕಾಣುವವನೇ ಮುಂದೊಮ್ಮೆ ಸರ್ವಜ್ಞನಾಗಿ ಬೆಳೆಯಬಲ್ಲ. ಹೀಗಾದಲ್ಲಿ ಮಾತ್ರ ಯಾವುದೇ ಕೃತಿಯೂ ಚಿತ್ತಿ ಮಳೆಯ ತತ್ತಿಯಾಗಿ, ವಿಮರ್ಶೆಯೆಂಬ ಸಿಂಪಿನೊಳಗೆ ಮುತ್ತಾದೀತು.

ವಂದನೆಗಳೊಂದಿಗೆ,
ಪ್ರಮೋದ್ ಡಿ.ವಿ.
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday, 30 June 2013

ಕಾವ್ಯ: ಹಂಚದ ಹೊರತು ಬೆಳೆಯುವುದಿಲ್ಲ!

ಕನ್ನಡ ಬ್ಲಾಗ್-ನ ಸಂಪಾದಕೀಯಗಳಲ್ಲಿ ಕಾವ್ಯ ಹುಟ್ಟಬಹುದಾದ ಮತ್ತು ಬೆಳೆದು ನಿಲ್ಲಬಹುದಾದ ಸಾಧ್ಯತೆಗಳ ಒಳ ಹೂರಣಗಳನ್ನು ಸವಿಯುತ್ತಲೇ ಬಂದಿದ್ದೀರಿ. ಈ ಸಲದ ಸಂಪಾದಕೀಯದಲ್ಲಿ ಹೊರ ಹೂರಣವನ್ನು ರುಚಿಕಟ್ಟಾಗಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಕಾವ್ಯ ಎಂಬುದು ಕೇವಲ ಕವನ, ಲೇಖನ, ಕಥೆ, ಪ್ರಬಂಧ ಅಥವಾ ಇನ್ನಿತರ ಬರಹ ರೂಪಗಳಿಗೆ ಮಾತ್ರ ಸೀಮಿತವಲ್ಲ, ಸೃಜನಾತ್ಮಕವಾಗಿ ಒಡಮೂಡುವ ಯಾವುದೇ ಒಂದು ಕ್ರಿಯೆಯು, ಪ್ರಕ್ರಿಯೆಯೂ ಕಾವ್ಯವಾಗಬಲ್ಲದು. ಕವಿ ಆ ಪ್ರಕ್ರಿಯೆಗೆ ಭಾಷೆಯ ಭಾಷ್ಯ ಬರೆಯುತ್ತಾನಷ್ಟೆ. ಆಗ ಅದು ಕಾವ್ಯದ ಅಧಿಕೃತವಾದ ಪ್ರಕಾರವಾಗಿ ಗುರುತಿಸಿಕೊಳ್ಳುತ್ತದೆ. ಸೃಜನಾತ್ಮಕ ಕ್ರಿಯೆ ಮತ್ತು ಪ್ರಕ್ರಿಯೆಗಳು ಕಾವ್ಯಗಳಾಗುತ್ತವೆ ಎಂಬ ಒಂದು ಉದಾಹರಣೆ ಲಂಕೇಶರ ಈ ಪದ್ಯದಲ್ಲಿ ಸಿಗುತ್ತದೆ.

"ಹುಟ್ಟು ಹಠಮಾರಿಯೊಬ್ಬ
ಕವಿಯಾಗಲು ಪಣ ತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆ ಕಂಠದಲ್ಲಿ ಹಾಡಿ
ತನಗೇ ಗೊತ್ತಿಲ್ಲದೆ
ಕವಿಯಾಯಿತು."

ಇಂಥ ಅಗಾಧ ವ್ಯಾಪ್ತಿ ಹೊಂದಿರುವ ಕಾವ್ಯಕ್ಕೆ ಹುಟ್ಟಿನಿಂದಲೇ ಒಂದು ನಿರ್ದಿಷ್ಟ ದಿಕ್ಕಿದ್ದು, ತನ್ನ ಗುರಿಯನ್ನು ನಿರ್ಧರಿಸಿಕೊಂಡು ಹೊರಟಂತಹ ಬಾಣದಂತಿರುತ್ತದೆ. ಒಂದು ಓದುಗ ವರ್ಗವನ್ನು ತಲುಪುವ ತವಕವಿರುತ್ತದೆ. ಪ್ರೇಮ ಸಾಹಿತ್ಯಕ್ಕೆ ಕವಿ ಪ್ರೇಮಿಯ ಮನಸ್ಸೇ ಕೇಂದ್ರವಾದರೆ, ಸಮಾಜಮುಖಿ ಸಾಹಿತ್ಯಕ್ಕೆ ಸಮಾಜವೇ ಕೇಂದ್ರ. ಹೀಗೆ ಬೆಳೆದು ನಿಲ್ಲುವ ಪ್ರತಿಯೊಂದು ಸಾಹಿತ್ಯಕ್ಕೂ ತನ್ನದೇ ಆದ ನಿರ್ದಿಷ್ಟ ಕೇಂದ್ರವೂ, ಇಲ್ಲವೇ ಗಮ್ಯವೂ ಇರುತ್ತದೆ. ಇಷ್ಟೆಲ್ಲಾ ಆಯಾಮಗಳಿದ್ದಾಗ್ಯೂ ಕಾವ್ಯ ಕೆಲವೊಮ್ಮೆ ಕವಿಯ ಭಾವದಲ್ಲೊಂದಾದರೆ, ಓದುಗರ ಭಾವದಲ್ಲಿ ಮತ್ತೊಂದಾಗಿರಬಹುದು. ಕೆಲವೊಮ್ಮೆ ಅದೇ ಕಾವ್ಯ ಶೈಲಿ ವಿಭಿನ್ನವಾಗಿ ಗುರ್ತಿಸಿಕೊಂಡು ಕಾವ್ಯಕ್ಕೆ ಸೃಷ್ಟಿಶೀಲ ಸ್ಪರ್ಷ ನೀಡಿ ನವೀನ ಸಾಹಿತ್ಯ ಮಾದರಿಯಾಗಬಹುದು. ಇದೆಲ್ಲ ಆಗಬೇಕೆಂದರೆ ಕಾವ್ಯವನ್ನು ಹೆಚ್ಚೆಚ್ಚು ಜನರು ಓದಬೇಕು, ಯೋಚಿಸಬೇಕು ಮತ್ತು ಧ್ಯಾನಿಸಬೇಕು. ಇಲ್ಲಿ ಸಾಹಿತ್ಯ ಬೆಳವಣಿಗೆಯ ಬಗ್ಗೆ ಚಿಂತಿಸುವವರ ಆಧ್ಯ ಕರ್ತವ್ಯ ಸಾಹಿತ್ಯವನ್ನು ಸಾಧ್ಯವಾದಷ್ಟು ಉದ್ದಗಲಗಳಿಗೆ ಪಸರಿಸುವುದು. ಇದನ್ನೇ ನಾನು ಹಂಚುವುದು ಎಂದು ಕರೆದಿದ್ದೇನೆ. ಅದು ಯಾವ ಮೂಲಕವಾದರೂ ಆಗಿರಬಹುದು. ತಾವು ಓದಿದ ಒಳ್ಳೆಯ ಪುಸ್ತಕಗಳನ್ನೂ, ಕಥಾ ಸಂಕಲನಗಳನ್ನೂ, ಇಲ್ಲವೇ ಕವನ ಸಂಕಲಗಳನ್ನು ತಮ್ಮ ಸ್ನೇಹಿತರಿಂದ ಓದಿಸುವುದು, ಒಳ್ಳೆಯ ಹೊತ್ತಿಗೆಗಳ ಬಗ್ಗೆ ಇತರರೊಂದಿಗೆ ಚರ್ಚಿಸುವುದು ಮತ್ತು ಒಳ್ಳೆಯ ಓದಿನ ಅಗತ್ಯಗಳ ಬಗ್ಗೆ ಅರಿವು ಮೂಡಿಸುವುದು. ಪುಸ್ತಕಗಳನ್ನು ಉಡುಗೊರೆಗಳಾಗಿ ಕೊಡುವುದು ಹೀಗೆ ಓದನ್ನು ಮತ್ತು ತನ್ಮೂಲಕ ಕಾವ್ಯವನ್ನೂ ಉತ್ತೇಜಿಸುವ ಕೆಲಸವಾಗಬೇಕಿದೆ.

ಹೀಗೆ ಸಾಹಿತ್ಯವನ್ನು ಹಂಚುವ ಮತ್ತೊಂದು ದಾರಿ: ಒಂದು ಪುಸ್ತಕವನ್ನಿಟ್ಟುಕೊಂಡು ಅದರ ಬಗ್ಗೆ ಗುಂಪು ಚರ್ಚೆಗಳನ್ನು ಆಯೋಜಿಸುವುದು, ಸಣ್ಣ ಪುಟ್ಟ ಚಹಾ ಕೂಟಗಳಂತಹ ಕವಿಗೋಷ್ಠಿಗಳನ್ನು ಆಯೋಜಿಸುವುದು, ಆಶು ಕವಿತ್ವವನ್ನು ಉತ್ತೇಜಿಸುವುದು, ಸೃಷ್ಟಿಶೀಲ ಸಾಹಿತ್ಯ ರಚನೆಯ ವಿವಿಧ ಸ್ಥರಗಳ ಬಗ್ಗೆ ಚಿಂತನಾ-ಮಂಥನ ಏರ್ಪಡಿಸುವುದು. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಮ್ಮ ಸಾಹಿತ್ಯಿಕ ಕ್ರಿಯೆಗಳಿಗೊಂದು ಭೌತಿಕ ರೂಪ ಕೊಡುವುದು ತನ್ಮೂಲಕ ಎಲ್ಲರ ವಿಚಾರಧಾರೆಗಳು ಎಲ್ಲರಲ್ಲಿಯೂ ಅರಿವು ಮೂಡಿಸುವ ದೀಪ್ತಿಯಾಗಬೇಕು. ಸಾಹಿತ್ಯದ ಬಗ್ಗೆಯೇ ಯೋಚಿಸುವ ಒಂದು ಸಮೂಹವನ್ನು ಸೃಷ್ಟಿಯಾಗಬೇಕು, ತಮ್ಮ ತಮ್ಮಲ್ಲೇ ಹುಟ್ಟಿಕೊಂಡ ಸಾಹಿತ್ಯಗಳಿಗೆ ವಿಮರ್ಶೆಯನ್ನೂ, ಮೌಲಿಕ ಮತ್ತು ತುಲನಾತ್ಮಕ ಚರ್ಚೆಗಳು ರೂಪುಗೊಳ್ಳಬೇಕು. ಈ ಎಲ್ಲಾ ಪ್ರಕ್ರಿಯೆಗಳೂ ನಮ್ಮ ಸಾಹಿತ್ಯಿಕ ದಾಹಕ್ಕೆ ನೀರೆರೆಯುತ್ತ ನಮ್ಮ ಬರವಣಿಗೆಯು ಸರಿ ದಿಕ್ಕಿನಲ್ಲಿರುವಂತೆ ನಿರ್ದೇಶಿಸುತ್ತವೆ. ಇಂತಹ ವಿಚಾರಧಾರೆಗಳೇ ಹಳೆಗನ್ನಡ ಸಾಹಿತ್ಯ ರಚನೆಯ ಸಂದರ್ಭದಲ್ಲಿ ವಚನ ಕ್ರಾಂತಿಯಾಗುವಂತೆ ಮಾಡಿದ್ದು, ದಾಸ ಸಾಹಿತ್ಯದ ಉದಯಕ್ಕೆ ಕಾರಣವಾಗಿದ್ದು, ನವೋದಯ ಸಾಹಿತ್ಯದಲ್ಲಿ ಕನ್ನಡ ಕಾವ್ಯ ಉನ್ನತ ಶಿಖರವೇರಿ ನಿಲ್ಲುವಂತೆ ಮಾಡಿದ್ದು, ನವ್ಯ ಸಾಹಿತ್ಯದ ಉಗಮಕ್ಕೆ ಕಾರಣವಾಗಿದ್ದು, ನವ್ಯೋತ್ತರ ಮತ್ತು ಬಂಡಾಯ ಸಾಹಿತ್ಯಗಳಿಗೆ ಅಡಿಗಲ್ಲಾಗಿದ್ದು. ನಾನಿಲ್ಲಿ ಗುಂಪುಗಾರಿಕೆಯ ಬಗ್ಗೆಯೋ, ಸಾಹಿತ್ಯ ಕ್ರಾಂತಿಯ ಬಗ್ಗೆಯೋ ಹೇಳುತ್ತಿಲ್ಲ. ಬದಲಾಗಿ ಸಾಹಿತ್ಯವನ್ನೇ ಧೇನಿಸುವ ಕೆಲವು ಮನಸ್ಸುಗಳು ಒಂದೆಡೆ ಕಲೆತರೆ ಎಂತಹ ಮಹತ್ತರವಾದದ್ದನ್ನು ಸಾಧಿಸಬಹುದು ಎಂಬ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ. ಸಾಹಿತ್ಯವನ್ನು ಎಲ್ಲರಲ್ಲಿಯೂ ಹಂಚುವ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ.

ನಾವು ಕನ್ನಡ ಬ್ಲಾಗ್ ನ ಮೂಲಕ ಅಂತರ್ಜಾಲದಲ್ಲಿ ಈ ರೀತಿಯ ಸಾಹಿತ್ಯ ಹಂಚುವ ಕಾರ್ಯವನ್ನೇ ಮಾಡುತ್ತಾ ಬಂದಿದ್ದೇವೆ. ಆದರೆ ಆ ಕೆಲಸಗಳು ಭೌತಿಕ ರೂಪ ಪಡೆದು ಇನ್ನಷ್ಟು ಸಾಹಿತ್ಯಿಕ ಮನಸ್ಸುಗಳನ್ನು ಮುಟ್ಟುವ ಕೆಲಸವಾಗಬೇಕು ಎಂಬ ಸದಾಶಯ ಈ ಸಂಪಾದಕೀಯದ್ದು. ಈ ನಿಟ್ಟಿನಲ್ಲಿ ಕನ್ನಡ ಬ್ಲಾಗ್ ಮುಂದಿನ ದಿನಗಳಲ್ಲಿ ಒಂದು ಟ್ರಸ್ಟ್ ರೂಪ ಪಡೆದು ಸಾಹಿತ್ಯಿಕ ಬೆಳವಣಿಗೆಗೆ ತನ್ನನ್ನು ಅರ್ಪಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಆ ಟ್ರಸ್ಟ್ ಮೂಲಕ ಕವಿಗೋಷ್ಠಿಗಳು, ಸಾಹಿತ್ಯ ಚಿಂತನಾ ಮಂಥನಗಳು, ಅಂತರ್ಜಾಲ ಸಾಹಿತ್ಯ ಪುಸ್ತಕ ರೂಪ ಪಡೆದು ಮತ್ತಷ್ಟು ಓದುಗರನ್ನು ತಲುಪುವ ಕಾಯಕಕ್ಕೆ ತನ್ನನ್ನು ಒಡ್ಡಿಕೊಳ್ಳಲಿದೆ. ಆ ಒಂದು ಆಕಾಂಕ್ಷೆಗಳನ್ನಿಟ್ಟುಕೊಂಡೇ 'ಬನ್ನಿ ಜೊತೆಯಾಗೋಣ' ಎಂಬ ಸಂಪಾದಕೀಯಕ್ಕೆ ಮುನ್ನುಡಿಯಾದದ್ದು ಕನ್ನಡ ಬ್ಲಾಗ್. ಇಷ್ಟೆಲ್ಲಾ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ನಮ್ಮ ಕೈಯ್ಯಲ್ಲಾಗುವ ಸಾಹಿತ್ಯ ಸೇವೆಗೆ ಟೊಂಕ ಕಟ್ಟಿ ನಿಲ್ಲಲು ಸತುವಾಗಿರುವವರೇ ನೀವು, ನಮ್ಮೆಲ್ಲ ಸಹೃದಯಿ ಸದಸ್ಯರು. ನಿಮ್ಮ ಈ ಅಭಿಮಾನಕ್ಕೆ ಎಷ್ಟು ಕೃತಜ್ಞತೆಗಳನ್ನರ್ಪಿಸಿದರೂ ಕಡಿಮೆಯೇ. ಕನ್ನಡ ಬ್ಲಾಗ್ ನ ಮುಂದಿನ ಎಲ್ಲಾ ಸಾಹಿತ್ಯಿಕ ಕೆಲಸಗಳಲ್ಲಿ ನಿಮ್ಮ ಕೈ ನಮ್ಮನ್ನು ಬಲಪಡಿಸುತ್ತದೆ ಎಂಬ ಧನ್ಯತೆಯಲ್ಲಿ ನಾವು.

- ಪ್ರಸಾದ್.ಡಿ.ವಿ.

Friday, 31 May 2013

ಓದಿನ ಸಾರ್ಥಕ್ಯವೂ, ಬರಹದ ಘಮವೂ!

ತಪ್ಪು ಮಾಡುವುದು ಮಾನವ ಸಹಜ ಗುಣ. ಎಲ್ಲರೂ ಒಂದಲ್ಲ ಒಂದು ರೀತಿಯಿಂದ ತಮ್ಮ ನಡೆಯಲ್ಲಿ ತಪ್ಪನ್ನು ಮಾಡಿಯೇ ಮಾಡಿರುತ್ತಾರೆ. ಹಾಗಂತ  ಮಾಡಿದ ತಪ್ಪುಗಳನ್ನೇ ಪದೇ ಪದೇ ಮಾಡುವುದು ಮೂರ್ಖತನದ ಪರಮಾವಧಿಯಾಗುತ್ತದೆ. ಇದು ಕೇವಲ ಬಾಳಿನ ನಡೆಗಷ್ಟೇ ಸೀಮಿತವಲ್ಲ. ಮೇ ತಿಂಗಳ ಕನ್ನಡ ಬ್ಲಾಗ್ ಸಂಪಾದಕೀಯವನ್ನು ಬರೆಯಲು ಕೂತಾಗ, ಕಳೆದ ಒಂದು ತಿಂಗಳಿನಲ್ಲಿ ಈ ಫೇಸ್ಬುಕ್ ಬ್ಲಾಗಂಗಳದಲ್ಲಿ ಪ್ರಕಟವಾದ ಹತ್ತು ಹಲವು ರಚನೆಗಳನ್ನು ಓದಿದ ನಮಗೆ ಇದರ ಬಗ್ಗೆಯೇ ಒಂದು ಲೇಖನವನ್ನು ಬರೆಯಬಹುದಲ್ಲ ಎನ್ನುವ ಯೋಚನೆ ಬಾರದೇ ಇರಲಿಲ್ಲ. ಆದರೆ ನಾವು ಯಾರ ರಚನೆಯನ್ನೂ ವಿಮರ್ಶೆಯ ಕಟ್ಟುಪಾಡಿನೊಳಗೆ ಅಳವಡಿಸಿಕೊಂಡು ಬರೆಯುತ್ತಿಲ್ಲ. ದಿನನಿತ್ಯ ನಾವು ಬಳಸುವ ಭಾಷೆಯಲ್ಲಿ ಆಗುತ್ತಿರುವ, ಆಗುವ ತಪ್ಪುಗಳನ್ನು ನಾವೇ ತಿದ್ದಿಕೊಳ್ಳಬೇಕೆ ವಿನಃ , ಓದುಗರು ಅದನ್ನು ತಿದ್ದುಪಡಿ ಮಾಡುತ್ತಾರೆ ಎನ್ನುವ ದೃಷ್ಟಿಯಿಟ್ಟುಕೊಳ್ಳಬಾರದು. ಅದೇ ರೀತಿ ಓದುಗರು ಸೂಚಿಸುವ ತಪ್ಪುಗಳನ್ನು ಪರಿಶೀಲಿಸಿ, ನಮ್ಮ ಮುಂದಿನ ನಡೆಯಲ್ಲಿ, ಅಂದರೆ ನಮ್ಮ ರಚನೆಯಲ್ಲಿ ಈ ಹಿಂದೆ ಆದ ತಪ್ಪುಗಳೇ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವುದು ಉತ್ತಮ ಬರಹಗಾರನ ನಡೆಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಯೋಚನೆಯನ್ನು ಅಳವಡಿಸಿಕೊಳ್ಳಬೇಕಾದ ಆವಶ್ಯಕತೆ ಎದ್ದು ಕಾಣುತ್ತದೆ.

ಪದ ಪ್ರಯೋಗ, ಅಕ್ಷರ ಬಳಕೆ: ಇಲ್ಲಿನ ಹತ್ತು ಹಲವು ರಚನೆಗಳನ್ನೋದುವಾಗ ಗಮನಿಸಿರುವಂತೆ ಅಕ್ಷರ ಜೋಡಣೆ ಮತ್ತು ಪದಪ್ರಯೋಗಳಲ್ಲಿನ ವಿಪರೀತ ತಪ್ಪುಗಳು ರಚನೆಗಳಲ್ಲಿನ ಗಾಂಭೀರ್ಯವನ್ನು ಹದಗೆಡಿಸುವಷ್ಟರ ಮಟ್ಟಿಗಿರುತ್ತವೆ. ಈ ತಪ್ಪಿಗೆ ಕಾರಣವಾಗುವ ಅಂಶಗಳನ್ನು ಮೂಲವಾಗಿ ಪರೀಶೀಲಿಸುವ ಮನಸ್ಸು ಕೆಲವೊಮ್ಮೆ ಇರುತ್ತದೆಯಾದರೂ, ಎಲ್ಲಿ ಆ ಬರಹಗಾರ ತಪ್ಪು ಭಾವನೆ ತಳೆಯುತ್ತಾನೆ ಎನ್ನುವ ಭಯವೂ ಕೆಲವೊಮ್ಮೆ ಕಾಡುತ್ತದೆ. ಆದರೆ ಯುವಮಿತ್ರರೊಡನೆ ಹಲವು ಬಾರಿ ಈ ವಿಚಾರದಲ್ಲಿ ಸಂವಾದಕ್ಕಿಳಿದು ಪ್ರಶ್ನಿಸಿದಾಗ ಕಂಡುಬಂದ ಕಟುಸತ್ಯವೆಂದರೆ ತಾನು ಚಿಕ್ಕಂದಿನಿಂದ ಕಲಿತ ಭಾಷೆ ಮತ್ತು ಪದ ಪ್ರಯೋಗಗಳು. ತಾನು ಮಾಡುತ್ತಿರುವ ಆ ತಪ್ಪುಗಳನ್ನು ಯಾರೂ ಇಷ್ಟರತನಕ ಪ್ರಶ್ನಿಸಿಲ್ಲ, ತಾನದನ್ನು ಸರಿಯೆಂದೇ ಭಾವಿಸಿದ್ದೆ ಎನ್ನುವ ಅವರ ಮನಸ್ಸಿನಾಳದ ಉತ್ತರವೂ ದೊರೆಯುತ್ತದೆ ಕೆಲವೊಮ್ಮೆ. ಏನೇ ಇರಲಿ. ಆ ತಪ್ಪುಗಳನೊಪ್ಪಿ ತಮ್ಮ ಮುಂದಿನ ಬರಹಗಳಲ್ಲಿ ಸರಿಯಾದ ಪದಬಳಕೆಗೆ ಒತ್ತುನೀಡುತ್ತೇವೆ ಎನ್ನುವವರ ಸಂಖ್ಯೆ ಕಡಿಮೆಯಿದ್ದರೂ, ಕೆಲವರಾದರೂ ತಪ್ಪನೊಪ್ಪಿಕೊಳ್ಳುವ ಗುಣವನ್ನು ಮೆರೆಯುತ್ತಾರೆ ಅನ್ನುವುದೇ ಸಂತಸದ ವಿಚಾರ. ಇದು ಎಲ್ಲರೊಳಗೂ ಒಡಮೂಡಲಿ ಎನ್ನುವ ಆಶಯವೂ ನಮ್ಮದು.

ವಸ್ತು, ವಿಚಾರ: ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಗಹನವಾದ ವಿಚಾರವೊಂದಿದೆ. ಅದು ಸೃಜನಾತ್ಮಕ ಸಾಹಿತ್ಯ. ಬರಹಗಾರನು ಸೃಜನಾತ್ಮಕ ಚಿಂತನೆಗಳತ್ತ ತನ್ನ ಬರಹದ ದಿಕ್ಕನ್ನು ಬದಲಿಸಿಕೊಂಡು ಸಾಗಿದರೆ ತನ್ನ ಬರಹಕ್ಕೆ ಬೇಕಾದ ವಸ್ತು, ವಿಷಯಗಳ ಕೊರತೆ ಬರದಿದ್ದೀತು. ನಮ್ಮ ಹೆಚ್ಚಿನ ಯುವ ಬರಹಗಾರರಿಗೆ ಅನಾಮತ್ತಾಗಿ ಸಿಗುವಂಥ ಒಂದೇ ಒಂದು ವಸ್ತುವೆಂದರೆ ಅದು ಪ್ರೇಮ ಅಥವಾ ಪ್ರೀತಿ. ತನ್ನ ಪ್ರತೀ ರಚನೆಯೂ ಒಂದೇ ಒಂದು ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದರೆ ಅಲ್ಲಿ ದಿನಗಳೆದಂತೆ ರಸಾನುಭವದ ಕೊರತೆ ಎದ್ದು ಕಾಣಬಹುದು. ಓದುಗನನ್ನು ಸೆಳೆಯದಿರಬಹುದು. ಆದರೆ ಒಂದೇ ವಿಷಯದ ಬಗ್ಗೆ ವೈವಿಧ್ಯಮಯ ರಚನೆ/ಬರಹಗಳನ್ನು ಬರೆದವರು ಇಲ್ಲವೆಂದೇನಿಲ್ಲ. ಪ್ರತಿ ರಚನೆಯಲ್ಲೂ ಭಿನ್ನ ಆಸ್ವಾದಗಳನ್ನೀಯುತ್ತಾ ಓದುಗರ ಮನವನ್ನೂ ತಣಿಸಿದವರಿದ್ದಾರೆ. ಒಂದು ಮಾತಂತೂ ನಿಜ; 'ನೈಜವಲ್ಲದ ಅತಿಭಾವುಕ ಸನ್ನಿವೇಶವನ್ನು ಸೃಷ್ಟಿಸುವುದಕ್ಕಿಂತಲೂ ವೈಚಾರಿಕ ನೆಲೆಗಟ್ಟಿನಲ್ಲಿ ಬರವಣಿಗೆ ರೂಪುತಳೆದರೆ, ಆ ಬರಹ ಓದುಗನ ಮನದಾಳದಲ್ಲಿ ಧೀರ್ಘ ಕಾಲದವರೆಗೆ ಉಳಿಯುವುದರಲ್ಲಿ ಸಂಶಯವಿಲ್ಲ'.

ಪಂಗಡ, ವಿಂಗಡನೆ: ಕಲೆಯ ಅಭಿವ್ಯಕ್ತಿಗೆ ಕಲಾವಿದನ ಜೀವನನುಭವನೇ ಮೂಲದ್ರವ್ಯ ಎಂದಿದ್ದಾರೆ ಪೂರ್ಣಚಂದ್ರ ತೇಜಸ್ವಿ. ನಮ್ಮ ಅನುಭವಗಳನ್ನು ನಾವು ಒಂದು ಬರಹ, ಹನಿ, ಕವನ, ಕವಿತೆಯ ರೂಪದಲ್ಲಿ ಹಂಚಿಕೊಂಡರೆ, ಅದು ಜಗತ್ತಿನ ಅದಾವುದೋ ಮೂಲೆಯ ಓದುಗನ ತಲೆಯೊಳಗೆ ಒಂದು ವಿಶ್ಲೇಷಣೆಯನ್ನು ಹುಟ್ಟುಹಾಕಲಾರಂಭಿಸಬಹುದು. ಇದಕ್ಕೆ ಆ ಓದುಗನ ಮನಸ್ಸಿನಲ್ಲಿ ಸಂಯೋಜನೆಗೊಳ್ಳುವ ಸಂವಾದಿ ಮನೋಭಾವವೇ ಕಾರಣವಿರಬಹುದು. ಈ ಮನೋಭಾವ ಎನ್ನುವುದು 'ಅದು ತನ್ನ ಪಂಗಡದವನು ಬರೆದ ರಚನೆ' ಎನ್ನುವ ತಳಹದಿಯಲ್ಲಿ ಹುಟ್ಟುವುದಿಲ್ಲ. ಹಾಗೆ ಹುಟ್ಟಿದ್ದೇ ಆದಲ್ಲಿ ಅದು 'ವಿಂಗಡಣೆ'ಯತ್ತ ಮುಖ ಮಾಡೀತೆ ಹೊರತು, ಸಂವಾದಶೀಲ ನೆಲೆಗಟ್ಟಿನಲ್ಲಿ ಇರಲಾರದು. ಈ ಪಂಗಡಗಳ ಸೃಷ್ಟಿಯೇ ಬಹುಶಃ ಸಾಹಿತ್ಯ ಲೋಕದಲ್ಲಿ ಪ್ರಸ್ತುತ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಡುತ್ತಿರುವುದಂತೂ ಸತ್ಯ. ಹೀಗೆ ಮುಂದುವರಿದಲ್ಲಿ ನಾಯಿ ಸಾಕಿದವರು ಮಾತ್ರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಓದಬೇಕೆನ್ನುವ ಪಂಗಡ ಹುಟ್ಟಿಕೊಂಡರೂ ಆಶ್ಚರ್ಯವಿಲ್ಲವೆಂದಿದ್ದಾರೆ ತೇಜಸ್ವಿ. ಸಾಹಿತ್ಯವು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕೇ ಹೊರತು ಪಂಗಡಗಳಾಗಿ ವಿಂಗಡಣೆಗೊಂಡು ಸತ್ವ ಕಳೆದುಕೊಳ್ಳಬಾರದು. 

ಓದು, ಬರೆ: ಇನ್ನು ನಮ್ಮ ಓದು. ಬರವಣಿಗೆ. ಎಲ್ಲದಕ್ಕೂ ಇಲ್ಲಿ ಅವಕಾಶವಿದೆಯೆಂದು ಎಲ್ಲವನ್ನೂ ಬರೆಯುವವರೇ ಜಾಸ್ತಿ. ಹೀಗಾದಲ್ಲಿ ಓದುವವರಾರು? ಬರಹವೆನ್ನುವುದು ಓದುಗನೆದೆ ತೆರೆಯುತ್ತದಾದರೂ ಎಲ್ಲ ಬರಹಗಳು ಆ ಕೆಲಸ ಮಾಡಲಾರವು. ಓದು ಮತ್ತು ಬರಹಕ್ಕೆ ಅದರದ್ದೇ ಆದ ಗುಣಮಟ್ಟಗಳು ಮುಖ್ಯವಾಗುತ್ತವೆ. ಬರಹಗಾರನಾದವನು ಓದುವ ಹವ್ಯಾಸವನು ಮೊದಲಾಗಿ ಬೆಳೆಸಿಕೊಳ್ಳಬೇಕು. ಓದುಗನಾದವನೂ ಕೇವಲ ಕಣ್ಣಾಡಿಸಿ ತಾನೆಲ್ಲವನೂ ಓದಿದ್ದೇನೆ ಅನ್ನುವ ಮನಸ್ಥಿತಿಗೂ ಬರಬಾರದು. ಅದಕ್ಕಿಂತಲೂ ಮಿಗಿಲಾಗಿ ಎಲ್ಲ ಬರಹಗಳನ್ನೂ, ಬರಹಗಾರರನ್ನೂ ಎಲ್ಲಾ ಸಂದರ್ಭಗಳಲ್ಲೂ, ಎಲ್ಲರನೂ ಮೆಚ್ಚಿಸುವ ಸಲುವಾಗಿ ಹೊಗಳಿಕೆಯ ಅತಿಶಯೋಕ್ತಿಗಳಲ್ಲೇ ಓದುಗನು ಮುಳುಗಿಸಬಾರದು. ಓದಿದ ಮೇಲೆ ತನ್ನ ಮನಸ್ಸಿನಾಳದಿಂದೆದ್ದ ಪ್ರಾಮಾಣಿಕ ಅನಿಸಿಕೆಗಳನ್ನು ದಿಟ್ಟತನದಿಂದ ಅರುಹಬೇಕು. ಹಾಗಾದಲ್ಲಿ ಮಾತ್ರ ಬರಹಗಾರನೂ, ಅವನ ಬರಹವೂ ಓದುಗನ ತೆಕ್ಕೆಯಲ್ಲಿ ಅರಳೀತು. ಘಮವನಿತ್ತೀತು. ಓದುಗನ ಓದಿನಲೂ ಸಾರ್ಥಕ್ಯವಿದ್ದೀತು.

ನಮ್ಮ ನಿಮ್ಮೆಲ್ಲರ ಪ್ರಯತ್ನವೂ ಸಾರ್ಥಕ್ಯದ ಸವಿಯನನುಭವಿಸುತ್ತಾ ಘಮವನರಳಿಸುವ ನಿಟ್ಟಿನಲ್ಲಿರಲಿ. 
============================
ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday, 28 April 2013

ಅಭಿವ್ಯಕ್ತಿಯ ತೊದಲುಗಳಿಗೆ ಅಮ್ಮನೆಂಬುದು ಭಾಷೆಯು!


ಬಾಳ ಪುಟವು ಆರಂಭವಾಗುತ್ತಿದ್ದ ಹಾಗೆ ಮಗುವು ತನ್ನ ಮೂಕ ಭಾವನೆ ಮತ್ತು ತನ್ನ ಅಂತರಂಗದ ಮಾತುಗಳನ್ನು ಮತ್ತೊಬ್ಬರಲ್ಲಿ ಹೇಳಲು ಸಾಕಷ್ಟು ಪ್ರಯತ್ನ ಪಡುತ್ತದೆ. ಅದರ ಪ್ರತಿಯೊಂದು ಪ್ರಯತ್ನವೂ ಮನಕೆ ಒಂದೊಂದು  ರೀತಿಯ ಅರ್ಥ ಕೊಡುತ್ತಿರುತ್ತದೆ. ಆದರೆ ತನ್ನ ಕರುಳ ಬಳ್ಳಿಯನು ಒಂಬತ್ತು ತಿಂಗಳು ಹೊತ್ತು ಹೆತ್ತು ಪೋಷಿಸಿದವಳಿಗೆ ಮಾತ್ರ ಆ ಮಗುವಿನ ಭಾವನೆ ತೊದಲು ನುಡಿ ಅರ್ಥವಾಗುವುದು. ತದನಂತರ ಮನದೊಳಗಿನ ಭಾವನೆಗಳನು ಅಭಿವ್ಯಕ್ತಪಡಿಸಲು ಸಹಾಯ ಮಾಡುವ ಮತ್ತೊಬ್ಬ ತಾಯಿಯೇ ಭಾಷೆ! ಮಾತು ಕಲಿಸುವ ಭಾಷೆಯೇ ಮಾತೃಭಾಷೆ! ಮಾತೃ ಎಂದು ಅದರಲ್ಲಿಯೇ ಇದೆಯಲ್ಲ ಎಲ್ಲವನ್ನು ನಾವು ಹೇಳದಿದ್ದರೂ ಅಭಿವ್ಯಕ್ತಪಡಿಸಲು ಇರುವ ಭಾವಸೇತುವೆ!

ವರ್ಷದಲ್ಲಿ ಮೂರು ಕಾಲಗಳು ನಿರಂತರವಾಗಿ ಸಾಗುತ್ತಿರುತ್ತವೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ಆಯಾ ಕಾಲಕ್ಕೆ ತಕ್ಕಂತೆ ನಮ್ಮಲ್ಲಿನ ಜೀವನದ ಅಳವಡಿಕೆ ಮತ್ತು ಚಟುವಟಿಕೆ ಬದಲಾಗುತ್ತ ಹೋಗುತ್ತದೆ. ಹಾಗೆಯೇ ಭಾವನೆಯೂ ಕೂಡ. ದಿನಗಳೆದಂತೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ. ಯೌವ್ವನ ಕುಂದುತ್ತಿರುತ್ತದೆ. ಆದರೆ ಮಾನಸಿಕವಾಗಿ, ಭಾವನಾತ್ಮಕವಾಗಿ ಇನ್ನಷ್ಟು ಬೆಳೆದು ಪರಿಪಕ್ವತೆ ಪಡೆದುಕೊಳ್ಳುತ್ತೇವೆ. ಇದೇ ರೀತಿ ಮರವೂ ಕೂಡ. ಅದು ಬೆಳೆಯುತ್ತಲೇ ಇದ್ದರೂ , ತನ್ನೆಲ್ಲ ಪೊರೆಯನ್ನು ಒಮ್ಮೆ ಕಳಚಿ ಹೊರ ಹಾಕುವ ಹಾವಿನಂತೆ, ತನ್ನ ಎಲ್ಲಾ ಜಡ ಎಲೆ ರೆಂಬೆ ಕೊಂಬೆಗಳನ್ನು ಉದುರಿಸುತ್ತದೆ. ಮತ್ತೆ ಹೊಸ ಚಿಗುರು ಹೊಸ ಉಸಿರು ಹೊಸ ಗಾಳಿ ಹೊಸ ಹುರುಪು ಮತ್ತೆ ತನ್ನೊಳಗಿನ ಚಿರಯೌವ್ವನವ ತಾನೂ ಅನುಭವಿಸಿ ತನ್ನ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳಿಗೂ ಒದಗಿಸುತ್ತ ನಿಸ್ವಾರ್ಥ ಭಾವದಿಂದ ತಟಸ್ಥವಾಗಿ ನಿಂತು, ತನ್ನ ಕರ್ತವ್ಯವನು ಮರೆಯದ ರೀತಿಯಲ್ಲಿ ಬದುಕುತ್ತಾ ಸಾಗುತ್ತಿರುತ್ತದೆ.

ಅದೇ ರೀತಿ ನಮ್ಮ ಪೂರ್ವಜರು ನಮಗಾಗಿ ಬಿಟ್ಟಿರುವ, ತಮ್ಮ ನಿಸ್ವಾರ್ಥ ಭಾವದಿ ಕೊಟ್ಟಿರುವ ಅನುಭವವೆಂಬ ಸಾಹಿತ್ಯ ಜ್ಞಾನಕ್ಕೆ ಚಿರ ಯೌವ್ವನ ಹೊತ್ತ ಭಾವನೆಯೆಂಬ ಕೀಲಿ ಕೈಯಲ್ಲಿ ನಡೆಯುವ ಸಾಹಿತ್ಯ ಮನಸ್ಸಿನ ಬೊಂಬೆಗೆ ಜೀವ ಕೊಟ್ಟು ಆತ್ಮಾನುಭೂತಿ, ಆತ್ಮಾವಲೋಕನ, ಆತ್ಮಸಂತೃಪ್ತಿ, ಆತ್ಮಶೋಧನೆ ಈ ರೀತಿ ತನ್ನೊಳಗಿನ ಮೂಕ ಅಭಿನಯವನ್ನು ಅಕ್ಷರದ ಮೂಲಕ ಹೊರ ತರಿಸುವ ಪ್ರಯತ್ನ ಮಾಡಬೇಕು. ದಿನ ನಿತ್ಯದ ಬದುಕಿನಲ್ಲಿ ಸುಖ ದುಃಖಗಳನ್ನು ಭಾವನೆಯ ತಕ್ಕಡಿಯಲಿ ಸರಿಯಾಗಿ ತೂಗುತ್ತಾ! ಅದರ ಸಾಧಕ ಬಾಧಕಗಳ ಏರು ಇಳಿತಗಳ ಅವಲೋಕಿಸಿ ಬದುಕಿನ ಮುಂದಿನ , ಹಿಂದಿನ ಹಾಗೂ ವಾಸ್ತವದ ಇನ್ನು ಮಿಗಿಲಾಗಿ ಮೂರಕ್ಕೂ ನಿಲುಕದ ಕಲ್ಪನೆಯ ಲೋಕದಲ್ಲಿ ಮನಕೆ ಬೇಕಾದಂತೆ ಭಾವನೆಯ ಜೊತೆ ಆಟವಾಡುತ್ತ ಆತ್ಮದೊಳಗಿನ ಲೋಕಕೆ ನಾವೇ ಸೃಷ್ಟಿಕರ್ತನಾಗಿ ಅನುಭವಿಸುವ ವಿನೋದವೇ ವಿಸ್ಮಯ. ಹಳೆಯ ನೆನಪುಗಳ ಮೆಲುಕು ಹಾಕುತ್ತ ತನ್ನ ತಪ್ಪು ಒಪ್ಪುಗಳ ಅವಲೋಕನ, ಜೊತೆಗೆ ಹೊಸ ಕನಸುಗಳಿಗೆ ಸರಕುಗಳ ಹುಡುಕುವ ಪ್ರಯತ್ನ ನಿರಂತರವಾಗಿ ಸಾಗುತ್ತಿರಬೇಕು.

ಮನುಷ್ಯ ಜೀವನದಲ್ಲಿ ಏಕಾಂತವೆಂಬುದು ಅತೀ ಉನ್ನತವಾದ ಘಟ್ಟ. ಏಕೆಂದರೆ ತನ್ನ ಬದುಕಿನ ಅಮೂಲ್ಯ ಕ್ಷಣವನ್ನು ಕಳೆಯುವ, ತನ್ನನ್ನೂ ತನ್ನ ಸಾಮರ್ಥ್ಯವನ್ನು ಅರಿಯುವ ಪ್ರಯತ್ನ ಮಾಡುವ, ತನ್ನ ಸಂಪೂರ್ಣ ವ್ಯಕ್ತಿತ್ವದ ಬಗ್ಗೆ ಜ್ಞಾನೋದಯವಾಗುವ ಕ್ಷಣವದು . ಇಂತಹ ಸಮಯದಲ್ಲಿಯೇ ಮನುಷ್ಯ ಭಾವಜೀವಿಯಾಗುವುದು, ಈ ಭಾವುಕತೆಯನ್ನು ಪ್ರತಿಯೊಬ್ಬರೂ ಸವಿಯಬೇಕು. ಬರುವ ಭಾವನೆಯಲ್ಲಿ , ಭಾವುಕತೆ, ಭಾವೋದ್ವೇಗ, ಭಾವೋಲ್ಲಾಸ ಎನ್ನುವ ಮೂರು ರಸಗಳು ಅತ್ಯುನ್ನತ ಪಾತ್ರ ವಹಿಸುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಭಾಷಾ ಜ್ಞಾನದ ಮೇಲೆ ನಿರ್ಧರಿತವಾಗುತ್ತದೆ. ಮಾತೃಭಾಷೆಯಾದಂತಹ ಕನ್ನಡವೂ ಸಹ ತಾಯಿಯಂತೆ. ಆಕೆಯ ಸಹಾಯದೊಂದಿಗೆ ನಮ್ಮ ಪ್ರಯತ್ನ ಸಾಗಬೇಕು ಅದಕ್ಕಾಗಿ ಡಿಗ್ರಿಗಳು ಬೇಕಿಲ್ಲ ಕೇವಲ ಕನ್ನಡವನ್ನು ಓದುವ ಮತ್ತು ಬರೆಯುವ ಅಕ್ಷರಮಾಲೆಯ ಉಪಯೋಗ ಸಾಕು. ತಿಳಿದಿರುವ ಭಾಷೆಗೆ ಅಕ್ಷರಗಳ ಅರಿತು ಬರೆಯಲು ಸಾಕಷ್ಟು ಸಮಯ ಬೇಕಾಗುವುದಿಲ್ಲ. ಸ್ವಲ್ಪ ಗಮನಹರಿಸುವ ತಾಳ್ಮೆ ಬೇಕು ಮತ್ತು ಆಸಕ್ತಿ ಇರಬೇಕಾಗುತ್ತದೆ. ಹೇಳಿದ ಆ ಮೂರು ಭಾವಗಳ ಜೊತೆಗೆ ತಲ್ಲೀನರಾದರೆ ಒಳಗಿರುವ ಕವಿಯ ಭಾವ ತಾನಾಗಿಯೇ ಹೊರಬರುತ್ತದೆ. ಆ ಭಾವನೆಗಳನ್ನು ಬಾಹ್ಯ ಪ್ರಪಂಚಕ್ಕೆ ಹೇಳುವ ಅಭಿವ್ಯಕ್ತಪಡಿಸುವ ಶಕ್ತಿ ಅಂತಹ ಪದಗಳಿಗೆ ಮಾತ್ರ ಇವೆ ಎಂದು ಹೇಳಬಹುದು. ಅಂತಹ ಶಕ್ತಿಯೇ ಸಾಹಿತ್ಯ. ಸಾಮಾನ್ಯ ಮಾತಿನಲ್ಲಿ ಹೇಳಬಹುದಾದರು, ಅದರ ಸಾರವನ್ನು ವಿಭಿನ್ನ ರೀತಿಯಲ್ಲಿ ತನ್ನದೇ ಆದ ಭಾಷಾ ಶಕ್ತಿಯ ಮೂಲಕ ಹೊರ ತರುವ ಮತ್ತು ಅದನ್ನು ಓದುಗರಿಗೆ ಆಸ್ವಾದಿಸಲು ಅಂತರಂಗವನ್ನು ಅರ್ಥೈಸಿಕೊಳ್ಳಲು ಎಡೆ ಮಾಡಿಕೊಡುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳು ವಿಭಿನ್ನ ರೀತಿಯ ಆತ್ಮಾನುಭೂತಿಕೊಡುತ್ತವೆ.

ಓದುವಾಗ ಮನದೊಳಗಿನ ಭಾವಲೋಕದಲ್ಲಿ ಸ್ವಂತ ಅನುಭವಗಳ ಸಹಾಯದಿಂದ ಭಾವಚಿತ್ರಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಮನಸ್ಸಿಗೆ ಉಲ್ಲಾಸ ಜೊತೆಗೆ ಇನ್ನೊಂದು ಆತ್ಮದ ಭಾವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಬರುತ್ತದೆ. ಮನುಷ್ಯ-ಮನುಷ್ಯನನ್ನು ಇಂದ್ರಿಯಾತ್ಮಕವಾಗಿ ಗ್ರಹಿಸುವದಕ್ಕಿಂತ ಭಾವನಾತ್ಮಕವಾಗಿ ಮತ್ತು ಅವನ ಅಂತರಾಳವನ್ನು ಓದುವ ಶಕ್ತಿ ಬೆಳೆಸಿಕೊಳ್ಳಬೇಕಾಗುತ್ತದೆ. ಅಂತಹ ಕಲೆಗಳಲ್ಲಿ ಸಾಹಿತ್ಯವೂ ಒಂದು ಉತ್ತಮವಾದ ಕಲೆ ಎಂದೇ ಹೇಳಬಹುದು. ಕನ್ನಡದ ಕಂಪು ಎಲ್ಲೆಲ್ಲೂ ಸೂಸುತಿರಲಿ. ಆತ್ಮದ ಸತ್ಯಾನ್ವೇಷಣೆಯಾಗಲು ಬರೆಯುವುದು ಹಾಗು ಓದುವುದೂ ಒಂದು ಮಾಧ್ಯಮ ಕೂಡ ಹೌದು. ಹೆಚ್ಚು ಓದುತ್ತಾ ಓದುತ್ತಾ ತನ್ನ ಸ್ವಂತ ಅನುಭವಗಳ ಅವಲೋಕನ ಮಾಡಬೇಕಾಗುತ್ತದೆ. ತನ್ನ ಅನುಭವಕ್ಕೆ ಭಿನ್ನವಾಗಿದಲ್ಲಿ, ತನ್ನ ಅನುಭವವನ್ನು ತನ್ನದೇ ಆದ ಸಾಮರ್ಥ್ಯದೊಂದಿಗೆ ಅಭಿವ್ಯಕ್ತಪಡಿಸುವ ರೀತಿಯಲ್ಲಿ ಬರಹವಾಗಿ ಮಾರ್ಪಡಿಸಿದರೆ ಎಲ್ಲರನ್ನು ತಲುಪಬಹುದಾಗಿದೆ. ಜಗತ್ತಿಗೆ ಏನನ್ನೂ ಕೊಡಲಾಗದಿದ್ದರೂ ಜ್ಞಾನದ ಬುಟ್ಟಿಯ ಕೊಟ್ಟು, ಮನುಷ್ಯರಾಗಿ ಬಾಳುತ್ತ ಮನುಕುಲದ ಮನುಷ್ಯತ್ವವ ಉಳಿಸಿಕೊಳ್ಳೋಣ . ಅನುಭವಗಳ ಸರಮಾಲೆಯ ಹೊತ್ತ ಸಾಹಿತ್ಯಗಳ ಸುಗಂಧ ಸದಾ ಹಸಿರಾಗಿರಲಿ, ಅದರ ಪರಿಮಳ ಎಲ್ಲೆಲ್ಲೂ ಹರಡುತ್ತಿರಲಿ. ಬದುಕಿನ ಸುಖ -ದುಃಖಗಳ ಅರಿತು ಜ್ಞಾನವೆಂಬ ದೀವಿಗೆಯ ಹೊತ್ತಿಸಿ ಸಾಹಿತ್ಯದ ಲೋಕವ ಎಲ್ಲರಿಗೂ ಗೋಚರವಾಗುವಂತೆ ಬೆಳೆಸೋಣ. ಕನ್ನಡದ ಹೆಸರನ್ನು ಉಳಿಸೋಣ!

ಪ್ರೀತ್ಯಾದರಗಳೊಂದಿಗೆ,
ಗಣೇಶ್ ಜಿ ಪಿ
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday, 31 March 2013

ಬನ್ನಿ ಜೊತೆಯಾಗೋಣ!

ಆತ್ಮೀಯ ಸದಸ್ಯರೇ,

ಕನ್ನಡ ಬ್ಲಾಗ್ ಮಾರ್ಚ್ ತಿಂಗಳ ಸಂಪಾದಕೀಯ ಅನಿವಾರ್ಯವಾಗಿ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಅತಿ ಬೇಸರದ ವಿಷಯವೊಂದನ್ನು ಮತ್ತೆ ನಾವು ಪ್ರಸ್ತಾಪಿಸಲೇ ಬೇಕಾದ ಸಂದರ್ಭ. ೨೦೧೦ರ ಸರಿ ಸುಮಾರಿನಲ್ಲಿ ಕನ್ನಡ ಬ್ಲಾಗ್ ಎಂಬ ಈ ಗುಂಪು ತನ್ನ ಮೊಗ್ಗರಳಿಸುತ್ತಿರುವಾಗ ಅದನ್ನು ಪೋಷಿಸಿ, ಬೆಳೆಸುವ ಮಹದಾಸೆ ಹೊತ್ತು, ನಿರ್ವಾಹಕರೆಲ್ಲರಿಗೆ ಬೆನ್ನೆಲುಬಾಗಿ ನಿಂತು, ಮನದಾಳದ ಅರುಹುಗಳ ಮೂಲಕ ಬರಹಗಾರರಿಗೆ ಮಾರ್ಗದರ್ಶನ, ಸ್ಪೂರ್ತಿಯಾದಂತವರು ರವಿ ಮೂರ್ನಾಡ್. ಅಗಲಿದ ಆ ಕನ್ನಡ ಕುವರರಿಗೆ ಕುಸುಮಾಂಜಲಿಯನ್ನು ಅರ್ಪಿಸುತ್ತಾ ಈ ಸಂಪಾದಕೀಯವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರು ಕನ್ನಡ ಬ್ಲಾಗ್ ಬಗ್ಗೆ ಹೊತ್ತ ಕನಸುಗಳನ್ನು ನನಸುಗೊಳಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳನ್ನಿಡುವ ಮುಖಾಂತರ ಆ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ.

ಅಂದು ಮಾರ್ಚ್ ಹದಿನೇಳು ಭಾನುವಾರ. ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧವಾದ 'ಮಂಕುತಿಮ್ಮನ ಕಗ್ಗ'ವನು ಸಾಹಿತ್ಯ ಲೋಕಕ್ಕಿತ್ತ ಧೀಮಂತ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪನವರ ೧೨೬ನೇ ಜನ್ಮದಿನಾಚರಣೆಯ ಸುದಿನ. ವರುಷದ ಹಿಂದೆ ಕಂಡ ಕನಸೊಂದು ನನಸಾಗಿ ನಿಂತು ಅಭೂತಪೂರ್ವ ಕ್ಷಣವೊಂದು ಸಾರ್ಥಕ್ಯವನ್ನು ಕಂಡದ್ದು ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ತನ್ನ ಜೀವನದನುಭವಗಳನ್ನು ಡಿ.ವಿ.ಜಿ ಯವರ ಪ್ರತೀ ಮುಕ್ತಕಕ್ಕೂ ಅಳವಡಿಸಿಕೊಂಡು, ಆ ಮುಕ್ತಕಗಳ ವ್ಯಾಖ್ಯಾನ ಮಾಡಿ ನಮಗೆ ಉಣಬಡಿಸಿದವರು ಶ್ರೀಯುತ ರವಿ ತಿರುಮಲೈ. ಇದೇ ವ್ಯಾಖ್ಯಾನ ಇದೀಗ ಕಗ್ಗರಸಧಾರೆಯೆಂಬ ಮೊದಲ ಸಂಪುಟ.

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ, ಸನ್ಮಾನ್ಯ ವಿಶುಕುಮಾರ್, ಚಂದ್ರಮೌಳಿ, ಸುಬ್ಬಕೃಷ್ಣ, ಪಿ ಎಸ್ ರಾಜ್ ಗೋಪಾಲ್, ಪ್ರೊ.ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ ಇವರ ಉಪಸ್ತಿತಿಯ ಮೆರುಗಿತ್ತು ಈ ಕಾರ್ಯಕ್ರಮದಲ್ಲಿ. ಡಿ.ವಿ.ಜಿಯವರ ಜೀವನದ ಮೇಲೆ ಬೆಳಕು ಚೆಲ್ಲುವ ಕಿರುಚಿತ್ರದ ಮುಖೇನ ಗಮನಸೆಳೆದ ಈ ವಿನೂತನ ಕಾರ್ಯಕ್ರಮದ ಮುಖಾಂತರ ಕನ್ನಡ ಬ್ಲಾಗ್ ಫೇಸ್ಬುಕ್ ಪ್ರಪಂಚದಿಂದ ತನ್ನಡಿಯಿಟ್ಟದ್ದು ಹೊರಜಗತ್ತಿಗೆ.ಕಾರ್ಯಕ್ರಮದ ರೂವಾರಿಗಳ ಕಾರ್ಯದಕ್ಷತೆಗೆ ನಮ್ಮ ನಮನ ತನ್ಮೂಲಕ. ವೇದಿಕೆಯ ಮೇಲೆ ಉಪಸ್ಥಿತರಿದ್ದ ಅನುಭವಿಗಳ ಹಿತನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಹೃದಯರನ್ನೂ ರೋಮಾಂಚನಗೊಳಿಸಿತ್ತು ಅನ್ನುವುದಕ್ಕೆ ಬಂದ ಮೆಚ್ಚುಗೆಗಳೇ ಸಾಕ್ಷಿಯೆಂದು ಕೊಳ್ಳುತ್ತೇವೆ.

ಏನೇ ಇರಲಿ, ಕಾರ್ಯಕ್ರಮವೊಂದು ಉತ್ತಮರೀತಿಯಲಿ ಸಂಘಟಿತವಾಗಬೇಕಾದರೆ ಅದರ ಹಿಂದೆ ಕಾರ್ಯನಿರ್ವಹಿಸುವ ನಿಸ್ವಾರ್ಥ ಮನಸುಗಳು ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಅತ್ಯದ್ಭುತ ಕಾರ್ಯಕ್ರಮದ ರೂವಾರಿಯಾದವರು ಎಮ್. ಎಸ್ ಪ್ರಸಾದ್. ಅವರನ್ನು ಅಭಿನಂದಿಸದಿದ್ದರೆ ಬಹುಷಃ ನಮ್ಮೀ ಸಂಪಾದಕೀಯಕ್ಕೆ ಮೆರುಗು ಸಿಗಲಾರದು. ಪ್ರತಿಯೊಬ್ಬರ ಹೆಸರನ್ನೂ ಪ್ರಸ್ತುತ ಪ್ರಸ್ತಾಪಿಸಲಾಗದಿದ್ದರೂ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಪ್ರತಿಯೋರ್ವರಿಗೂ ಕನ್ನಡ ಬ್ಲಾಗ್ ತಂಡ ಚಿರಋಣಿ.

ಹಾಗಂಥ ಈ ಕಾರ್ಯಕ್ರಮವನ್ನು ಕೇವಲ ಕಗ್ಗರಸಧಾರೆಯ ಮಟ್ಟಿಗೆ ಸೀಮಿತಗೊಳಿಸಲಾಗುತ್ತಿಲ್ಲ ಮಿತ್ರರೇ. ಕನ್ನಡ ಬ್ಲಾಗ್ ಕೇವಲ ಒಂದು ಗುಂಪಾಗದೇ, ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿದೆಯೆಂದರೆ ಅದು ತಪ್ಪು, ಮುಂದಿನ ದಿನಗಳಲ್ಲಿ ಕಲೆ, ಸಂಸ್ಕೃತಿ, ಸಾಮಾಜಿಕ ಕಳಕಳಿಯನ್ನು ಹೊತ್ತು ತರುವ ಕಾರ್ಯಕ್ರಮಗಳ ಇಂಗಿತವನ್ನೂ ಹೊಂದಿದೆ. ತನ್ನ ಕಾರ್ಯಕ್ಷೇತ್ರದ ವ್ಯಾಪಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಲವು ಸದಸ್ಯರಿಂದ ಬಂದ ಮನವಿ, ಪ್ರೋತ್ಸಾಹವನ್ನು ಸದ್ಯದಲ್ಲೇ ಕಾರ್ಯಗತಗೊಳಿಸುವ ಇರಾದೆಯೂ ಕೂಡ. ಇದು ಕೇವಲ ನಿರ್ವಾಹಕರು, ಕನ್ನಡ ಬ್ಲಾಗ್ ಸದಸ್ಯರಲ್ಲದೇ ಅನೇಕ ಸಹೃದಯರ ಸಲಹೆ, ಸೂಚನೆಯ ಮೇರೆಗೆ ಮುಂದುವರಿಯುತ್ತಿದ್ದೇವೆ. ಕನಸುಗಳನ್ನು ನನಸುಗೊಳಿಸುವ ದಿಟ್ಟ ಹೆಜ್ಜೆ ನಮ್ಮ-ನಿಮ್ಮೆಲ್ಲರದು.

ಆ ಕನಸುಗಳನ್ನು ನನಸುಗೊಳಿಸುವ ಪ್ರಪ್ರಥಮ ಹೆಜ್ಜೆಯಾಗಿ ಕಗ್ಗರಸಧಾರೆಯಂಥ ಕಾರ್ಯಕ್ರಮಗಳ ಆಯೋಜನೆ. ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮ, ಕಲೋಪಾಸನೆಯಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮುಖೇನ ನಮ್ಮ ತರುಣ ಹೃದಯಗಳನ್ನು ಸೆಳೆಯುವ ಪ್ರಯತ್ನ . ಎತ್ತೆತ್ತಲೋ ಸಾಗುತ್ತಿರುವ ನಮ್ಮ ಯುವ ಮನಸ್ಸುಗಳ ದಾರಿಯಲ್ಲಿ ಈ ಸೆಳೆತಗಳ ಮೂಲಕ ನಮ್ಮ ಕಲೆ, ಸಂಸ್ಕೃತಿಗೆ ಅಳಿಲು ಸೇವೆಗೈವ ತವಕ.

ಪ್ರಿಯ ಸದಸ್ಯರೇ, ಇದು ನಿಮ್ಮದೇ ಕಾರ್ಯಕ್ರಮ. ನಿಮ್ಮ ಕೃತಿಗಳ ಬಿಡುಗಡೆಗೂ ನಾವಿದ್ದೇವೆ. ನಿಮ್ಮೊಳಗಿನ ಕಲೆ,ಸಾಹಿತ್ಯ, ಸಂಗೀತದೊಲವಿಗೂ ನಾವು ಜೊತೆಗಿರುತ್ತೇವೆ. ನೀವು ನಾವಾಗುತ್ತೇವೆ. ನಿಮ್ಮ ಕಾರ್ಯಕ್ರಮ ನಮ್ಮದಾಗಲಿ. ನಮ್ಮ ನಿಮ್ಮೆಲ್ಲರದಾಗಲಿ. ಬನ್ನಿ ಕೈ ಜೋಡಿಸೋಣ. ಡಿ.ವಿ.ಜಿ, ಜೀಪಿ ರಾಜರತ್ನಂ, ಕುವೆಂಪು, ಬೇಂದ್ರೆ, ಪು.ತಿ.ನ, ಕೆ.ಎಸ್.ನ ಒಬ್ಬಿಬ್ಬರಲ್ಲ, ಎಲ್ಲರನೂ ಮತ್ತೆ ಕರೆತರೋಣ. ಅವರೊಳಗಿನ ತುಡಿತವನು ಮತ್ತೆ ಅರಿಯೋಣ ಬನ್ನಿ, ಮೆರೆಯೋಣ ಬನ್ನಿ.

ಆತ್ಮೀಯತೆಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Thursday, 28 February 2013

ಅರುಹುಗಳ ಅರಿತು ಅರಗಿಸಿಕೊಂಡು ಬರೆಯೋಣ ಬನ್ನಿ!


ಕಾಲ ಬದಲಾಗಿದೆ ನಿಜ. ನವೋದಯ, ನವ್ಯ, ನವ್ಯೋತ್ತರ, ಪ್ರಗತಿಶೀಲ, ಬಂಡಾಯ ಹೀಗೆ ನಿನ್ನೆ ಮೊನ್ನೆ ಇದ್ದಂತೆ ಇಂದಿಲ್ಲ ಈ ಸಾಹಿತ್ಯ ಯುಗ. ನಾಳೆ ಮತ್ತೊಂದು ಹೊಸ ಪ್ರಕಾರಕ್ಕೂ ಅಡಿಗಲ್ಲಿಡಲೂಬಹುದು. ಕಾಲ ಬದಲಾದಂತೆ ಬದಲಾವಣೆಯ ಗಾಳಿ ಬೀಸುವುದು ಅನಿವಾರ್ಯ. ನಿಂತ ನೀರಲ್ಲ ಈ ಸಾಹಿತ್ಯಕೃಷಿ. ಹರಿವ ನದಿಯಂತೆ ಅನುದಿನವೂ ಹೊಸಹೊಸ ಹರಿವನ್ನು ಈ ಸಾಹಿತ್ಯಕಡಲಿನ ಒಡಲಿಗೆ ಹರಿಯಗೊಡುತ್ತಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣೀಭೂತರು ನಮ್ಮ ಬರಹಗಾರ ಬಳಗ. ಕಾಲ ಬದಲಾದಂತೆ ಪ್ರಾಯಃ ಬರಹಗಾರರಿಗೇನೂ ಕೊರತೆಯಾದಂತಿಲ್ಲ. ಬರಹವನ್ನೇ ವೃತ್ತಿ ಮಾಡಿಕೊಂಡವರು ಹಲವರಾದರೆ, ಇನ್ನೂ ಪ್ರವೃತ್ತಿಯಾಗಿ ಮಾಡಿಕೊಂಡವರದು ಮತ್ತೊಂದು ಬಳಗ. ಈ ಎರಡೂ ಪಂಗಡಗಳು ಬರಹಕ್ಷೇತ್ರಕ್ಕೆ ಅಪಾರವಾದ ಅಷ್ಟೇ ಅಪೂರ್ವವಾದ ಕೊಡುಗೆಗಳನ್ನಿತ್ತದ್ದು ದಿಟ.

ಈ ಉದಾರ ಕೊಡುಗೆಗಳ ಹಿಂದಿನ ಬೆಳಕು ಬರಹಗಾರರೆನ್ನುವುದು ನಿಜ. ಆದರೆ ಕೇವಲ ಬರಹಗಾರ ತನ್ನ ಕೊಡುಗೆಗಳನ್ನು ಕೊಟ್ಟು ಸುಮ್ಮನೇ ಕೂತರೆ ಅದು ಬೆಳಕಿಗೆ ಬರುವುದಾದರೂ ಹೇಗೆ? ತನ್ನ ಅಪೂರ್ವತನವನ್ನು, ಅದರೊಳಗಿನ ಸುಗಂಧವನ್ನು ಹೊರಸೂಸುವುದಾದರೂ ಹೇಗೆ? ಆ ಸುಗಂಧವನ್ನು ಹೀರಲು ಬರುವ ದುಂಬಿ ಓದುಗ ಮಹಾಶಯ. ಈ ಓದುಗ ಮಹಾಶಯರನ್ನು ಸೃಷ್ಟಿಸುವುದಾದರೂ ಹೇಗೆ?ಬರಹಗಾರ ತನ್ನ ಬರಹಗಳನ್ನು ಪ್ರಕಟಿಸುವಾಗ ಆ ಬರಹಕ್ಕೆ ಓದುಗರಿರುತ್ತಾರೆ ಎನ್ನುವ ಆಶಯವನಿಟ್ಟುಕೊಂಡೇ ಪ್ರಕಟಿಸುತ್ತಾನೆ. ಹೌದು. ಯಾವುದೇ ಬರಹಕ್ಕಾದರೂ ಓದುಗನಿರಲೇಬೇಕು. ಅವನಿಲ್ಲದಿದ್ದರೆ ಬರಹದ ಉದ್ದೇಶ ಸಾರ್ಥಕವಾಗದು. ಮೂಲಭೂತವಾಗಿ ಪ್ರತಿಯೊಬ್ಬ ಬರಹಗಾರನ ಮನದಲ್ಲಿ ಮೂಡಬಹುದಾದ ಪ್ರಶ್ನೆ "ಓದುಗನ ಸೃಷ್ಟಿ ಹೇಗೆ" ಅನ್ನುವುದು. ಈ ಅಂಶಕ್ಕೆ ಯಾವ ಲೇಖಕನೂ ಹೊರತಾಗಿರಲಾರ, ಅದಂತೂ ಸತ್ಯ. ಆದರೆ ಓದುಗ ಪ್ರಪಂಚದ ಸೃಷ್ಟಿ ಸಾಧ್ಯವೇ? ಹೇಗೆ ಎನ್ನುವ ಪ್ರಶ್ನಾರ್ಥಕ ಚಿಹ್ನೆಗೂ ಉತ್ತರವಿರದಿರದು. ಪ್ರತಿಯೊಬ್ಬ ಲೇಖಕನು ತನ್ನ ಬರಹಗಳ ಮೂಲಕ ಸೆಳೆದು ತನ್ನದೇ ಆದ ಓದುಗ ಪ್ರಪಂಚವನ್ನು ಸೃಷ್ಟಿಸಿಕೊಳ್ಳುವ ಕಾತರ ಹೊಂದಿರುತ್ತಾನೆ. ಬಹುಷಃ ಈ ಪ್ರಕ್ರಿಯೆಗೆ ಆತ ತನ್ನ ಬರಹಗಳನ್ನು ಮಾರಬೇಕಾದ ಸನ್ನಿವೇಶ ಬಂದರೂ ಅಚ್ಚರಿಯಿಲ್ಲ. ಇಲ್ಲಿ ಮಾರಾಟ ಪದವೆನ್ನುವುದು ಅದು ದುಡ್ಡಿಗೆ ಕೊಂಡುಕೊಳ್ಳು ಎಂಬರ್ಥದಲ್ಲಿ ಇಲ್ಲ. ಹೊಸಬರಹಗಾರನಾಗಿ ತಾನು ಅರಳುವ ಸಮಯದಲ್ಲಿ ಆತ ಬರಹದ ಘಮವನ್ನು ಬಿತ್ತಲೇ ಬೇಕಾಗುತ್ತದೆ. ತನ್ಮೂಲಕ ಬರಹಕ್ಕೆ ಓದುಗನನ್ನು ಎಳೆದು ತರಬೇಕಾದ. ಸಕಲ ಸಾಹಸವನ್ನು ಮಾಡಲೇಬೇಕಾಗುತ್ತದೆ. ಈಗಾಗಲೇ ಬರಹ-ಮಾರುಕಟ್ಟೆಯಲ್ಲಿ ನೆಲೆಯೂರಿರುವ ಅತಿರಥ ಮಹಾರಥರ ಎದುರಿಗೆ ತನ್ನ ಬರಹವನ್ನು ವಾಣಿಜ್ಯಕರಣಗೊಳಿಸಬೇಕಾದ ಸಂದರ್ಭವೂ ಎದುರಾದರೆ ಅದು ಅಚ್ಚರಿಯೇನಲ್ಲ.

ಮೇಲೆ ಉಲ್ಲೇಖಿಸಿದಂತೆ, ವಾಣಿಜ್ಯಕರಣಗೊಳಿಸುವ ಉದ್ದೇಶದಿಂದಲೇ ಬರಹಗಾರ ಸನ್ನದ್ಧನಾಗಿ ನಿಂತು ಪ್ರತಿಯೊಬ್ಬ ಓದುಗರನ್ನೂ ಆಕರ್ಷಿಸುವ ಆತುರಕ್ಕೊಳಗಾದರೆ ಕಷ್ಟ. ಮತ್ತದು ಸರಿಯೂ ಅಲ್ಲ. ಆಯಾಯ ಬರಹಕ್ಕೆ ಆಯಾಯ ಓದುಗರಿರುತ್ತಾರೆ ಎನ್ನುವ ಸತ್ಯ ಆರಿಯಬೇಕಾದದ್ದು ಬರೆಯುವವನ ಧರ್ಮ. ಒಬ್ಬರಿಗೊಂದು ರುಚಿಸಿದರೆ, ಇನ್ನೊಬ್ಬರಿಗೊಂದು. ಮಳೆಗಾಲದಲ್ಲಿ ಹಪ್ಪಳವೇ ಗತಿಯಾದರೆ, ಬೇಸಗೆಯಲ್ಲೂ ಅದನ್ನೇ ಮುಂದುವರಿಸುವ ಪರಿಪಾಠ ಓದುಗನದಲ್ಲ. ವೈವಿಧ್ಯಮಯವಿದ್ದರೆ ಬೆಲ್ಲಕ್ಕಿರುವೆ ಮುತ್ತಿದಂತೆ ಮುತ್ತುವುದು ಸಹಜವಾಗಬಹುದು. ಹಾಗಂಥ ಎಲ್ಲವನ್ನೂ ಸಿಹಿಯಾಗಿಯೇ ಬರೆಯಲೂ ಅಸಾಧ್ಯ. ಪ್ರಸ್ತುತ ಸನ್ನಿವೇಶ, ಸಾಮಾಜಿಕ ನಡವಳಿಕೆ, ರಾಜಕೀಯ ವಿದ್ಯಮಾನಗಳ ಸಮ್ಮಿಳನವಲ್ಲಿರಲೇಬೇಕು. ಕೆಲವೊಮ್ಮೆ ಕಹಿ ಎನಬಹುದಾದ ಖಡಕ್ ಚಹಾದಂತ ಒಗರುಗಳನ್ನೂ ಓದುಗನೆದೆಗೆ ಇಳಿಸುವಂಥ ಪ್ರಯತ್ನವನ್ನೂ ಮಾಡಲೇಬೇಕು. ಆದರೆ ಓದುಗನು ಎಲ್ಲಾ ಬರಹದೊಳಗೆ ಇಳಿಯಲೇಬೇಕೆನ್ನುವ ಹಕ್ಕೊತ್ತಾಯ ಸಲ್ಲ.

ಇನ್ನುಳಿದಂತೆ ಬರವಣಿಗೆಯ ಸಂಖ್ಯೆ, ಅಂಕಿಅಂಶಗಳು. ಲೇಖಕ ಜೋಗಿಯವರು ತನ್ನ 'ಹಲಗೆ ಬಳಪ' ಎನ್ನುವ ಹೊತ್ತಗೆಯಲ್ಲಿ ಒಂದು ಕಡೆ ಅತಿವೃಷ್ಟಿ ಸಾಹಿತ್ಯಕ್ಕೆ ಶತ್ರು ಎನ್ನುತ್ತಾರೆ. ಇದನ್ನು ಲೇಖಕರೆನಿಸಿಕೊಂಡವರೆಲ್ಲರೂ ಗಮನಿಸಲೇಬೇಕು. ಏನನ್ನಾದರೂ ಬರೆದೇ ತೀರುವೆ ಎನ್ನುವ 'ಹಠಮಾರಿ' ಧೋರಣೆಯಲ್ಲಿ ಬರೆವ ಸಾಲುಗಳು ಬಹುಶಃ ಹೆಚ್ಚಿನ ಓದುಗರನ್ನು ತಲುಪದಿರಬಹುದು. ದಿನಕ್ಕೆ ಹತ್ತು ಹಲವು ಬರೆವ ಬರವಣಿಗೆಗಾರ ತಾನು ಏನನ್ನು ಮೊದಲು ಹೇಳಹೊರಟಿದ್ದೇನೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗಬೇಕು. ನಿನ್ನೆ ಬಳಸಿದ ಪದ, ಅಕ್ಷರಗಳೇ ಇಂದಿನ ಬರಹದಲ್ಲೂ, ಅದರ ಭಾವವೇ ಇಂದಿನದರಲ್ಲೂ ಪದೇ ಪದೇ ಮರುಕಳಿಸಬಾರದು. ಬರೆದುದದನ್ನು ಮತ್ತೆ ಓದಿ. ಮಗದೊಮ್ಮೆ ಓದಿ, ಈ ಪ್ರಕ್ರಿಯೆ ಮರುಕಳಿಸಿ ಆ ಬರಹವೆನ್ನುವುದು ಕುಲುಮೆಯದ್ದಿದ ಲೋಹದ ಹೊಳಪಿನಂತನಿಸಿದರೆ ಓದುಗ ಮಹಾಶಯನ ತೆಕ್ಕೆಗೆ ಹರಿಯಬಿಡಬಹುದು. ಅದು ಮುಂಜಾವ ಚಿನ್ನವರ್ಣದ ರವಿರಶ್ಮಿಯಂತೆ ಕಂಗೊಳಿಸದರೆ ಸಾರ್ಥಕತೆ ಪಡೆಯಬಹುದು. ಆ ನಿಟ್ಟಿನಲ್ಲಿ ಬರಹಗಾರರು ತಮ್ಮ ಪ್ರಯತ್ನ ಮುಂದುವರಿಸಬೇಕಾದದ್ದು ಅನಿವಾರ್ಯ.

ಬನ್ನಿ ಒಂದಷ್ಟು ಓದೋಣ ಮೊದಲು... ಅರಿತು, ಅರಗಿಸಿಕೊಂಡು, ಅರುಹೋಣ ನವಿರಾಗಿ ಬರಹರೂಪದಲಿ!

ಶುಭವಾಗಲಿ ಸರ್ವರಿಗೂ

ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಹಣಾ ತಂಡ.