Sunday, 30 June 2013

ಕಾವ್ಯ: ಹಂಚದ ಹೊರತು ಬೆಳೆಯುವುದಿಲ್ಲ!

ಕನ್ನಡ ಬ್ಲಾಗ್-ನ ಸಂಪಾದಕೀಯಗಳಲ್ಲಿ ಕಾವ್ಯ ಹುಟ್ಟಬಹುದಾದ ಮತ್ತು ಬೆಳೆದು ನಿಲ್ಲಬಹುದಾದ ಸಾಧ್ಯತೆಗಳ ಒಳ ಹೂರಣಗಳನ್ನು ಸವಿಯುತ್ತಲೇ ಬಂದಿದ್ದೀರಿ. ಈ ಸಲದ ಸಂಪಾದಕೀಯದಲ್ಲಿ ಹೊರ ಹೂರಣವನ್ನು ರುಚಿಕಟ್ಟಾಗಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಕಾವ್ಯ ಎಂಬುದು ಕೇವಲ ಕವನ, ಲೇಖನ, ಕಥೆ, ಪ್ರಬಂಧ ಅಥವಾ ಇನ್ನಿತರ ಬರಹ ರೂಪಗಳಿಗೆ ಮಾತ್ರ ಸೀಮಿತವಲ್ಲ, ಸೃಜನಾತ್ಮಕವಾಗಿ ಒಡಮೂಡುವ ಯಾವುದೇ ಒಂದು ಕ್ರಿಯೆಯು, ಪ್ರಕ್ರಿಯೆಯೂ ಕಾವ್ಯವಾಗಬಲ್ಲದು. ಕವಿ ಆ ಪ್ರಕ್ರಿಯೆಗೆ ಭಾಷೆಯ ಭಾಷ್ಯ ಬರೆಯುತ್ತಾನಷ್ಟೆ. ಆಗ ಅದು ಕಾವ್ಯದ ಅಧಿಕೃತವಾದ ಪ್ರಕಾರವಾಗಿ ಗುರುತಿಸಿಕೊಳ್ಳುತ್ತದೆ. ಸೃಜನಾತ್ಮಕ ಕ್ರಿಯೆ ಮತ್ತು ಪ್ರಕ್ರಿಯೆಗಳು ಕಾವ್ಯಗಳಾಗುತ್ತವೆ ಎಂಬ ಒಂದು ಉದಾಹರಣೆ ಲಂಕೇಶರ ಈ ಪದ್ಯದಲ್ಲಿ ಸಿಗುತ್ತದೆ.

"ಹುಟ್ಟು ಹಠಮಾರಿಯೊಬ್ಬ
ಕವಿಯಾಗಲು ಪಣ ತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆ ಕಂಠದಲ್ಲಿ ಹಾಡಿ
ತನಗೇ ಗೊತ್ತಿಲ್ಲದೆ
ಕವಿಯಾಯಿತು."

ಇಂಥ ಅಗಾಧ ವ್ಯಾಪ್ತಿ ಹೊಂದಿರುವ ಕಾವ್ಯಕ್ಕೆ ಹುಟ್ಟಿನಿಂದಲೇ ಒಂದು ನಿರ್ದಿಷ್ಟ ದಿಕ್ಕಿದ್ದು, ತನ್ನ ಗುರಿಯನ್ನು ನಿರ್ಧರಿಸಿಕೊಂಡು ಹೊರಟಂತಹ ಬಾಣದಂತಿರುತ್ತದೆ. ಒಂದು ಓದುಗ ವರ್ಗವನ್ನು ತಲುಪುವ ತವಕವಿರುತ್ತದೆ. ಪ್ರೇಮ ಸಾಹಿತ್ಯಕ್ಕೆ ಕವಿ ಪ್ರೇಮಿಯ ಮನಸ್ಸೇ ಕೇಂದ್ರವಾದರೆ, ಸಮಾಜಮುಖಿ ಸಾಹಿತ್ಯಕ್ಕೆ ಸಮಾಜವೇ ಕೇಂದ್ರ. ಹೀಗೆ ಬೆಳೆದು ನಿಲ್ಲುವ ಪ್ರತಿಯೊಂದು ಸಾಹಿತ್ಯಕ್ಕೂ ತನ್ನದೇ ಆದ ನಿರ್ದಿಷ್ಟ ಕೇಂದ್ರವೂ, ಇಲ್ಲವೇ ಗಮ್ಯವೂ ಇರುತ್ತದೆ. ಇಷ್ಟೆಲ್ಲಾ ಆಯಾಮಗಳಿದ್ದಾಗ್ಯೂ ಕಾವ್ಯ ಕೆಲವೊಮ್ಮೆ ಕವಿಯ ಭಾವದಲ್ಲೊಂದಾದರೆ, ಓದುಗರ ಭಾವದಲ್ಲಿ ಮತ್ತೊಂದಾಗಿರಬಹುದು. ಕೆಲವೊಮ್ಮೆ ಅದೇ ಕಾವ್ಯ ಶೈಲಿ ವಿಭಿನ್ನವಾಗಿ ಗುರ್ತಿಸಿಕೊಂಡು ಕಾವ್ಯಕ್ಕೆ ಸೃಷ್ಟಿಶೀಲ ಸ್ಪರ್ಷ ನೀಡಿ ನವೀನ ಸಾಹಿತ್ಯ ಮಾದರಿಯಾಗಬಹುದು. ಇದೆಲ್ಲ ಆಗಬೇಕೆಂದರೆ ಕಾವ್ಯವನ್ನು ಹೆಚ್ಚೆಚ್ಚು ಜನರು ಓದಬೇಕು, ಯೋಚಿಸಬೇಕು ಮತ್ತು ಧ್ಯಾನಿಸಬೇಕು. ಇಲ್ಲಿ ಸಾಹಿತ್ಯ ಬೆಳವಣಿಗೆಯ ಬಗ್ಗೆ ಚಿಂತಿಸುವವರ ಆಧ್ಯ ಕರ್ತವ್ಯ ಸಾಹಿತ್ಯವನ್ನು ಸಾಧ್ಯವಾದಷ್ಟು ಉದ್ದಗಲಗಳಿಗೆ ಪಸರಿಸುವುದು. ಇದನ್ನೇ ನಾನು ಹಂಚುವುದು ಎಂದು ಕರೆದಿದ್ದೇನೆ. ಅದು ಯಾವ ಮೂಲಕವಾದರೂ ಆಗಿರಬಹುದು. ತಾವು ಓದಿದ ಒಳ್ಳೆಯ ಪುಸ್ತಕಗಳನ್ನೂ, ಕಥಾ ಸಂಕಲನಗಳನ್ನೂ, ಇಲ್ಲವೇ ಕವನ ಸಂಕಲಗಳನ್ನು ತಮ್ಮ ಸ್ನೇಹಿತರಿಂದ ಓದಿಸುವುದು, ಒಳ್ಳೆಯ ಹೊತ್ತಿಗೆಗಳ ಬಗ್ಗೆ ಇತರರೊಂದಿಗೆ ಚರ್ಚಿಸುವುದು ಮತ್ತು ಒಳ್ಳೆಯ ಓದಿನ ಅಗತ್ಯಗಳ ಬಗ್ಗೆ ಅರಿವು ಮೂಡಿಸುವುದು. ಪುಸ್ತಕಗಳನ್ನು ಉಡುಗೊರೆಗಳಾಗಿ ಕೊಡುವುದು ಹೀಗೆ ಓದನ್ನು ಮತ್ತು ತನ್ಮೂಲಕ ಕಾವ್ಯವನ್ನೂ ಉತ್ತೇಜಿಸುವ ಕೆಲಸವಾಗಬೇಕಿದೆ.

ಹೀಗೆ ಸಾಹಿತ್ಯವನ್ನು ಹಂಚುವ ಮತ್ತೊಂದು ದಾರಿ: ಒಂದು ಪುಸ್ತಕವನ್ನಿಟ್ಟುಕೊಂಡು ಅದರ ಬಗ್ಗೆ ಗುಂಪು ಚರ್ಚೆಗಳನ್ನು ಆಯೋಜಿಸುವುದು, ಸಣ್ಣ ಪುಟ್ಟ ಚಹಾ ಕೂಟಗಳಂತಹ ಕವಿಗೋಷ್ಠಿಗಳನ್ನು ಆಯೋಜಿಸುವುದು, ಆಶು ಕವಿತ್ವವನ್ನು ಉತ್ತೇಜಿಸುವುದು, ಸೃಷ್ಟಿಶೀಲ ಸಾಹಿತ್ಯ ರಚನೆಯ ವಿವಿಧ ಸ್ಥರಗಳ ಬಗ್ಗೆ ಚಿಂತನಾ-ಮಂಥನ ಏರ್ಪಡಿಸುವುದು. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಮ್ಮ ಸಾಹಿತ್ಯಿಕ ಕ್ರಿಯೆಗಳಿಗೊಂದು ಭೌತಿಕ ರೂಪ ಕೊಡುವುದು ತನ್ಮೂಲಕ ಎಲ್ಲರ ವಿಚಾರಧಾರೆಗಳು ಎಲ್ಲರಲ್ಲಿಯೂ ಅರಿವು ಮೂಡಿಸುವ ದೀಪ್ತಿಯಾಗಬೇಕು. ಸಾಹಿತ್ಯದ ಬಗ್ಗೆಯೇ ಯೋಚಿಸುವ ಒಂದು ಸಮೂಹವನ್ನು ಸೃಷ್ಟಿಯಾಗಬೇಕು, ತಮ್ಮ ತಮ್ಮಲ್ಲೇ ಹುಟ್ಟಿಕೊಂಡ ಸಾಹಿತ್ಯಗಳಿಗೆ ವಿಮರ್ಶೆಯನ್ನೂ, ಮೌಲಿಕ ಮತ್ತು ತುಲನಾತ್ಮಕ ಚರ್ಚೆಗಳು ರೂಪುಗೊಳ್ಳಬೇಕು. ಈ ಎಲ್ಲಾ ಪ್ರಕ್ರಿಯೆಗಳೂ ನಮ್ಮ ಸಾಹಿತ್ಯಿಕ ದಾಹಕ್ಕೆ ನೀರೆರೆಯುತ್ತ ನಮ್ಮ ಬರವಣಿಗೆಯು ಸರಿ ದಿಕ್ಕಿನಲ್ಲಿರುವಂತೆ ನಿರ್ದೇಶಿಸುತ್ತವೆ. ಇಂತಹ ವಿಚಾರಧಾರೆಗಳೇ ಹಳೆಗನ್ನಡ ಸಾಹಿತ್ಯ ರಚನೆಯ ಸಂದರ್ಭದಲ್ಲಿ ವಚನ ಕ್ರಾಂತಿಯಾಗುವಂತೆ ಮಾಡಿದ್ದು, ದಾಸ ಸಾಹಿತ್ಯದ ಉದಯಕ್ಕೆ ಕಾರಣವಾಗಿದ್ದು, ನವೋದಯ ಸಾಹಿತ್ಯದಲ್ಲಿ ಕನ್ನಡ ಕಾವ್ಯ ಉನ್ನತ ಶಿಖರವೇರಿ ನಿಲ್ಲುವಂತೆ ಮಾಡಿದ್ದು, ನವ್ಯ ಸಾಹಿತ್ಯದ ಉಗಮಕ್ಕೆ ಕಾರಣವಾಗಿದ್ದು, ನವ್ಯೋತ್ತರ ಮತ್ತು ಬಂಡಾಯ ಸಾಹಿತ್ಯಗಳಿಗೆ ಅಡಿಗಲ್ಲಾಗಿದ್ದು. ನಾನಿಲ್ಲಿ ಗುಂಪುಗಾರಿಕೆಯ ಬಗ್ಗೆಯೋ, ಸಾಹಿತ್ಯ ಕ್ರಾಂತಿಯ ಬಗ್ಗೆಯೋ ಹೇಳುತ್ತಿಲ್ಲ. ಬದಲಾಗಿ ಸಾಹಿತ್ಯವನ್ನೇ ಧೇನಿಸುವ ಕೆಲವು ಮನಸ್ಸುಗಳು ಒಂದೆಡೆ ಕಲೆತರೆ ಎಂತಹ ಮಹತ್ತರವಾದದ್ದನ್ನು ಸಾಧಿಸಬಹುದು ಎಂಬ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ. ಸಾಹಿತ್ಯವನ್ನು ಎಲ್ಲರಲ್ಲಿಯೂ ಹಂಚುವ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ.

ನಾವು ಕನ್ನಡ ಬ್ಲಾಗ್ ನ ಮೂಲಕ ಅಂತರ್ಜಾಲದಲ್ಲಿ ಈ ರೀತಿಯ ಸಾಹಿತ್ಯ ಹಂಚುವ ಕಾರ್ಯವನ್ನೇ ಮಾಡುತ್ತಾ ಬಂದಿದ್ದೇವೆ. ಆದರೆ ಆ ಕೆಲಸಗಳು ಭೌತಿಕ ರೂಪ ಪಡೆದು ಇನ್ನಷ್ಟು ಸಾಹಿತ್ಯಿಕ ಮನಸ್ಸುಗಳನ್ನು ಮುಟ್ಟುವ ಕೆಲಸವಾಗಬೇಕು ಎಂಬ ಸದಾಶಯ ಈ ಸಂಪಾದಕೀಯದ್ದು. ಈ ನಿಟ್ಟಿನಲ್ಲಿ ಕನ್ನಡ ಬ್ಲಾಗ್ ಮುಂದಿನ ದಿನಗಳಲ್ಲಿ ಒಂದು ಟ್ರಸ್ಟ್ ರೂಪ ಪಡೆದು ಸಾಹಿತ್ಯಿಕ ಬೆಳವಣಿಗೆಗೆ ತನ್ನನ್ನು ಅರ್ಪಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಆ ಟ್ರಸ್ಟ್ ಮೂಲಕ ಕವಿಗೋಷ್ಠಿಗಳು, ಸಾಹಿತ್ಯ ಚಿಂತನಾ ಮಂಥನಗಳು, ಅಂತರ್ಜಾಲ ಸಾಹಿತ್ಯ ಪುಸ್ತಕ ರೂಪ ಪಡೆದು ಮತ್ತಷ್ಟು ಓದುಗರನ್ನು ತಲುಪುವ ಕಾಯಕಕ್ಕೆ ತನ್ನನ್ನು ಒಡ್ಡಿಕೊಳ್ಳಲಿದೆ. ಆ ಒಂದು ಆಕಾಂಕ್ಷೆಗಳನ್ನಿಟ್ಟುಕೊಂಡೇ 'ಬನ್ನಿ ಜೊತೆಯಾಗೋಣ' ಎಂಬ ಸಂಪಾದಕೀಯಕ್ಕೆ ಮುನ್ನುಡಿಯಾದದ್ದು ಕನ್ನಡ ಬ್ಲಾಗ್. ಇಷ್ಟೆಲ್ಲಾ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ನಮ್ಮ ಕೈಯ್ಯಲ್ಲಾಗುವ ಸಾಹಿತ್ಯ ಸೇವೆಗೆ ಟೊಂಕ ಕಟ್ಟಿ ನಿಲ್ಲಲು ಸತುವಾಗಿರುವವರೇ ನೀವು, ನಮ್ಮೆಲ್ಲ ಸಹೃದಯಿ ಸದಸ್ಯರು. ನಿಮ್ಮ ಈ ಅಭಿಮಾನಕ್ಕೆ ಎಷ್ಟು ಕೃತಜ್ಞತೆಗಳನ್ನರ್ಪಿಸಿದರೂ ಕಡಿಮೆಯೇ. ಕನ್ನಡ ಬ್ಲಾಗ್ ನ ಮುಂದಿನ ಎಲ್ಲಾ ಸಾಹಿತ್ಯಿಕ ಕೆಲಸಗಳಲ್ಲಿ ನಿಮ್ಮ ಕೈ ನಮ್ಮನ್ನು ಬಲಪಡಿಸುತ್ತದೆ ಎಂಬ ಧನ್ಯತೆಯಲ್ಲಿ ನಾವು.

- ಪ್ರಸಾದ್.ಡಿ.ವಿ.

Friday, 31 May 2013

ಓದಿನ ಸಾರ್ಥಕ್ಯವೂ, ಬರಹದ ಘಮವೂ!

ತಪ್ಪು ಮಾಡುವುದು ಮಾನವ ಸಹಜ ಗುಣ. ಎಲ್ಲರೂ ಒಂದಲ್ಲ ಒಂದು ರೀತಿಯಿಂದ ತಮ್ಮ ನಡೆಯಲ್ಲಿ ತಪ್ಪನ್ನು ಮಾಡಿಯೇ ಮಾಡಿರುತ್ತಾರೆ. ಹಾಗಂತ  ಮಾಡಿದ ತಪ್ಪುಗಳನ್ನೇ ಪದೇ ಪದೇ ಮಾಡುವುದು ಮೂರ್ಖತನದ ಪರಮಾವಧಿಯಾಗುತ್ತದೆ. ಇದು ಕೇವಲ ಬಾಳಿನ ನಡೆಗಷ್ಟೇ ಸೀಮಿತವಲ್ಲ. ಮೇ ತಿಂಗಳ ಕನ್ನಡ ಬ್ಲಾಗ್ ಸಂಪಾದಕೀಯವನ್ನು ಬರೆಯಲು ಕೂತಾಗ, ಕಳೆದ ಒಂದು ತಿಂಗಳಿನಲ್ಲಿ ಈ ಫೇಸ್ಬುಕ್ ಬ್ಲಾಗಂಗಳದಲ್ಲಿ ಪ್ರಕಟವಾದ ಹತ್ತು ಹಲವು ರಚನೆಗಳನ್ನು ಓದಿದ ನಮಗೆ ಇದರ ಬಗ್ಗೆಯೇ ಒಂದು ಲೇಖನವನ್ನು ಬರೆಯಬಹುದಲ್ಲ ಎನ್ನುವ ಯೋಚನೆ ಬಾರದೇ ಇರಲಿಲ್ಲ. ಆದರೆ ನಾವು ಯಾರ ರಚನೆಯನ್ನೂ ವಿಮರ್ಶೆಯ ಕಟ್ಟುಪಾಡಿನೊಳಗೆ ಅಳವಡಿಸಿಕೊಂಡು ಬರೆಯುತ್ತಿಲ್ಲ. ದಿನನಿತ್ಯ ನಾವು ಬಳಸುವ ಭಾಷೆಯಲ್ಲಿ ಆಗುತ್ತಿರುವ, ಆಗುವ ತಪ್ಪುಗಳನ್ನು ನಾವೇ ತಿದ್ದಿಕೊಳ್ಳಬೇಕೆ ವಿನಃ , ಓದುಗರು ಅದನ್ನು ತಿದ್ದುಪಡಿ ಮಾಡುತ್ತಾರೆ ಎನ್ನುವ ದೃಷ್ಟಿಯಿಟ್ಟುಕೊಳ್ಳಬಾರದು. ಅದೇ ರೀತಿ ಓದುಗರು ಸೂಚಿಸುವ ತಪ್ಪುಗಳನ್ನು ಪರಿಶೀಲಿಸಿ, ನಮ್ಮ ಮುಂದಿನ ನಡೆಯಲ್ಲಿ, ಅಂದರೆ ನಮ್ಮ ರಚನೆಯಲ್ಲಿ ಈ ಹಿಂದೆ ಆದ ತಪ್ಪುಗಳೇ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವುದು ಉತ್ತಮ ಬರಹಗಾರನ ನಡೆಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಯೋಚನೆಯನ್ನು ಅಳವಡಿಸಿಕೊಳ್ಳಬೇಕಾದ ಆವಶ್ಯಕತೆ ಎದ್ದು ಕಾಣುತ್ತದೆ.

ಪದ ಪ್ರಯೋಗ, ಅಕ್ಷರ ಬಳಕೆ: ಇಲ್ಲಿನ ಹತ್ತು ಹಲವು ರಚನೆಗಳನ್ನೋದುವಾಗ ಗಮನಿಸಿರುವಂತೆ ಅಕ್ಷರ ಜೋಡಣೆ ಮತ್ತು ಪದಪ್ರಯೋಗಳಲ್ಲಿನ ವಿಪರೀತ ತಪ್ಪುಗಳು ರಚನೆಗಳಲ್ಲಿನ ಗಾಂಭೀರ್ಯವನ್ನು ಹದಗೆಡಿಸುವಷ್ಟರ ಮಟ್ಟಿಗಿರುತ್ತವೆ. ಈ ತಪ್ಪಿಗೆ ಕಾರಣವಾಗುವ ಅಂಶಗಳನ್ನು ಮೂಲವಾಗಿ ಪರೀಶೀಲಿಸುವ ಮನಸ್ಸು ಕೆಲವೊಮ್ಮೆ ಇರುತ್ತದೆಯಾದರೂ, ಎಲ್ಲಿ ಆ ಬರಹಗಾರ ತಪ್ಪು ಭಾವನೆ ತಳೆಯುತ್ತಾನೆ ಎನ್ನುವ ಭಯವೂ ಕೆಲವೊಮ್ಮೆ ಕಾಡುತ್ತದೆ. ಆದರೆ ಯುವಮಿತ್ರರೊಡನೆ ಹಲವು ಬಾರಿ ಈ ವಿಚಾರದಲ್ಲಿ ಸಂವಾದಕ್ಕಿಳಿದು ಪ್ರಶ್ನಿಸಿದಾಗ ಕಂಡುಬಂದ ಕಟುಸತ್ಯವೆಂದರೆ ತಾನು ಚಿಕ್ಕಂದಿನಿಂದ ಕಲಿತ ಭಾಷೆ ಮತ್ತು ಪದ ಪ್ರಯೋಗಗಳು. ತಾನು ಮಾಡುತ್ತಿರುವ ಆ ತಪ್ಪುಗಳನ್ನು ಯಾರೂ ಇಷ್ಟರತನಕ ಪ್ರಶ್ನಿಸಿಲ್ಲ, ತಾನದನ್ನು ಸರಿಯೆಂದೇ ಭಾವಿಸಿದ್ದೆ ಎನ್ನುವ ಅವರ ಮನಸ್ಸಿನಾಳದ ಉತ್ತರವೂ ದೊರೆಯುತ್ತದೆ ಕೆಲವೊಮ್ಮೆ. ಏನೇ ಇರಲಿ. ಆ ತಪ್ಪುಗಳನೊಪ್ಪಿ ತಮ್ಮ ಮುಂದಿನ ಬರಹಗಳಲ್ಲಿ ಸರಿಯಾದ ಪದಬಳಕೆಗೆ ಒತ್ತುನೀಡುತ್ತೇವೆ ಎನ್ನುವವರ ಸಂಖ್ಯೆ ಕಡಿಮೆಯಿದ್ದರೂ, ಕೆಲವರಾದರೂ ತಪ್ಪನೊಪ್ಪಿಕೊಳ್ಳುವ ಗುಣವನ್ನು ಮೆರೆಯುತ್ತಾರೆ ಅನ್ನುವುದೇ ಸಂತಸದ ವಿಚಾರ. ಇದು ಎಲ್ಲರೊಳಗೂ ಒಡಮೂಡಲಿ ಎನ್ನುವ ಆಶಯವೂ ನಮ್ಮದು.

ವಸ್ತು, ವಿಚಾರ: ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಗಹನವಾದ ವಿಚಾರವೊಂದಿದೆ. ಅದು ಸೃಜನಾತ್ಮಕ ಸಾಹಿತ್ಯ. ಬರಹಗಾರನು ಸೃಜನಾತ್ಮಕ ಚಿಂತನೆಗಳತ್ತ ತನ್ನ ಬರಹದ ದಿಕ್ಕನ್ನು ಬದಲಿಸಿಕೊಂಡು ಸಾಗಿದರೆ ತನ್ನ ಬರಹಕ್ಕೆ ಬೇಕಾದ ವಸ್ತು, ವಿಷಯಗಳ ಕೊರತೆ ಬರದಿದ್ದೀತು. ನಮ್ಮ ಹೆಚ್ಚಿನ ಯುವ ಬರಹಗಾರರಿಗೆ ಅನಾಮತ್ತಾಗಿ ಸಿಗುವಂಥ ಒಂದೇ ಒಂದು ವಸ್ತುವೆಂದರೆ ಅದು ಪ್ರೇಮ ಅಥವಾ ಪ್ರೀತಿ. ತನ್ನ ಪ್ರತೀ ರಚನೆಯೂ ಒಂದೇ ಒಂದು ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದರೆ ಅಲ್ಲಿ ದಿನಗಳೆದಂತೆ ರಸಾನುಭವದ ಕೊರತೆ ಎದ್ದು ಕಾಣಬಹುದು. ಓದುಗನನ್ನು ಸೆಳೆಯದಿರಬಹುದು. ಆದರೆ ಒಂದೇ ವಿಷಯದ ಬಗ್ಗೆ ವೈವಿಧ್ಯಮಯ ರಚನೆ/ಬರಹಗಳನ್ನು ಬರೆದವರು ಇಲ್ಲವೆಂದೇನಿಲ್ಲ. ಪ್ರತಿ ರಚನೆಯಲ್ಲೂ ಭಿನ್ನ ಆಸ್ವಾದಗಳನ್ನೀಯುತ್ತಾ ಓದುಗರ ಮನವನ್ನೂ ತಣಿಸಿದವರಿದ್ದಾರೆ. ಒಂದು ಮಾತಂತೂ ನಿಜ; 'ನೈಜವಲ್ಲದ ಅತಿಭಾವುಕ ಸನ್ನಿವೇಶವನ್ನು ಸೃಷ್ಟಿಸುವುದಕ್ಕಿಂತಲೂ ವೈಚಾರಿಕ ನೆಲೆಗಟ್ಟಿನಲ್ಲಿ ಬರವಣಿಗೆ ರೂಪುತಳೆದರೆ, ಆ ಬರಹ ಓದುಗನ ಮನದಾಳದಲ್ಲಿ ಧೀರ್ಘ ಕಾಲದವರೆಗೆ ಉಳಿಯುವುದರಲ್ಲಿ ಸಂಶಯವಿಲ್ಲ'.

ಪಂಗಡ, ವಿಂಗಡನೆ: ಕಲೆಯ ಅಭಿವ್ಯಕ್ತಿಗೆ ಕಲಾವಿದನ ಜೀವನನುಭವನೇ ಮೂಲದ್ರವ್ಯ ಎಂದಿದ್ದಾರೆ ಪೂರ್ಣಚಂದ್ರ ತೇಜಸ್ವಿ. ನಮ್ಮ ಅನುಭವಗಳನ್ನು ನಾವು ಒಂದು ಬರಹ, ಹನಿ, ಕವನ, ಕವಿತೆಯ ರೂಪದಲ್ಲಿ ಹಂಚಿಕೊಂಡರೆ, ಅದು ಜಗತ್ತಿನ ಅದಾವುದೋ ಮೂಲೆಯ ಓದುಗನ ತಲೆಯೊಳಗೆ ಒಂದು ವಿಶ್ಲೇಷಣೆಯನ್ನು ಹುಟ್ಟುಹಾಕಲಾರಂಭಿಸಬಹುದು. ಇದಕ್ಕೆ ಆ ಓದುಗನ ಮನಸ್ಸಿನಲ್ಲಿ ಸಂಯೋಜನೆಗೊಳ್ಳುವ ಸಂವಾದಿ ಮನೋಭಾವವೇ ಕಾರಣವಿರಬಹುದು. ಈ ಮನೋಭಾವ ಎನ್ನುವುದು 'ಅದು ತನ್ನ ಪಂಗಡದವನು ಬರೆದ ರಚನೆ' ಎನ್ನುವ ತಳಹದಿಯಲ್ಲಿ ಹುಟ್ಟುವುದಿಲ್ಲ. ಹಾಗೆ ಹುಟ್ಟಿದ್ದೇ ಆದಲ್ಲಿ ಅದು 'ವಿಂಗಡಣೆ'ಯತ್ತ ಮುಖ ಮಾಡೀತೆ ಹೊರತು, ಸಂವಾದಶೀಲ ನೆಲೆಗಟ್ಟಿನಲ್ಲಿ ಇರಲಾರದು. ಈ ಪಂಗಡಗಳ ಸೃಷ್ಟಿಯೇ ಬಹುಶಃ ಸಾಹಿತ್ಯ ಲೋಕದಲ್ಲಿ ಪ್ರಸ್ತುತ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಡುತ್ತಿರುವುದಂತೂ ಸತ್ಯ. ಹೀಗೆ ಮುಂದುವರಿದಲ್ಲಿ ನಾಯಿ ಸಾಕಿದವರು ಮಾತ್ರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಓದಬೇಕೆನ್ನುವ ಪಂಗಡ ಹುಟ್ಟಿಕೊಂಡರೂ ಆಶ್ಚರ್ಯವಿಲ್ಲವೆಂದಿದ್ದಾರೆ ತೇಜಸ್ವಿ. ಸಾಹಿತ್ಯವು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕೇ ಹೊರತು ಪಂಗಡಗಳಾಗಿ ವಿಂಗಡಣೆಗೊಂಡು ಸತ್ವ ಕಳೆದುಕೊಳ್ಳಬಾರದು. 

ಓದು, ಬರೆ: ಇನ್ನು ನಮ್ಮ ಓದು. ಬರವಣಿಗೆ. ಎಲ್ಲದಕ್ಕೂ ಇಲ್ಲಿ ಅವಕಾಶವಿದೆಯೆಂದು ಎಲ್ಲವನ್ನೂ ಬರೆಯುವವರೇ ಜಾಸ್ತಿ. ಹೀಗಾದಲ್ಲಿ ಓದುವವರಾರು? ಬರಹವೆನ್ನುವುದು ಓದುಗನೆದೆ ತೆರೆಯುತ್ತದಾದರೂ ಎಲ್ಲ ಬರಹಗಳು ಆ ಕೆಲಸ ಮಾಡಲಾರವು. ಓದು ಮತ್ತು ಬರಹಕ್ಕೆ ಅದರದ್ದೇ ಆದ ಗುಣಮಟ್ಟಗಳು ಮುಖ್ಯವಾಗುತ್ತವೆ. ಬರಹಗಾರನಾದವನು ಓದುವ ಹವ್ಯಾಸವನು ಮೊದಲಾಗಿ ಬೆಳೆಸಿಕೊಳ್ಳಬೇಕು. ಓದುಗನಾದವನೂ ಕೇವಲ ಕಣ್ಣಾಡಿಸಿ ತಾನೆಲ್ಲವನೂ ಓದಿದ್ದೇನೆ ಅನ್ನುವ ಮನಸ್ಥಿತಿಗೂ ಬರಬಾರದು. ಅದಕ್ಕಿಂತಲೂ ಮಿಗಿಲಾಗಿ ಎಲ್ಲ ಬರಹಗಳನ್ನೂ, ಬರಹಗಾರರನ್ನೂ ಎಲ್ಲಾ ಸಂದರ್ಭಗಳಲ್ಲೂ, ಎಲ್ಲರನೂ ಮೆಚ್ಚಿಸುವ ಸಲುವಾಗಿ ಹೊಗಳಿಕೆಯ ಅತಿಶಯೋಕ್ತಿಗಳಲ್ಲೇ ಓದುಗನು ಮುಳುಗಿಸಬಾರದು. ಓದಿದ ಮೇಲೆ ತನ್ನ ಮನಸ್ಸಿನಾಳದಿಂದೆದ್ದ ಪ್ರಾಮಾಣಿಕ ಅನಿಸಿಕೆಗಳನ್ನು ದಿಟ್ಟತನದಿಂದ ಅರುಹಬೇಕು. ಹಾಗಾದಲ್ಲಿ ಮಾತ್ರ ಬರಹಗಾರನೂ, ಅವನ ಬರಹವೂ ಓದುಗನ ತೆಕ್ಕೆಯಲ್ಲಿ ಅರಳೀತು. ಘಮವನಿತ್ತೀತು. ಓದುಗನ ಓದಿನಲೂ ಸಾರ್ಥಕ್ಯವಿದ್ದೀತು.

ನಮ್ಮ ನಿಮ್ಮೆಲ್ಲರ ಪ್ರಯತ್ನವೂ ಸಾರ್ಥಕ್ಯದ ಸವಿಯನನುಭವಿಸುತ್ತಾ ಘಮವನರಳಿಸುವ ನಿಟ್ಟಿನಲ್ಲಿರಲಿ. 
============================
ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday, 28 April 2013

ಅಭಿವ್ಯಕ್ತಿಯ ತೊದಲುಗಳಿಗೆ ಅಮ್ಮನೆಂಬುದು ಭಾಷೆಯು!


ಬಾಳ ಪುಟವು ಆರಂಭವಾಗುತ್ತಿದ್ದ ಹಾಗೆ ಮಗುವು ತನ್ನ ಮೂಕ ಭಾವನೆ ಮತ್ತು ತನ್ನ ಅಂತರಂಗದ ಮಾತುಗಳನ್ನು ಮತ್ತೊಬ್ಬರಲ್ಲಿ ಹೇಳಲು ಸಾಕಷ್ಟು ಪ್ರಯತ್ನ ಪಡುತ್ತದೆ. ಅದರ ಪ್ರತಿಯೊಂದು ಪ್ರಯತ್ನವೂ ಮನಕೆ ಒಂದೊಂದು  ರೀತಿಯ ಅರ್ಥ ಕೊಡುತ್ತಿರುತ್ತದೆ. ಆದರೆ ತನ್ನ ಕರುಳ ಬಳ್ಳಿಯನು ಒಂಬತ್ತು ತಿಂಗಳು ಹೊತ್ತು ಹೆತ್ತು ಪೋಷಿಸಿದವಳಿಗೆ ಮಾತ್ರ ಆ ಮಗುವಿನ ಭಾವನೆ ತೊದಲು ನುಡಿ ಅರ್ಥವಾಗುವುದು. ತದನಂತರ ಮನದೊಳಗಿನ ಭಾವನೆಗಳನು ಅಭಿವ್ಯಕ್ತಪಡಿಸಲು ಸಹಾಯ ಮಾಡುವ ಮತ್ತೊಬ್ಬ ತಾಯಿಯೇ ಭಾಷೆ! ಮಾತು ಕಲಿಸುವ ಭಾಷೆಯೇ ಮಾತೃಭಾಷೆ! ಮಾತೃ ಎಂದು ಅದರಲ್ಲಿಯೇ ಇದೆಯಲ್ಲ ಎಲ್ಲವನ್ನು ನಾವು ಹೇಳದಿದ್ದರೂ ಅಭಿವ್ಯಕ್ತಪಡಿಸಲು ಇರುವ ಭಾವಸೇತುವೆ!

ವರ್ಷದಲ್ಲಿ ಮೂರು ಕಾಲಗಳು ನಿರಂತರವಾಗಿ ಸಾಗುತ್ತಿರುತ್ತವೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ಆಯಾ ಕಾಲಕ್ಕೆ ತಕ್ಕಂತೆ ನಮ್ಮಲ್ಲಿನ ಜೀವನದ ಅಳವಡಿಕೆ ಮತ್ತು ಚಟುವಟಿಕೆ ಬದಲಾಗುತ್ತ ಹೋಗುತ್ತದೆ. ಹಾಗೆಯೇ ಭಾವನೆಯೂ ಕೂಡ. ದಿನಗಳೆದಂತೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ. ಯೌವ್ವನ ಕುಂದುತ್ತಿರುತ್ತದೆ. ಆದರೆ ಮಾನಸಿಕವಾಗಿ, ಭಾವನಾತ್ಮಕವಾಗಿ ಇನ್ನಷ್ಟು ಬೆಳೆದು ಪರಿಪಕ್ವತೆ ಪಡೆದುಕೊಳ್ಳುತ್ತೇವೆ. ಇದೇ ರೀತಿ ಮರವೂ ಕೂಡ. ಅದು ಬೆಳೆಯುತ್ತಲೇ ಇದ್ದರೂ , ತನ್ನೆಲ್ಲ ಪೊರೆಯನ್ನು ಒಮ್ಮೆ ಕಳಚಿ ಹೊರ ಹಾಕುವ ಹಾವಿನಂತೆ, ತನ್ನ ಎಲ್ಲಾ ಜಡ ಎಲೆ ರೆಂಬೆ ಕೊಂಬೆಗಳನ್ನು ಉದುರಿಸುತ್ತದೆ. ಮತ್ತೆ ಹೊಸ ಚಿಗುರು ಹೊಸ ಉಸಿರು ಹೊಸ ಗಾಳಿ ಹೊಸ ಹುರುಪು ಮತ್ತೆ ತನ್ನೊಳಗಿನ ಚಿರಯೌವ್ವನವ ತಾನೂ ಅನುಭವಿಸಿ ತನ್ನ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳಿಗೂ ಒದಗಿಸುತ್ತ ನಿಸ್ವಾರ್ಥ ಭಾವದಿಂದ ತಟಸ್ಥವಾಗಿ ನಿಂತು, ತನ್ನ ಕರ್ತವ್ಯವನು ಮರೆಯದ ರೀತಿಯಲ್ಲಿ ಬದುಕುತ್ತಾ ಸಾಗುತ್ತಿರುತ್ತದೆ.

ಅದೇ ರೀತಿ ನಮ್ಮ ಪೂರ್ವಜರು ನಮಗಾಗಿ ಬಿಟ್ಟಿರುವ, ತಮ್ಮ ನಿಸ್ವಾರ್ಥ ಭಾವದಿ ಕೊಟ್ಟಿರುವ ಅನುಭವವೆಂಬ ಸಾಹಿತ್ಯ ಜ್ಞಾನಕ್ಕೆ ಚಿರ ಯೌವ್ವನ ಹೊತ್ತ ಭಾವನೆಯೆಂಬ ಕೀಲಿ ಕೈಯಲ್ಲಿ ನಡೆಯುವ ಸಾಹಿತ್ಯ ಮನಸ್ಸಿನ ಬೊಂಬೆಗೆ ಜೀವ ಕೊಟ್ಟು ಆತ್ಮಾನುಭೂತಿ, ಆತ್ಮಾವಲೋಕನ, ಆತ್ಮಸಂತೃಪ್ತಿ, ಆತ್ಮಶೋಧನೆ ಈ ರೀತಿ ತನ್ನೊಳಗಿನ ಮೂಕ ಅಭಿನಯವನ್ನು ಅಕ್ಷರದ ಮೂಲಕ ಹೊರ ತರಿಸುವ ಪ್ರಯತ್ನ ಮಾಡಬೇಕು. ದಿನ ನಿತ್ಯದ ಬದುಕಿನಲ್ಲಿ ಸುಖ ದುಃಖಗಳನ್ನು ಭಾವನೆಯ ತಕ್ಕಡಿಯಲಿ ಸರಿಯಾಗಿ ತೂಗುತ್ತಾ! ಅದರ ಸಾಧಕ ಬಾಧಕಗಳ ಏರು ಇಳಿತಗಳ ಅವಲೋಕಿಸಿ ಬದುಕಿನ ಮುಂದಿನ , ಹಿಂದಿನ ಹಾಗೂ ವಾಸ್ತವದ ಇನ್ನು ಮಿಗಿಲಾಗಿ ಮೂರಕ್ಕೂ ನಿಲುಕದ ಕಲ್ಪನೆಯ ಲೋಕದಲ್ಲಿ ಮನಕೆ ಬೇಕಾದಂತೆ ಭಾವನೆಯ ಜೊತೆ ಆಟವಾಡುತ್ತ ಆತ್ಮದೊಳಗಿನ ಲೋಕಕೆ ನಾವೇ ಸೃಷ್ಟಿಕರ್ತನಾಗಿ ಅನುಭವಿಸುವ ವಿನೋದವೇ ವಿಸ್ಮಯ. ಹಳೆಯ ನೆನಪುಗಳ ಮೆಲುಕು ಹಾಕುತ್ತ ತನ್ನ ತಪ್ಪು ಒಪ್ಪುಗಳ ಅವಲೋಕನ, ಜೊತೆಗೆ ಹೊಸ ಕನಸುಗಳಿಗೆ ಸರಕುಗಳ ಹುಡುಕುವ ಪ್ರಯತ್ನ ನಿರಂತರವಾಗಿ ಸಾಗುತ್ತಿರಬೇಕು.

ಮನುಷ್ಯ ಜೀವನದಲ್ಲಿ ಏಕಾಂತವೆಂಬುದು ಅತೀ ಉನ್ನತವಾದ ಘಟ್ಟ. ಏಕೆಂದರೆ ತನ್ನ ಬದುಕಿನ ಅಮೂಲ್ಯ ಕ್ಷಣವನ್ನು ಕಳೆಯುವ, ತನ್ನನ್ನೂ ತನ್ನ ಸಾಮರ್ಥ್ಯವನ್ನು ಅರಿಯುವ ಪ್ರಯತ್ನ ಮಾಡುವ, ತನ್ನ ಸಂಪೂರ್ಣ ವ್ಯಕ್ತಿತ್ವದ ಬಗ್ಗೆ ಜ್ಞಾನೋದಯವಾಗುವ ಕ್ಷಣವದು . ಇಂತಹ ಸಮಯದಲ್ಲಿಯೇ ಮನುಷ್ಯ ಭಾವಜೀವಿಯಾಗುವುದು, ಈ ಭಾವುಕತೆಯನ್ನು ಪ್ರತಿಯೊಬ್ಬರೂ ಸವಿಯಬೇಕು. ಬರುವ ಭಾವನೆಯಲ್ಲಿ , ಭಾವುಕತೆ, ಭಾವೋದ್ವೇಗ, ಭಾವೋಲ್ಲಾಸ ಎನ್ನುವ ಮೂರು ರಸಗಳು ಅತ್ಯುನ್ನತ ಪಾತ್ರ ವಹಿಸುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಭಾಷಾ ಜ್ಞಾನದ ಮೇಲೆ ನಿರ್ಧರಿತವಾಗುತ್ತದೆ. ಮಾತೃಭಾಷೆಯಾದಂತಹ ಕನ್ನಡವೂ ಸಹ ತಾಯಿಯಂತೆ. ಆಕೆಯ ಸಹಾಯದೊಂದಿಗೆ ನಮ್ಮ ಪ್ರಯತ್ನ ಸಾಗಬೇಕು ಅದಕ್ಕಾಗಿ ಡಿಗ್ರಿಗಳು ಬೇಕಿಲ್ಲ ಕೇವಲ ಕನ್ನಡವನ್ನು ಓದುವ ಮತ್ತು ಬರೆಯುವ ಅಕ್ಷರಮಾಲೆಯ ಉಪಯೋಗ ಸಾಕು. ತಿಳಿದಿರುವ ಭಾಷೆಗೆ ಅಕ್ಷರಗಳ ಅರಿತು ಬರೆಯಲು ಸಾಕಷ್ಟು ಸಮಯ ಬೇಕಾಗುವುದಿಲ್ಲ. ಸ್ವಲ್ಪ ಗಮನಹರಿಸುವ ತಾಳ್ಮೆ ಬೇಕು ಮತ್ತು ಆಸಕ್ತಿ ಇರಬೇಕಾಗುತ್ತದೆ. ಹೇಳಿದ ಆ ಮೂರು ಭಾವಗಳ ಜೊತೆಗೆ ತಲ್ಲೀನರಾದರೆ ಒಳಗಿರುವ ಕವಿಯ ಭಾವ ತಾನಾಗಿಯೇ ಹೊರಬರುತ್ತದೆ. ಆ ಭಾವನೆಗಳನ್ನು ಬಾಹ್ಯ ಪ್ರಪಂಚಕ್ಕೆ ಹೇಳುವ ಅಭಿವ್ಯಕ್ತಪಡಿಸುವ ಶಕ್ತಿ ಅಂತಹ ಪದಗಳಿಗೆ ಮಾತ್ರ ಇವೆ ಎಂದು ಹೇಳಬಹುದು. ಅಂತಹ ಶಕ್ತಿಯೇ ಸಾಹಿತ್ಯ. ಸಾಮಾನ್ಯ ಮಾತಿನಲ್ಲಿ ಹೇಳಬಹುದಾದರು, ಅದರ ಸಾರವನ್ನು ವಿಭಿನ್ನ ರೀತಿಯಲ್ಲಿ ತನ್ನದೇ ಆದ ಭಾಷಾ ಶಕ್ತಿಯ ಮೂಲಕ ಹೊರ ತರುವ ಮತ್ತು ಅದನ್ನು ಓದುಗರಿಗೆ ಆಸ್ವಾದಿಸಲು ಅಂತರಂಗವನ್ನು ಅರ್ಥೈಸಿಕೊಳ್ಳಲು ಎಡೆ ಮಾಡಿಕೊಡುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳು ವಿಭಿನ್ನ ರೀತಿಯ ಆತ್ಮಾನುಭೂತಿಕೊಡುತ್ತವೆ.

ಓದುವಾಗ ಮನದೊಳಗಿನ ಭಾವಲೋಕದಲ್ಲಿ ಸ್ವಂತ ಅನುಭವಗಳ ಸಹಾಯದಿಂದ ಭಾವಚಿತ್ರಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಮನಸ್ಸಿಗೆ ಉಲ್ಲಾಸ ಜೊತೆಗೆ ಇನ್ನೊಂದು ಆತ್ಮದ ಭಾವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಬರುತ್ತದೆ. ಮನುಷ್ಯ-ಮನುಷ್ಯನನ್ನು ಇಂದ್ರಿಯಾತ್ಮಕವಾಗಿ ಗ್ರಹಿಸುವದಕ್ಕಿಂತ ಭಾವನಾತ್ಮಕವಾಗಿ ಮತ್ತು ಅವನ ಅಂತರಾಳವನ್ನು ಓದುವ ಶಕ್ತಿ ಬೆಳೆಸಿಕೊಳ್ಳಬೇಕಾಗುತ್ತದೆ. ಅಂತಹ ಕಲೆಗಳಲ್ಲಿ ಸಾಹಿತ್ಯವೂ ಒಂದು ಉತ್ತಮವಾದ ಕಲೆ ಎಂದೇ ಹೇಳಬಹುದು. ಕನ್ನಡದ ಕಂಪು ಎಲ್ಲೆಲ್ಲೂ ಸೂಸುತಿರಲಿ. ಆತ್ಮದ ಸತ್ಯಾನ್ವೇಷಣೆಯಾಗಲು ಬರೆಯುವುದು ಹಾಗು ಓದುವುದೂ ಒಂದು ಮಾಧ್ಯಮ ಕೂಡ ಹೌದು. ಹೆಚ್ಚು ಓದುತ್ತಾ ಓದುತ್ತಾ ತನ್ನ ಸ್ವಂತ ಅನುಭವಗಳ ಅವಲೋಕನ ಮಾಡಬೇಕಾಗುತ್ತದೆ. ತನ್ನ ಅನುಭವಕ್ಕೆ ಭಿನ್ನವಾಗಿದಲ್ಲಿ, ತನ್ನ ಅನುಭವವನ್ನು ತನ್ನದೇ ಆದ ಸಾಮರ್ಥ್ಯದೊಂದಿಗೆ ಅಭಿವ್ಯಕ್ತಪಡಿಸುವ ರೀತಿಯಲ್ಲಿ ಬರಹವಾಗಿ ಮಾರ್ಪಡಿಸಿದರೆ ಎಲ್ಲರನ್ನು ತಲುಪಬಹುದಾಗಿದೆ. ಜಗತ್ತಿಗೆ ಏನನ್ನೂ ಕೊಡಲಾಗದಿದ್ದರೂ ಜ್ಞಾನದ ಬುಟ್ಟಿಯ ಕೊಟ್ಟು, ಮನುಷ್ಯರಾಗಿ ಬಾಳುತ್ತ ಮನುಕುಲದ ಮನುಷ್ಯತ್ವವ ಉಳಿಸಿಕೊಳ್ಳೋಣ . ಅನುಭವಗಳ ಸರಮಾಲೆಯ ಹೊತ್ತ ಸಾಹಿತ್ಯಗಳ ಸುಗಂಧ ಸದಾ ಹಸಿರಾಗಿರಲಿ, ಅದರ ಪರಿಮಳ ಎಲ್ಲೆಲ್ಲೂ ಹರಡುತ್ತಿರಲಿ. ಬದುಕಿನ ಸುಖ -ದುಃಖಗಳ ಅರಿತು ಜ್ಞಾನವೆಂಬ ದೀವಿಗೆಯ ಹೊತ್ತಿಸಿ ಸಾಹಿತ್ಯದ ಲೋಕವ ಎಲ್ಲರಿಗೂ ಗೋಚರವಾಗುವಂತೆ ಬೆಳೆಸೋಣ. ಕನ್ನಡದ ಹೆಸರನ್ನು ಉಳಿಸೋಣ!

ಪ್ರೀತ್ಯಾದರಗಳೊಂದಿಗೆ,
ಗಣೇಶ್ ಜಿ ಪಿ
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday, 31 March 2013

ಬನ್ನಿ ಜೊತೆಯಾಗೋಣ!

ಆತ್ಮೀಯ ಸದಸ್ಯರೇ,

ಕನ್ನಡ ಬ್ಲಾಗ್ ಮಾರ್ಚ್ ತಿಂಗಳ ಸಂಪಾದಕೀಯ ಅನಿವಾರ್ಯವಾಗಿ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಅತಿ ಬೇಸರದ ವಿಷಯವೊಂದನ್ನು ಮತ್ತೆ ನಾವು ಪ್ರಸ್ತಾಪಿಸಲೇ ಬೇಕಾದ ಸಂದರ್ಭ. ೨೦೧೦ರ ಸರಿ ಸುಮಾರಿನಲ್ಲಿ ಕನ್ನಡ ಬ್ಲಾಗ್ ಎಂಬ ಈ ಗುಂಪು ತನ್ನ ಮೊಗ್ಗರಳಿಸುತ್ತಿರುವಾಗ ಅದನ್ನು ಪೋಷಿಸಿ, ಬೆಳೆಸುವ ಮಹದಾಸೆ ಹೊತ್ತು, ನಿರ್ವಾಹಕರೆಲ್ಲರಿಗೆ ಬೆನ್ನೆಲುಬಾಗಿ ನಿಂತು, ಮನದಾಳದ ಅರುಹುಗಳ ಮೂಲಕ ಬರಹಗಾರರಿಗೆ ಮಾರ್ಗದರ್ಶನ, ಸ್ಪೂರ್ತಿಯಾದಂತವರು ರವಿ ಮೂರ್ನಾಡ್. ಅಗಲಿದ ಆ ಕನ್ನಡ ಕುವರರಿಗೆ ಕುಸುಮಾಂಜಲಿಯನ್ನು ಅರ್ಪಿಸುತ್ತಾ ಈ ಸಂಪಾದಕೀಯವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರು ಕನ್ನಡ ಬ್ಲಾಗ್ ಬಗ್ಗೆ ಹೊತ್ತ ಕನಸುಗಳನ್ನು ನನಸುಗೊಳಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳನ್ನಿಡುವ ಮುಖಾಂತರ ಆ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ.

ಅಂದು ಮಾರ್ಚ್ ಹದಿನೇಳು ಭಾನುವಾರ. ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧವಾದ 'ಮಂಕುತಿಮ್ಮನ ಕಗ್ಗ'ವನು ಸಾಹಿತ್ಯ ಲೋಕಕ್ಕಿತ್ತ ಧೀಮಂತ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪನವರ ೧೨೬ನೇ ಜನ್ಮದಿನಾಚರಣೆಯ ಸುದಿನ. ವರುಷದ ಹಿಂದೆ ಕಂಡ ಕನಸೊಂದು ನನಸಾಗಿ ನಿಂತು ಅಭೂತಪೂರ್ವ ಕ್ಷಣವೊಂದು ಸಾರ್ಥಕ್ಯವನ್ನು ಕಂಡದ್ದು ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ತನ್ನ ಜೀವನದನುಭವಗಳನ್ನು ಡಿ.ವಿ.ಜಿ ಯವರ ಪ್ರತೀ ಮುಕ್ತಕಕ್ಕೂ ಅಳವಡಿಸಿಕೊಂಡು, ಆ ಮುಕ್ತಕಗಳ ವ್ಯಾಖ್ಯಾನ ಮಾಡಿ ನಮಗೆ ಉಣಬಡಿಸಿದವರು ಶ್ರೀಯುತ ರವಿ ತಿರುಮಲೈ. ಇದೇ ವ್ಯಾಖ್ಯಾನ ಇದೀಗ ಕಗ್ಗರಸಧಾರೆಯೆಂಬ ಮೊದಲ ಸಂಪುಟ.

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ, ಸನ್ಮಾನ್ಯ ವಿಶುಕುಮಾರ್, ಚಂದ್ರಮೌಳಿ, ಸುಬ್ಬಕೃಷ್ಣ, ಪಿ ಎಸ್ ರಾಜ್ ಗೋಪಾಲ್, ಪ್ರೊ.ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ ಇವರ ಉಪಸ್ತಿತಿಯ ಮೆರುಗಿತ್ತು ಈ ಕಾರ್ಯಕ್ರಮದಲ್ಲಿ. ಡಿ.ವಿ.ಜಿಯವರ ಜೀವನದ ಮೇಲೆ ಬೆಳಕು ಚೆಲ್ಲುವ ಕಿರುಚಿತ್ರದ ಮುಖೇನ ಗಮನಸೆಳೆದ ಈ ವಿನೂತನ ಕಾರ್ಯಕ್ರಮದ ಮುಖಾಂತರ ಕನ್ನಡ ಬ್ಲಾಗ್ ಫೇಸ್ಬುಕ್ ಪ್ರಪಂಚದಿಂದ ತನ್ನಡಿಯಿಟ್ಟದ್ದು ಹೊರಜಗತ್ತಿಗೆ.ಕಾರ್ಯಕ್ರಮದ ರೂವಾರಿಗಳ ಕಾರ್ಯದಕ್ಷತೆಗೆ ನಮ್ಮ ನಮನ ತನ್ಮೂಲಕ. ವೇದಿಕೆಯ ಮೇಲೆ ಉಪಸ್ಥಿತರಿದ್ದ ಅನುಭವಿಗಳ ಹಿತನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಹೃದಯರನ್ನೂ ರೋಮಾಂಚನಗೊಳಿಸಿತ್ತು ಅನ್ನುವುದಕ್ಕೆ ಬಂದ ಮೆಚ್ಚುಗೆಗಳೇ ಸಾಕ್ಷಿಯೆಂದು ಕೊಳ್ಳುತ್ತೇವೆ.

ಏನೇ ಇರಲಿ, ಕಾರ್ಯಕ್ರಮವೊಂದು ಉತ್ತಮರೀತಿಯಲಿ ಸಂಘಟಿತವಾಗಬೇಕಾದರೆ ಅದರ ಹಿಂದೆ ಕಾರ್ಯನಿರ್ವಹಿಸುವ ನಿಸ್ವಾರ್ಥ ಮನಸುಗಳು ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಅತ್ಯದ್ಭುತ ಕಾರ್ಯಕ್ರಮದ ರೂವಾರಿಯಾದವರು ಎಮ್. ಎಸ್ ಪ್ರಸಾದ್. ಅವರನ್ನು ಅಭಿನಂದಿಸದಿದ್ದರೆ ಬಹುಷಃ ನಮ್ಮೀ ಸಂಪಾದಕೀಯಕ್ಕೆ ಮೆರುಗು ಸಿಗಲಾರದು. ಪ್ರತಿಯೊಬ್ಬರ ಹೆಸರನ್ನೂ ಪ್ರಸ್ತುತ ಪ್ರಸ್ತಾಪಿಸಲಾಗದಿದ್ದರೂ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಪ್ರತಿಯೋರ್ವರಿಗೂ ಕನ್ನಡ ಬ್ಲಾಗ್ ತಂಡ ಚಿರಋಣಿ.

ಹಾಗಂಥ ಈ ಕಾರ್ಯಕ್ರಮವನ್ನು ಕೇವಲ ಕಗ್ಗರಸಧಾರೆಯ ಮಟ್ಟಿಗೆ ಸೀಮಿತಗೊಳಿಸಲಾಗುತ್ತಿಲ್ಲ ಮಿತ್ರರೇ. ಕನ್ನಡ ಬ್ಲಾಗ್ ಕೇವಲ ಒಂದು ಗುಂಪಾಗದೇ, ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿದೆಯೆಂದರೆ ಅದು ತಪ್ಪು, ಮುಂದಿನ ದಿನಗಳಲ್ಲಿ ಕಲೆ, ಸಂಸ್ಕೃತಿ, ಸಾಮಾಜಿಕ ಕಳಕಳಿಯನ್ನು ಹೊತ್ತು ತರುವ ಕಾರ್ಯಕ್ರಮಗಳ ಇಂಗಿತವನ್ನೂ ಹೊಂದಿದೆ. ತನ್ನ ಕಾರ್ಯಕ್ಷೇತ್ರದ ವ್ಯಾಪಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಲವು ಸದಸ್ಯರಿಂದ ಬಂದ ಮನವಿ, ಪ್ರೋತ್ಸಾಹವನ್ನು ಸದ್ಯದಲ್ಲೇ ಕಾರ್ಯಗತಗೊಳಿಸುವ ಇರಾದೆಯೂ ಕೂಡ. ಇದು ಕೇವಲ ನಿರ್ವಾಹಕರು, ಕನ್ನಡ ಬ್ಲಾಗ್ ಸದಸ್ಯರಲ್ಲದೇ ಅನೇಕ ಸಹೃದಯರ ಸಲಹೆ, ಸೂಚನೆಯ ಮೇರೆಗೆ ಮುಂದುವರಿಯುತ್ತಿದ್ದೇವೆ. ಕನಸುಗಳನ್ನು ನನಸುಗೊಳಿಸುವ ದಿಟ್ಟ ಹೆಜ್ಜೆ ನಮ್ಮ-ನಿಮ್ಮೆಲ್ಲರದು.

ಆ ಕನಸುಗಳನ್ನು ನನಸುಗೊಳಿಸುವ ಪ್ರಪ್ರಥಮ ಹೆಜ್ಜೆಯಾಗಿ ಕಗ್ಗರಸಧಾರೆಯಂಥ ಕಾರ್ಯಕ್ರಮಗಳ ಆಯೋಜನೆ. ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮ, ಕಲೋಪಾಸನೆಯಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮುಖೇನ ನಮ್ಮ ತರುಣ ಹೃದಯಗಳನ್ನು ಸೆಳೆಯುವ ಪ್ರಯತ್ನ . ಎತ್ತೆತ್ತಲೋ ಸಾಗುತ್ತಿರುವ ನಮ್ಮ ಯುವ ಮನಸ್ಸುಗಳ ದಾರಿಯಲ್ಲಿ ಈ ಸೆಳೆತಗಳ ಮೂಲಕ ನಮ್ಮ ಕಲೆ, ಸಂಸ್ಕೃತಿಗೆ ಅಳಿಲು ಸೇವೆಗೈವ ತವಕ.

ಪ್ರಿಯ ಸದಸ್ಯರೇ, ಇದು ನಿಮ್ಮದೇ ಕಾರ್ಯಕ್ರಮ. ನಿಮ್ಮ ಕೃತಿಗಳ ಬಿಡುಗಡೆಗೂ ನಾವಿದ್ದೇವೆ. ನಿಮ್ಮೊಳಗಿನ ಕಲೆ,ಸಾಹಿತ್ಯ, ಸಂಗೀತದೊಲವಿಗೂ ನಾವು ಜೊತೆಗಿರುತ್ತೇವೆ. ನೀವು ನಾವಾಗುತ್ತೇವೆ. ನಿಮ್ಮ ಕಾರ್ಯಕ್ರಮ ನಮ್ಮದಾಗಲಿ. ನಮ್ಮ ನಿಮ್ಮೆಲ್ಲರದಾಗಲಿ. ಬನ್ನಿ ಕೈ ಜೋಡಿಸೋಣ. ಡಿ.ವಿ.ಜಿ, ಜೀಪಿ ರಾಜರತ್ನಂ, ಕುವೆಂಪು, ಬೇಂದ್ರೆ, ಪು.ತಿ.ನ, ಕೆ.ಎಸ್.ನ ಒಬ್ಬಿಬ್ಬರಲ್ಲ, ಎಲ್ಲರನೂ ಮತ್ತೆ ಕರೆತರೋಣ. ಅವರೊಳಗಿನ ತುಡಿತವನು ಮತ್ತೆ ಅರಿಯೋಣ ಬನ್ನಿ, ಮೆರೆಯೋಣ ಬನ್ನಿ.

ಆತ್ಮೀಯತೆಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Thursday, 28 February 2013

ಅರುಹುಗಳ ಅರಿತು ಅರಗಿಸಿಕೊಂಡು ಬರೆಯೋಣ ಬನ್ನಿ!


ಕಾಲ ಬದಲಾಗಿದೆ ನಿಜ. ನವೋದಯ, ನವ್ಯ, ನವ್ಯೋತ್ತರ, ಪ್ರಗತಿಶೀಲ, ಬಂಡಾಯ ಹೀಗೆ ನಿನ್ನೆ ಮೊನ್ನೆ ಇದ್ದಂತೆ ಇಂದಿಲ್ಲ ಈ ಸಾಹಿತ್ಯ ಯುಗ. ನಾಳೆ ಮತ್ತೊಂದು ಹೊಸ ಪ್ರಕಾರಕ್ಕೂ ಅಡಿಗಲ್ಲಿಡಲೂಬಹುದು. ಕಾಲ ಬದಲಾದಂತೆ ಬದಲಾವಣೆಯ ಗಾಳಿ ಬೀಸುವುದು ಅನಿವಾರ್ಯ. ನಿಂತ ನೀರಲ್ಲ ಈ ಸಾಹಿತ್ಯಕೃಷಿ. ಹರಿವ ನದಿಯಂತೆ ಅನುದಿನವೂ ಹೊಸಹೊಸ ಹರಿವನ್ನು ಈ ಸಾಹಿತ್ಯಕಡಲಿನ ಒಡಲಿಗೆ ಹರಿಯಗೊಡುತ್ತಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣೀಭೂತರು ನಮ್ಮ ಬರಹಗಾರ ಬಳಗ. ಕಾಲ ಬದಲಾದಂತೆ ಪ್ರಾಯಃ ಬರಹಗಾರರಿಗೇನೂ ಕೊರತೆಯಾದಂತಿಲ್ಲ. ಬರಹವನ್ನೇ ವೃತ್ತಿ ಮಾಡಿಕೊಂಡವರು ಹಲವರಾದರೆ, ಇನ್ನೂ ಪ್ರವೃತ್ತಿಯಾಗಿ ಮಾಡಿಕೊಂಡವರದು ಮತ್ತೊಂದು ಬಳಗ. ಈ ಎರಡೂ ಪಂಗಡಗಳು ಬರಹಕ್ಷೇತ್ರಕ್ಕೆ ಅಪಾರವಾದ ಅಷ್ಟೇ ಅಪೂರ್ವವಾದ ಕೊಡುಗೆಗಳನ್ನಿತ್ತದ್ದು ದಿಟ.

ಈ ಉದಾರ ಕೊಡುಗೆಗಳ ಹಿಂದಿನ ಬೆಳಕು ಬರಹಗಾರರೆನ್ನುವುದು ನಿಜ. ಆದರೆ ಕೇವಲ ಬರಹಗಾರ ತನ್ನ ಕೊಡುಗೆಗಳನ್ನು ಕೊಟ್ಟು ಸುಮ್ಮನೇ ಕೂತರೆ ಅದು ಬೆಳಕಿಗೆ ಬರುವುದಾದರೂ ಹೇಗೆ? ತನ್ನ ಅಪೂರ್ವತನವನ್ನು, ಅದರೊಳಗಿನ ಸುಗಂಧವನ್ನು ಹೊರಸೂಸುವುದಾದರೂ ಹೇಗೆ? ಆ ಸುಗಂಧವನ್ನು ಹೀರಲು ಬರುವ ದುಂಬಿ ಓದುಗ ಮಹಾಶಯ. ಈ ಓದುಗ ಮಹಾಶಯರನ್ನು ಸೃಷ್ಟಿಸುವುದಾದರೂ ಹೇಗೆ?ಬರಹಗಾರ ತನ್ನ ಬರಹಗಳನ್ನು ಪ್ರಕಟಿಸುವಾಗ ಆ ಬರಹಕ್ಕೆ ಓದುಗರಿರುತ್ತಾರೆ ಎನ್ನುವ ಆಶಯವನಿಟ್ಟುಕೊಂಡೇ ಪ್ರಕಟಿಸುತ್ತಾನೆ. ಹೌದು. ಯಾವುದೇ ಬರಹಕ್ಕಾದರೂ ಓದುಗನಿರಲೇಬೇಕು. ಅವನಿಲ್ಲದಿದ್ದರೆ ಬರಹದ ಉದ್ದೇಶ ಸಾರ್ಥಕವಾಗದು. ಮೂಲಭೂತವಾಗಿ ಪ್ರತಿಯೊಬ್ಬ ಬರಹಗಾರನ ಮನದಲ್ಲಿ ಮೂಡಬಹುದಾದ ಪ್ರಶ್ನೆ "ಓದುಗನ ಸೃಷ್ಟಿ ಹೇಗೆ" ಅನ್ನುವುದು. ಈ ಅಂಶಕ್ಕೆ ಯಾವ ಲೇಖಕನೂ ಹೊರತಾಗಿರಲಾರ, ಅದಂತೂ ಸತ್ಯ. ಆದರೆ ಓದುಗ ಪ್ರಪಂಚದ ಸೃಷ್ಟಿ ಸಾಧ್ಯವೇ? ಹೇಗೆ ಎನ್ನುವ ಪ್ರಶ್ನಾರ್ಥಕ ಚಿಹ್ನೆಗೂ ಉತ್ತರವಿರದಿರದು. ಪ್ರತಿಯೊಬ್ಬ ಲೇಖಕನು ತನ್ನ ಬರಹಗಳ ಮೂಲಕ ಸೆಳೆದು ತನ್ನದೇ ಆದ ಓದುಗ ಪ್ರಪಂಚವನ್ನು ಸೃಷ್ಟಿಸಿಕೊಳ್ಳುವ ಕಾತರ ಹೊಂದಿರುತ್ತಾನೆ. ಬಹುಷಃ ಈ ಪ್ರಕ್ರಿಯೆಗೆ ಆತ ತನ್ನ ಬರಹಗಳನ್ನು ಮಾರಬೇಕಾದ ಸನ್ನಿವೇಶ ಬಂದರೂ ಅಚ್ಚರಿಯಿಲ್ಲ. ಇಲ್ಲಿ ಮಾರಾಟ ಪದವೆನ್ನುವುದು ಅದು ದುಡ್ಡಿಗೆ ಕೊಂಡುಕೊಳ್ಳು ಎಂಬರ್ಥದಲ್ಲಿ ಇಲ್ಲ. ಹೊಸಬರಹಗಾರನಾಗಿ ತಾನು ಅರಳುವ ಸಮಯದಲ್ಲಿ ಆತ ಬರಹದ ಘಮವನ್ನು ಬಿತ್ತಲೇ ಬೇಕಾಗುತ್ತದೆ. ತನ್ಮೂಲಕ ಬರಹಕ್ಕೆ ಓದುಗನನ್ನು ಎಳೆದು ತರಬೇಕಾದ. ಸಕಲ ಸಾಹಸವನ್ನು ಮಾಡಲೇಬೇಕಾಗುತ್ತದೆ. ಈಗಾಗಲೇ ಬರಹ-ಮಾರುಕಟ್ಟೆಯಲ್ಲಿ ನೆಲೆಯೂರಿರುವ ಅತಿರಥ ಮಹಾರಥರ ಎದುರಿಗೆ ತನ್ನ ಬರಹವನ್ನು ವಾಣಿಜ್ಯಕರಣಗೊಳಿಸಬೇಕಾದ ಸಂದರ್ಭವೂ ಎದುರಾದರೆ ಅದು ಅಚ್ಚರಿಯೇನಲ್ಲ.

ಮೇಲೆ ಉಲ್ಲೇಖಿಸಿದಂತೆ, ವಾಣಿಜ್ಯಕರಣಗೊಳಿಸುವ ಉದ್ದೇಶದಿಂದಲೇ ಬರಹಗಾರ ಸನ್ನದ್ಧನಾಗಿ ನಿಂತು ಪ್ರತಿಯೊಬ್ಬ ಓದುಗರನ್ನೂ ಆಕರ್ಷಿಸುವ ಆತುರಕ್ಕೊಳಗಾದರೆ ಕಷ್ಟ. ಮತ್ತದು ಸರಿಯೂ ಅಲ್ಲ. ಆಯಾಯ ಬರಹಕ್ಕೆ ಆಯಾಯ ಓದುಗರಿರುತ್ತಾರೆ ಎನ್ನುವ ಸತ್ಯ ಆರಿಯಬೇಕಾದದ್ದು ಬರೆಯುವವನ ಧರ್ಮ. ಒಬ್ಬರಿಗೊಂದು ರುಚಿಸಿದರೆ, ಇನ್ನೊಬ್ಬರಿಗೊಂದು. ಮಳೆಗಾಲದಲ್ಲಿ ಹಪ್ಪಳವೇ ಗತಿಯಾದರೆ, ಬೇಸಗೆಯಲ್ಲೂ ಅದನ್ನೇ ಮುಂದುವರಿಸುವ ಪರಿಪಾಠ ಓದುಗನದಲ್ಲ. ವೈವಿಧ್ಯಮಯವಿದ್ದರೆ ಬೆಲ್ಲಕ್ಕಿರುವೆ ಮುತ್ತಿದಂತೆ ಮುತ್ತುವುದು ಸಹಜವಾಗಬಹುದು. ಹಾಗಂಥ ಎಲ್ಲವನ್ನೂ ಸಿಹಿಯಾಗಿಯೇ ಬರೆಯಲೂ ಅಸಾಧ್ಯ. ಪ್ರಸ್ತುತ ಸನ್ನಿವೇಶ, ಸಾಮಾಜಿಕ ನಡವಳಿಕೆ, ರಾಜಕೀಯ ವಿದ್ಯಮಾನಗಳ ಸಮ್ಮಿಳನವಲ್ಲಿರಲೇಬೇಕು. ಕೆಲವೊಮ್ಮೆ ಕಹಿ ಎನಬಹುದಾದ ಖಡಕ್ ಚಹಾದಂತ ಒಗರುಗಳನ್ನೂ ಓದುಗನೆದೆಗೆ ಇಳಿಸುವಂಥ ಪ್ರಯತ್ನವನ್ನೂ ಮಾಡಲೇಬೇಕು. ಆದರೆ ಓದುಗನು ಎಲ್ಲಾ ಬರಹದೊಳಗೆ ಇಳಿಯಲೇಬೇಕೆನ್ನುವ ಹಕ್ಕೊತ್ತಾಯ ಸಲ್ಲ.

ಇನ್ನುಳಿದಂತೆ ಬರವಣಿಗೆಯ ಸಂಖ್ಯೆ, ಅಂಕಿಅಂಶಗಳು. ಲೇಖಕ ಜೋಗಿಯವರು ತನ್ನ 'ಹಲಗೆ ಬಳಪ' ಎನ್ನುವ ಹೊತ್ತಗೆಯಲ್ಲಿ ಒಂದು ಕಡೆ ಅತಿವೃಷ್ಟಿ ಸಾಹಿತ್ಯಕ್ಕೆ ಶತ್ರು ಎನ್ನುತ್ತಾರೆ. ಇದನ್ನು ಲೇಖಕರೆನಿಸಿಕೊಂಡವರೆಲ್ಲರೂ ಗಮನಿಸಲೇಬೇಕು. ಏನನ್ನಾದರೂ ಬರೆದೇ ತೀರುವೆ ಎನ್ನುವ 'ಹಠಮಾರಿ' ಧೋರಣೆಯಲ್ಲಿ ಬರೆವ ಸಾಲುಗಳು ಬಹುಶಃ ಹೆಚ್ಚಿನ ಓದುಗರನ್ನು ತಲುಪದಿರಬಹುದು. ದಿನಕ್ಕೆ ಹತ್ತು ಹಲವು ಬರೆವ ಬರವಣಿಗೆಗಾರ ತಾನು ಏನನ್ನು ಮೊದಲು ಹೇಳಹೊರಟಿದ್ದೇನೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗಬೇಕು. ನಿನ್ನೆ ಬಳಸಿದ ಪದ, ಅಕ್ಷರಗಳೇ ಇಂದಿನ ಬರಹದಲ್ಲೂ, ಅದರ ಭಾವವೇ ಇಂದಿನದರಲ್ಲೂ ಪದೇ ಪದೇ ಮರುಕಳಿಸಬಾರದು. ಬರೆದುದದನ್ನು ಮತ್ತೆ ಓದಿ. ಮಗದೊಮ್ಮೆ ಓದಿ, ಈ ಪ್ರಕ್ರಿಯೆ ಮರುಕಳಿಸಿ ಆ ಬರಹವೆನ್ನುವುದು ಕುಲುಮೆಯದ್ದಿದ ಲೋಹದ ಹೊಳಪಿನಂತನಿಸಿದರೆ ಓದುಗ ಮಹಾಶಯನ ತೆಕ್ಕೆಗೆ ಹರಿಯಬಿಡಬಹುದು. ಅದು ಮುಂಜಾವ ಚಿನ್ನವರ್ಣದ ರವಿರಶ್ಮಿಯಂತೆ ಕಂಗೊಳಿಸದರೆ ಸಾರ್ಥಕತೆ ಪಡೆಯಬಹುದು. ಆ ನಿಟ್ಟಿನಲ್ಲಿ ಬರಹಗಾರರು ತಮ್ಮ ಪ್ರಯತ್ನ ಮುಂದುವರಿಸಬೇಕಾದದ್ದು ಅನಿವಾರ್ಯ.

ಬನ್ನಿ ಒಂದಷ್ಟು ಓದೋಣ ಮೊದಲು... ಅರಿತು, ಅರಗಿಸಿಕೊಂಡು, ಅರುಹೋಣ ನವಿರಾಗಿ ಬರಹರೂಪದಲಿ!

ಶುಭವಾಗಲಿ ಸರ್ವರಿಗೂ

ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಹಣಾ ತಂಡ.

Thursday, 31 January 2013

ಬಂಡಾಯ - ಸಾಹಿತ್ಯದಲ್ಲೊಂದು ಹೊಸ ಹುಟ್ಟು ಹಾಕುತ್ತಾ!


ಯಾವುದೇ ಒಂದು ಸಾಹಿತ್ಯದ ಹುಟ್ಟು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಎಲ್ಲಾ ತರಹದ ಸಾಹಿತ್ಯಗಳು ಸಾರ್ವಕಾಲಿಕವಾಗಲಾರವು, ಸಾರ್ವಕಾಲಿಕವೆನ್ನಿಸಿದವು ಕೆಲವೇ ಕೆಲವು, ಸಮಾಜದ ಸೈದ್ಧಾಂತಿಕ ಹಾಗೂ ತಾತ್ವಿಕ ಹಿನ್ನೆಲೆಗಳನ್ನು ಕುರಿತು ಗಂಭೀರವಾಗಿ ವಿಚಾರ ಮಾಡತೊಡಗಿದಾಗ ಸಾಹಿತ್ಯ ಚಳುವಳಿಗಳು ಹುಟ್ಟಿಕೊಳ್ಳುತ್ತವೆ, ಇಂಥಹ ವಿಚಾರಗಳೇ ಮನೋಧರ್ಮಗಳಾಗಿ ತನ್ನದೇ ಆದ ಒಂದು ಸಾಹಿತ್ಯದ ವಿಧವನ್ನೇ ಹುಟ್ಟುಹಾಕುವ ಸಂದರ್ಭಗಳು ಬರಬಹುದು. ಹೀಗೆ ರೂಪುತಳೆದದ್ದೇ 'ಬಂಡಾಯ ಅಥವಾ ದಲಿತ ಸಾಹಿತ್ಯ ಎನ್ನುವ ಒಂದು ಪ್ರಕಾರ. ಕನ್ನಡ ಸಾಹಿತ್ಯದಲ್ಲಿ ನವ್ಯೋತ್ತರ ಅಥವಾ ಬಂಡಾಯ ಸಾಹಿತ್ಯ ತನ್ನ ಅಸ್ಥಿತ್ವ ಕಂಡುಕೊಂಡದ್ದು ಎಪ್ಪತ್ತರ ದಶಕದಲ್ಲಿ, ಹೊಸಗನ್ನಡ ಸಾಹಿತ್ಯದ ಈ ನಾಲ್ಕನೆಯ ಆಯಾಮವನ್ನೇ ಇವತ್ತು ಬಂಡಾಯ ಸಾಹಿತ್ಯದ ಸಂದರ್ಭವೆಂದು ಗುರುತಿಸಲಾಗುತ್ತದೆ. ಈ ಮೊದಲೇ ಹೇಳಿದಂತೆ ಬಂಡಾಯ ಅನ್ನುವುದೊಂದು ಮನೋಧರ್ಮ. ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳನ್ನು, ಒಟ್ಟಾರೆಯಾಗಿ ವಸ್ತುಸ್ಥಿತಿಯನ್ನು ಪ್ರಶ್ನಿಸುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಪ್ರತಿಭಟಿಸುವ ಒಂದು ಪ್ರವೃತ್ತಿ ಈ ಮನೋಧರ್ಮದ ಮುಖ್ಯ ಲಕ್ಷಣವಾಗಿದೆ. ಈ ಕಾಲಘಟ್ಟದ ತನಕ ನಮ್ಮ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳಿದ್ದುವೇ ಹೊರತು, ಪ್ರತಿಭಟನೆಯನ್ನೇ ಒಂದು ಮೌಲ್ಯವೆಂದು ಒಪ್ಪಿಕೊಂಡ ಪ್ರತಿಭಟನಾ ಸಾಹಿತ್ಯವೆಂಬುದು ಇರಲಿಲ್ಲ. ಇದಕ್ಕಿಂತ ಮೊದಲು ಶರಣರ ವಚನ ಸಾಹಿತ್ಯದಲ್ಲಿ ನೇರವಾಗಿ ಪ್ರಶ್ನಿಸುವ ಅಂಶಗಳಿದ್ದವಾದರೂ ಪರಿಪೂರ್ಣವಾಗಿ ಪ್ರಶ್ನಿಸುವ ಗುಣವಿರಲಿಲ್ಲ. ಹೀಗೆ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶವಿರುವುದಕ್ಕಿಂತ ಸಾಹಿತ್ಯವೇ ಪ್ರತಿಭಟನೆಯಾಗಿ ಹೊಸಹುಟ್ಟು ಕಂಡಿತ್ತು ಬಂಡಾಯ.

ನವೋದಯ ಚಳುವಳಿಯ ಹಿಂದೆ ಪಶ್ಚಿಮದ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯವೂ, ಪ್ರಗತಿಶೀಲ ಚಳುವಳಿಯ ಹಿಂದೆ ಯೂರೋಪಿನ ವಾಸ್ತವವಾದೀ ಚಳುವಳಿಗಳೂ, ನವ್ಯದ ಹಿಂದೆ ಪಶ್ಚಿಮದ ಎಲಿಯಟ್, ಅಡೆನ್, ಎಝ್ರಾಪೌಂಡ್ ಇವರ ಕಾವ್ಯದ ಮಾದರಿಗಳೂ, ದಲಿತ-ಬಂಡಾಯದ ಹಿಂದೆ ಎಡಪಂಥೀಯ ಧೋರಣೆಗಳಿಂದ ರೂಪುಗೊಂಡ ಭಾರತೀಯ ಹಾಗೂ ಜಾಗತಿಕ ಪ್ರತಿಭಟನಾ ಸಾಹಿತ್ಯ ಸಂದರ್ಭಗಳೂ ಪ್ರೇರಣೆಗಳಿಂದ ಕೆಲಸ ಮಾಡಿವೆ. ಆದರೆ ಕನ್ನಡದಲ್ಲಿ ಈ ಚಳುವಳಿಗಳ ಸಂದರ್ಭದಲ್ಲಿ ರೂಪುಗೊಂಡ ಬಂಡಾಯ ಸಾಹಿತ್ಯವು ತಾನು ಪ್ರೇರಣೆ ಪಡೆದ ಪಶ್ಚಿಮದ ಸಾಹಿತ್ಯಗಳ ಅನುಕರಣೆಯಾಗಲೀ, ಅನುಸರಣವಾಗಲೀ ಆಗಿಲ್ಲ ಎನ್ನುವುದು ತುಂಬ ಮಹತ್ವದ ಸಂಗತಿ. ಮನುಷ್ಯ ಮನುಷ್ಯನನ್ನು ಶೋಷಣೆಗೆ ಒಳ ಪಡಿಸುವ ತಂತ್ರಗಳನ್ನು ಕುರಿತು ಪ್ರತಿಭಟನೆಯೂ ಪ್ರಜಾಪ್ರಭುತ್ವವಾದೀ ನಿಲುವುಗಳ ಬಗ್ಗೆ ಗಾಢವಾದ ಕಾಳಜಿಗಳೂ ಸಾಂಪ್ರದಾಯಿಕ ಅಥವಾ ಸಾಂಸ್ಥಿಕ ಧರ್ಮಗಳ ನಿರಾಕರಣೆಯೂ ಸಾಹಿತ್ಯದ ಮೂಲದ್ರವ್ಯಗಳಾದದ್ದು ವಿಶೇಷವಾದ ಅಂಶ. ಆನಂತರ ಕೆಲವು ಕಾಲದಲ್ಲಿ ಕಾಣಿಸಿಕೊಂಡ ಪ್ರಗತಿಶೀಲ ಸಾಹಿತ್ಯದ ಧೋರಣೆಗಳು ನವೋದಯಕ್ಕಿಂತ, ಹೆಚ್ಚು ಸಾಮಾಜಿಕ ಕಳಕಳಿಯನ್ನು ಒಳಗೊಂಡದ್ದಕ್ಕೆ ಕಾರಣ, ಅದು ಮಧ್ಯಮವರ್ಗದ ಬದುಕಿನ ಸಂವೇದನೆಗಳನ್ನು ತನ್ನ ವಸ್ತುವನ್ನಾಗಿ ಮಾಡಿಕೊಂಡಿದ್ದರಿಂದ ಮುಂದೆ ಬಂದ ನವ್ಯ ಸಾಹಿತ್ಯ ಮುಖ್ಯವಾಗಿ ನಗರಕೇಂದ್ರಿತವಾಗುತ್ತ ಸ್ವಾತಂತ್ರ್ಯೋತ್ತರ ಭಾರತೀಯ ಪರಿಸರದ ಮೌಲ್ಯಗಳ ಅವನತಿಯನ್ನೂ, ಮನುಷ್ಯನ ಅಂತರಾಳದ ವಿಕಾರಗಳನ್ನೂ, ಪ್ರಖರವಾದ ವಿಮರ್ಶನ ಪ್ರಜ್ಞೆಯಲ್ಲಿ ನಮ್ಮ ವಾಸ್ತವವನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಪ್ರವೃತ್ತಿಯನ್ನೂ ತನ್ನ ವಸ್ತುವನ್ನಾಗಿ ಮಾಡಿಕೊಂಡಿತು. ಈ ಅನುಕ್ರಮವಾದ ಬೆಳವಣಿಗೆಯ ಪರಿಣಾಮವಾಗಿ, ಶತಮಾನಗಳ ಕಾಲ ಅಕ್ಷರಜ್ಞಾನದ ಸವಲತ್ತುಗಳಿಂದ ವಂಚಿತವಾಗಿದ್ದು ಮತ್ತು ಮೇಲಿನ ಎಲ್ಲ ವರ್ಗದವರುಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮಾಜದ ಕೆಳಗಿನ ಸ್ತರವೊಂದು, ಮಾತನಾಡಲು ಕಲಿತು ತನ್ನ ಪ್ರತಿಭಟನೆಯನ್ನು ಅಭಿವ್ಯಕ್ತಪಡಿಸತೊಡಗಿದಾಗ, ಮೂಡಿಬಂದಿದ್ದು ಬಂಡಾಯ ಸಾಹಿತ್ಯ.

ಹಿಂದಿನ ಎಲ್ಲ ಸಾಹಿತ್ಯ ಚಳುವಳಿಗಳೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳದೆ ಹೋದ, ಸಮಾಜದ ಕೆಳವರ್ಗದವರ ಬದುಕನ್ನು, ನಿರ್ಲಕ್ಷಿತರ ಬದುಕನ್ನು ಬಂಡಾಯ ಸಾಹಿತ್ಯ ತನ್ನ ವಸ್ತುವನ್ನಾಗಿ ಮಾಡಿಕೊಂಡಿದೆ. ನಿಜವಾದ ಭಾರತ ಕೇವಲ ರಮ್ಯ ನಿಸರ್ಗದಲ್ಲಾಗಲಿ, ನಗರದ ಮಧ್ಯಮ ವರ್ಗದಲ್ಲಾಗಲೀ, ಗೊಂದಲಪುರದ ಬುದ್ಧಿ ಜೀವಿಗಳ ತಾಕಲಾಟಗಳಲ್ಲಾಗಲಿ ಇಲ್ಲ; ಅದು ಇರುವುದು ಬಹುಸಂಖ್ಯಾತ ಹಳ್ಳಿಗಳ ಬದುಕಿನಲ್ಲಿ. ಹಳ್ಳಿಗಳಲ್ಲಿ ಇರುವ ಈ ಅಸಂಖ್ಯಾತ ಜನಸಾಮಾನ್ಯರು, ಒಂದೆಡೆ ತಮಗಿಂತ ಮೇಲಿನ ವರ್ಗದವರಿಂದ, ಮತ್ತೊಂದೆಡೆ ಭ್ರಷ್ಟ ರಾಜಕಾರಣಿಗಳಿಂದ ಹಾಗೂ ಅಧಿಕಾರಶಾಹೀ, ಪುರೋಹಿತಶಾಹೀ ಕುತಂತ್ರಗಳಿಂದ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾರತದ ಈ ಶೋಷಿತ ಜನಾಂಗ, ತನ್ನೊಳಗಿನ ಸಂಕಟಗಳಿಗೆ, ತನ್ನೊಳಗಿನ ರೊಚ್ಚಿಗೆ, ತನಗಾಗಿರುವ ಅನ್ಯಾಯಗಳಿಗೆ, ಪ್ರತಿಭಟನೆಯ ದನಿ ಎತ್ತುತ್ತಿರುವುದು ನ್ಯಾಯವಾಗಿದೆ. ಹೀಗಾಗಿ ಪ್ರತಿಭಟನೆಯನ್ನು ಒಂದು ಮೌಲ್ಯವಾಗಿ ಉಳ್ಳ, ರಾಜಕೀಯ ಪ್ರಜ್ಞೆಯಿಂದ ಮೂಡಿದ ಈ ಸಾಹಿತ್ಯ, ಸೌಂದರ್ಯದ ತನ್ಮತೆಯನ್ನು ತರುವ, ಉದಾತ್ತ ತತ್ವಗಳನ್ನು ಹೇಳುವ, ಪೌರಾಣಿಕ-ಧಾರ್ಮಿಕ ಅದ್ಭುತಗಳನ್ನು ತೆರೆದು ತೋರುವ, ಬುದ್ಧಿಯ ಕಸರತ್ತುಗಳನ್ನು ಪ್ರದರ್ಶಿಸುವ ಉದ್ದೇಶದ್ದಲ್ಲ. ಅದು ಇರುವ ವಾಸ್ತವವನ್ನು ತೆರೆದು ತೋರುತ್ತ, ವೈಚಾರಿಕ ಎಚ್ಚರವನ್ನು ಹುಟ್ಟಿಸುತ್ತ, ಪ್ರಶ್ನೆ ಹಾಗೂ ಪ್ರತಿಭಟನೆಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವ ಉದ್ದೇಶದ್ದು. ಬಂಡಾಯ ಸಾಹಿತ್ಯದ ಧೋರಣೆಗಳು ಈಗ ಬರೆಯುತ್ತಿರುವ ಎಲ್ಲ ತಲೆಮಾರಿನ ಅಂದರೆ ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿ ವಿವಿಧ ಮಾರ್ಗದ ಬರಹಗಾರರ ಮೇಲೆ ತನ್ನ ಪ್ರಭಾವಗಳನ್ನು ಬೀರಿವೆ. ಸಮಕಾಲೀನ ಬರಹಗಾರರೆಲ್ಲರಲ್ಲೂ ಕಾಣಿಸಿಕೊಳ್ಳುತ್ತಿರುವ ಸಾಮಾಜಿಕ ಕಳಕಳಿ ಬಹುಶಃ ಈ ಬಂಡಾಯ ಸಾಹಿತ್ಯದ ಪರಿಣಾಮವೇ, ಇನ್ನೊಂದು ವಿಶೇಷವೆಂದರೆ, ಕಳೆದ ಒಂದು-ಒಂದೂವರೆ ದಶಕಗಳ ಕಾಲಮಾನದಲ್ಲಿ ಬಹುಸಂಖ್ಯಾತ ಮಹಿಳೆಯರು ಬರೆಯಲು ಶುರುಮಾಡಿರುವುದು ಮತ್ತು ಅವರ ಬರಹಗಳಲ್ಲಿ ಕಂಡುಬರುತ್ತಿರುವ ವೈಚಾರಿಕತೆಗಳು ಹಾಗೂ ದೃಷ್ಟಿಕೋನಗಳು ಖಂಡಿತವಾಗಿಯೂ ಬಂಡಾಯ ಸಾಹಿತ್ಯ ಚಳುವಳಿಯ ಪರಿಣಾಮಗಳಾಗಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಎಚ್ಚರಗೊಂಡು ಮಾತನಾಡಲು ತೊಡಗಿದ ಶೋಷಿತ ಸಾಮಾಜಿಕ ವರ್ಗಕ್ಕೆ ಮಹಿಳೆಯರೂ ಸೇರುತ್ತಾರೆ.

ಸ್ವಾತಂತ್ರ್ಯ ಪೂರ್ವ ಭಾರತದ ಪರಿಸರದಲ್ಲಿ ನವೋದಯ ಸಾಹಿತ್ಯ ಸಂದರ್ಭದಲ್ಲಿಯೇ ಪ್ರಗತಿಶೀಲವೆಂಬ ಹೆಸರಿನ ಸಾಹಿತ್ಯ ಚಳುವಳಿಯೊಂದು ಹುಟ್ಟಿಕೊಂಡಿತು. ಉತ್ತರದ ಲಕ್ನೋದಲ್ಲಿ ೧೯೩೬ ರಂದು ಸಾಹಿತಿ ಪ್ರೇಮಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಪ್ರಗತಿಶೀಲ ಲೇಖಕರ ಪ್ರಥಮ ಅಧಿವೇಶನವೊಂದು ಈ ಚಳುವಳಿಗೆ ಚಾಲನೆ ನೀಡಿತು. ಬದುಕಿನಲ್ಲಿ ಹೊಸ ಸೌಂದರ್ಯವನ್ನು ಅನ್ವೇಷಿಸುವ, ಜನಸಮುದಾಯದ ಮೇಲೆ ನಡೆಯುವ ದಬ್ಬಾಳಿಕೆಗಳನ್ನು ವಿರೋಧಿಸುವ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವುದಕ್ಕಾಗಿ, ಸಾಮ್ರಾಜ್ಯಷಾಹಿ, ಹಾಗೂ ಬಂಡವಾಳಷಾಹೀ ಶಕ್ತಿಗಳ ವಿರುದ್ಧ ದನಿಯೆತ್ತುವ ಮತ್ತು ನಿಜವಾದ ಸಮಾನತಾ ಸಾಮಾಜಿಕ ವ್ಯವಸ್ಥೆಯೊಂದನ್ನು ರೂಪಿಸುವ ಹೊಸ ಎಚ್ಚರಗಳನ್ನು ಹುಟ್ಟಿಸುವುದು ತನ್ನ ಉದ್ದೇಶವೆಂದು ಈ ಅಧಿವೇಶನ ಘೋಷಿಸಿತು. ಇದರಿಂದ ಪ್ರೇರಣೆಗೊಂಡು ಕನ್ನಡದಲ್ಲಿ ೧೯೪೩ರ ವೇಳೆಗೆ ಪ್ರಗತಿಶೀಲ ಲೇಖಕರ ಸಂಘವೊಂದು ಅಸ್ತಿತ್ವಕ್ಕೆ ಬಂದಿತು. ಅ.ನ. ಕೃಷ್ಣರಾಯರು ಈ ಸಂಘದ ಮುಖ್ಯ ವಕ್ತಾರರಾದರು. ಅವರೊಂದಿಗೆ, ನಿರಂಜನ, ತ.ರಾ.ಸು, ಕಟ್ಟೀಮನಿ ಮೊದಲಾದ ಉತ್ಸಾಹೀ ಬರಹಗಾರರು ಸೇರಿಕೊಂಡು ಕನ್ನಡದಲ್ಲಿ ಪ್ರಗತಿಶೀಲ ಚಳುವಳಿಯೊಂದು ಹುಟ್ಟಿಕೊಂಡು ಬಹುಸಂಖ್ಯೆಯ ಕತೆ ಕಾದಂಬರಿಗಳ ನಿರ್ಮಿತಿಯಲ್ಲಿ ಇದು ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿತು.

ಅಲ್ಲದೆ ಭಾರತೀಯ ಪರಿಸರದ ಲೋಹಿಯಾ ಹಾಗೂ ಜೆ.ಪಿ. ಚಳುವಳಿಗಳು, ೧೯೭೪ರಂದು ಕರ್ನಾಟಕದಲ್ಲಿ ರೂಪುಗೊಂಡ ಬರಹಗಾರರ ಒಕ್ಕೂಟ, ರೈತ ಚಳುವಳಿ, ಜಾತಿ ವಿನಾಶ ಸಮ್ಮೇಳನ ಇತ್ಯಾದಿಗಳು ಬಂಡಾಯ ಚಳುವಳಿಯ ಸೈದ್ಧಾಂತಿಕ ನೆಲೆಯನ್ನು ರೂಪಿಸುವುದರಲ್ಲಿ ತಕ್ಕ ಪ್ರಭಾವವನ್ನು ಬೀರಿ ೧೯೭೯ ರಲ್ಲಿ ಪ್ರಥಮ ಬಂಡಾಯ ಸಾಹಿತ್ಯ ಸಂಘಟನೆಯೊಂದು ಪ್ರಾರಂಭವಾಯಿತು. ಸಾಹಿತ್ಯಕವಾಗಿ ಹೇಳುವುದಾದರೆ ಕನ್ನಡದ ದಲಿತ-ಬಂಡಾಯ ಚಳುವಳಿಗೆ ಇದೇ ಬಗೆಯ ಜಾಗತಿಕ ಹಾಗೂ ಭಾರತೀಯ ಪರಿಸರದ ಸಾಹಿತ್ಯ ಚಳುವಳಿಗಳು ಪ್ರೇರಣೆಯನ್ನೊದಗಿಸಿವೆ. ಪಶ್ಚಿಮದ ಕಪ್ಪು ಕಾವ್ಯ, ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳುವಳಿ, ತೆಲುಗಿನ ದಿಗಂಬರ ಕಾವ್ಯದ ಧೋರಣೆಗಳೂ ಕನ್ನಡ ಕವಿಗಳನ್ನು ಪ್ರಭಾವಿಸಿವೆ. ಒಂದು ಮಾತಿನಲ್ಲಿ ಹೇಳುವುದಾದರೆ ದಲಿತ – ಬಂಡಾಯ ಚಳುವಳಿ ಎಡಪಂಥೀಯ ನಿಲುವುಗಳನ್ನೊಳಗೊಂಡ, ಪ್ರತಿಭಟನೆಯನ್ನೆ ತನ್ನ ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡ ಒಂದು ಜನಪರ ಸಾಹಿತ್ಯ ಚಳುವಳಿಯಾಗಿದೆ.

ವಾಸ್ತವವಾಗಿ ‘ದಲಿತ’ ಎಂಬ ಮಾತಿಗೆ ತುಳಿಯಲ್ಪಟ್ಟವನು ಎಂಬ ಅರ್ಥವಿದೆ. ನಮ್ಮ ಸಾಮಾಜಿಕ ಪರಿಸರದಲ್ಲಿ ಅಸ್ಪೃಶ್ಯರಂತೆ ಇತರ ಹಿಂದುಳಿದ ವರ್ಗಗಳವರೂ ಮೇಲಿನ ವರ್ಗಗಳವರಿಂದ ತುಳಿತಕ್ಕೆ ಶೋಷಣೆಗೆ ಒಳಗಾಗಿರುವ ಕಾರಣದಿಂದ, ಉಚ್ಚ ವರ್ಗದವರಲ್ಲದ ಎಲ್ಲರೂ ಒಂದರ್ಥದಲ್ಲಿ ದಲಿತರೇ ಆಗುತ್ತಾರಲ್ಲವೆ ಎಂಬ ಪ್ರಶ್ನೆಯೊಂದನ್ನು ಎತ್ತಲು ಅವಕಾಶವಿದೆ. ಆದರೆ “ಒಬ್ಬ ಅವಮಾನಿತ ವ್ಯಕ್ತಿ ಸ್ವಾಭಿಮಾನಿಯೂ ಆದಾಗ ಹುಟ್ಟುವ ಸಾಹಿತ್ಯಕ್ಕೆ ಒಂದು ಗುಣವಿರುತ್ತದೆ. ಅದನ್ನು ಪ್ರಪಂಚದ ಎಲ್ಲ ಕಡೆಯೂ ನಾವು ಪ್ರತಿಭಟನಾ ಸಾಹಿತ್ಯವೆಂದು ಕಾಣುತ್ತೇವೆ. ಹೀಗೆ ಅವಮಾನಿತ ಸ್ವಾಭಿಮಾನಿಯಾದವನು ಅಸ್ಪೃಶ್ಯನೂ ಆಗಿದ್ದಲ್ಲಿ ದಲಿತ ಸಾಹಿತ್ಯ ಹುಟ್ಟಿಬರುತ್ತದೆ” – ಎಂಬ ಅನಂತಮೂರ್ತಿಯವರ ವಿಶ್ಲೇಷಣೆಯಲ್ಲಿ ದಲಿತ ಹಾಗೂ ಬಂಡಾಯ ಸಾಹಿತ್ಯಗಳ ಸರಿಯಾದ ವ್ಯತ್ಯಾಸವು ನಿರೂಪಿತವಾಗಿದೆ. ಕನ್ನಡದಲ್ಲಿ ಮೊಟ್ಟಮೊದಲಿಗೆ ಈ ದಲಿತ ಧ್ವನಿ ಕಾಣಿಸಿಕೊಂಡದ್ದು ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಕೃತಿಯ ಮೂಲಕ ಮತ್ತು ದೇವನೂರು ಮಹಾದೇವ ಅವರ ಕತೆಗಳ ಮೂಲಕ. ಅವರ ‘ಒಡಲಾಳ’ ಈ ಬರವಣಿಗೆಯ ಶ್ರೇಷ್ಠ ನಿದರ್ಶನವಾಗಿದೆ. ಈಗಾಗಲೇ ಪ್ರಸ್ತಾಪಿಸಿದಂತೆ ಬಂಡಾಯ ಸಾಹಿತ್ಯ ಸಂಘಟನೆ ಪ್ರಾರಂಭವಾದದ್ದು, ೧೯೭೯ ರಂದು. ಪ್ರತಿಭಟನೆಯನ್ನು ಒಂದು ಮೌಲ್ಯವನ್ನಾಗಿ ಅಂಗೀಕರಿಸಿದ ಬರಹಗಾರರೆಲ್ಲರ ಒಕ್ಕೂಟ ಇದು. ಈ ಬಂಡಾಯ ಸಾಹಿತ್ಯದ ಮುಖ್ಯವಸ್ತು ಗ್ರಾಮೀಣ ಪರಿಸರದ ಅನುಭವ ದ್ರವ್ಯವಾಗಿದೆ. ಡಾ|| ಬೆಸಗರಹಳ್ಳಿ ರಾಮಣ್ಣ, ಕುಂ. ವೀರಭದ್ರಪ್ಪ, ಕಾಳೇಗೌಡ ನಾಗವಾರ, ಚಂದ್ರಶೇಖರ ಪಾಟೀಲ, ಚನ್ನಣ್ಣವಾಲೀಕಾರ, ಅರವಿಂದ ಮಾಲಗತ್ತಿ, ಮನಜ, ಬರಗೂರು ರಾಮಚಂದ್ರಪ್ಪ ಇಂಥವರ ಕವಿತೆ, ಕಾದಂಬರಿಗಳು ಬಂಡಾಯ ಚಳುವಳಿಯ ಪ್ರತಿನಿಧಿಗಳಾಗಿವೆ.

ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಅತ್ಯಂತ ಗಮನಾರ್ಹವಾದ ಪರಿಣಾಮವೆಂದರೆ, ಬಹುಸಂಖ್ಯಾತ ಮಹಿಳೆಯರು ಸಾಹಿತ್ಯಲೋಕವನ್ನು ಪ್ರವೇಶಿಸಿದ್ದು. ಒಂದರ್ಥದಲ್ಲಿ ಈ ದೇಶದ ಮಹಿಳೆಯರೂ ‘ದಲಿತ’ರೇ ಆದ ಕಾರಣ, ದಲಿತ-ಬಂಡಾಯ ಚಳುವಳಿ ನಿರ್ಮಿಸಿದ ಹೊಸ ಎಚ್ಚರದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಂಡವರಲ್ಲಿ ಮಹಿಳೆಯರೂ ಸೇರುತ್ತಾರೆ. ಕೇವಲ ವಿದ್ಯಾವಂತ ಮಧ್ಯಮ ವರ್ಗದ ಮಹಿಳೆಯರೇ ನವೋದಯ ಸಂದರ್ಭದಲ್ಲಿ, ಬರೆಹಗಾರರಾಗಿ ಕಾಣಿಸಿಕೊಂಡರೂ, ಅವರಲ್ಲಿ ಸಂಪ್ರದಾಯ ಪ್ರಿಯತೆಯೇ ಮುಖ್ಯವಾಗಿತ್ತೆ ಹೊರತು ತಮ್ಮನ್ನು ನಿಯಂತ್ರಿಸುತ್ತಿದ್ದ ಪಾರಂಪರಿಕ ಮೌಲ್ಯಗಳನ್ನು ಕುರಿತು ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಪ್ರವೃತ್ತಿ (ತ್ರಿವೇಣಿ, ವೀಣಾ ಇಂಥ ಒಬ್ಬಿಬ್ಬರನ್ನು ಬಿಟ್ಟರೆ) ಅಷ್ಟಾಗಿ ಅಭಿವ್ಯಕ್ತವಾಗಲೇ ಇಲ್ಲ ಎನ್ನಬಹುದು. ಆದರೆ ಕಳೆದ ಕೆಲವು ವರ್ಷಗಳಲ್ಲಿ ವರ್ಧಿಸಿರುವ ಮಹಿಳಾ ಬರಹಗಾರ್ತಿಯರೂ, ಅವರಲ್ಲಿ ಪ್ರಕಟವಾಗುತ್ತಿರುವ ಪ್ರತಿಭಟನಾ ಪ್ರವೃತ್ತಿಯೂ, ಖಂಡಿತವಾಗಿಯೂ ಈ ಬಂಡಾಯ ಚಳುವಳಿಯ ಪರಿಣಾಮಗಳಾಗಿವೆ. ಜತೆಗೆ ಕರ್ನಾಟಕದ ಉಪಸಂಸ್ಕೃತಿಯಾದ ಮುಸ್ಲಿಂ ಜನಾಂಗದ ಹಲವರೂ, ಮೊಟ್ಟಮೊದಲಿಗೆ ತಮ್ಮ ಧಾರ್ಮಿಕ – ಸಾಂಸ್ಕೃತಿಕ ಪಟ್ಟಭದ್ರಹಿತಾಸಕ್ತಿಗಳ ಶೋಷಣೆಯನ್ನು ತಮ್ಮ ಬರೆಹಗಳ ಮೂಲಕ ದಾಖಲು ಮಾಡುತ್ತಿರುವುದೂ, ಈ ಚಳುವಳಿಯ ಚೌಕಟ್ಟಿನಲ್ಲಿಯೇ ರಹಮತ್ ತರಿಕೆರೆ, ರಂಜಾನ್ ದರ್ಗಾ, ಸಾರಾ ಅಬೂಬಕರ್, ಬಾನುಮುಷ್ತಾಕ್, ಫಕೀರ್ ಮಹಮದ್ ಕಟ್ಪಾಡಿ, ಬೋಳುವಾರು ಮಹಮ್ಮದ್ ಕುಂಞ – ಇಂಥವರ ಬರಹಗಳು ಈ ಮಾತಿಗೆ ನಿದರ್ಶನವಾಗಿವೆ.

ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರೌರ್ಯ, ದಬ್ಬಾಳಿಕೆ, ಹಿಂಸೆ, ಅನಾಚಾರಗಳೇ ತಾಂಡವವಾಡುವ ಈ ಸನ್ನಿವೇಷದಲ್ಲಿ ಈ ಮೇಲೆ ಅಭಿವ್ಯಕ್ತ ಪಡಿಸಿದಂತೆ ಚಾರಿತ್ರಿಕವಾಗಿ ಉದಯವಾದ ಬಂಡಾಯ ಸಾಹಿತ್ಯ ಮತ್ತಷ್ಟು ಮೊನಚಾಗಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ತನ್ಮೂಲಕ ಈ ಕಲುಷಿತ ವ್ಯವಸ್ಥೆಯನ್ನು ತಿಳಿಗೊಳಿಸುವಲ್ಲಿ ಅದು ಮಹತ್ತರ ಪಾತ್ರವಹಿಸಲಿ ಎನ್ನುವುದೇ ಆಶಯ.
===========
ವಂದನೆಗಳೊಂದಿಗೆ,
ಪ್ರವರ ಕೊಟ್ಟೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ.
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ]
[ಆಕರ: ಜಿ.ಎಸ್.ಶಿವರುದ್ರಪ್ಪ ಅವರ ಸಮಗ್ರ ಗದ್ಯ]

Monday, 31 December 2012

ಗತವರ್ಷದ ಮೆಲುಕು ಹೊಸವರ್ಷದಾಗಮನಕೆ!


ನಮಸ್ಕಾರ ಕನ್ನಡ ಬ್ಲಾಗ್ ಸದಸ್ಯವೃಂದಕ್ಕೆ,

ಯುಗವೊಂದು ಉರುಳಿ ಮಗದೊಂದು ಯುಗ ನಗಲು ಅಣಿಯಾಗುತ್ತಿದೆ. ಎರಡು ಸಾವಿರದ ಹನ್ನೆರಡರ ಅಂತಿಮ ಕ್ಷಣಗಣನೆ ಆರಂಭವಾಗಿದೆ. ಕಂಡ ಕನಸುಗಳೆಷ್ಟೋ, ನನಸುಗಳಾದವೆಷ್ಟೋ? ಅವಲೋಕನ ಮಾಡಬೇಕಾದ ಅವಶ್ಯಕತೆ ಇದ್ದೇ ಇದೆ ಪ್ರತಿಯೊಬ್ಬರಿಗೂ. ಹೌದು ವರ್ಷದ ಮೊದಲಿಗೆ ರೂಪಿಸಿಕೊಂಡ ಹಲವು ಯೋಜನೆಗಳಲ್ಲಿ ಕೆಲವು ಕಾರ್ಯರೂಪಕ್ಕಿಳಿದು, ಇನ್ನೂ ಹಲವೂ ತಣ್ಣನೆ ಮನದೊಳಗೆ ಹಾಗೆ ಮಲಗಿರಲೂಬಹುದು. ಮತ್ತೆ ಎಚ್ಚರಿಸುವ ಕಾಲ ಬಂದಿದೆ. ಅದು ಈ ವರ್ಷದ ಕೊನೆ. ಕಳೆದ ಸಂವತ್ಸರದಲಿ ನೆನೆಗುದಿಗೆ ಬಿದ್ದವುಗಳನ್ನು ಮತ್ತೊಮ್ಮೆ ಆರಿಸಿ, ವಿಶ್ಲೇಷಿಸಿ, ಹದಗೊಳಿಸಿ ಹೊಸವರುಷಕೆ ಹೊಸತನ ಕೊಡಬೇಕು. ಹಾಗೆಯೇ ನನಸುಗೊಂಡವುಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುವ ಸಿಂಹಾವಲೋಕನ ಕೂಡ ಅವಶ್ಯ. ಬನ್ನಿ ಸಣ್ಣದೊಂದು ದೃಷ್ಟಿ ಹಾಯಿಸೋಣ ಕಳೆದೊಂದು ವರ್ಷದಿಂದ ಕನ್ನಡ ಬ್ಲಾಗ್ ಕುಂಟುತ್ತಾ, ತೆವಳುತ್ತ, ನಲಿಯುತ್ತಾ ಸಾಗಿಬಂದ ಪರಿಯನ್ನು ನಾವು ನೀವು ಜೊತೆಯಾಗಿ, ಹಿತವಾಗಿ! 

ಹಲವು ನೀತಿ-ನಿಯಮ, ರೂಪುರೇಷೆಗಳ ಅಡಿಯಲ್ಲಿ ನೆಲೆನಿಂತು ತನ್ನೆಲ್ಲಾ ಸದಸ್ಯರ ಕ್ರಿಯಾಶೀಲತೆಗಳನ್ನು ಬೆಳಕಿಗೆ ತರುವ ಪ್ರಯತ್ನದತ್ತ ಮುಂದಡಿ ಇಟ್ಟಿತ್ತು ಕನ್ನಡ ಬ್ಲಾಗ್. ೨೦೧೨ರ ಆದಿಯಲ್ಲಿ, ಇತರೆ ಗುಂಪುಗಳಿಗಿಂತ ಭಿನ್ನವಾಗಿ ನಿಂತು ಎಲ್ಲರ ಪ್ರೋತ್ಸಾಹದೊಂದಿಗೆ ತನ್ನ ಸಂಪಾದಕೀಯ ಸರಣಿ ಆರಂಭಿಸಿತ್ತು. ತನ್ಮೂಲಕ ಫೇಸ್ಬುಕ್ ಗುಂಪುಗಳಲ್ಲೇ ವಿಶಿಷ್ಟ ಸಂಪ್ರದಾಯವೊಂದನ್ನು ಹುಟ್ಟುಹಾಕಿದ್ದು ನಮ್ಮ ಈ ತಂಡ. ಸಫಲತೆಯ ಹಾದಿಯಲ್ಲಿ ಸಾಗುತ್ತಿದೆ ಈ ಪ್ರಯತ್ನ. ಜನವರಿ ೨೦೧೨ರ ಮೊದಲ ಸಂಪಾದಕೀಯದಿಂದ ಮೊದಲ್ಗೊಂಡು ಎಲ್ಲ ಲೇಖನಗಳಿಂದ ಆಯ್ದ ಸದಾಶಯದ ತುಣುಕುಗಳನ್ನು ಸಂಕಲನಗೊಳಿಸಿ ಪ್ರಸ್ತುತ ಸಂಪಾದಕೀಯವಾಗಿ ನಿಮ್ಮೆದುರು ಅರ್ಪಿಸುತ್ತಿದ್ದೇವೆ. 

ಸಾಗುವ ದಾರಿಯಲ್ಲಿ ಎಡರು ತೊಡರುಗಳು ಸಹಜ. ಈ ಎಲ್ಲದಕೂ ಕಾಲವೇ ಉತ್ತರ ನೀಡುತ್ತದೆ. ಯುಗಯುಗಗಳು ಕಳೆದರೂ ಯುಗಾದಿ ಮರಳಿ ಬರುತ್ತಿದೆ ಅನ್ನುವಂತೆ ಹಳೆಯದ್ದೆಲ್ಲ ಹಳತಾಗಿ ಕಳಚಿ ಹೊಸಚಿಗುರುಗಳು ವಸಂತನಾಗಮನದಿ ಸತ್ಯಸಹಜ. ನಿರಂತರ ಸಂಕ್ರಮಣವದು. ಆದರೆ ಈ ಕಾಲ ಕಳೆಯುತ್ತಾ ಸಾಗಿದಂತೆ ನಮ್ಮ ಭಾಷಾಭಿಮಾನವನ್ನು ನಶಿಸಲು ಬಿಡದೇ, ನಮ್ಮ ಭಾಷೆಯ ಬೆಳವಣಿಗೆಯ ಬಗ್ಗೆ ನಮ್ಮ ನಿಮ್ಮೆಲ್ಲರ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನ ಇರಲಿ. "ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು. ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು ಎನ್ನುವ ಕರೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಕೂಡ.

ಬರಹ/ಕವಿತ್ವ ನಮ್ಮೊಳಗಿನ ಶಕ್ತಿ. ಬರಹ ಸ್ವಂತವಾಗದ ಹೊರತು ನಮ್ಮೊಳಗಿನ ಬರಹಗಾರ ಹೊರ ಬರಲಾರ. ಬದುಕಿಗೆ ವರ್ಣ ಪೇರಿಸಿ ಉಸಿರಾಡಿಸುವ ಬಗೆ ಈ ಕವಿತ್ವಕ್ಕೆ ಗೊತ್ತು. ಅದು ದೇಹ ಗೋರಿ ಸೇರಿದರೂ ಕವಿಯನ್ನು ಜೀವಂತವಾಗಿರಿಸುತ್ತದೆ! ಹೌದು, ಯಾರೂ ಹುಟ್ಟುತ್ತಾ ದೊಡ್ಡ ಕವಿಯಾಗಿ ಹುಟ್ಟಲಿಲ್ಲ.ಕೆಲವೊಮ್ಮೆ ತನ್ನ ಮೇಲಿನ ಅಪನಂಬಿಕೆಯಿಂದಲೊ ಅಥವಾ ಯಾವುದಾದರೂ ವಿಮರ್ಶೆಗಳು ತನ್ನಸ್ಥಿತ್ವವನ್ನು ಪ್ರಶ್ನಿಸುವ ಭಯದಲ್ಲಿ ಕವಿತ್ವ ಕಾಡಬೆಳದಿಂಗಳಾಗುತ್ತದೆ. ಅದು ಜೀವ ರಾಶಿಗಳಿಗೆ ಶಕ್ತಿಯಾಗಬೇಕು. ಅವರ ಪರಿಶ್ರಮದ ಫಲವಾಗಿ ಒಂದು ಕಾಲಘಟ್ಟ ಅವರನ್ನು ಆದರಿಸಿ ಗೌರವಿಸಿರುತ್ತದೆ. ಎಲ್ಲಾ ಕವಿ-ಕಲಾವಿದರ ಬದುಕಿನಲ್ಲೂ ಆ ಕಾಲ ಬರುತ್ತದೆ. ಕಾಯಬೇಕಷ್ಟೇ. ಮೊದಲು ಜನಿಸಿದರೇನು, ಕೊನೆಯಲಿ ಜನಿಸಿದರೇನು, ಎಲ್ಲರೂ ಶಾರದಾಂಬೆಯ ಗರ್ಭಸಂಜಾತರೇ! ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ನಂಬಿಕೆಯಿರಬೇಕಷ್ಟೆ. ಅವಕಾಶ ಅದೃಷ್ಟಗಳು ಕೆಲವರನ್ನು ಅರಸಿ ಬರುತ್ತವೆ. ಇನ್ನೂ ಕೆಲವರು ತಾನಾಗಿಯೇ ಅದನ್ನು ಅರಸಿ ಹೋಗಬೇಕು. ಎಂದಾದರೂ ಅವಕಾಶ-ಅದೃಷ್ಟಗಳು ನಂಬಿದವರ ಕೈ ಹಿಡಿಯುತ್ತದೆಂಬುದು ನಿತ್ಯಸತ್ಯ!  ಈ ಸತ್ಯದ ಸ್ಪೂರ್ತಿ ನಮ್ಮೊಳಗೂ ಬರಲಿ ಉದ್ದೀಪನವಾಗಲಿ. ಹೀಗೆ ಸಾಹಿತ್ಯವನ್ನು ನಿಂತ ನೀರಾಗಿಸದೆ ಹರಿಯುವ ನದಿಯಂತೆ ನಿರಂತರತೆಯನ್ನು ಮುಂದುವರೆಸುವ ವೇಗವರ್ಧಕಗಳಾಗಿವೆ ಎಂಬ ತಿಳುವಳಿಕೆ ಮುಖ್ಯ. ನಿಜವಾದ ಕೃತಿಯ ನಿರ್ಮಾಣವಾಗುವುದು ಬರಹಗಾರನೊಬ್ಬನ ಸತ್ವ ಹಾಗೂ ವ್ಯಕ್ತಿ ಪ್ರತಿಭೆಯ ಪರಿಣಾಮ. ಸಾಹಿತ್ಯ ಚಳುವಳಿಗಳು ಸ್ವರೂಪತಃ ಸಾಮೂಹಿಕ, ಆದರೆ ಸಾಹಿತ್ಯ ನಿರ್ಮಾಣ ವೈಯಕ್ತಿಕವಾಗಿ ರೂಪುಗೊಳ್ಳುವುದು . ಸಾಹಿತ್ಯದಲ್ಲಿ ಮೂಲಭೂತ ಬದಲಾವಣೆ ಹೊರತರುವ ಸಲುವಾಗಿ ರೂಪುಗೊಳ್ಳುವ ಸಾಹಿತ್ಯವು ಒಂದು ಗಟ್ಟಿಯಾದ ಪರಂಪರೆಯನ್ನು ನಿರ್ಮಿಸುವಂತಿರಬೇಕು ಆ ನಿಟ್ಟಿನಲ್ಲಿ ಸಾಹಿತ್ಯ ಚಳುವಳಿ ಮಹತ್ವದ್ದಾಗಿದೆ ಎಂದು ವಿಷದೀಕರಿಸುತ್ತಾ ಇಂಥ ಮಹೋನ್ನತವಾದ ಸಾಹಿತ್ಯ ಸೃಷ್ಟಿಯ ತಿಳಿವಳಿಕೆಯೊಂದಿಗೆ ಇಂದಿನ ನಮ್ಮ ಬರಹಗಾರರು ತಮ್ಮ ಸುಂದರ ಸೃಷ್ಟಿಗಳಿಗೆ ಕಾರಣೀಭೂತರಾಗಲಿ ಎನ್ನುವ ಆಶಯ ಕೂಡ ನಮ್ಮೆಲ್ಲರಲ್ಲಿದೆ. ಹೀಗೆ ಅಂತರ್ಜಾಲ ಲೋಕದಲ್ಲಿ ನಮ್ಮ-ನಿಮ್ಮೆಲ್ಲರ ಕ್ರಿಯಾಶೀಲತೆ. ಅದು ಬರವಣಿಗೆಯ ಮುಖೇನವಾಗಿರಬಹುದು, ಅಥವಾ ಸಹೃದಯರಾಗಿ ಇರಬಹುದು. ಓದುಗರಾಗಿ ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂಒಡಮೂಡಿದೆ ಅನ್ನುವುದು ಸಂತಸದ ವಿಚಾರ ಕೂಡ. ಈ ನಿಟ್ಟಿನಲ್ಲಿ ಇನ್ನಷ್ಟು ಎತ್ತರದ ಮೆಟ್ಟಿಲುಗಳನ್ನು ನಾವು ಏರಬೇಕಾದ ಅವಶ್ಯಕತೆಯೂ ಇದೆ. ಅದಕ್ಕಾಗಿ ನಮ್ಮೆಲ್ಲರ ಪ್ರಯತ್ನವಿರಲಿ ಕೂಡ. ಅದಲ್ಲದೇ ವೈಶಿಷ್ಟ್ಯಪೂರ್ಣ ಸಾಹಿತಿಗಳ ಅಭೂತಪೂರ್ವ ರಚನೆಗಳನ್ನು ನಮ್ಮ ಸ್ವಂತ ಪುಸ್ತಕ ಸಂಗ್ರಹಗಳಲ್ಲಿ ಹೊಂದಿರದಿದ್ದರೆ ಅದೊಂದು ಬಹುದೊಡ್ಡ ಕೊರತೆಯಾದೀತು. ಕನ್ನಡಿಗರಾಗಿ ಕನ್ನಡ ಸಾಹಿತ್ಯಕೃತಿಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳೋಣ ತನ್ಮೂಲಕ ಕನ್ನಡ ಸಾಹಿತ್ಯಕ್ಕೂ ನಮ್ಮದೇ ಹೃದಯಸ್ಪರ್ಷಿ ಕೊಡುಗೆಯನ್ನೂ ನೀಡೋಣ.

ಮುಂದುವರಿಸಿದಂತೆ, ಒಂದು ಬರಹದ ಬಗೆಗಿನ ವಿಮರ್ಶೆ ಮತ್ತು ಟೀಕೆ ಎಷ್ಟೇ ಕಾರಣಬದ್ಧವಾಗಿದ್ದರೂ ಚುಚ್ಚುವ, ವ್ಯಂಗ್ಯ ಅಥವಾ ಪೂರ್ವಗ್ರಹಪೀಡಿತವಾಗಿರಬಾರದು. ಕನ್ನಡಬ್ಲಾಗ್ ನಲ್ಲಿ ಯಾವುದೇ ವಿಮರ್ಶೆಯೂ ಆ ನಿಟ್ಟಿನಲ್ಲಿ ಹಾದಿ ತಪ್ಪಿಲ್ಲವೆಂಬ ಭರವಸೆಯಿದೆ. ವೈಯುಕ್ತಿಕ ನಿಂದನೆಗಿಳಿದವರನ್ನು, ವಿಚಾರ ಸಂಬಂಧವಿಲ್ಲದ ತುಂಟು ಓತಪ್ರೋತ ಮಾತುಗಾರರನ್ನು ನಿರ್ದಾಕ್ಷೀಣ್ಯವಾಗಿ ಕನ್ನಡಬ್ಲಾಗ್ ನ ನಿಯಮಕ್ಕನುಸಾರವಾಗಿ ಬ್ಲಾಗ್ ನಿಂದ ಅನರ್ಹಗೊಳಿಸಿದ್ದೇವೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ, ತೀಡಿ ಒಂದು ಸತ್ವ ಬೆಳವಣಿಗೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಇಲ್ಲಿನ ವಿಮರ್ಶೆಗಳ ಅಂತರ್ ಶಕ್ತಿಯಿಂದ ಲೇಖಕ ಮತ್ತೊಂದು ಬರವಣಿಗೆಗೆ ಕೂಡಲೇ ಅನುವಾಗಿ ನಿಧಾನವಾಗಿ ಸಾಹಿತ್ಯದ ಆಯಾಮಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ. ಎಲ್ಲರೂ ಸಂಪೂರ್ಣರಲ್ಲ, ಎಲ್ಲಾ ಬರಹಗಳು ಪಕ್ವವಲ್ಲ. ನಮ್ಮ ಕೊರತೆಗಳನ್ನು ಓದುಗರು ತೋರಿಸಿಕೊಡುವಾಗ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ತಾಳ್ಮೆಯಿರಬೇಕು. ಬೆಳವಣಿಗೆ ಹಂತ ಹಂತವಾಗಿ ಸಾಗುತ್ತದೆ, ಹೂ ಮೃದು ಅರಿವಾಗಬೇಕಾರೆ, ಮುಳ್ಳಿನಿಂದ ಒಮ್ಮೆ ಚುಚ್ಚಿಸಿಕೊಂಡಿರಬೇಕು. ಕಹಿ ಸಿಹಿಗೆ ಶುದ್ಧ ಕನ್ನಡಿ. ಬರಹದ ಪ್ರಕಾರಗಳನ್ನು ತಿಳಿದುಕೊಂಡವರೊಬ್ಬರು ನಮ್ಮಲ್ಲಿರುವ ಯಾವುದೋ ಕೊರತೆಯನ್ನು ನೀಗಿಸಲು ಪ್ರಯತ್ನ ಪಟ್ಟಾಗ ನಾವು ಗೌರವಿಸಿ ಮುಂದುವರೆಯುವುದು ಕಲಿಯಬೇಕು ಎನ್ನುವ ಜಿಜ್ಞಾಸೆ ಸಾರ್ವಕಾಲಿಕ. ಎಂದೆಂದಿಗೂ ಪ್ರಸ್ತುತ.

ಇನ್ನುಳಿದಂತೆ ಸಾಹಿತಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಬರಹದಂತೆ ನಡವಳಿಕೆಯಲ್ಲೂ ಜನ ಸಾಮಾನ್ಯರಿಗೆ ಸಾಹಿತಿಗಳು ಪ್ರೇರಣೆಯಾಗಿದ್ದಾರೆ. ನಮ್ಮ ಬರವಣಿಗೆಗಳು ಕೇವಲ ಪುಸ್ತಕ, ಬ್ಲಾಗು, ನೆಟ್ಟುಗಳಿಗೆ ಸೀಮಿತವಾಗಿರದೆ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿ, ಪ್ರಗತಿಶೀಲ ವಿಷಯಗಳ ಮೂಲಕ ಜನರಲ್ಲಿ ಜಾಗೃತಿ ತರುವ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವತ್ತ ಅನುವು ಮಾಡಿಕೊಡಲಿ. ಕನ್ನಡದ ಮೇಲಿನ ಪ್ರೀತಿ, ಒಲವು ಸಾಮಾಜಿಕ ಅಭಿವೃದ್ಧಿಯತ್ತ ಮುಖ ಮಾಡುವುದು ಮುಖ್ಯ ಅಂಶ. ಹಾಗಾಗಿ ಸಾಹಿತಿಯಾದವನು ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದನ್ನು! ವಾಸ್ತವವಾದ ಎಂದರೆ ಸುತ್ತಣ ಬದುಕು ಹಾಗೂ ಪರಿಸರವನ್ನು ಪ್ರಾಮಾಣಿಕವಾಗಿ ಯಥಾವತ್ತಾಗಿ ಚಿತ್ರಿಸಬೇಕೆನ್ನುವ ಒಂದು ಮನೋಧರ್ಮ. ಸಾಹಿತಿಯಾದವನು ಕಂಡದ್ದನ್ನು ಕಂಡ ಹಾಗೆ ಚಿತ್ರಿಸಬೇಕೆನ್ನುವ ಈ ಭಾವ, ಎಲ್ಲ ಕಾಲದ ಸಾಹಿತ್ಯದ ಉದ್ದೇಶಕ್ಕೆ ಹೊರತಾದುದಲ್ಲ ಎಂಬುದು ನಿರ್ವಿವಾದವಾದ ಅಂಶ. ಕಾವ್ಯ ಅಥವಾ ಸಾಹಿತ್ಯದ ವಸ್ತು ಉದಾತ್ತವಾಗಿರಬೇಕು, ಉಳಿದವರಿಗೆ ಉದಾತ್ತ ವ್ಯಕ್ತಿಗಳ ನಡವಳಿಕೆ ಮಾದರಿಯಾಗುವಂತಿರಬೇಕು. ಸಾಹಿತಿಯಿಂದ ಹೊಮ್ಮುವ ಸಾಹಿತ್ಯ ಮಾಡುವ ಕೆಲಸವೆಂದರೆ ಕಂಡದ್ದರ ಅನುಕರಣೆಯಲ್ಲ, ಕಾಣಬಹುದಾದ್ದರ ಅಥವಾ ಸಂಭಾವ್ಯವಾದ ಸಂಗತಿಗಳ ಆದರ್ಶ ರೂಪಗಳನ್ನು ನಿರ್ಮಿಸುವುದು. ಸಾಹಿತ್ಯದಿಂದ ರಾಷ್ಟ್ರಜೀವನ ಹಸನಾಗಬೇಕೆಂಬ, ಜನರ ಮನಸ್ಸು ಸಂಸ್ಕಾರಗೊಳ್ಳಬೇಕೆಂಬ, ಸಮಾಜವನ್ನು ಶ್ರೇಯಸ್ಸಿನ ಕಡೆಗೆ ಕೊಂಡೊಯ್ಯಬೇಕೆಂಬ ಮಾತು ಹಾಗೂ ಮನಸ್ಸು ಸಾಹಿತಿಯದಾಗಿರುತ್ತದೆ. ಇದು ಎಲ್ಲಾ ಸಾಹಿತಿಗಳ ಸಾಹಿತ್ಯದ ಧೋರಣೆಯೂ ಆಗಿರುತ್ತದೆ ಎಂದರೆ ತಪ್ಪಾಗಲಾರದು.

ಅಂತಿಮವಾಗಿ ಒಂದು ಮಾತಂತೂ ಸತ್ಯ. ಬರೆದ್ದದ್ದೆಲ್ಲವೂ ಸಾಹಿತ್ಯವಲ್ಲ.ಎಲ್ಲಾ ಕವಿತೆಗಳೂ ಗೀತೆಗಳಾಗುವುದಿಲ್ಲ, ಎಲ್ಲಾ ಹಾಡೂಗಳೂ ಕವಿತೆಗಳಾಗುವುದಿಲ್ಲ,ಸತ್ವಶಾಲಿಯಾದ ಬರಹದೊಂದಿಗೆ ಬರಹಗಾರರು ಬದ್ಧತೆಯೊಳಗಿದ್ದು ರಚಿಸುವಷ್ಟು ಪ್ರಬುದ್ಧ ಹಾಗೂ ಚಿಂತನಾಶೀಲರಾಗಬೇಕು. ಬರಹಗಾರರೆಲ್ಲ ಈ ಅಂಶಗಳತ್ತ ಚಿತ್ತಹರಿಸಿ ತಮ್ಮ ಲೇಖನಿಗೆ ಶಕ್ತಿ ತುಂಬುವುದರ ಜೊತೆಗೆ, ಜೀವನ ಮೌಲ್ಯಗಳನ್ನು ಅತ್ಯಂತ ಬದ್ಧವಾಗಿ ಎತ್ತಿ ಹಿಡಿದು ಭಾವತೀವ್ರತೆಯಿರುವ ಅರ್ಥಪೂರ್ಣ, ಸಂದೇಶವನ್ನು ಸಾರುವಂತಹ ಸಾಹಿತ್ಯವನ್ನು ರಚಿಸುವತ್ತ ಮುಂದಡಿ ಇಡಲೆಂದು ಆಶಿಸುತ್ತಾ....

ಹೊಸವರ್ಷವನು ಸಂಭ್ರಮದಿ ಆದರಿಸಲು ಮುಂದಡಿಯಿಡೋಣ.

ಶುಭವಾಗಲಿ.

ಸಂಕಲನ: ಪುಷ್ಪರಾಜ್ ಚೌಟ
ಸಹಾಯ, ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ.