Tuesday 31 December 2013

ಸಂಸ್ಕೃತಿಯ ಜೀವನಾಡಿ ಸಾಹಿತ್ಯ!

ಹಸುಗೂಸಿನ ’ಅಮ್ಮಾ…’ ಎಂಬ ಸಣ್ಣಚೀರಿನ ಒಲವಿನಂತೆ ಜನಜೀವನಕ್ಕೆ ಹಾಸುಹೊಕ್ಕಾಗಿ ಹರಿದು ಬಂದದ್ದು ಸಾಹಿತ್ಯ. ಸಾಹಿತ್ಯದ ಹುಟ್ಟು ಇಂಥದ್ದಕ್ಕೇ ಎಂದು ಉಲ್ಲೇಖಿಸಲಾಗದಿದ್ದರೂ, ನಾನಾ ಕಾರಣಕ್ಕೆ ಅದು ಒಂದು ಸಂಸ್ಕೃತಿಯ ಎಲ್ಲಾ ಸ್ಥರಗಳಿಂದಲೂ ಒಂದೊಂದಂಶಗಳನ್ನು ಎರವಲು ಪಡೆದು ತಾನಾಗಿ ಅವತರಿಸಿರಬಹುದು. ಆದ್ದರಿಂದಲೇ ಸಾಹಿತ್ಯ ಕೇವಲ ಒಂದು ಅಭಿವ್ಯಕ್ತಿ ಮಾಧ್ಯಮವಲ್ಲ, ಅದು ಒಂದು ಸಂಸ್ಕೃತಿಯ ಮೂರ್ತರೂಪ! ಆ ವಿವಿಧ ಸ್ಥರಗಳಿಂದ ಬಂದ ಒಂದೊಂದಂಶಗಳು ಭಾಷೆಯನ್ನು ತನ್ಮೂಲಕ ಸಾಹಿತ್ಯವನ್ನು ವಿಸ್ತರಿಸುತ್ತಾ ಸಾಗಿವೆ. ಆಲದ ಮರದ ಬೀಳಲುಗಳಂತೆ ಹಬ್ಬಿ ಹರಡುವುದೇ ಜೀವಂತ ಭಾಷೆಯ ಮತ್ತು ಸಾಹಿತ್ಯದ ಮೂಲಗುಣ.

ಸಂವಹನವೇ ಪ್ರಧಾನವಾಗಿ ಭಾಷೆ ಉದಿಸಿದರೂ, ಜನಜೀವನದೆಡೆಗಿನ ತುಡಿತ ಸಾಹಿತ್ಯದುದಯಕ್ಕೆ ನಾಂದಿಯಾಗಿರಬಹುದು. ಯಾವುದೇ ಭಾಷೆಯಿಂದ ಮೂಡಿದ ಸಾಹಿತ್ಯವನ್ನು ತೆಗೆದುಕೊಂಡರೂ ಈ ಅಂಶ ಅರಿವಿಗೆ ಬರುತ್ತದೆ. ಇಂಗ್ಲೆಂಡ್ ನಿಂದ ಹರಿಯುವ ಸಾಹಿತ್ಯಕ್ಕೆ ಹೇಗೆ ಆ ಸಂಸ್ಕೃತಿಯ ಛಾಯೆಯಿರುತ್ತದೋ, ಹಾಗೆ ಅಮೇರಿಕಾದಲ್ಲಿ ಸೃಷ್ಟಿಯಾಗುವ ಸಾಹಿತ್ಯಕ್ಕೆ ಅಲ್ಲಿಯ ಛಾಯೆಯಿರುತ್ತದೆ, ಹಾಗೆ ಒಬ್ಬ ಭಾರತೀಯ ಬರೆಯುವ ಸಾಹಿತ್ಯದ ದೃಷ್ಟಿಕೋನವೇ ಭಿನ್ನ! ಇಲ್ಲಿ ಪ್ರತಿಯೊಬ್ಬರ ದೃಷ್ಟಿಕೋನಗಳು ಭಿನ್ನ ಎಂಬುದಷ್ಟೇ ಅಲ್ಲದೆ, ತಾವು ಬೆಳೆದು ಬಂದ ಸಂಸ್ಕೃತಿಯೂ ಅಲ್ಲಿ ಕೆಲಸ ಮಾಡಿರುತ್ತದೆ. ಆ ದೃಷ್ಟಿಕೋನಗಳು ಭಿನ್ನವಾಗಲು ಸಂಸ್ಕೃತಿಯೇ ಮೂಲವೆಂದರೂ ತಪ್ಪಾಗಲಾರದೇನೋ.

ಕನ್ನಡ ಭಾಷೆಯನ್ನು ತೆಗೆದುಕೊಂಡರೆ; ಅದು ದ್ರಾವಿಡ ಭಾಷೆಯಾಗಿ ಅನ್ಯ ಭಾಷೆಗಳಂತೆ ತನ್ನವರ ಅಗತ್ಯಗಳಿಗೆ ಬೆಳೆದುಕೊಂಡು ನಿಂತ ಪುರಾತನ ಭಾಷೆಗಳಲ್ಲೊಂದು. ಅನಾದಿಕಾಲದ ನಾಗರಿಕತೆಗಳೂ ಕನ್ನಡವನ್ನೇ ಉಸಿರಾಡಿರಬಹುದೆಂಬ ಉಲ್ಲೇಖಗಳು ಸಿಗುತ್ತವೆ. ತನ್ನ ನಾನಾ ಸಾಂಸ್ಕೃತಿಕ ನೆಲೆಗಳಿಂದ ಬಂದ ಅಂಶಗಳನ್ನು ತನ್ನಲ್ಲಿ ಲೀನ ಮಾಡಿಕೊಂಡು ತಾನೊಂದು ಸಂಪೂರ್ಣ ಸಂಸ್ಕೃತಿಯ ಪಡಿಯಚ್ಚಾಗಿ ನಿಲ್ಲುತ್ತದೆ. ಆ ಅಂಶಗಳು ಹಳೇ ಮೈಸೂರು ಪ್ರಾಂತ್ಯದಿಂದಾಗಿರಬಹುದು, ಕರಾವಳಿ ಸೀಮೆಯಿಂದಾಗಿರಬಹುದು, ಮಲೆನಾಡು ಸೀಮೆಯಿಂದಾಗಿರಬಹುದು, ಬಯಲು ಸೀಮೆಗಳಿಂದಲೋ, ಗಡಿನಾಡುಗಳ ತಡಿಯಿಂದಲೋ, ಹೊರನಾಡಿನಿಂದಲೋ ಆಗಿರಬಹುದು. ಆದರೆ ಮಾತೃಬೇರು ಕನ್ನಡ ಸಂಸ್ಕೃತಿಯಾಗಿರುತ್ತದೆ. ಆದ್ದರಿಂದಲೇ ಕನ್ನಡ ತನ್ನ ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಂಡು ಬರುತ್ತಿದೆ.

ಇಲ್ಲಿ ಒಂದೇ ಪ್ರದೇಶದ ಬೇರೆ ಬೇರೆ ಕೋನಗಳಿಂದ ಬರುವ ಸಂಸ್ಕೃತಿಯ ಬೇರುಗಳೂ ಹೇಗೆ ಬೇರೆ ಬೇರೆ ಪರಿಣಾಮಗಳಿಗೆ ನಾಂದಿಯಾಗುತ್ತಿವೆ ಎಂದರೆ ಅಲ್ಲಿನ ಜನರ ಅಭಿರುಚಿ, ವಿಶ್ಲೇಷಣೆ, ಸಂಶ್ಲೇಷಣೆ ವಿಧಾನಗಳು ಬೇರೆ ಇರುತ್ತವೆ, ಅವರ ಅಕ್ಕಪಕ್ಕದ ಸಂಸ್ಕೃತಿಯೊಂದಿಗೆ ಕೊಟ್ಟು-ಕೊಳ್ಳುವಿಕೆ ನಡೆದೇ ಇರುತ್ತದೆ. ಕಾಲ ಮತ್ತಿತರ ಆಕ್ರಮಣಗಳಿಗೆ ಎದೆಯೊಡ್ಡಿ ಜನಜೀವನದೊಂದಿಗೆ ಬದಲಾಗುತ್ತ ಮರುಸೃಷ್ಟಿಗೊಳ್ಳುವುದು ಸಂಸ್ಕೃತಿಯ ಜೀವಂತಿಕೆಯಾದರೆ ಅದರ ಅಗತ್ಯಗಳಿಗೆ ತುಡಿಯುವುದು ಸಾಹಿತ್ಯದ ಅಗತ್ಯವಾಗುತ್ತದೆ. ಇಲ್ಲಿ ಮಡಿವಂತಿಕೆ ತೋರಿದಷ್ಟೂ ಸಾಹಿತ್ಯವೂ ತನ್ನ ಪರಿಧಿಯನ್ನು ವಿಸ್ತರಿಸದಿರುವ ಸಾಧ್ಯತೆಯೇ ಹೆಚ್ಚು. ಬಹುಶಃ ಸಂಸ್ಕೃತದಂಥ ಮೇರು ಭಾಷೆಯೊಂದು ಮಡಿವಂತಿಕೆ ಎಂಬ ಈ ಕಟ್ಟುಪಾಡಿನೊಳಗೆ ಸೊರಗುತಿದೆಯೇನೋ! ಆದರೂ ಬದಲಾವಣೆ ಎಷ್ಟರಮಟ್ಟಿಗೆ ಸಹ್ಯ? ಎಂಬ ಜಿಜ್ಞಾಸೆ ಕಾಡಬಹುದು. ನಮ್ಮ ಹಿಂದಿನ ಎಷ್ಟೋ ಕವಿಗಳು, ವಚನಕಾರರು, ದಾಸಶ್ರೇಷ್ಟರು, ಬರಹಗಾರರು ಈ ನಿಟ್ಟಿನಲ್ಲಿ ಉದಾಹರಣೆಯಾಗುತ್ತಾರೆ. ಪಂಪ ’ಕನ್ನಡ ಭಾರತ’ ವನ್ನೂ, ಕುಮಾರವ್ಯಾಸ ’ಗದುಗಿನ ಭಾರತ’ ವನ್ನೂ ಬರೆಯುವಾಗ ಎಷ್ಟೆಷ್ಟು ಮೂಲಗಳಿಂದ ಸಾರ ಹೀರಿಕೊಂಡರೂ ಅವನ್ನು ಕನ್ನಡವಾಗಿಸುವಂತೆ ಕಟ್ಟಿಕೊಟ್ಟಿದ್ದಾರೆ. ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ, ಜಿ.ಎಸ್.ಎಸ್, ಅಡಿಗರು, ಲಂಕೇಶರು, ಇನ್ನುಳಿದವರು ಮಾಡಿದ್ದೂ ಇದನ್ನೇ. ಇಲ್ಲಿ ಸಂಸ್ಕೃತಿ ಎಷ್ಟರಮಟ್ಟಿಗೆ ಬದಲಾವಣೆಗಳಿಗೆ ತೆರೆದುಕೊಳ್ಳಬೇಕೆಂದರೆ, ತನಗಗತ್ಯವಾದುದ್ದನ್ನು ಸ್ವೀಕರಿಸಿ ತನ್ನೊಳಗೆ ಜೀರ್ಣಿಸಿಕೊಂಡು ಕನ್ನಡ, ’ಕನ್ನಡ ಮಯ’ವಾಗೇ ಉಳಿಯುವವರೆಗೆ.

ಪಾಶ್ಚಾತ್ಯರ ಆಂಗ್ಲ ಸಾಹಿತ್ಯದೊಂದಿಗೆ ಅನುಸಂಧಾನಗಳನ್ನೇರ್ಪಡಿಸಿ ಪ್ರಯೋಗಗಳನ್ನು ಸೃಜಿಸಿದ ಬಿ.ಎಂ.ಶ್ರೀ ಈ ಕೊಡು-ಕೊಳ್ಳುವ ಬಗೆಗಿನ ಪುಳಕವನ್ನು ಹೀಗೆ ಹೇಳುತ್ತಾರೆ,
“ಇವಳ ಸೊಬಗನವಳು ತೊಟ್ಟು ನೋಡಬಯಸಿದೆ,
ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ”

ಇಷ್ಟೆಲ್ಲಾ ಅನುಸಂಧಾನಗಳು ಒಂದು ಸಂಸ್ಕೃತಿಯ ಜೀವಂತಿಕೆಗೆ ವರದಾನವಾದರೂ, ಅವುಗಳಿಂದೊದಗಬಹುದಾದ ಅಪಾಯಗಳಿಗೇನೂ ಕಮ್ಮಿಯಿಲ್ಲ. ಹೆಚ್ಚೆಚ್ಚು ಅಂಶಗಳನ್ನು ಆಮದುಮಾಡಿಕೊಂಡಷ್ಟೂ ನಮ್ಮ ಅಂಶಗಳು ಪರಕೀಯವೆನಿಸಬಹುದು. ಇಲ್ಲವೇ ಆಮದು ಕೊಟ್ಟ ಸಂಸ್ಕೃತಿಯ ಪಡಿನೆಳಲಾಗಿ ನಮ್ಮ ಸಂಸ್ಕೃತಿಯೂ ಆಗಿಬಿಡಬಹುದು. ಆದ್ದರಿಂದ ಆಮದಿನ ನಂತರ ಅವುಗಳನ್ನು ನಮ್ಮದು ಮಾಡಿಕೊಂಡು ಸ್ವೀಕರಿಸುವ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ್ದು ಉಳಿಯಬಲ್ಲ ಸಾಹಿತ್ಯ ಪರಂಪರೆಯ ತಾಕತ್ತು. ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಯಲ್ಲಿ, “ಒಂದು ಭಾಷೆಯನ್ನು ಯಾವಾಗ ಜನರು ಉಪಯೋಗಿಸೋದಿಲ್ಲ ಆಗ ಸಾಯುತ್ತೆ, ಸಂಸ್ಕೃತದ ಅವನತಿಯ ಹದಿಯೇ ಇದು” ಎಂಬ ತೇಜಸ್ವಿಯವರ ಮಾತು ಎಂದಿಗೂ ನೆನಪಿನಲ್ಲಿಡಬೇಕಾದದ್ದು. ಈ ಮಾತು ಮುಂದಿನ ನಮ್ಮ ಪರಭಾಷಾ ವ್ಯಾಮೋಹದಿಂದ ಮರೆಯಾಗಬಹುದಾದ ಕನ್ನಡ ಪದಗಳವರೆಗೂ ಪ್ರಸ್ತುತವಾಗಬಹುದು. ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಈ ಹೊತ್ತಿನ ಎಲ್ಲಾ ಕನ್ನಡಿಗರದ್ದಾಗಿರುತ್ತದೆ. ಆದ್ದರಿಂದ ಕನ್ನಡ ಕೇವಲ ಭಾಷೆಯಾಗದೆ, ಸಾಹಿತ್ಯ ಕೇವಲ ಅಭಿವ್ಯಕ್ತಿಯಾಗದೆ, ಕರ್ನಾಟಕದ ಸಮಷ್ಟಿಯೇ ಆಗಿದೆ.

ನುಡಿ ಕನ್ನಡ,
ನಡೆ ಕನ್ನಡ,
ಮುಡಿ ಕನ್ನಡ,
ಗುಡಿ ಕನ್ನಡ.

- ಪ್ರಸಾದ್.ಡಿ.ವಿ, ಮೈಸೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Friday 29 November 2013

ರವಿಮನದಾಳದ ಕವಿಕಿರಣಗಳು!

ಪ್ರೀತಿಯ ಕವಿಮಿತ್ರರಿಗೆ ನಮಸ್ಕಾರಗಳು,

ಕವಿತೆ ಹೇಗೆ ಬರೆಯುವುದು ಎನ್ನುವುದು ಕ್ಲಿಷ್ಟಕರ ಆಲೋಚನೆ. ನಾವು ನೂರಾರು ಕವಿತೆಗಳನ್ನು ಓದಿ ಅದಕ್ಕೊಂದು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಬರಹಗಾರ ತಾನೇ ಕರಗತ ಮಾಡಿಕೊಂಡ ಬರಹದ ಕಲೆಯನ್ನು ಇನ್ನೊಬ್ಬರ ಕಟು ಅಭಿಪ್ರಾಯದ ಮಾತುಗಳು ಉತ್ತೇಜಿಸುವುದಿಲ್ಲ. ದುರಾದೃಷ್ಟವಶಾತ್, ವ್ಯಕ್ತಪಡಿಸುವ ಪ್ರತ್ರಿಕ್ರಿಯೆಗಳು ಯಾವಾಗಲೂ ತಪ್ಪಾಭಿಪ್ರಾಯಗಳನ್ನು ಸೃಷ್ಟಿಸುವುದೇ ಹೆಚ್ಚು. ಅದು ದೊಡ್ಡ ಮಟ್ಟದಲ್ಲಿರಬಹುದು ಅಥವ ಸಣ್ಣ ಪ್ರಮಾಣದಲ್ಲಿರಬಹುದು. ಮನಸ್ಸಿನ ಪ್ರಾಮಾಣಿಕತೆಯನ್ನು ಅದು ಅವಲಂಬಿಸಿದೆ. ಸಾಮಾನ್ಯವಾಗಿ ಜನರು ಇಷ್ಟಪಡಲು ಇಚ್ಚಿಸುವಂತೆ ಅವರ ವಿಚಾರವನ್ನು ಸುಲಭವಾಗಿ ಅರ್ಥೈಸುವುದು ಕಷ್ಟ. ಅಥವಾ ಅಭಿಪ್ರಾಯ ಮಂಡಿಸುವುದು ಅಷ್ಟೇ ಕಷ್ಟ. ಬಹುಪಾಲು ಸಂದರ್ಭಗಳು ಮಾತಿನ ಪದಗಳಿಗೆ ಸಿಗದೆ ಅಡಗಿಕೊಂಡಿರುತ್ತವೆ. ಕೆಲವಷ್ಟು ಶಬ್ದಗಳನ್ನೇ ಹುಟ್ಟಿಸದೆ ಹಿಂದೆ ಬಿದ್ದಿರುತ್ತವೆ. ಕಲೆಯ ತಂತ್ರಗಾರಿಕೆ, ನೈಪುಣ್ಯತೆಗಳು ಪ್ರತಿಕ್ರಿಯೆಗಳನ್ನು ಕೆಲವೊಮ್ಮೆ ತಡೆದು ಬಿಡುತ್ತವೆ. ಏಕೆಂದರೆ, ಅಲ್ಲಿರುವ ಅತ್ಯಾಧ್ಬುತ ಪ್ರತಿಮೆ ಸೃಷ್ಠಿಸಿದ ನೆಲೆ ಮತ್ತು ದಿವ್ಯಾನೂಭೂತಿ. ಯಾರದ್ದೋ ಬದುಕಿನ ವಿವರಣೆಯನ್ನು ನಾವು ಓದುವಾಗ, ನಮ್ಮದೇ ಅನುಭವಗಳು, ಭಾವಗಳು ಅಲ್ಲಿ ಸ್ಪೋಟಗೊಳ್ಳುತ್ತವೆ.

ಈ ವಿಷಯಗಳನ್ನು ಮೊದಲು ಹೇಳುವ ಮೂಲಕ, ಈಗ ಧೈರ್ಯವಾಗಿ ವಿಷಯದ ಮೂಲಕ್ಕೆ ಬಂದರೆ, ಮೊದಲಾಗಿ "ನಾನು" ಮತ್ತು "ನಮ್ಮದು" ಎನ್ನುವ ಎರಡು ಪದ ಸಂಬೋಧನೆಯ ಅರ್ಥ ವೈಶಾಲ್ಯವನ್ನು ಅರಿತುಕೊಳ್ಳಬೇಕಾಗುತ್ತದೆ. "ನಾನು" ಎನ್ನುವ ಪದ ವಿನ್ಯಾಸವೇ ವೈಯಕ್ತಿಕ ಶೈಲಿ. ಯಾವುದೋ ವ್ಯಕ್ತಿಗತ ವಿಚಾರವನ್ನು ವಿವರಿಸಿ, ತನ್ನ ಮನಃಶಾಂತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಲ್ಲಿರುವ ತನ್ನ ಗುಪ್ತ ಓರೆ ಕೋರೆಗಳನ್ನು ತೋರ್ಪಡಿಸುವುದು ಆಗಿದೆ. ಅಲ್ಲಿ ಸ್ಪಷ್ಟವಾಗಿ ಹೇಳಬಹುದಾದರೆ, ಮನದೊಳಗಿನ ತನ್ನ ಯಾವುದೋ ಆಸೆಗಳನ್ನು ಪೂರೈಸುವ ಸಲುವಾಗಿ ಪದಗಳ ಮೂಲಕ ಪ್ರತಿಕ್ರಿಯಿಸಿ ಓದುಗರನ್ನು ಒತ್ತಾಯಿಸುತ್ತಿರುತ್ತವೆ. ’ನನ್ನನ್ನು" ಮಾತ್ರ ತೃಪ್ತಿಪಡಿಸುವ ಮಾತುಗಳೇ ಹೊರತು ನನ್ನಂತೆಯೇ ಇರುವ ಹಲವರನ್ನು ತಲುಪಲು ಶಕ್ತಿ ಕಳೆದುಕೊಳ್ಳುವುದು. ರಂಜನೀಯ ಪದಗಳ ಶೈಲಿ ಮತ್ತು ವಿನ್ಯಾಸಗಳ ಮೂಲಕ ವಸ್ತು ವಿವರಣೆ ಕಡಿತಗೊಳ್ಳುತ್ತವೆ. ಮಾತುಗಳು ನೇರವಾಗಿ ಅಪ್ಪಳಿಸದೆ ಓರೆಕೋರೆಯಾಗಿ ನೇರವಾಗಿ ನಿಲ್ಲಲು ಹವಣಿಸುತ್ತವೆ. ಓರೆಕೋರೆಯ ಏಕ ಬದುಕನ್ನು ಪ್ರತಿನಿಧಿಸಿ ಬಹುವ್ಯಕ್ತಿತ್ವಕ್ಕೆ ವಿಸ್ತಾರಗೊಂಡ ಜಗತ್ತಿನಲ್ಲಿ ಕೊಡುವ ವಿವರಣೆ ನಿಮಗೆ ಮಾತ್ರ ಧ್ವನಿಸುವುದು. ಅದಕ್ಕೆ ಉತ್ತರವನ್ನೂ ಕೂಡ ಸ್ವತಃ ಕಂಡುಕೊಳ್ಳುವುದು ಬದುಕಿನ ಪ್ರಯತ್ನ. ಆದರೆ, "ನಮ್ಮದು" ಎನ್ನುವ ಹಲವು ಜನರನ್ನು ಪ್ರತಿನಿಧಿಸುವ ಪದವೇ ತುಂಬಾ ಸುಂದರವಾಗಿದೆ. ಸಮಾನವಾದ ಯಾವುದೋ ಹೆಚ್ಚುಗಾರಿಕೆ ಅಲ್ಲಿ ಅಪೂರ್ವದ ಅಂಚಿನಲ್ಲಿರುವ ಜನರ ಆಸೆಗಳನ್ನು ನೆರವೇರಿಸುವಂತಿದೆ ಅಥವಾ ಅದನ್ನು ವಿವರಿಸುವಂತಿದೆ ಅಥವಾ ಅಲ್ಲೊಂದು ಬದಲಾವಣೆಯ ಪ್ರಕ್ರಿಯೆಗೆ ಪ್ರಚೋದಿಸುತ್ತದೆ. ಇದು ತನ್ನಂತೆ ಇರುವ ಇತರರನ್ನು, ಜನರೇ ಒಂದಾದ ಸಮಾಜವನ್ನು , ಸಮಾಜವೇ ಒಂದಾದ ಜಗತ್ತನ್ನು ಪ್ರತಿನಿಧಿಸುವುದು. ಸ್ವಂತ ಬುದ್ದಿವಂತಿಕೆ, ಸ್ವತಂತ್ರವಾಗಿ ನಿಲ್ಲಲು ಶಕ್ತಿಯಿಲ್ಲದಿದ್ದರೆ "ನಾನು" ಎಂಬ ಪದದ ಸುತ್ತ ಹೆಣೆದ ಕವಿತೆಯ ಸಾಮರ್ಥ್ಯ "ನಮ್ಮದು" ಎನ್ನುವ ಪದದ ಸುತ್ತ ಹೆಣೆದ ಬಲಿತ ಕವಿತೆಯ ಮುಂದೆ ಗೌಣವಾಗುವುದು.

"ನಾನು ಬರೆದ ಕವಿತೆ ಉತ್ತಮವಾಗಿದೆಯೇ" ಎಂದು ಯಾರಾದರೂ ಕೇಳಬಹುದು. ಅದಕ್ಕೊಂದು ಪ್ರತಿಕ್ರಿಯೆ ಬರೆಯಿರಿ ಎನ್ನಬಹುದು. ಬರೆಯದಿದ್ದರೆ ಅಪಾರ್ಥವಾಗಬಹುದು. ಅದೇ ಕವಿತೆಯನ್ನು ಪತ್ರಿಕೆ ಪ್ರಕಟಣೆಗೆ ಕಳುಹಿಸಲೂಬಹುದು. ಅಂತರ್ಜಾಲ ಈ-ಮಾಧ್ಯಮದ ಸಂಪಾದಕರಿಗೆ ಕಳುಹಿಸಲೂಬಹುದು. ಅದೇ ಕವಿತೆಯನ್ನು ಇತರರ ಕವಿತೆಗಳೊಂದಿಗೆ ಹೋಲಿಸಿ ನೋಡುವ ಅವ್ಯಕ್ತ ಆಸೆಯೂ ಇರಬಹುದು. ಹೀಗಾದ ಮೇಲೆ ನಮ್ಮ ಮೆಚ್ಚಿನವರು, ಗೆಳೆಯರು ಅದಕ್ಕೊಂದು ಪ್ರತಿಕ್ರಿಯೆ ಕೊಡದಿದ್ದರೆ ಉತ್ಸಾಹ ಕುಸಿದ ಭಾವ ಆವರಿಸಿಕೊಳ್ಳುವುದು ಖಂಡಿತ. ಕಳುಹಿಸಿದ ನಮ್ಮ ಕವಿತೆಗಳನ್ನು ಕೆಲವು ಪತ್ರಿಕೆಯವರು ಪ್ರಕಟಿಸದೆ ತಿರಸ್ಕರಿಸಿದರೆ ನೊಂದುಕೊಳ್ಳುವುದೂ ಕೂಡ ಸಾಮಾನ್ಯ. ಪತ್ರಿಕೆ, ಅಂತರ್ಜಾಲ ಮಾಧ್ಯಮ, ಇತರ ಕವಿತೆಗಳ ಹೋಲಿಕೆ, ಉತ್ಸಾಹ ಕುಸಿದ ಭಾವ, ತಿರಸ್ಕಾರ ಸೇರಿದಂತೆ ನೊಂದುಕೊಂಡ ಎಲ್ಲಾ ವಿಷಯಗಳನ್ನು ಏಕಕಾಲದಲ್ಲಿ ಸೂಚಿಸುತ್ತದೆ. ನಾವು ಯಾವುದನ್ನೂ ಅಗತ್ಯವಾಗಿ ಮಾಡಲಾಗದೆ, ಹೇಳಲಾಗದ ಸ್ಥಿತಿಯಲ್ಲಿದ್ದಾಗ ಹೊರಗೆ ಬಂದು ಇನ್ನೊಬ್ಬರಿಂದ ಈ ಎಲ್ಲವನ್ನೂ ಅಪೇಕ್ಷಿಸುತ್ತೇವೆ. ಆದರೆ ಕವಿತೆಯ ವಿಷಯದಲ್ಲಿ ಯಾರೂ ನಮಗೆ ಸಲಹೆ ಕೊಡಲಾರರು ಕವಿಮಿತ್ರರೇ. ಯಾರೂ ಸಹಾಯ ಮಾಡಲಾರರು. ಕೇವಲ ಅಭಿಪ್ರಾಯಿಸ ವ್ಯಕ್ತಪಡಿಸಬಹುದಷ್ಟೇ. ಸ್ವಲ್ಪಮಟ್ಟಿಗೆ ಅದು ಪರ ಅಥವ ವಿರುದ್ಧವಾಗಿ ಮೆಚ್ಚಿಸಬಹುದಷ್ಟೇ. ಇದರಿಂದ ಉತ್ತೇಜಿತರಾಗಿ ಮತ್ತೊಂದು ಇಂತಹದ್ದೇ ಶಕ್ತಿಹೀನ ಬರಹಕ್ಕೆ ತೊಡಗಿಸಿಕೊಳ್ಳಬಹುದಷ್ಟೆ . ಅದು ನಮಗೆ ಶಕ್ತಿ ಕೊಡಲಾರದು. ನಮ್ಮ ಕವಿತೆಯ ದೌರ್ಬಲ್ಯಗಳನ್ನು ಕಂಡು ಹಿಡಿಯಲಾಗದ ಸ್ಥಿತಿಗೆ ತಲುಪಬಹುದು.

ಪ್ರೀತಿಯ ಕವಿಮಿತ್ರರೇ ,ಈ ಸಮಸ್ಯೆಗೆ ಇರುವ ಒಂದೇ ಒಂದು ದಾರಿಯೆಂದರೆ ನಮ್ಮ ನಮ್ಮ ಕವಿತೆಯ ಆಳಕ್ಕಿಳಿದು ಓದಿದಾಗ, ಅಲ್ಲಿ ಕೆಲವು ಪ್ರಶ್ನೆಗಳು ಸಿಗುತ್ತವೆ. ಯಾವ ಕಾರಣಗಳು, ಏಕಾಗಿ ನಮ್ಮನ್ನು ಈ ಕವಿತೆ ಬರೆಯಲು ಪ್ರಚೋದಿಸಿತು? ಇದನ್ನೇ ಪರೀಕ್ಷೆಗೊಳಪಡಿಸಿದಾಗ , ಇದು ನಮ್ಮ ಹೃದಯದಾಳದಲ್ಲಿ ಗಾಢವಾಗಿ ಬೇರು ಬಿಟ್ಟಿರುವ ಗುಪ್ತ ಜೀವ ಸಂಚಲನದಿಂದ ಬರೆಯಲ್ಪಟ್ಟಿದೆಯೇ? ಬರಹಗಾರರಾಗಿ ನೀವು ಬರೆಯಬಾರದೆಂದು ನಿಷೇಧ ಹೇರಿದರೆ ಸಾಯಲು ಸಿದ್ಧರಾಗಬಹುದೇ? ಈ ಮೇಲಿನ ಎಲ್ಲವನ್ನು ಒಂದು ನಿಶ್ಯಬ್ಧ ಪ್ರಶಾಂತ ರಾತ್ರಿಯಲ್ಲಿ ನಮ್ಮನ್ನು ನಾವೇ ಕೇಳಿಕೊಳ್ಳಬೇಕೇನೋ! ನಿಜವಾದ ಸತ್ಯದ ಉತ್ತರಕ್ಕಾಗಿ ಆಳದಲ್ಲಿ ಸಮರ್ಪಣಾಭಾವವಿರಬೇಕು. "ನಾನು ಖಂಡಿತವಾಗಿ ಬರೆಯಬಹುದೆ?". ಈ ಮಾರ್ದನಿಸುವ ಪ್ರಶ್ನೆಗಳನ್ನು ಒಪ್ಪಿ ಸರಳ ವಿಶ್ವಾಸ ಹೊರಹೊಮ್ಮಿದರೆ "ಹೌದು ನಾನು ಖಂಡಿತಾ ಬರೆಯಬೇಕು" ಎಂಬ ಉತ್ತರ ಸಿದ್ಧವಾಗುವುದು. ಅದರ ನಂತರ ಸಿಕ್ಕಿದ ಈ ಉತ್ತರದ ಮೇಲೆ ನಮ್ಮ ಬದುಕನ್ನು ಬೆಳೆಯಲು ಬಿಡಿ. ಈ ಉತ್ತರ ನಮ್ಮ ಅಗತ್ಯಗಳನ್ನು ಪೂರೈಸಲು ಪ್ರಾರಂಭಿಸಬಹುದು . ಬದುಕಿನ ಬಹುಮುಖ್ಯ ಪ್ರಾಪಂಚಿಕ ನಡೆಗಳು ಮತ್ತು ಗೋಚರಿಸಲಾಗದ ಅರ್ಥಪೂರ್ಣ ಘಳಿಗೆಗಳು ಚಿತ್ರಣಗಳ ರೂಪದಲ್ಲಿ ಸಾಕ್ಷ್ಯ ನುಡಿಯಲು ಪ್ರೇರೇಪಿಸುತ್ತದೆ. ಕೆಲವು ಅಸ್ತವ್ಯಸ್ತತೆಗಳು ಮನಸ್ಸಿನಾಳದಲ್ಲಿ ಭಾರವಾಗಿ ತಳವೂರಿ ಹಗುರವಾಗಲು ದಾರಿ ಹುಡುಕಾಡುತ್ತಿರುತ್ತದೆ. ಇದೇ ದಿವ್ಯಾನೂಭೂತಿಯ ನಿಜವಾದ ಘಟ್ಟ. ಹಲವು ಸಮಯಗಳಿಂದ "ಏಕಾಂತಗಳು" ಮಾಡಿದ ತಪಸ್ಸಿಗೆ ಸ್ಪಂದಿಸುವ ಬೆಳಕಿನ ಸಂದರ್ಭ. ಆಂಗ್ಲ ಭಾಷೆಯಲ್ಲಿ "ಮೆಟಫರ್" ಅನ್ನುತ್ತೇವೆ. ವಿಶಾಲ ಭಾವವಿಲ್ಲದೆ, ಪ್ರಕೃತಿ ಮತ್ತು ಸಮಾಜದ ಭಕ್ತಿಯಿಲ್ಲದೆ "ಕೇವಲ ಬರಹಗಾರ"ನಿಗೆ ಈ ಸಿದ್ದಿ ಅಸಾಧ್ಯ .

ಇಲ್ಲಿಂದಲೇ ನಿಜವಾದ ಬರಹದ ನಟನೆ ಆರಂಭವಾಗುವುದು. ಹೇಗೆಂದರೆ, ಪ್ರಕೃತಿಗೆ, ಸಮಾಜಕ್ಕೆ ಹತ್ತಿರವಾಗುವ ವಿಚಾರವನ್ನು ಕಲ್ಪಿಸಿಕೊಳ್ಳಿ. ಯಾವುದನ್ನು ಕಣ್ಣಾರೆ ಕಂಡಿದ್ದೇವೆ, ಅನುಭವಿಸಿದ್ದೇವೆ, ಯಾವುದನ್ನು ಮೆಚ್ಚಿದ್ದೇವೆ, ಎಷ್ಟು ಪಡೆದಿದ್ದೇವೆ ಮತ್ತು ಎಷ್ಟನ್ನು ಕಳೆದುಕೊಂಡಿದ್ದೇವೆ ಇವೆಲ್ಲವನ್ನೂ ನಾವೇ ಪ್ರಪಂಚಕ್ಕೆ ಜನ್ಮ ತಾಳಿದ ಪ್ರಥಮ ವ್ಯಕ್ತಿಯಂತೆ ಅನುಭವಿಸಿ ಮತ್ತು ಅದರಂತೆ ನಟಿಸಬೇಕೇನೋ. ಪ್ರಾರಂಭಿಕ ಹಂತದಲ್ಲಿ ಯಾವುದೇ ಕಾರಣಕ್ಕೂ ಪ್ರೇಮ ಕವಿತೆ ಬರೆಯುವ ಪ್ರಯತ್ನ ಸಲ್ಲದು. ಏಕೆಂದರೆ, ಇದು ದೊಡ್ಡ ಸವಾಲನ್ನು ತಂದೊಡ್ಡುತ್ತದೆ. ಇದಕ್ಕೆ ಉತ್ತುಂಗ ಸ್ಥಿತಿಯ, ಪೂರ್ಣವಾಗಿ ಪಕ್ವಗೊಂಡ ವೈಯಕ್ತಿಕವಾಗಿ ಅಪೂರ್ವತೆಗಳನ್ನು ಉತ್ಪಾದಿಸುವ ಕೆಲವು ಶಕ್ತಿಯ ಅಗತ್ಯವಿದೆ. ಅಥವಾ ಹಲವು ದಿಕ್ಕುಗಳಿಗೆ ಪ್ರತಿಫಲಿಸುವ ಹಲವು ಒಳ್ಳೆಯತನಗಳನ್ನು ಪ್ರತಿನಿಧಿಸುವ ಸಮಾಜದ ಜನರಿಗೆ ವಿಸ್ತರಿಸಿ ಹೋಲಿಸುವ ಅಗತ್ಯವಿದೆ, ಇಲ್ಲಿ ಸಾಮಾಜಿಕ ಪರಿಕಲ್ಪನೆಯ ಎಚ್ಚರವಿರಬೇಕು. ಪ್ರತಿ ದಿನದ ಬದುಕಿನಲ್ಲಿ ಈ ವಿಚಾರಗಳು ಮುತ್ತಿಗೆ ಹಾಕಲು ಹವಣಿಸಬಹುದು ಅಥವಾ ಆಹ್ವಾನಿಸಬಹುದು. ಸುಂದರವಾಗಿ ಕಂಡ ಯಾವುದೇ ವಿಚಾರದಲ್ಲಿ ವಿಶ್ವಾಸವಿದ್ದರೆ ಅದರ ಬಗ್ಗೆ ಬರೆದರೆ ಸೂಕ್ತ. ದುಃಖ, ನಮ್ಮ ಆಶಯಗಳು, ಹಂಚಿಕೊಳ್ಳಬಹುದಾದ ಸ್ಪಷ್ಟ ನುಡಿಗಳ ಬಗ್ಗೆ ಬರೆಯಬೇಕು. ಇವೆಲ್ಲವನ್ನೂ ವಿವರಣೆಗಳೊಂದಿಗೆ ತುಂಬಾ ಸುಡುತ್ತಿರುವ ಮಾತುಗಳಿಂದ ವಿನಯ ಪೂರ್ವಕವಾಗಿ ಒಪ್ಪಿಸಿಕೊಳ್ಳಬೇಕು. ಇದರ ಜೊತೆಗೆ ನಮ್ಮ ಬಗ್ಗೆ ವಿಸ್ತರಿಸುತ್ತಾ, ಸುತ್ತಮುತ್ತಲಿನ ವಿಷಯಗಳನ್ನು ಸೇರಿಸಿ, ಕನಸುಗಳ ಚಿತ್ರಣ ಮತ್ತು ಮಾಸಿ ಹೋಗದ ನೆನಪಿನ ವಸ್ತು ವಿಷಯಗಳು ಬರಹವಾಗಲಿ.

ಜೀವನದಲ್ಲಿ ಅನಗತ್ಯ ವಿಚಾರಗಳು ಬಂದು ಹೋಗಬಹುದು. ಅಥವ ಗೊತ್ತಿಲ್ಲದೆ ಪ್ರಕಟಗೊಳ್ಳಬಹುದು. ಆದರೆ, ಇದಕ್ಕಾಗಿ ಬದುಕನ್ನು ದೂಷಿಸತಕ್ಕದ್ದಲ್ಲ. ನಮ್ಮನ್ನು ದೂಷಿಸಿಕೊಳ್ಳಬೇಕು. ಕವಿ ಎಂದು ಕರೆಸಿಕೊಳ್ಳುವ ಅಮೂಲ್ಯ ಸಂಪತ್ತಿಗೆ ಸೋಲುಗಳು, ವಿಲಾಪಗಳು ಮಾತ್ರ ಸಾಕಾಗುವುದಿಲ್ಲ. ಓರ್ವ ಸೃಜನಶೀಲ ಕಲೆಗಾರನಿಗೆ, ಚಿಂತಕನಿಗೆ ಯಾವುದೇ ಬಡತನವಿಲ್ಲ. ಅವನೊಬ್ಬ ಸಕಲ ಖನಿಜ ಸಂಪತ್ತನ್ನು ಹುದುಗಿಸಿಕೊಂಡ ಭೂಮಿ ಗರ್ಭದಂತಿರುವನು. ಯಾವುದೂ ಗುಪ್ತವಾಗಿ ಮರೆಯಾಗುವುದಿಲ್ಲ ಮತ್ತು ಯಾವುದೇ ವಸ್ತುಗಳು, ಘಟನೆಗಳು, ಘಳಿಗೆಗಳು, ಅನುಭವಗಳು ಮುಖ್ಯವಲ್ಲ ಎಂದೆನಿಸುವುದೇ ಇಲ್ಲ. ಸರ್ವವ್ಯಾಪಿಯಾಗಿ ಎಲ್ಲವೂ ಅವನಿಗೆ ಮುಖ್ಯವಾಗುವುದು. ಅವನು ಕಲೆಗಾರಿಕೆಯಲ್ಲಿ ಯಾವತ್ತಿಗೂ ಶ್ರೀಮಂತ. ಜೈಲಿನಲ್ಲಿಟ್ಟು ಹೊರಗಿನ ಪ್ರಪಂಚದಿಂದ ನಿಮ್ಮ ಜ್ಞಾನದ ಬಾಗಿಲನ್ನು ಮುಚ್ಚಿಟ್ಟರೂ ಮತ್ತೊಮ್ಮೆ ನಿಮ್ಮ ಬಾಲ್ಯ ಕಾಲಾವಸ್ಥೆಗಳ ಕುತೂಹಲಗಳು ಮೊಳೆಕೆಯೊಡೆಯುವುದು. ಇದು ಓರ್ವ ವ್ಯಕ್ತಿ ಗಳಿಸುವ ಅತ್ಯಾದ್ಬುತ ಜೀವನದ ಸಂಪತ್ತು. ನಮ್ಮ ದಿಕ್ಕಿಗೇ ನೋಟವಿರಿಸಿ ನೆನಪುಗಳ ಸ್ಪಷ್ಟತೆಗಳು ಅವುಗಳು ಕುಳಿತುಕೊಂಡ ಮನೆಗಳನ್ನು ಹುಡುಕಾಡಿ ಬಾಗಿಲು ಕಟಕಟಾಯಿಸುವುದು. ಬಹುಕಾಲದಲ್ಲಿ ಕುಸಿದ ಸಂವೇದನೆಗಳು ಪುನರುತ್ಥಾನಕ್ಕೆ ಪ್ರಯತ್ನಿಸುವುದು. ಇಲ್ಲಿ ನಿಮಗೆ ವಿಶ್ವಾಸ ಭರವಸೆಗಳು ಢಾಳಾಗಿ ದೊರೆಯುವುದು ಮಾತ್ರವಲ್ಲ, ನಿಮ್ಮ ಒಂಟಿತನ ವಿಸ್ತಾರವಾಗುತ್ತ ನಿಮ್ಮ ಮನೆಯನ್ನೂ ಆವರಿಸಿ ಮೆಚ್ಚಿಕೊಳ್ಳುವ ಶುಭಾಶಯಗಳು ಮುಂಜಾನೆಯ ನಿಶ್ಯಬ್ಧಕ್ಕೆ ಒಗ್ಗಿಕೊಳ್ಳಬಹುದು. ಹೊರ ಜಗತ್ತಿನ ಗೊಂದಲಗಳು ಬಲುದೂರಕೆ ನಿಧಾನವಾಗಿ ಕಣ್ಣ ಮುಂದೆ ಹಾದು ಹೋಗಬಹುದು.

ಈ ಪರಿಣಾಮಗಳು ಒಳತೋಟಿಯಲ್ಲಿ ಸುತ್ತಿ ತಿರುಗಿ ನಮ್ಮದೇ ಸ್ವಂತ ಪ್ರಪಂಚದಲ್ಲಿ ಮುಳುಗಲು ಪ್ರಯತ್ನಿಸಿದ ಅಮೂಲ್ಯ ಗಳಿಗೆಗಳು ಕವಿತೆಯನ್ನು ಪ್ರಚೋದಿಸುತ್ತದೆ. ಬರೆದು ಮುಗಿಸಿದ ಮೇಲೆ "ನಾನು ಬರೆದ ಕವಿತೆ ಚೆನ್ನಾಗಿದೆಯೇ" ಎಂದು ಯಾರ ಅಭಿಪ್ರಾಯವನ್ನು ಕೇಳುವ ಮನಸ್ಥಿತಿ ನಮಗೆ ಇರುವುದಿಲ್ಲ. ಈ ಕವಿತೆಗಳನ್ನು ಪತ್ರಿಕೆಗಳು, ಸಾಪ್ತಾಹಿಕಗಳು, ಅಂತರ್ಜಾಲ ಈ-ಮಾಧ್ಯಮಕ್ಕೆ ಕಳುಹಿಸುವ ಆಸಕ್ತಿಯನ್ನೂ ನಾವು ತೋರುವುದಿಲ್ಲ. ಏಕೆಂದರೆ, ನಾವು ಬರೆದ ನಮ್ಮದೇ ಕವಿತೆಯಲ್ಲಿ ನಮ್ಮದೇ ಧ್ವನಿ ಕೇಳುತ್ತಿರುತ್ತವೆ. ಅದರಲ್ಲಿ ಪ್ರಾಕೃತ್ತಿಕವಾಗಿ ಸ್ವಾಧೀನಪಡಿಸಿಕೊಂಡ ನಮ್ಮ ಬದುಕಿನ ಒಂದು ಅಂಶವನ್ನು ಕಾಣುತ್ತೇವೆ. ಜೀವಂತ ಇರುವುದಕ್ಕಾಗಿಯೇ ಕಲೆಯ ಒಂದು ತುಣುಕು ಹುಟ್ಟಿದ್ದರೆ, ಅದು ಉತ್ತಮ. ಅದೇ ಅದರ ಮೂಲ, ಮಾನದಂಡ ಮತ್ತು ಅದಲ್ಲದೆ ಬೇರೆ ಯಾವುದೂ ಅಲ್ಲಿಲ್ಲ.

ಕವಿ ಮಿತ್ರರೇ, ಆಳದಾಳಕ್ಕೆ ಹೋಗಿ ನಮ್ಮ ಚಿಂತನೆಯ ವಿಸ್ತಾರವನ್ನು ನಮ್ಮದೇ ಸಾಮರ್ಥ್ಯದ ಅಳತೆಗೋಲುಗಳಿಂದ ಅಳತೆ ಮಾಡಿ, ಅಲ್ಲಿಂದ ಮುಂದಕ್ಕೆ ಬದುಕಿನ ಅತ್ಯಮೂಲ್ಯ ವಸಂತಗಳು ಒಂದೊಂದಾಗಿ ತೆರೆದುಕೊಳ್ಳಲು ಆರಂಭಿಸಬಹುದು. ನಾವು ಖಂಡಿತವಾಗಿ ಬರೆಯಬೇಕೋ ಬೇಡವೋ ಎಂಬ ಪ್ರಶ್ನೆಗಳಿಗೆ ಈ ಮೂಲಗಳಿಂದಲೇ ಉತ್ತರ ದೊರಕುವುದು. ಹೇಗೆಂದರೆ, ಯಾವುದೇ ಅಂದಾಜಿಗೆ ಸಿಗದೆ, ಯಾರದ್ದೇ ಮುಲಾಜಿಗೆ ಸಿಗದೆ ಇದು ನಮ್ಮನ್ನು ಧ್ವನಿಸುತ್ತದೆ. ನಮ್ಮನ್ನು ಬರಹಗಾರರೆಂದು ಕರೆಸಿಕೊಳ್ಳಲು ನಮ್ಮದೇ ಧ್ವನಿ ನಮಗೆ ಒಪ್ಪಿಗೆ ಕೊಡಬಹುದು. ಇದರ ಎಲ್ಲಾ ಆಗು ಹೋಗುಗಳಿಗೆ ಭಾಧ್ಯಸ್ಥರಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇದರ ಪ್ರಸಿದ್ದಿ-ಗಟ್ಟಿತನಕ್ಕೆ ಒಗ್ಗಿಕೊಳ್ಳಬೇಕು. ಪರಿಣಾಮಗಳು ನಮಗೆ ಗೊತ್ತಿಲ್ಲದಂತೆ ಅತೀ ಎತ್ತರಕ್ಕೆ ಕೊಂಡೊಯ್ಯಬಹುದು. ಓರ್ವ ಸೃಜನಶೀಲ ಕಲೆಗಾರನಿಗೆ ಖಂಡಿತವಾಗಿ ಅವನದ್ದೇ ಆದ ಒಂದು ಪ್ರಪಂಚವಿರುತ್ತದೆ ಮತ್ತು ಪ್ರಕೃತ್ತಿಯಲ್ಲಿ ಪ್ರಭಾವ ಬೀರುವ ಮತ್ತು ಹಾದು ಹೋಗುವ ಎಲ್ಲಾ ನಡೆಗಳಲ್ಲಿ, ಕ್ಷಣಗಳಲ್ಲಿ ಸ್ವತಃ ಹುಡುಕಾಟ ನಡೆಸುತ್ತಿರುತ್ತಾನೆ.

ಹೃದಯದಾಳದ ಏಕಾಂತದ ಗುಪ್ತ ಸ್ಥಳದಲ್ಲಿ ನಮ್ಮ ಪ್ರಾಮಾಣಿಕತೆ ಖಂಡಿತವಾಗಿ ಕವಿಯೋರ್ವನನ್ನು ಗುರುತಿಸಿ ನಮಗೆ ಒಪ್ಪಿಸುವುದು. ಆದರೆ ಒಂದರ್ಥದಲ್ಲಿ ಅದಿಲ್ಲದೆಯೂ ಅವನು ಬರಹಗಾರನಾಗಿ ಜನರನ್ನು ತನ್ನೆಡೆಗೆ ಕೇಂದ್ರೀಕರಿಸುವ ಜಾಯಮಾನಕ್ಕೆ ಒಗ್ಗಿಸಿಯೂ ಬದುಕಬಹುದು.ಆದಾಗ್ಯೂ, ಇದರ ಪ್ರಕ್ರಿಯೇ ಒಳಮುಖವಾಗಿ ತಿರುಗಿಸಿಕೊಳ್ಳಬೇದ್. ಏಕೆಂದರೆ, ನಿಮ್ಮ ಬರಹ ಟೊಳ್ಳಾಗಬಾರದು. ನಿಸ್ಸಂಶಯವಾಗಿ, ಬದುಕು ಅದರದ್ದೇ ಆದ ಸ್ವಂತ ದಾರಿಯನ್ನು ಕಂಡುಕೊಳ್ಳುತ್ತದೆ. ಇದು ಮಾತ್ರ ಬೆಲೆ ಕಟ್ಟಲಾಗದ ಮತ್ತು ಶ್ರೀಮಂತ ಆಸ್ತಿಯೊಂದನ್ನು ನಿರ್ಮಿಸಿಕೊಡುತ್ತದೆ.

ಹೊರ ಪ್ರಪಂಚದಲ್ಲಿ ನಾವುಇಣುಕುವುದಾದರೆ, ಶ್ರೇಷ್ಠ ಸೂಕ್ಷ್ಮಗಳು ಎಡತಾಕುವುದು ಮತ್ತು ನಾವು ಹಾಕುವ ಪ್ರಶ್ನೆಗಳಿಗೆ ಹೊರಗಿನಿಂದಲೇ ಉತ್ತರ ಲಭ್ಯವಾಗಬಹುದು. ಕವಿತೆಯ ದಿವ್ಯಾನೂಭೂತಿ ಎಂದರೆ ತಪಸ್ಸು ಮಾತ್ರ. ಕಾಡುಗಲ್ಲು ಶಿಲ್ಪವಾಗುವುದು ಅಷ್ಟು ಸುಲಭವಲ್ಲ. ಶಿಲ್ಪವನ್ನು ನೋಡಿದ ಮಂದಿಯನ್ನು ಅತ್ಯಾಶ್ಚರ್ಯಪಡಿಸುವ ಕಲೆ ನಟನೆಯೂ ಅಲ್ಲ. ಅದೊಂದು ತೋರುಗಾಣಿಕೆಯೂ ಅಲ್ಲ. ಅದೇ ಬರಹದ ಮೂಲ.

ಇತೀ ನಿಮ್ಮ ವಿಶ್ವಾಸಿ
- ರವಿ ಮೂರ್ನಾಡು


[ಮೂಲಬರಹ: ರವಿ ಮೂರ್ನಾಡು, ಸಾಂದರ್ಭಿಕ ತಿದ್ದುಪಡಿ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Tuesday 29 October 2013

ದಿನಕರನ ದಾರಿಯ ಬೆಳಕನರಸುತ್ತಾ!

'ನಾನು ಬರೆಯುತ್ತೇನೆ. ನನ್ನ ಬರಹಗಳ ಮೂಲಕ ಸಮಾಜದಲ್ಲಿ ಬದಲಾವಣೆಯ ಅಲೆ ಎಬ್ಬಿಸುತ್ತೇನೆ' ಎನ್ನುವ ಇಂದಿನ ಬಹುತೇಕ ಸಾಹಿತಿಗಳು ಎತ್ತುವ ಧ್ವನಿ ಪ್ರಶಸ್ತಿ ಗಳಿಸಲು ಸಲ್ಲಿಸುವ ಅರ್ಜಿಯಷ್ಟೇ ಆಗಿರುವುದು ವಿಪರ್ಯಾಸ. ದೇಶ ಸ್ವಚ್ಛ ಮಾಡಲು ಹೋಗುವ ಇಂಥ ಹಲವರು ತಮ್ಮ ಮನೆಯಲ್ಲಿ, ಮನಸ್ಸಲ್ಲಿ ಇರುವ ಕೊಳಕನ್ನು ಮೊದಲು ಸ್ವಚ್ಛಗೊಳಿಸಬೇಕೆನ್ನುವುದನ್ನು ಅರಿಯದಿರುವುದು ಆಶ್ಚರ್ಯದ ಸಂಗತಿ. ಸಮಾಜವನ್ನು ತಿದ್ದುವ ಮೊದಲು ಸಾಹಿತಿ ತನ್ನೊಳಗೆ ತಾನು ಮಂಥನ ಮಾಡಿಕೊಂಡು ತನ್ನನ್ನು ತಾನು ತಿದ್ದಿಕೊಂಡು ಆ ಅನುಭವವನ್ನು ಬರಹವಾಗಿಸುವ ದಿಶೆಯಲ್ಲಿ ಪ್ರಯತ್ನಿಸಿದರೆ ಅದು ಹೆಚ್ಚು ನೈಜ ಮತ್ತು ಪ್ರಭಾವಶಾಲಿಯಾಗಿರುವುದರಲ್ಲಿ ಸಂಶಯವಿಲ್ಲ. ಇಂಥ ಅಪೂರ್ವ ಸಾಹಿತಿಗಳಲ್ಲಿ ಮೇರು ಸ್ಥಾನದಲ್ಲಿ ನಿಲ್ಲುವವರೆಂದರೆ ದಿನಕರ ದೇಸಾಯಿ. "ಚೌಪದಿಯ ಬ್ರಹ್ಮ" ಎಂದು ಪ್ರಖ್ಯಾತರಾಗಿದ್ದು ಬಿಟ್ಟರೆ, ಕನ್ನಡದ ಬಹುತೇಕರಿಗೆ ಇವರ ಬಗ್ಗೆ ಜಾಸ್ತಿ ತಿಳಿದಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. 

ಅಂತಹ ಘನ ವ್ಯಕ್ತಿತ್ವದ 'ಚೌಪದಿಯ ಬ್ರಹ್ಮ'ನ ಬದುಕು ಮತ್ತು ಬರಹಗಳನ್ನು ಉದಾಹರಿಸುತ್ತ, ಒಬ್ಬ ಸಾಹಿತಿಯ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಅವರದೇ ಆದ 'ನನ್ನ ಬರವಣಿಗೆ' ಎಂಬ ಚುಟುಕನ್ನೆತ್ತಿಕೊಂಡು, ಅವರ ಬದುಕು, ಬರವಣಿಗೆಯ ಒಳತೋಟಿಗಳನ್ನು ಪರಿಚಯ ಮಾಡಿಸುವುದು ಸೂಕ್ತವಾಗಬಹುದು. 

ಅನುಭವದ ಹೊರಗೆ ನಾ ಬರೆಯಲಿಲ್ಲಣ್ಣ
ಹಚ್ಚಲಿಲ್ಲವೊ ಮತ್ತೆ ಯಾವುದೂ ಬಣ್ಣ 
ಬರೆದದ್ದು ನುಡಿದದ್ದು ಎಲ್ಲವೂ ಸಾದಾ 
ಹೀಗಾಗಿ ಮನದೊಳಗೆ ಹೋಗುವುದು ಸೀದಾ

ಅನುಭವದ ಹನಿಹನಿಗಳನ್ನೇ ಬರಹಕ್ಕಿಳಿಸಿ, ಬಣ್ಣ ಬಳಿಯದ ಬರವಣಿಗೆಯನ್ನೇ ತನ್ನ ಉಸಿರಾಗಿಸಿಕೊಂಡ ದೇಸಾಯಿಯವರು ಕನ್ನಡ ನಾಡು ಕಂಡ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರಾಗಿ "ಬದುಕನ್ನೇ ಬರಹವಾಗಿಸಿ", "ಬರೆದಂತೆ ಬದುಕಿ", "ಬರಹಗಳಿಂದ ಬದುಕಲು ಕಲಿಸಿ' "ತಮ್ಮ ಬದುಕು ಅನ್ಯರ ಬರಹಕ್ಕೆ ಪ್ರೇರಣೆಯಾಗುವಂತೆ ಬದುಕಿದವರು" ಕೂಡ. ಇವರ ಸಾಹಿತ್ಯವೆಷ್ಟು ಸರಳ, ನೇರ, ಶುದ್ಧವೋ ಅಷ್ಟೇ ಶುದ್ಧತೆಯನ್ನು ತನ್ನ ಬಾಳಿನಲ್ಲೂ ಅಳವಡಿಸಿಕೊಂಡವರೂ ಕೂಡ.

ಅಂದು ಉತ್ತರ ಕನ್ನಡ ಜಿಲ್ಲೆಯ ಎಷ್ಟೋ ಹಳ್ಳಿಗಳಲ್ಲಿ ಓದಲು ಹತ್ತಿರದಲ್ಲಿ ಹೈಸ್ಕೂಲುಗಳೇ ಇಲ್ಲದ ಕಾಲದಲ್ಲಿ ಮಕ್ಕಳು ಪ್ರಾಥಮಿಕ ವ್ಯಾಸಂಗ ಮುಗಿಸಿ ಹೋಟೆಲ್ ಕೆಲಸಕ್ಕೋ , ಕೂಲಿ ಕೆಲಸಕ್ಕೋ ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಬದಲಾವಣೆಯ ಅಲೆ ಎಬ್ಬಿಸಿದವರು ಶ್ರೀಯುತ ದಿನಕರರು. "ಕೆನರಾ ವೆಲ್ಫೇರ್ ಟ್ರಸ್ಟ್"ನ ಮೂಲಕ, ಉತ್ತರ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ಜನತಾ ವಿದ್ಯಾಲಯಗಳನ್ನು ಸ್ಥಾಪಿಸಿ, ತಾವು ಕಟ್ಟಿದ ಶಾಲೆಗಳಿಗೆ ಆಗಾಗ ಹೋಗಿ ಮಕ್ಕಳ ಜೊತೆ ಕುಣಿದು, ಕುಪ್ಪಳಿಸಿ ಬೆರೆತು, ಅಲ್ಲಿನ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಿ ಶಾಲೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡರು. ತನ್ಮೂಲಕ ಸಾವಿರಾರು ಮಕ್ಕಳ ಜೀವನ ರೂಪಿಸುವಂಥ ಕೈಂಕರ್ಯವನ್ನು ನಡೆಸಿದ ಶಿಲ್ಪಿಯಾದವರು. ಇವೆಲ್ಲದರ ನಡುವೆಯೂ ದಿನಕರರು ಶಾಸಕರಾಗಿ ಉತ್ತರ ಕನ್ನಡದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜಿಲ್ಲೆಗೊಂದು ಹೊಸ ರೂಪ ಕೊಟ್ಟ ರೂವಾರಿ ಕೂಡ. 'ಜನಸೇವಕ' ಎಂಬ ಪತ್ರಿಕೆಯ ಮುಖೇನ ಜನಸಾಮಾನ್ಯರಿಗೆ ಸಾಮಾಜಿಕ ಮತ್ತು ರಾಜಕೀಯದ ಅರಿವು ಮೂಡಿಸುವ ಪ್ರಯತ್ನದ ಜೊತೆ, ಜಾತಿ ವ್ಯವಸ್ಥೆಯ ವಿರುದ್ಧ ಕೂಡ ಧ್ವನಿಯೆತ್ತಿದರು. ಅವರ ಅವಿರತ ಶ್ರಮವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಉತ್ತರ ಕನ್ನಡದ ಹಾಲಕ್ಕಿ ಜನಾಂಗದವರ ಅಭಿವೃದ್ಧಿಗಾಗಿಯೂ ಮುಡಿಪಾಗಿದ್ದುದು ಕೂಡ ನಿಸ್ವಾರ್ಥ ಮನೋಭಾವದ ದ್ಯೋತಕ.

ಇವೆಲ್ಲದಕ್ಕನುರೂಪವಾಗಿ ಇವರ ಸಾಹಿತ್ಯ ಕೃಷಿಯೂ ನಳನಳಿಸುತ್ತಿತ್ತು. ಪ್ರತಿಯೊಂದು ಕ್ಷೇತ್ರದಲ್ಲಿ ತನಗೆದುರಾದ ದೈನಂದಿನ ಅನುಭವಗಳನ್ನೇ ಬರಹವಾಗಿಸಿದರು. ಹಲವಾರು ಬಾರಿ ಸ್ವ-ವಿಮರ್ಶೆ ಅಂದರೆ ತನ್ನೊಳಗಿನ ಹುಳುಕುಗಳನ್ನೇ ಹಲವು ಬಾರಿ ಟೀಕಿಸಿಕೊಂಡ ಈ ಧೀಮಂತ ಬರಹಗಾರ, ಪರಿವರ್ತನೆ ನಮ್ಮಿಂದ ಶುರುವಾಗಬೇಕೆಂಬ ಧೃಡ ಸಂದೇಶವನ್ನು ಸಮಾಜಕ್ಕೆ ನೀಡುವಲ್ಲಿ ಯಾವ ಹಿಂಜರಿಕೆಯನ್ನೂ ಮಾಡಲಿಲ್ಲ. ಯಾವುದೇ ಕ್ಲಿಷ್ಟ ಭಾವ ಅಥವಾ ಪದಗಳಿಲ್ಲದೆ ಅತಿ ಸಾಮಾನ್ಯನಿಗೂ ಅರ್ಥವಾಗುವಂಥ, ಅದ್ಭುತ ಸತ್ವಯುತ ಸಾಹಿತ್ಯ ಶೈಲಿಯಿಂದ ಎಲ್ಲರ ಮನದಲ್ಲಿ ನೆಲೆಸಿದವರು. ಬರೀ ಚುಟುಕುಗಳಷ್ಟೇ ಅಲ್ಲದೆ ಎಷ್ಟೋ ಅದ್ಭುತ ಭಾವಗೀತೆಗಳನ್ನು ಸಹ ಕನ್ನಡಕ್ಕೆ ಕೊಟ್ಟಿದ್ದಾರೆ. ಚುಟುಕು ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಈ ಕವಿಯ ಬಗ್ಗೆ ಬರೆಯುತ್ತಾ "ಆಡು ಮುಟ್ಟದ ಸೊಪ್ಪಿಲ್ಲ, ದಿನಕರರ ಚುಟುಕಿಗೆಟಕದ ವಿಷಯಗಳಿಲ್ಲ" ಎಂದರೆ ತಪ್ಪಾಗಲಾರದು. ದಿಟ್ಟವಾಗಿ, ಯಾವುದೇ ಮುಲಾಜಿಲ್ಲದ, ಸರಳವಾಗಿರುವ ಇವರ ಚುಟುಕುಗಳು ನೇರವಾಗಿ ನಮ್ಮ ಎದೆಗೆ ನಾಟುವಂಥವು. 'ಜೀವನದ ಆಸೆ' ಎಂಬ ಈ ಚುಟುಕು ಅವರ ಬದುಕು ಮತ್ತು ಅವರ ಸಾಹಿತ್ಯದ ಆಶಯವನ್ನು ತಿಳಿಸುತ್ತದೆ.

ನಾನು ಬರೆಯುವುದಿಲ್ಲ ಕೇವಲ ತಮಾಷೆ 
ಈ ಚುಟುಕಗಳು ನನ್ನ ಜೀವನದ ಆಸೆ 
ನನ್ನ ಪ್ರಾರ್ಥನೆಯ ತುಸು ಕೇಳು, ಜಗದಂಬೆ 
ಮಾನವನು ನರನಾಗಿ ಬಾಳಬೇಕೆಂಬೆ

ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿದ ಧೀಮಂತ ವ್ಯಕ್ತಿ, ಅದೆಷ್ಟೋ ಜನರ ಬದುಕಿಗೆ ದಾರಿದೀಪವಾದ ಶಕ್ತಿ "ದಿನಕರ ದೇಸಾಯಿ''. ಇವರ ಬದುಕಿನ ಮತ್ತು ಸಾಹಿತ್ಯದ ಅಧ್ಯಯನ ನಮ್ಮ ಮೇಲೆ ಗಾಢ ಪ್ರಭಾವ ಬೀರುವುದಂತೂ ಖಂಡಿತ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸ್ಥಾನದಲ್ಲಿ ಇವರ ಹೆಸರನ್ನು ನಾವು ಕಾಣದಿದ್ದರೂ, ಅದೆಷ್ಟೋ ಜನಸಾಮಾನ್ಯರ ಮನದಲ್ಲಿ ಇವರ ವ್ಯಕ್ತಿತ್ವ ಮತ್ತು ಇವರ ಸಾಹಿತ್ಯ ಮೇರು ಸ್ಥಾನದಲ್ಲಿವೆ. ಇವರ ಸಾಹಿತ್ಯವೇ ಬದುಕು. ಬದುಕೇ ಸಾಹಿತ್ಯ. ಎರಡೂ ನೇರ ನಿಷ್ಠುರ. ಓಲೈಕೆಯ ಹಂಗಿರಲಿಲ್ಲ, ಮನಸ್ಸಲ್ಲಿ ಒಂದನ್ನು ಇಟ್ಟುಕೊಂಡು, ಮತ್ತೇನೋ ಬರೆದು ಪ್ರಶಸ್ತಿ, ಪ್ರಚಾರ ಗಿಟ್ಟಿಸಿಕೊಳ್ಳುವ ದುರಾಸೆ ಇರಲಿಲ್ಲ. ಏನು ಅನಿಸಿದೆಯೋ ಅದನ್ನು ಅನಿಸಿದ ಹಾಗೇ ಚೂರೂ ಬೆಣ್ಣೆ ಹಚ್ಚದೆ ಬರೆಯುವುದಕ್ಕೆ ಎಳ್ಳಷ್ಟೂ ಭಯವಿರಲಿಲ್ಲ. 

ತನ್ನ ನಿಶ್ಚಲ ದೇಹವೂ ಮಣ್ಣಲಿ ಕರಗಿ ಗೊಬ್ಬರವಾಗಿ ಚಿಗುರುವ ಬತ್ತಕೆ ಉಸಿರಾಗಲಿ, ಹಸಿರು ಪಸರಿಸಲಿ ಎನ್ನುವ ಮನದಿಂಗಿತವನ್ನು ಹೊತ್ತಿದ್ದ ದೇಸಾಯಿಯವರ ಈ ಭಾವಗೀತೆಯ ತುಣುಕಿನ ಆಶಯವು ನಮ್ಮ ನಿಮ್ಮೆಲ್ಲರಲ್ಲೂ ಮೂಡಲಿ. 

"ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ 
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ 
ಬೂದಿ ಗೊಬ್ಬರವಾಗಿ ತೆನೆಯೊಂದು ನೆಗೆದು ಬರೆ 
ಧನ್ಯವಾಯಿತು ಹುಟ್ಟು ಸಾವಿನಲ್ಲಿ"

ಸರ್ವರಿಗೂ ಮುಂಬರುವ ಕನ್ನಡ ಹಬ್ಬದ ಶುಭಾಶಯಗಳೊಂದಿಗೆ,

ಪರೇಶ್ ಸರಾಫ್, ಬೆಂಗಳೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Monday 30 September 2013

ನಡೆಯಂತಿರಲಿ ನುಡಿಯು, ನುಡಿದಂತಿರಲಿ ನಡೆಯು!

ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು, ಸ್ಫಟಿಕದ ಸಲಾಕೆಯಂತಿರಬೇಕು, ಲಿಂಗಮೆಚ್ಚಿ ಅಹುದಹುದೆನಬೇಕು ಎಂದು ಬಸವಣ್ಣನವರು ಅಂದು ಹೇಳಿದ್ದನ್ನು ನಾವು ಅಳವಡಿಸಿಕೊಂಡಿದ್ದೇವೆಯೇ ಎನ್ನುವ ಪ್ರಶ್ನೆಯೊಂದು ಎದುರಾಗಿದ್ದು ಇತ್ತೀಚಿನ ಹತ್ತು ಹಲವು ಬರಹಗಳನ್ನು ಓದಿದಾಗ ಮತ್ತು ಕೆಲವು ಬರಹಗಾರರ ನಡೆಗಳನ್ನು ಗಮನಿಸಿದಾಗ. ನುಡಿ ಎಂದರೆ ಅದು ಕೇವಲ ನಾಲಗೆಯನ್ನು ಬಳಸಿಕೊಂಡು ಬಾಯಿಯ ಮೂಲಕ ಹೊರಹಾಕುವ ಶಬ್ದಕ್ಕೆ ಮಾತ್ರ ಸೀಮಿತಗೊಳಿಸದೆ, ಬರಹಗಾರರೆಂಬ ಪಟ್ಟಗಿಟ್ಟಿಸಿಕೊಳ್ಳಲು ಕಾತುರರಾಗಿರುವ ನಾವು, ನಮ್ಮ ಬರಹಗಳಲ್ಲೂ ಮೂಡಿಬರುವ ಅಕ್ಷರಗಳೂ ಕೂಡ ನುಡಿಗಳು ಎಂಬುದನ್ನು ಮನವರಿಕೆ ಮಾಡಿಕೊಂಡಿಲ್ಲ ಎಂದರೆ ತಪ್ಪಾಗಲಾರದೇನೋ. ಹೌದು, ನಿಜವಾಗಿ ಹೇಳಬೇಕೆಂದರೆ ಬರಹಗಾರನ ಬರಹವು ಒಂದು ದಿಕ್ಕಾಗಿ, ಬದುಕು ಇನ್ನೊಂದು ದಿಕ್ಕಾಗಿ ಒಂದಕ್ಕೊಂದು ಸಾಮ್ಯವಿಲ್ಲದೆ, ನಾಣ್ಯದ ಎರಡು ಮುಖಗಳಿದ್ದಂತೆ ಒಂದನ್ನೊಂದು ಸಂದರ್ಶಿಸುವುದೇ ಇಲ್ಲದಂತಾಗಿದೆ. 

ಹಾಗಂತ ಎಲ್ಲರ ಬರಹಗಳೂ ಮೇಲಿನ ಪ್ರವರ್ಗದಲ್ಲಿವೆ ಎಂಬುದಾಗಿ ಹೇಳುತ್ತಿಲ್ಲ. ಅಥವಾ ಎಲ್ಲಾ ಬರಹಗಳೂ ಅದೇ ನಿಟ್ಟಿನಲ್ಲಿವೆ ಎಂಬ ವಾದವಲ್ಲ. ಕೆಲವೊಮ್ಮೆ ಬರಹದ ಮೂಲಕ ಕಾಲ್ಪನಿಕ ಸನ್ನಿವೇಶಗಳನ್ನು ಕೂಡ ಚಿತ್ರಿಸಬೇಕಾಗಿ ಬರುವುದರಿಂದ ಆ ಕಲ್ಪನೆಗಳನ್ನೇ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಸಾಧ್ಯ. ಅವು ಕಲ್ಪನೆಗಷ್ಟೇ ಸೀಮಿತ. ಆದರೆ ಇಂತಹ ಕಲ್ಪನೆಗಳನ್ನು ಓದಿದ ತಕ್ಷಣ ಇವು ವಾಸ್ತವದಿಂದ ದೂರವಿರುವುದನ್ನು ಮನಗಾಣಬಹುದು. ಈ ರೀತಿಯ ಭ್ರಮಾಲೋಕದ ಭಾವಗಳನ್ನು ಹೊರತುಪಡಿಸಿ ನುಡಿಯುವುದಾದರೆ, ಬರಹಗಾರನೊಬ್ಬ ಸಮಾಜವನ್ನು ತಿದ್ದುವ ಸಲುವಾಗಿ, ಪದೇ ಪದೇ ಸಮಾಜಕ್ಕೆ ಹಿತನುಡಿಯನ್ನು ಸಾರುವ ಅಂಶಗಳನ್ನೋ, ಉಪದೇಶಗಳನ್ನೋ, ತತ್ತ್ವಗಳನ್ನೋ ತನ್ನ ಬರಹದ ಮೂಲಕ ವ್ಯಕ್ತಪಡಿಸುವ ಮೊದಲು ಅಂತಹ ತತ್ತ್ವ, ಅಥವಾ ಸಾರ ತನ್ನೊಳಗೆಷ್ಟಿದೆ, ತಾನು ಎಷ್ಟರ ಮಟ್ಟಿಗೆ ಅವುಗಳನ್ನು ಪರಿಪಾಲಿಸುತ್ತೇನೆ ಎನ್ನುವುದು ಗಣನೀಯ ಪಾತ್ರವಹಿಸುತ್ತದೆ. 

ನಡೆದಂತೆ ನುಡಿವ, ನುಡಿದಂತೆ ನಡೆವ ವಿಷಯವನ್ನೆತ್ತಿಕೊಂಡಾಗ "ಶಂಖದಿಂದ ಬಂದರಷ್ಟೇ ತೀರ್ಥ" ಅನ್ನುವ ಮಾತು ನೆನಪಾಗುತ್ತದೆ. ಹೊರಪ್ರಪಂಚಕ್ಕೆ "ಶಂಖ" ಸುಂದರವಾಗಿ ಕಂಡರೂ, ಅದರೊಳಗೆ ತುಂಬಿರುವ ತೀರ್ಥ ಶುದ್ಧವಾಗಿದ್ದರೂ, ಶಂಖ ಶುಚಿಯಾಗಿರದಿದ್ದರೆ ಬರುವ ತೀರ್ಥವೂ ದುರ್ಗಂಧವೇ ತಾನೇ? ಆ ತೀರ್ಥ ಶುಚಿಯಾಗಿ ಇನ್ನೊಬ್ಬರ ಅಂಗೈ ಸೇರಿ ಪ್ರಸಾದ ರೂಪದಲ್ಲಿ ಸೇವನೆಗೆ ಕೊಡಬೇಕೆಂದರೆ ಮೊದಲು ಶುಚಿಯಾಗಿರಬೇಕಾದದ್ದು ಶಂಖ. ದಾನ ಧರ್ಮದ ಬಗೆಗೋ, ಮಾನವೀಯತೆಯ ಬಗೆಗೋ ತನ್ನ ಬರಹಗಳಲ್ಲಿ ಅರುಹಿ, ತನ್ನಲ್ಲಿರುವ ಅಪಾರ ಸಂಪತ್ತಿನಲ್ಲಿನ ಒಂದು ರೂಪಾಯಿಯನ್ನಾದರೂ ತನ್ನ ಜೀವಮಾನದಲ್ಲಿ ನೊಂದವರಿಗೆ/ಬಡಬಗ್ಗರಿಗೆ ಕೊಡಲು ಹಿಂಜರಿವವರ ಬರಹಗಳೆಲ್ಲವೂ ಯಾವ ಸಾರ್ಥಕ್ಯವನ್ನು ಪಡೆಯಬಹುದು? ತಾನು ಯಾರಿಗೂ ಕಾಣದಂತೆ ಒಳಗಿಂದೊಳಗೆ ಒಂದು ರೂಪದಲ್ಲಿದ್ದು, ಹೊರಜಗತ್ತಿಗೆ 'ಬುದ್ಧ'ನಾಗಿ ತೋರ್ಪಡಿಸಿಕೊಳ್ಳುವ ಚಪಲವಿದ್ದರೆ ಅದು ಸಾಸಿವೆಕಾಳಿನಷ್ಟು ಗಾತ್ರದ ಮೌಲ್ಯವನ್ನೂ ಕೊಡಮಾಡದು. ಆ ಬರಹವು ಸತ್ವದಲ್ಲಿ, ತತ್ತ್ವದಲ್ಲಿ 'ಶೂನ್ಯ' ಸಂಪಾದನೆಯಾದೀತೇ ಹೊರತು 'ಮೇರು' ಎನಿಸಲಾರದು.

ಹಾಗಾಗಿ ಬರಹಗಾರ ತಾನು ಸಮಾಜದ ಸುಧಾರಣೆಗಾಗಿ, ಸಾಮಾಜಿಕ ಸನ್ನಿವೇಶಗಳ ಗೊಂದಲಗಳನ್ನೋ ಅಥವಾ ಸಮಾಜದ ದುರ್ನಡತೆಯನ್ನೋ ತಿದ್ದಬೇಕೆನ್ನುವ ಮನಸ್ಥಿತಿಯಲ್ಲಿ ಬರಹದ ಮೂಲಕ ತಾನು ವ್ಯಕ್ತಪಡಿಸುವ 'ಉಕ್ತಿಗಳು' ವಸ್ತುನಿಷ್ಠ ಹಾಗೂ ಯಾವುದೇ ಒಳಕಶ್ಮಲಗಳಿಲ್ಲದೇ ಸಜ್ಜನಿಕೆಯಿಂದ ಅರುಹಿದಂತವು ಎನ್ನುವ ಅಂಶವನ್ನು ರುಜುವಾತು ಪಡಿಸುವುದಾದಲ್ಲಿ ಅಂತಹ ಉಕ್ತಿಗಳು 'ಮುತ್ತಿನ ಹಾರವೋ, ಮಾಣಿಕ್ಯದ ದೀಪ್ತಿಯೋ ಆದೀತು. ಸ್ಪಷ್ಟತೆಯನ್ನೂ ಹೊಂದಿ, ಸ್ಪಟಿಕದ ಸಲಾಕೆಯಂಥ ಗಾಂಭೀರ್ಯವನ್ನೂ ಹೊಂದೀತು. 

ಒಟ್ಟಿನಲ್ಲಿ ನಡೆಯೊಂದು, ನುಡಿಯುವುದಿನ್ನೊಂದಾಗದೆ, ಎರಡರ ನಡುವೆ ಸಾಮರಸ್ಯವಿದ್ದರೆ ಸಾರವಿದ್ದೀತು ಸಕಲ ಬರಹದೊಳಗೂ!

ವಂದನೆಗಳೊಂದಿಗೆ,
ಶಿರ್ವ ಪುಷ್ಪರಾಜ್ ಚೌಟ
ಬೆಂಗಳೂರು
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Thursday 29 August 2013

ಬರಹವೆಂಬ ನುಡಿತೋರಣಕೆ 'ಶೀರ್ಷಿಕೆ 'ಎಂಬ ಚಿತ್ತಾಕರ್ಷಕ ನಾಮದ ಬಲವೊಂದಿದ್ದರೆ ಸಾಕೇ?

ಇತ್ತೀಚೆಗೆ ಅಂತರ್ಜಾಲ ತಾಣದಲ್ಲಿಯೋ ಅಥವಾ ನಮ್ಮ ಇತರೇ ಮಾಧ್ಯಮಗಳಲ್ಲಿಯೋ ಕಂಡುಬರುತ್ತಿರುವ ಒಂದು ಸೂಕ್ಷ್ಮವನ್ನು ನಾವೆಲ್ಲರೂ ಗಮನಿಸಿರಬಹುದೆಂದಾದರೆ ಅದು ಶೀರ್ಷಿಕೆ. ಯಾವುದೇ ಸುದ್ದಿ ಅಥವಾ ಬರಹಗಾರನೊಬ್ಬನ ರಚನೆಗೆ ಅವರು ಕೊಡುವ ಶೀರ್ಷಿಕೆ ಹೆಚ್ಚು ಮಹತ್ವ ಪಡೆಯುತ್ತಿದೆಯೇನೋ ಎಂದನಿಸುತ್ತಿರಬಹುದು. ಶೀರ್ಷಿಕೆಗೆ ಇರುವ ಮಹತ್ವವನ್ನು ಅಲ್ಲಗಳೆಯದೇ ಮಾತು ಮುಂದುವರಿಸುವುದಾದಲ್ಲಿ, ಒಂದು ಸುದ್ದಿ ಇಲ್ಲವೇ ಬರಹದ ಆಕರ್ಷಣೆಯ 'ಮುಂಡಾಸು' ಅಥವಾ ಕಿರೀಟಪ್ರಾಯವೆಂದರೆ ಅದರ ತಲೆಬರಹ ಅಥವಾ ಶೀರ್ಷಿಕೆ ಯಾನೆ ಶಿರೋನಾಮೆ! ಆದರೆ ಅದು ಆದರ್ಶಪ್ರಾಯವೂ ಆಗಿರಲೇಬೇಕಾದುದು ಅನಿವಾರ್ಯವೂ ಕೂಡ. ಇಲ್ಲವೆಂದಾದಲ್ಲಿ ಕಟ್ಟಿದ ಆ ಮುಂಡಾಸಿನ ಮೌಲ್ಯ, ಬರಹದ ದೇಹಕ್ಕೆ ಒಪ್ಪಿತವಾಗದೆ ಆಭಾಸವಾದೀತು!

ಹಾಗಾದರೆ ಶೀರ್ಷಿಕೆ ಯಾವ ರೀತಿಯಲ್ಲಿರಬೇಕು ಎನ್ನುವ ಕಟ್ಟುಪಾಡೇನಾದರೂ ಇದೆಯೇ ಎಂಬ ಪ್ರಶ್ನೆಗಂತೂ ಉತ್ತರವಿಲ್ಲ. ಸುದ್ದಿಲೋಕವನ್ನು ಈ ನಿಟ್ಟಿನಲ್ಲಿ ಹೊರಗಿಟ್ಟು, ಕೇವಲ ಬರಹಲೋಕಕ್ಕೆ ಸೀಮಿತಗೊಳಿಸಿಕೊಂಡು ಮುಂದಿನ ಮಾತುಗಳನ್ನು ಆಡುವುದಾದರೆ, ಒಂದು ಲೇಖನ ಅಥವಾ ಬರಹದ ಒಳಗಿನ ಪ್ರಸ್ತಾಪ, ವಿಚಾರ, ಚಿಂತನೆಗಳಿಗೆ ಪ್ರತಿಬಿಂಬವಾಗಿ ನಿಲ್ಲಬೇಕಾಗುತ್ತದೆ ತಲೆಬರಹ. ಹನಿಯೋ, ಕವನವೋ, ಕವಿತೆಯೋ, ಕಾವ್ಯವೋ, ಪದ್ಯವೋ, ಹಾಸ್ಯವೋ, ಕಥೆಯೋ, ಗದ್ಯವೋ, ಲೇಖನವೋ, ಕಾದಂಬರಿಯೋ ಒಟ್ಟಿನಲ್ಲಿ ಎಲ್ಲ ಪ್ರಕಾರಗಳೂ ಕೂಡ, ಗುರುತಿಸಿಕೊಳ್ಳುವುದು ತಮ್ಮ ತಲೆಬರಹ, ಶೀರ್ಷಿಕೆಗಳಿಂದ! ಓದುಗ ಪ್ರಪಂಚದ ಮನದಾಳದಲ್ಲಿ ಯಾವುದೇ ಬರಹ/ಪುಸ್ತಕದ ನೆನಪನ್ನು ಅಚ್ಚಳಿಯದಂತೆ ಉಳಿಸುವುದೂ ನಮ್ಮ ನಿಮ್ಮೆಲ್ಲರಿಗಿರುವ ನಾಮದ ಬಲದಂತೆ ಅದರ ಶೀರ್ಷಿಕೆ.

ಮೇಲಿನ ಮಾತನ್ನು ಎತ್ತಿಹಿಡಿಯುತ್ತಾ ಬರಹಕೆ ಮೇರು 'ತಲೆಬರಹ' ಎನ್ನಬಹುದಾದರೂ; ತನ್ನ ಅತೀವ ಪ್ರಭಾವದಿಂದ ಕೆಲವೊಮ್ಮೆ ಬರಹಗಳೊಳಗಿನ ಅಂಶಗಳಿಗಿಂತಲೂ ಹೆಚ್ಚಿನ ಚಿಂತನೆಗೆ, ಒಳತೋಟಿಗೆ ಗ್ರಾಸವಾಗಿ, ಹಲವಾರೂ ಬಾರಿ ಚರ್ಚೆಗೂ, ವಾದ ವಾಗ್ವಾದಗಳಿಗೂ ಅನುವು ಮಾಡಿಕೊಡುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆಯೆಂದರೆ ತಪ್ಪಾಗಲಾರದು. ಇದಕ್ಕಿಂತಲೂ ಮಿಗಿಲಾಗಿ ಇಕ್ಕಟ್ಟು. ಮುಜುಗರ ಇಲ್ಲವೇ ಬೇಸರ ತರಿಸುವಂಥ ಇನ್ನೊಂದು ಅಂಶವೆಂದರೆ ಶೀರ್ಷಿಕೆ ಹಾಗೂ ಬರಹದ ನಡುವೆ ನಂಟು ಬೆಸೆಯದಿರುವುದು. 

ಪ್ರಸಕ್ತ ದಿನಗಳಲ್ಲಿ ಸರ್ವೇಸಾಮಾನ್ಯವಾದ ಒಂದು ಪ್ರವೃತ್ತಿ ಬೆಳೆದಿದೆ ಎಂದಾದರೆ ಅದು ಬಹು ಆಕರ್ಷಣೀಯವಾದ ಶೀರ್ಷಿಕೆಯೊಂದನ್ನು ಇಟ್ಟು ಎಲ್ಲರನ್ನೂ ಸೆಳೆಯಬಹುದೆಂಬ ಹುಸಿ ಜಾಯಮಾನ. ಬರಹದೊಳಗಿನ ಅಂಶಗಳಿಗೂ ಶಿರೋನಾಮೆಯ ಚೆಂದಕ್ಕೂ ಕುರಿಮಂದೆಯ ನಡುವೆ ಕೋಳಿಮರಿಯೊಂದನ್ನು ಬಿಟ್ಟಂತೆ ಆಗಿ, ಬರಹದ ಲೇಖಕ ಓದುಗನ ತೆಕ್ಕೆಯಲ್ಲಿ ಅಪಹಾಸ್ಯಕ್ಕೆ ಈಡಾಗುವುದು ಖಂಡಿತ. ಉದಾಹರಿಸುತ್ತಾ ಹೇಳುವುದಾದಲ್ಲಿ, 'ನಾಗಾರಾಧನೆ ಮತ್ತು ತುಳುನಾಡು' ಎಂಬ ಶೀರ್ಷಿಕೆಯೊಂದನು ಕೊಟ್ಟ ಲೇಖನವೊಂದರ ಒಳಗೆ "ಮೈಸೂರು ಪ್ರಾಂತ್ಯದಲ್ಲಿ ನಾಗರ ಪಂಚಮಿ''ಯನ್ನು ಹೇಗೆ ಆಚರಿಸುತ್ತಾರೆ ಎಂದು ಬರೆದರೆ, ಓದುಗನಾಗಿ ಯಾರೇ ಬಂದರೂ ಬಹುಶಃ ಬುಸುಗುಡುವ ಸಾಧ್ಯತೆಗಳೇ ಜಾಸ್ತಿ! ಅದಲ್ಲದೇ ಕುತೂಹಲದಿಂದ ಓದಲೂ ಬರುವವರಿಗೆ ನಿರಾಸೆಯೋ, ಅಥವಾ ನಾಗಾರಾಧನೆ ಮತ್ತು ತುಳುನಾಡನ್ನು ಅರಿಯದವನಿಗೆ ತಪ್ಪು ಮಾಹಿತಿ ಕೊಡುವ ತಪ್ಪೆಸಗಿದಂತಾಗುತ್ತದೆ ಬರಹಗಾರ. 

ಒಟ್ಟಿನಲ್ಲಿ, ಬರಹಗಾರ ತಾನು ಹೇಳಲಿಚ್ಚಿಸುವ ಮಾತುಗಳನ್ನು ಕ್ರೋಢೀಕರಿಸಿ, ಬರಹರೂಪಕ್ಕಿಳಿಸಿ ಅದಕ್ಕೊಂದು ಶಿರೋನಾಮೆ ಬಳಸಬೇಕೆನ್ನುವ ನಿರ್ಧಾರಕ್ಕೆ ಬಂದಾಗ ತನ್ನ ಬರಹದ 'ದನಿ'ಯಾಗಿ ಅದನ್ನಾಯ್ದುಕೊಳ್ಳಬೇಕೇ ವಿನಃ, ಒಂದಕ್ಕೊಂದು ಸಂಬಂಧವಿಲ್ಲದ, ಅಜಗಜಾಂತರ ವ್ಯತ್ಯಾಸದ ಶೀರ್ಷಿಕೆಯ ಮೂಲಕವೇ ತನ್ನ ಬರಹಗಳಿಗೆ ಓದುಗ ಮಹಾಶಯನನ್ನು ಆಕರ್ಷಿಸುವ ಮನಸ್ಥಿತಿಗೆ ತಲುಪಬಾರದು. ಆ ದನಿಯೆನ್ನುವುದು ಓದುಗನ ಮನದಲ್ಲಿ ಅನುರಣನವಾಗುವಂತಿರಬೇಕು ಅನುದಿನವೂ, ಅನುಕ್ಷಣವೂ! 

ಹಾಗಾಗಿ ನಾಮದ ಬಲವೊಂದಿದ್ದರೆ ಸಾಕೇ? ಅನುಗುಣವಾದ ವಿಚಾರವೂ ಒಳಗಿರಬೇಕಲ್ಲವೇ?

ವಿಚಾರವಂತಿಕೆಯನ್ನು ರೂಢಿಸಿಕೊಳ್ಳುವಲ್ಲಿ ನಮ್ಮ ಚಿತ್ತವಿರಲಿ ಎನ್ನುತಾ...

ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಬೆಂಗಳೂರು
[ಸಲಹೆ ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Wednesday 31 July 2013

'ಚಿತ್ತಿಮಳಿ ತತ್ತಿ' ಮುತ್ತಾಗಲು ವಿಮರ್ಶೆಯೆಂಬ ಸಿಂಪಿ!

ಆಗ ತಾನೆ ಜೋಗುಳದ ಲಾಲಿಗೆ ತಲೆದೂಗುವ ಕೂಸಿಗೆ ಹೆತ್ತ ತಾಯಿ ಮುಖ್ಯವೋ? ಹೊತ್ತ ತಂದೆ ಮುಖ್ಯವೋ? ಎಂಬ ತರ್ಕವಿದ್ದರೂ ಬೆಳೆಯುವ ಕೂಸಿಗೆ ತಾಯಿಯ ಮಮತೆಯೂ ಅವಶ್ಯ, ತಂದೆಯ ಮಾರ್ಗದರ್ಶನವೂ ಅವಶ್ಯ. ಹೆತ್ತ ತಾಯಿ ಒಲವಲಿ ಮುದ್ದಾಡಿ, ಕೂಸಿಗೊಂದು ಮೂರ್ತ ರೂಪವನ್ನಿತ್ತರೆ, ತಂದೆಯು ಬೆಳೆಯುವ ಮಗುವಿನ ತಪ್ಪು-ಒಪ್ಪುಗಳನ್ನು ತಿದ್ದುತ್ತಾ ಕೂಸಿನ ಆಗು-ಹೋಗುಗಳಲ್ಲಿ ಭಾಗಿಯಾಗುತ್ತಾರೆ. ಸಾಹಿತ್ಯ ಪ್ರಪಂಚವೂ ಇದರಿಂದ ಹೊರತಾಗಿಲ್ಲ. ಕರ್ತೃ, ಕೃತಿಯೊಂದನು ಹೆತ್ತು ತಾಯಿಯಾದರೆ, ಅದರ ಓರೆ-ಕೋರೆಗಳನ್ನು ತಿದ್ದುವ ವಿಮರ್ಶಕರು ತಂದೆಯಂತೆ. ತಂದೆ, ತಾಯಿ ಇಬ್ಬರ ಪೋಷಣೆಯಿಂದಲೇ ಕೂಸು ಸಮೃದ್ಧವಾಗಿ ಬೆಳೆಯುತ್ತಾ ಸಾಗುತ್ತದೆ.

ಸಾಹಿತ್ಯ ಪ್ರಪಂಚದಲ್ಲಿ ವಿಮರ್ಶಾ ಸಾಹಿತ್ಯವನ್ನು ಸೃಜನಾತ್ಮಕ ಸಾಹಿತ್ಯ ಪಂಥದಿಂದ ದೂರವಿರಿಸಲಾಗುತ್ತಿದೆ. ವಿಮರ್ಶಕರೆನಿಸಿಕೊಳ್ಳುವವರು ತಮ್ಮ ತಮ್ಮ ಮೂಗಿನ ನೇರಕ್ಕೆ ಯೋಚಿಸಿ ಇಲ್ಲದಿರುವುದನ್ನು ಇದೆಯೆಂದೋ, ಇರುವುದನ್ನು ಇಲ್ಲವೆಂದೋ ಹೇಳಿಬಿಡುವುದನ್ನು ವಿಮರ್ಶೆ ಎನ್ನುತ್ತಾರೆ ಎಂದು ಕೆಲವರು ಕೊಂಕನಾಡುತ್ತಾರೆ. ಆದರೆ ನಿಜವಾಗಿಯೂ ವಿಮರ್ಶೆ ಎಂದರೇನು? ಅದರ ವಿಸ್ತಾರ ಮಿತಿಗಳು ಎಂತಹುದ್ದು ಎಂಬ ತರ್ಕಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ವಿಮರ್ಶಕರು ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ. ಬರಹಗಳೊಳಗಿನ ಸೂಕ್ಷ್ಮತೆಗಳನ್ನು ಪದರು ಪದರಾಗಿ ಬಿಡಿಸುತ್ತಾ ಬರಹವನ್ನು ವಿಶ್ಲೇಷಿಸುವ ಕಾರ್ಯಕ್ಕೆ ವಿಮರ್ಶೆ ಎಂದು ಹೆಸರು.

ಕೃತಿ, ಕರ್ತೃ, ವಿಮರ್ಶಕನ ನಡುವಿನ ಸಂಬಂಧವನ್ನು ತರ್ಕಿಸುವಾಗ ವರಕವಿ ಬೇಂದ್ರೆಯವರ ನಾಕುತಂತಿಯ ಸಾಲುಗಳು ನೆನಪಾಗುತ್ತವೆ. ಬೇಂದ್ರೆ ಬರೆಯುತ್ತಾರೆ;

‘ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತೀsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

ಮುಂಗಾರು ಮಳೆಯ ಕೊನೆಯ ಪಾದದಲ್ಲಿ ಬರುವುದು ಚಿತ್ತಿ ಮಳೆ. ಇದು ಅನಿಶ್ಚಿತ ಮಳೆ, ಆದುದರಿಂದಲೇ ರೈತಾಪಿ ಜನರು ಈ ಮಳೆಗೆ 'ಕುರುಡು ಚಿತ್ತಿ' ಎಂದೇ ಕರೆಯುತ್ತಾರೆ. ಅದರಂತೆ ಕೃತಿಯ ಹುಟ್ಟೂ ಸಹ ಅನಿಶ್ಚಿತವೇ. ಸ್ವಾತಿ ಮಳೆಯ ಹನಿಯು ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತಾಗುವಂತೆ, ಮುತ್ತನ್ನು ನೀಡಿದ ಸಿಂಪಿನ ಹುಳ ಮರಣ ಹೊಂದುವಂತೆ, ಕೃತಿಗೆ ಜನ್ಮ ನೀಡಿದ ಕರ್ತೃ ಆ ಘಳಿಗೆಯಲ್ಲಿ ಗೌಣವಾಗುತ್ತಾನೆ. ಸ್ವಾತಿ ಮಳೆ ಸುರಿದು ಮುತ್ತು ಮೂಡುವ ಸುಸಮಯದಲ್ಲಿ ಸಿಂಪಿನ ಹುಳು ತನ್ನ ಸೂರನ್ನು ಮುತ್ತೊಂದಕ್ಕೆ ಧಾರೆಯಿತ್ತು ಮರಣಿಸಿದಂತೆ., ಕೃತಿಯ ಕರ್ತೃ ಕೃತಿಯ ಸೃಷ್ಟಿಯ ನಂತರ ಅದನ್ನು ಓದುಗರ ಹಾಗೂ ವಿಮರ್ಶಕರ ಕೈಗಿತ್ತು ಸ್ತಬ್ಧವಾಗಿಬಿಡುತ್ತಾರೆ. ಆದುದರಿಂದಲೇ ಸಾವೀ ಮಗಳು ಹಾಗು ಭಾವೀ ಮಗಳು ‘ಸತ್ತೀಯೊ ಮಗನೆ’ ಎಂದು ಕವಿ ಎಚ್ಚರಿಸುತ್ತಾರೆ. ಸಾವೀ ಮಗಳು ಅಂದರೆ ಭೂತದ ಪ್ರತಿನಿಧಿ, ಭಾವೀ ಮಗಳು ಅಂದರೆ ಭವಿಷ್ಯದ ಪ್ರತಿನಿಧಿ.

ಅನುಭವದಿಂದಲೋ, ಅನುಭಾವದಿಂದಲೋ ಒದಗಿದ ವಿಷಯಗಳನ್ನು ಭಾವಗಳನ್ನು ಬರವಣಿಗೆಯ ರೂಪಕ್ಕಿಳಿಸಿ ವಿಷಯಗಳು ಉಸಿರಾಡುವಂತೆ ಮಾಡುವ ಕರ್ತೃವಿನ ಭಾವಸಾರವನ್ನು ಓದುಗ ಕೂಡ ಸವಿದರೆ ಆ ಬರಹ ಸಾರ್ಥಕ್ಯ ಕಂಡಂತೆ. ಕೆಲವೊಮ್ಮೆ ಕೆಲವೊಂದು ಸೂಕ್ಷ್ಮಗಳು ಕವಿಯ ಮತಿಯನ್ನೂ ಮೀರಿ ಕೃತಿಯೊಳಗೆ ಸೇರಿಕೊಂಡಿರುತ್ತವೆ. ಆ ತೆರನಾದ ಸೂಕ್ಷ್ಮಗಳನ್ನು ವಿಮರ್ಶಕರು ಹೆಕ್ಕಿ ತೆಗೆಯುತ್ತಾರೆ. ಆ ವಿಮರ್ಶೆಗಳು ಕೆಲವೊಮ್ಮೆ ಆರೋಗ್ಯಕರ ಚರ್ಚೆಗಳಾಗಿ ಕೃತಿಯ ವಿಸ್ತಾರಗಳನ್ನು ವಿಸ್ತರಿಸುತ್ತಾ ಸಾಗಿದರೆ ಕೆಲವೊಮ್ಮೆ ಮಿತಿ ಮೀರಿ ಹೋಗುತ್ತವೆ. ಅದು ಕರ್ತೃ ಮತ್ತು ವಿಮರ್ಶಕರ ನಡುವಿನ ವೈಮನಸ್ಸುಗಳಿಗೂ ಕಾರಣವಾಗಿರುವ ಉದಾಹರಣೆಗಳೂ ಇವೆ.

ಹೆಸರಾಂತ ಕವಿಯಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಮಕ್ಕಳ ಗೀತ ರಚನೆಕಾರರಾಗಿ ಗುರುತಿಸಿಕೊಂಡಿರುವ ಎಚ್.ಎಸ್.ವೆಂಕಟೇಶ ಮೂರ್ತಿಯವರು ವಿಮರ್ಶೆಯಿಂದ ತಾವು ಪೇಚಿಗೆ ಸಿಲುಕಿಕೊಂಡ ಬಗೆಯನ್ನು ತಮ್ಮ ’ಮರೆಯುವ ಮೊದಲು ’ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಕಾಳಿದಾಸನ ’ಋತುಸಂಹಾರ’ ಕೃತಿಯನ್ನು ಕನ್ನಡಕ್ಕೆ ’ಋತುವಿಲಾಸ’ವನ್ನಾಗಿಸಿ  ಎಚ್ಚೆಸ್ವಿ ಅನುವಾದಿಸಿದಾಗ, ಅದಕ್ಕೆ ತುಂಬಾ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ’ಋತುವಿಲಾಸ’ಕ್ಕೆ ಬಂದ ವಿಮರ್ಶೆಗಳಲ್ಲಿ, ಗೌರೀಶ ಕಾಯ್ಕಿಣಿಯವರು ಕೃತಿಯನ್ನು ತುಂಬಾ ಇಷ್ಟಪಟ್ಟು, "ಅನುವಾದ ಇಲ್ಲಿ ಒಂದು ಪುನರ್ ಸೃಷ್ಟಿಯಾಗಿದೆ" ಎಂದು ಹೇಳಿದರೆ, ಅತ್ತ ಕೆ.ನರಸಿಂಹ ಮೂರ್ತಿಗಳು "ಅನುವಾದವು ಮೂಲಕ್ಕೆ ವಿಶೇಷ ಗೌರವ ತೋರಿಲ್ಲ" ಎಂದು ಹೇಳಿದರು. ಒಂದೇ ಕೃತಿಗೆ ಎರಡು ವಿಭಿನ್ನ ವಿಮರ್ಶೆಗಳನ್ನು ನೋಡಿದ ಎಚ್ಚೆಸ್ವಿಯವರು. ಯಾವುದನ್ನು ಸ್ವೀಕರಿಸುವುದು? ಯಾವುದನ್ನು ಬಿಡುವುದು? ಎಂದು ಪೇಚಿಗೆ ಸಿಲುಕಿಕೊಂಡರೂ ಏನನ್ನೂ ಮಾತನಾಡದೆ ಮೌನವಾಗಿಯೇ ಎರಡು ವಿಭಿನ್ನ ವಿಮರ್ಶೆಗಳನ್ನು ಸ್ವೀಕರಿಸಿದ್ದರು. ನಂತರ ಋತುವಿಲಾಸಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಕೊಡಮಾಡುವ 'ಅನುವಾದ ಪುರಸ್ಕಾರ' ದೊರೆತಿತ್ತು!

ವಿಮರ್ಶೆಯ ಹೆಸರಿನಲ್ಲಿ ಕರ್ತೃವಿನ ಬರವಣಿಗೆಯನ್ನು ಪ್ರಶ್ನಿಸುವುದು ಎಷ್ಟು ಸರಿ? ಅವರವರ ಬರವಣಿಗೆ ಅವರವರ ಸ್ವಾತಂತ್ರ್ಯವಲ್ಲವೇ ಎಂದು ಕೆಲವರ ಅಂಬೋಣವಿರಬಹುದು. ಆದರೆ ಯಾವುದೇ ಕೃತಿಗಳು ಸಾರ್ಥಕ್ಯ ಕಾಣುವುದು ಓದುಗರು ಹಾಗೂ ವಿಮರ್ಶಕರಿಂದ, ಆದ್ದರಿಂದ ಕೃತಿ ಪ್ರಕಟಣೆ ಕಂಡ ನಂತರ ಕೃತಿಯ ಕುರಿತು ಅಭಿಪ್ರಾಯಿಸುವುದನ್ನೂ, ತೆಗಳುವುದನ್ನೂ ಯಾರೂ ಪ್ರಶ್ನಿಸುವಂತಿಲ್ಲ. ಏಕೆಂದರೆ ಆ ವಿಮರ್ಶೆಗಳಾಗಲಿ, ಅಭಿಪ್ರಾಯಗಳಾಗಲಿ ವಿಮರ್ಶಕರ ಸ್ವಂತದ್ದು. ಅವರ ಅನುಭವಕ್ಕೆ ಗೋಚರಿಸಿದ್ದನ್ನು ಅವರು ಹೇಳಿಕೊಂಡಿರುವುದರಿಂದ ಅದನ್ನು ಪ್ರಶ್ನಿಸುವುದು ಕರ್ತೃವಿಗೂ ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಸ್ವತಂತ್ರರು! ಕೃತಿ, ಕರ್ತೃ, ವಿಮರ್ಶಕರು ಒಬ್ಬರನ್ನು ಬಿಟ್ಟು ಒಬ್ಬರಿರಲಾರರು. ವಿಮರ್ಶಕರು ಸಕ್ರಿಯರಾದಂತೆಲ್ಲಾ ಕರ್ತೃಗಳು ಮಾಗುತ್ತಾ ಸಾಗುತ್ತಾರೆ. ಆದ್ದರಿಂದಲೇ ಒಂದಕ್ಕೊಂದು ಬೆಸೆದುಕೊಳ್ಳಬೇಕು. ಮೂರರ ನಡುವೆ ಸಾಮರಸ್ಯ ಒಡಮೂಡಬೇಕು. ಆಗಲೇ ಒಂದು ಸಶಕ್ತ ಸಾಹಿತ್ಯ ಪ್ರಪಂಚ ನಿರ್ಮಾಣ ಸಾಧ್ಯ.

"ವರ್ಣ ಮಾತ್ರಂ ಕಲಿಸಿದಾತಂ ಗುರು'' ಎನ್ನುವಂತೆ ಪ್ರತಿಯೊಂದನ್ನೂ, ಪ್ರತಿಯೊಬ್ಬರಲ್ಲಿಯೂ ಕಲಿಯುತ್ತಾ ಎಲ್ಲರಲ್ಲೂ ಗುರುವನ್ನು ಕಾಣುವವನೇ ಮುಂದೊಮ್ಮೆ ಸರ್ವಜ್ಞನಾಗಿ ಬೆಳೆಯಬಲ್ಲ. ಹೀಗಾದಲ್ಲಿ ಮಾತ್ರ ಯಾವುದೇ ಕೃತಿಯೂ ಚಿತ್ತಿ ಮಳೆಯ ತತ್ತಿಯಾಗಿ, ವಿಮರ್ಶೆಯೆಂಬ ಸಿಂಪಿನೊಳಗೆ ಮುತ್ತಾದೀತು.

ವಂದನೆಗಳೊಂದಿಗೆ,
ಪ್ರಮೋದ್ ಡಿ.ವಿ.
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday 30 June 2013

ಕಾವ್ಯ: ಹಂಚದ ಹೊರತು ಬೆಳೆಯುವುದಿಲ್ಲ!

ಕನ್ನಡ ಬ್ಲಾಗ್-ನ ಸಂಪಾದಕೀಯಗಳಲ್ಲಿ ಕಾವ್ಯ ಹುಟ್ಟಬಹುದಾದ ಮತ್ತು ಬೆಳೆದು ನಿಲ್ಲಬಹುದಾದ ಸಾಧ್ಯತೆಗಳ ಒಳ ಹೂರಣಗಳನ್ನು ಸವಿಯುತ್ತಲೇ ಬಂದಿದ್ದೀರಿ. ಈ ಸಲದ ಸಂಪಾದಕೀಯದಲ್ಲಿ ಹೊರ ಹೂರಣವನ್ನು ರುಚಿಕಟ್ಟಾಗಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಕಾವ್ಯ ಎಂಬುದು ಕೇವಲ ಕವನ, ಲೇಖನ, ಕಥೆ, ಪ್ರಬಂಧ ಅಥವಾ ಇನ್ನಿತರ ಬರಹ ರೂಪಗಳಿಗೆ ಮಾತ್ರ ಸೀಮಿತವಲ್ಲ, ಸೃಜನಾತ್ಮಕವಾಗಿ ಒಡಮೂಡುವ ಯಾವುದೇ ಒಂದು ಕ್ರಿಯೆಯು, ಪ್ರಕ್ರಿಯೆಯೂ ಕಾವ್ಯವಾಗಬಲ್ಲದು. ಕವಿ ಆ ಪ್ರಕ್ರಿಯೆಗೆ ಭಾಷೆಯ ಭಾಷ್ಯ ಬರೆಯುತ್ತಾನಷ್ಟೆ. ಆಗ ಅದು ಕಾವ್ಯದ ಅಧಿಕೃತವಾದ ಪ್ರಕಾರವಾಗಿ ಗುರುತಿಸಿಕೊಳ್ಳುತ್ತದೆ. ಸೃಜನಾತ್ಮಕ ಕ್ರಿಯೆ ಮತ್ತು ಪ್ರಕ್ರಿಯೆಗಳು ಕಾವ್ಯಗಳಾಗುತ್ತವೆ ಎಂಬ ಒಂದು ಉದಾಹರಣೆ ಲಂಕೇಶರ ಈ ಪದ್ಯದಲ್ಲಿ ಸಿಗುತ್ತದೆ.

"ಹುಟ್ಟು ಹಠಮಾರಿಯೊಬ್ಬ
ಕವಿಯಾಗಲು ಪಣ ತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆ ಕಂಠದಲ್ಲಿ ಹಾಡಿ
ತನಗೇ ಗೊತ್ತಿಲ್ಲದೆ
ಕವಿಯಾಯಿತು."

ಇಂಥ ಅಗಾಧ ವ್ಯಾಪ್ತಿ ಹೊಂದಿರುವ ಕಾವ್ಯಕ್ಕೆ ಹುಟ್ಟಿನಿಂದಲೇ ಒಂದು ನಿರ್ದಿಷ್ಟ ದಿಕ್ಕಿದ್ದು, ತನ್ನ ಗುರಿಯನ್ನು ನಿರ್ಧರಿಸಿಕೊಂಡು ಹೊರಟಂತಹ ಬಾಣದಂತಿರುತ್ತದೆ. ಒಂದು ಓದುಗ ವರ್ಗವನ್ನು ತಲುಪುವ ತವಕವಿರುತ್ತದೆ. ಪ್ರೇಮ ಸಾಹಿತ್ಯಕ್ಕೆ ಕವಿ ಪ್ರೇಮಿಯ ಮನಸ್ಸೇ ಕೇಂದ್ರವಾದರೆ, ಸಮಾಜಮುಖಿ ಸಾಹಿತ್ಯಕ್ಕೆ ಸಮಾಜವೇ ಕೇಂದ್ರ. ಹೀಗೆ ಬೆಳೆದು ನಿಲ್ಲುವ ಪ್ರತಿಯೊಂದು ಸಾಹಿತ್ಯಕ್ಕೂ ತನ್ನದೇ ಆದ ನಿರ್ದಿಷ್ಟ ಕೇಂದ್ರವೂ, ಇಲ್ಲವೇ ಗಮ್ಯವೂ ಇರುತ್ತದೆ. ಇಷ್ಟೆಲ್ಲಾ ಆಯಾಮಗಳಿದ್ದಾಗ್ಯೂ ಕಾವ್ಯ ಕೆಲವೊಮ್ಮೆ ಕವಿಯ ಭಾವದಲ್ಲೊಂದಾದರೆ, ಓದುಗರ ಭಾವದಲ್ಲಿ ಮತ್ತೊಂದಾಗಿರಬಹುದು. ಕೆಲವೊಮ್ಮೆ ಅದೇ ಕಾವ್ಯ ಶೈಲಿ ವಿಭಿನ್ನವಾಗಿ ಗುರ್ತಿಸಿಕೊಂಡು ಕಾವ್ಯಕ್ಕೆ ಸೃಷ್ಟಿಶೀಲ ಸ್ಪರ್ಷ ನೀಡಿ ನವೀನ ಸಾಹಿತ್ಯ ಮಾದರಿಯಾಗಬಹುದು. ಇದೆಲ್ಲ ಆಗಬೇಕೆಂದರೆ ಕಾವ್ಯವನ್ನು ಹೆಚ್ಚೆಚ್ಚು ಜನರು ಓದಬೇಕು, ಯೋಚಿಸಬೇಕು ಮತ್ತು ಧ್ಯಾನಿಸಬೇಕು. ಇಲ್ಲಿ ಸಾಹಿತ್ಯ ಬೆಳವಣಿಗೆಯ ಬಗ್ಗೆ ಚಿಂತಿಸುವವರ ಆಧ್ಯ ಕರ್ತವ್ಯ ಸಾಹಿತ್ಯವನ್ನು ಸಾಧ್ಯವಾದಷ್ಟು ಉದ್ದಗಲಗಳಿಗೆ ಪಸರಿಸುವುದು. ಇದನ್ನೇ ನಾನು ಹಂಚುವುದು ಎಂದು ಕರೆದಿದ್ದೇನೆ. ಅದು ಯಾವ ಮೂಲಕವಾದರೂ ಆಗಿರಬಹುದು. ತಾವು ಓದಿದ ಒಳ್ಳೆಯ ಪುಸ್ತಕಗಳನ್ನೂ, ಕಥಾ ಸಂಕಲನಗಳನ್ನೂ, ಇಲ್ಲವೇ ಕವನ ಸಂಕಲಗಳನ್ನು ತಮ್ಮ ಸ್ನೇಹಿತರಿಂದ ಓದಿಸುವುದು, ಒಳ್ಳೆಯ ಹೊತ್ತಿಗೆಗಳ ಬಗ್ಗೆ ಇತರರೊಂದಿಗೆ ಚರ್ಚಿಸುವುದು ಮತ್ತು ಒಳ್ಳೆಯ ಓದಿನ ಅಗತ್ಯಗಳ ಬಗ್ಗೆ ಅರಿವು ಮೂಡಿಸುವುದು. ಪುಸ್ತಕಗಳನ್ನು ಉಡುಗೊರೆಗಳಾಗಿ ಕೊಡುವುದು ಹೀಗೆ ಓದನ್ನು ಮತ್ತು ತನ್ಮೂಲಕ ಕಾವ್ಯವನ್ನೂ ಉತ್ತೇಜಿಸುವ ಕೆಲಸವಾಗಬೇಕಿದೆ.

ಹೀಗೆ ಸಾಹಿತ್ಯವನ್ನು ಹಂಚುವ ಮತ್ತೊಂದು ದಾರಿ: ಒಂದು ಪುಸ್ತಕವನ್ನಿಟ್ಟುಕೊಂಡು ಅದರ ಬಗ್ಗೆ ಗುಂಪು ಚರ್ಚೆಗಳನ್ನು ಆಯೋಜಿಸುವುದು, ಸಣ್ಣ ಪುಟ್ಟ ಚಹಾ ಕೂಟಗಳಂತಹ ಕವಿಗೋಷ್ಠಿಗಳನ್ನು ಆಯೋಜಿಸುವುದು, ಆಶು ಕವಿತ್ವವನ್ನು ಉತ್ತೇಜಿಸುವುದು, ಸೃಷ್ಟಿಶೀಲ ಸಾಹಿತ್ಯ ರಚನೆಯ ವಿವಿಧ ಸ್ಥರಗಳ ಬಗ್ಗೆ ಚಿಂತನಾ-ಮಂಥನ ಏರ್ಪಡಿಸುವುದು. ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಮ್ಮ ಸಾಹಿತ್ಯಿಕ ಕ್ರಿಯೆಗಳಿಗೊಂದು ಭೌತಿಕ ರೂಪ ಕೊಡುವುದು ತನ್ಮೂಲಕ ಎಲ್ಲರ ವಿಚಾರಧಾರೆಗಳು ಎಲ್ಲರಲ್ಲಿಯೂ ಅರಿವು ಮೂಡಿಸುವ ದೀಪ್ತಿಯಾಗಬೇಕು. ಸಾಹಿತ್ಯದ ಬಗ್ಗೆಯೇ ಯೋಚಿಸುವ ಒಂದು ಸಮೂಹವನ್ನು ಸೃಷ್ಟಿಯಾಗಬೇಕು, ತಮ್ಮ ತಮ್ಮಲ್ಲೇ ಹುಟ್ಟಿಕೊಂಡ ಸಾಹಿತ್ಯಗಳಿಗೆ ವಿಮರ್ಶೆಯನ್ನೂ, ಮೌಲಿಕ ಮತ್ತು ತುಲನಾತ್ಮಕ ಚರ್ಚೆಗಳು ರೂಪುಗೊಳ್ಳಬೇಕು. ಈ ಎಲ್ಲಾ ಪ್ರಕ್ರಿಯೆಗಳೂ ನಮ್ಮ ಸಾಹಿತ್ಯಿಕ ದಾಹಕ್ಕೆ ನೀರೆರೆಯುತ್ತ ನಮ್ಮ ಬರವಣಿಗೆಯು ಸರಿ ದಿಕ್ಕಿನಲ್ಲಿರುವಂತೆ ನಿರ್ದೇಶಿಸುತ್ತವೆ. ಇಂತಹ ವಿಚಾರಧಾರೆಗಳೇ ಹಳೆಗನ್ನಡ ಸಾಹಿತ್ಯ ರಚನೆಯ ಸಂದರ್ಭದಲ್ಲಿ ವಚನ ಕ್ರಾಂತಿಯಾಗುವಂತೆ ಮಾಡಿದ್ದು, ದಾಸ ಸಾಹಿತ್ಯದ ಉದಯಕ್ಕೆ ಕಾರಣವಾಗಿದ್ದು, ನವೋದಯ ಸಾಹಿತ್ಯದಲ್ಲಿ ಕನ್ನಡ ಕಾವ್ಯ ಉನ್ನತ ಶಿಖರವೇರಿ ನಿಲ್ಲುವಂತೆ ಮಾಡಿದ್ದು, ನವ್ಯ ಸಾಹಿತ್ಯದ ಉಗಮಕ್ಕೆ ಕಾರಣವಾಗಿದ್ದು, ನವ್ಯೋತ್ತರ ಮತ್ತು ಬಂಡಾಯ ಸಾಹಿತ್ಯಗಳಿಗೆ ಅಡಿಗಲ್ಲಾಗಿದ್ದು. ನಾನಿಲ್ಲಿ ಗುಂಪುಗಾರಿಕೆಯ ಬಗ್ಗೆಯೋ, ಸಾಹಿತ್ಯ ಕ್ರಾಂತಿಯ ಬಗ್ಗೆಯೋ ಹೇಳುತ್ತಿಲ್ಲ. ಬದಲಾಗಿ ಸಾಹಿತ್ಯವನ್ನೇ ಧೇನಿಸುವ ಕೆಲವು ಮನಸ್ಸುಗಳು ಒಂದೆಡೆ ಕಲೆತರೆ ಎಂತಹ ಮಹತ್ತರವಾದದ್ದನ್ನು ಸಾಧಿಸಬಹುದು ಎಂಬ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ. ಸಾಹಿತ್ಯವನ್ನು ಎಲ್ಲರಲ್ಲಿಯೂ ಹಂಚುವ ಅಗತ್ಯದ ಬಗ್ಗೆ ಹೇಳುತ್ತಿದ್ದೇನೆ.

ನಾವು ಕನ್ನಡ ಬ್ಲಾಗ್ ನ ಮೂಲಕ ಅಂತರ್ಜಾಲದಲ್ಲಿ ಈ ರೀತಿಯ ಸಾಹಿತ್ಯ ಹಂಚುವ ಕಾರ್ಯವನ್ನೇ ಮಾಡುತ್ತಾ ಬಂದಿದ್ದೇವೆ. ಆದರೆ ಆ ಕೆಲಸಗಳು ಭೌತಿಕ ರೂಪ ಪಡೆದು ಇನ್ನಷ್ಟು ಸಾಹಿತ್ಯಿಕ ಮನಸ್ಸುಗಳನ್ನು ಮುಟ್ಟುವ ಕೆಲಸವಾಗಬೇಕು ಎಂಬ ಸದಾಶಯ ಈ ಸಂಪಾದಕೀಯದ್ದು. ಈ ನಿಟ್ಟಿನಲ್ಲಿ ಕನ್ನಡ ಬ್ಲಾಗ್ ಮುಂದಿನ ದಿನಗಳಲ್ಲಿ ಒಂದು ಟ್ರಸ್ಟ್ ರೂಪ ಪಡೆದು ಸಾಹಿತ್ಯಿಕ ಬೆಳವಣಿಗೆಗೆ ತನ್ನನ್ನು ಅರ್ಪಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಆ ಟ್ರಸ್ಟ್ ಮೂಲಕ ಕವಿಗೋಷ್ಠಿಗಳು, ಸಾಹಿತ್ಯ ಚಿಂತನಾ ಮಂಥನಗಳು, ಅಂತರ್ಜಾಲ ಸಾಹಿತ್ಯ ಪುಸ್ತಕ ರೂಪ ಪಡೆದು ಮತ್ತಷ್ಟು ಓದುಗರನ್ನು ತಲುಪುವ ಕಾಯಕಕ್ಕೆ ತನ್ನನ್ನು ಒಡ್ಡಿಕೊಳ್ಳಲಿದೆ. ಆ ಒಂದು ಆಕಾಂಕ್ಷೆಗಳನ್ನಿಟ್ಟುಕೊಂಡೇ 'ಬನ್ನಿ ಜೊತೆಯಾಗೋಣ' ಎಂಬ ಸಂಪಾದಕೀಯಕ್ಕೆ ಮುನ್ನುಡಿಯಾದದ್ದು ಕನ್ನಡ ಬ್ಲಾಗ್. ಇಷ್ಟೆಲ್ಲಾ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ನಮ್ಮ ಕೈಯ್ಯಲ್ಲಾಗುವ ಸಾಹಿತ್ಯ ಸೇವೆಗೆ ಟೊಂಕ ಕಟ್ಟಿ ನಿಲ್ಲಲು ಸತುವಾಗಿರುವವರೇ ನೀವು, ನಮ್ಮೆಲ್ಲ ಸಹೃದಯಿ ಸದಸ್ಯರು. ನಿಮ್ಮ ಈ ಅಭಿಮಾನಕ್ಕೆ ಎಷ್ಟು ಕೃತಜ್ಞತೆಗಳನ್ನರ್ಪಿಸಿದರೂ ಕಡಿಮೆಯೇ. ಕನ್ನಡ ಬ್ಲಾಗ್ ನ ಮುಂದಿನ ಎಲ್ಲಾ ಸಾಹಿತ್ಯಿಕ ಕೆಲಸಗಳಲ್ಲಿ ನಿಮ್ಮ ಕೈ ನಮ್ಮನ್ನು ಬಲಪಡಿಸುತ್ತದೆ ಎಂಬ ಧನ್ಯತೆಯಲ್ಲಿ ನಾವು.

- ಪ್ರಸಾದ್.ಡಿ.ವಿ.

Friday 31 May 2013

ಓದಿನ ಸಾರ್ಥಕ್ಯವೂ, ಬರಹದ ಘಮವೂ!

ತಪ್ಪು ಮಾಡುವುದು ಮಾನವ ಸಹಜ ಗುಣ. ಎಲ್ಲರೂ ಒಂದಲ್ಲ ಒಂದು ರೀತಿಯಿಂದ ತಮ್ಮ ನಡೆಯಲ್ಲಿ ತಪ್ಪನ್ನು ಮಾಡಿಯೇ ಮಾಡಿರುತ್ತಾರೆ. ಹಾಗಂತ  ಮಾಡಿದ ತಪ್ಪುಗಳನ್ನೇ ಪದೇ ಪದೇ ಮಾಡುವುದು ಮೂರ್ಖತನದ ಪರಮಾವಧಿಯಾಗುತ್ತದೆ. ಇದು ಕೇವಲ ಬಾಳಿನ ನಡೆಗಷ್ಟೇ ಸೀಮಿತವಲ್ಲ. ಮೇ ತಿಂಗಳ ಕನ್ನಡ ಬ್ಲಾಗ್ ಸಂಪಾದಕೀಯವನ್ನು ಬರೆಯಲು ಕೂತಾಗ, ಕಳೆದ ಒಂದು ತಿಂಗಳಿನಲ್ಲಿ ಈ ಫೇಸ್ಬುಕ್ ಬ್ಲಾಗಂಗಳದಲ್ಲಿ ಪ್ರಕಟವಾದ ಹತ್ತು ಹಲವು ರಚನೆಗಳನ್ನು ಓದಿದ ನಮಗೆ ಇದರ ಬಗ್ಗೆಯೇ ಒಂದು ಲೇಖನವನ್ನು ಬರೆಯಬಹುದಲ್ಲ ಎನ್ನುವ ಯೋಚನೆ ಬಾರದೇ ಇರಲಿಲ್ಲ. ಆದರೆ ನಾವು ಯಾರ ರಚನೆಯನ್ನೂ ವಿಮರ್ಶೆಯ ಕಟ್ಟುಪಾಡಿನೊಳಗೆ ಅಳವಡಿಸಿಕೊಂಡು ಬರೆಯುತ್ತಿಲ್ಲ. ದಿನನಿತ್ಯ ನಾವು ಬಳಸುವ ಭಾಷೆಯಲ್ಲಿ ಆಗುತ್ತಿರುವ, ಆಗುವ ತಪ್ಪುಗಳನ್ನು ನಾವೇ ತಿದ್ದಿಕೊಳ್ಳಬೇಕೆ ವಿನಃ , ಓದುಗರು ಅದನ್ನು ತಿದ್ದುಪಡಿ ಮಾಡುತ್ತಾರೆ ಎನ್ನುವ ದೃಷ್ಟಿಯಿಟ್ಟುಕೊಳ್ಳಬಾರದು. ಅದೇ ರೀತಿ ಓದುಗರು ಸೂಚಿಸುವ ತಪ್ಪುಗಳನ್ನು ಪರಿಶೀಲಿಸಿ, ನಮ್ಮ ಮುಂದಿನ ನಡೆಯಲ್ಲಿ, ಅಂದರೆ ನಮ್ಮ ರಚನೆಯಲ್ಲಿ ಈ ಹಿಂದೆ ಆದ ತಪ್ಪುಗಳೇ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವುದು ಉತ್ತಮ ಬರಹಗಾರನ ನಡೆಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಯೋಚನೆಯನ್ನು ಅಳವಡಿಸಿಕೊಳ್ಳಬೇಕಾದ ಆವಶ್ಯಕತೆ ಎದ್ದು ಕಾಣುತ್ತದೆ.

ಪದ ಪ್ರಯೋಗ, ಅಕ್ಷರ ಬಳಕೆ: ಇಲ್ಲಿನ ಹತ್ತು ಹಲವು ರಚನೆಗಳನ್ನೋದುವಾಗ ಗಮನಿಸಿರುವಂತೆ ಅಕ್ಷರ ಜೋಡಣೆ ಮತ್ತು ಪದಪ್ರಯೋಗಳಲ್ಲಿನ ವಿಪರೀತ ತಪ್ಪುಗಳು ರಚನೆಗಳಲ್ಲಿನ ಗಾಂಭೀರ್ಯವನ್ನು ಹದಗೆಡಿಸುವಷ್ಟರ ಮಟ್ಟಿಗಿರುತ್ತವೆ. ಈ ತಪ್ಪಿಗೆ ಕಾರಣವಾಗುವ ಅಂಶಗಳನ್ನು ಮೂಲವಾಗಿ ಪರೀಶೀಲಿಸುವ ಮನಸ್ಸು ಕೆಲವೊಮ್ಮೆ ಇರುತ್ತದೆಯಾದರೂ, ಎಲ್ಲಿ ಆ ಬರಹಗಾರ ತಪ್ಪು ಭಾವನೆ ತಳೆಯುತ್ತಾನೆ ಎನ್ನುವ ಭಯವೂ ಕೆಲವೊಮ್ಮೆ ಕಾಡುತ್ತದೆ. ಆದರೆ ಯುವಮಿತ್ರರೊಡನೆ ಹಲವು ಬಾರಿ ಈ ವಿಚಾರದಲ್ಲಿ ಸಂವಾದಕ್ಕಿಳಿದು ಪ್ರಶ್ನಿಸಿದಾಗ ಕಂಡುಬಂದ ಕಟುಸತ್ಯವೆಂದರೆ ತಾನು ಚಿಕ್ಕಂದಿನಿಂದ ಕಲಿತ ಭಾಷೆ ಮತ್ತು ಪದ ಪ್ರಯೋಗಗಳು. ತಾನು ಮಾಡುತ್ತಿರುವ ಆ ತಪ್ಪುಗಳನ್ನು ಯಾರೂ ಇಷ್ಟರತನಕ ಪ್ರಶ್ನಿಸಿಲ್ಲ, ತಾನದನ್ನು ಸರಿಯೆಂದೇ ಭಾವಿಸಿದ್ದೆ ಎನ್ನುವ ಅವರ ಮನಸ್ಸಿನಾಳದ ಉತ್ತರವೂ ದೊರೆಯುತ್ತದೆ ಕೆಲವೊಮ್ಮೆ. ಏನೇ ಇರಲಿ. ಆ ತಪ್ಪುಗಳನೊಪ್ಪಿ ತಮ್ಮ ಮುಂದಿನ ಬರಹಗಳಲ್ಲಿ ಸರಿಯಾದ ಪದಬಳಕೆಗೆ ಒತ್ತುನೀಡುತ್ತೇವೆ ಎನ್ನುವವರ ಸಂಖ್ಯೆ ಕಡಿಮೆಯಿದ್ದರೂ, ಕೆಲವರಾದರೂ ತಪ್ಪನೊಪ್ಪಿಕೊಳ್ಳುವ ಗುಣವನ್ನು ಮೆರೆಯುತ್ತಾರೆ ಅನ್ನುವುದೇ ಸಂತಸದ ವಿಚಾರ. ಇದು ಎಲ್ಲರೊಳಗೂ ಒಡಮೂಡಲಿ ಎನ್ನುವ ಆಶಯವೂ ನಮ್ಮದು.

ವಸ್ತು, ವಿಚಾರ: ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಗಹನವಾದ ವಿಚಾರವೊಂದಿದೆ. ಅದು ಸೃಜನಾತ್ಮಕ ಸಾಹಿತ್ಯ. ಬರಹಗಾರನು ಸೃಜನಾತ್ಮಕ ಚಿಂತನೆಗಳತ್ತ ತನ್ನ ಬರಹದ ದಿಕ್ಕನ್ನು ಬದಲಿಸಿಕೊಂಡು ಸಾಗಿದರೆ ತನ್ನ ಬರಹಕ್ಕೆ ಬೇಕಾದ ವಸ್ತು, ವಿಷಯಗಳ ಕೊರತೆ ಬರದಿದ್ದೀತು. ನಮ್ಮ ಹೆಚ್ಚಿನ ಯುವ ಬರಹಗಾರರಿಗೆ ಅನಾಮತ್ತಾಗಿ ಸಿಗುವಂಥ ಒಂದೇ ಒಂದು ವಸ್ತುವೆಂದರೆ ಅದು ಪ್ರೇಮ ಅಥವಾ ಪ್ರೀತಿ. ತನ್ನ ಪ್ರತೀ ರಚನೆಯೂ ಒಂದೇ ಒಂದು ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದರೆ ಅಲ್ಲಿ ದಿನಗಳೆದಂತೆ ರಸಾನುಭವದ ಕೊರತೆ ಎದ್ದು ಕಾಣಬಹುದು. ಓದುಗನನ್ನು ಸೆಳೆಯದಿರಬಹುದು. ಆದರೆ ಒಂದೇ ವಿಷಯದ ಬಗ್ಗೆ ವೈವಿಧ್ಯಮಯ ರಚನೆ/ಬರಹಗಳನ್ನು ಬರೆದವರು ಇಲ್ಲವೆಂದೇನಿಲ್ಲ. ಪ್ರತಿ ರಚನೆಯಲ್ಲೂ ಭಿನ್ನ ಆಸ್ವಾದಗಳನ್ನೀಯುತ್ತಾ ಓದುಗರ ಮನವನ್ನೂ ತಣಿಸಿದವರಿದ್ದಾರೆ. ಒಂದು ಮಾತಂತೂ ನಿಜ; 'ನೈಜವಲ್ಲದ ಅತಿಭಾವುಕ ಸನ್ನಿವೇಶವನ್ನು ಸೃಷ್ಟಿಸುವುದಕ್ಕಿಂತಲೂ ವೈಚಾರಿಕ ನೆಲೆಗಟ್ಟಿನಲ್ಲಿ ಬರವಣಿಗೆ ರೂಪುತಳೆದರೆ, ಆ ಬರಹ ಓದುಗನ ಮನದಾಳದಲ್ಲಿ ಧೀರ್ಘ ಕಾಲದವರೆಗೆ ಉಳಿಯುವುದರಲ್ಲಿ ಸಂಶಯವಿಲ್ಲ'.

ಪಂಗಡ, ವಿಂಗಡನೆ: ಕಲೆಯ ಅಭಿವ್ಯಕ್ತಿಗೆ ಕಲಾವಿದನ ಜೀವನನುಭವನೇ ಮೂಲದ್ರವ್ಯ ಎಂದಿದ್ದಾರೆ ಪೂರ್ಣಚಂದ್ರ ತೇಜಸ್ವಿ. ನಮ್ಮ ಅನುಭವಗಳನ್ನು ನಾವು ಒಂದು ಬರಹ, ಹನಿ, ಕವನ, ಕವಿತೆಯ ರೂಪದಲ್ಲಿ ಹಂಚಿಕೊಂಡರೆ, ಅದು ಜಗತ್ತಿನ ಅದಾವುದೋ ಮೂಲೆಯ ಓದುಗನ ತಲೆಯೊಳಗೆ ಒಂದು ವಿಶ್ಲೇಷಣೆಯನ್ನು ಹುಟ್ಟುಹಾಕಲಾರಂಭಿಸಬಹುದು. ಇದಕ್ಕೆ ಆ ಓದುಗನ ಮನಸ್ಸಿನಲ್ಲಿ ಸಂಯೋಜನೆಗೊಳ್ಳುವ ಸಂವಾದಿ ಮನೋಭಾವವೇ ಕಾರಣವಿರಬಹುದು. ಈ ಮನೋಭಾವ ಎನ್ನುವುದು 'ಅದು ತನ್ನ ಪಂಗಡದವನು ಬರೆದ ರಚನೆ' ಎನ್ನುವ ತಳಹದಿಯಲ್ಲಿ ಹುಟ್ಟುವುದಿಲ್ಲ. ಹಾಗೆ ಹುಟ್ಟಿದ್ದೇ ಆದಲ್ಲಿ ಅದು 'ವಿಂಗಡಣೆ'ಯತ್ತ ಮುಖ ಮಾಡೀತೆ ಹೊರತು, ಸಂವಾದಶೀಲ ನೆಲೆಗಟ್ಟಿನಲ್ಲಿ ಇರಲಾರದು. ಈ ಪಂಗಡಗಳ ಸೃಷ್ಟಿಯೇ ಬಹುಶಃ ಸಾಹಿತ್ಯ ಲೋಕದಲ್ಲಿ ಪ್ರಸ್ತುತ ಹಲವಾರು ಗೊಂದಲಗಳಿಗೆ ಎಡೆಮಾಡಿಕೊಡುತ್ತಿರುವುದಂತೂ ಸತ್ಯ. ಹೀಗೆ ಮುಂದುವರಿದಲ್ಲಿ ನಾಯಿ ಸಾಕಿದವರು ಮಾತ್ರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಓದಬೇಕೆನ್ನುವ ಪಂಗಡ ಹುಟ್ಟಿಕೊಂಡರೂ ಆಶ್ಚರ್ಯವಿಲ್ಲವೆಂದಿದ್ದಾರೆ ತೇಜಸ್ವಿ. ಸಾಹಿತ್ಯವು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಬೇಕೇ ಹೊರತು ಪಂಗಡಗಳಾಗಿ ವಿಂಗಡಣೆಗೊಂಡು ಸತ್ವ ಕಳೆದುಕೊಳ್ಳಬಾರದು. 

ಓದು, ಬರೆ: ಇನ್ನು ನಮ್ಮ ಓದು. ಬರವಣಿಗೆ. ಎಲ್ಲದಕ್ಕೂ ಇಲ್ಲಿ ಅವಕಾಶವಿದೆಯೆಂದು ಎಲ್ಲವನ್ನೂ ಬರೆಯುವವರೇ ಜಾಸ್ತಿ. ಹೀಗಾದಲ್ಲಿ ಓದುವವರಾರು? ಬರಹವೆನ್ನುವುದು ಓದುಗನೆದೆ ತೆರೆಯುತ್ತದಾದರೂ ಎಲ್ಲ ಬರಹಗಳು ಆ ಕೆಲಸ ಮಾಡಲಾರವು. ಓದು ಮತ್ತು ಬರಹಕ್ಕೆ ಅದರದ್ದೇ ಆದ ಗುಣಮಟ್ಟಗಳು ಮುಖ್ಯವಾಗುತ್ತವೆ. ಬರಹಗಾರನಾದವನು ಓದುವ ಹವ್ಯಾಸವನು ಮೊದಲಾಗಿ ಬೆಳೆಸಿಕೊಳ್ಳಬೇಕು. ಓದುಗನಾದವನೂ ಕೇವಲ ಕಣ್ಣಾಡಿಸಿ ತಾನೆಲ್ಲವನೂ ಓದಿದ್ದೇನೆ ಅನ್ನುವ ಮನಸ್ಥಿತಿಗೂ ಬರಬಾರದು. ಅದಕ್ಕಿಂತಲೂ ಮಿಗಿಲಾಗಿ ಎಲ್ಲ ಬರಹಗಳನ್ನೂ, ಬರಹಗಾರರನ್ನೂ ಎಲ್ಲಾ ಸಂದರ್ಭಗಳಲ್ಲೂ, ಎಲ್ಲರನೂ ಮೆಚ್ಚಿಸುವ ಸಲುವಾಗಿ ಹೊಗಳಿಕೆಯ ಅತಿಶಯೋಕ್ತಿಗಳಲ್ಲೇ ಓದುಗನು ಮುಳುಗಿಸಬಾರದು. ಓದಿದ ಮೇಲೆ ತನ್ನ ಮನಸ್ಸಿನಾಳದಿಂದೆದ್ದ ಪ್ರಾಮಾಣಿಕ ಅನಿಸಿಕೆಗಳನ್ನು ದಿಟ್ಟತನದಿಂದ ಅರುಹಬೇಕು. ಹಾಗಾದಲ್ಲಿ ಮಾತ್ರ ಬರಹಗಾರನೂ, ಅವನ ಬರಹವೂ ಓದುಗನ ತೆಕ್ಕೆಯಲ್ಲಿ ಅರಳೀತು. ಘಮವನಿತ್ತೀತು. ಓದುಗನ ಓದಿನಲೂ ಸಾರ್ಥಕ್ಯವಿದ್ದೀತು.

ನಮ್ಮ ನಿಮ್ಮೆಲ್ಲರ ಪ್ರಯತ್ನವೂ ಸಾರ್ಥಕ್ಯದ ಸವಿಯನನುಭವಿಸುತ್ತಾ ಘಮವನರಳಿಸುವ ನಿಟ್ಟಿನಲ್ಲಿರಲಿ. 
============================
ವಂದನೆಗಳೊಂದಿಗೆ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday 28 April 2013

ಅಭಿವ್ಯಕ್ತಿಯ ತೊದಲುಗಳಿಗೆ ಅಮ್ಮನೆಂಬುದು ಭಾಷೆಯು!


ಬಾಳ ಪುಟವು ಆರಂಭವಾಗುತ್ತಿದ್ದ ಹಾಗೆ ಮಗುವು ತನ್ನ ಮೂಕ ಭಾವನೆ ಮತ್ತು ತನ್ನ ಅಂತರಂಗದ ಮಾತುಗಳನ್ನು ಮತ್ತೊಬ್ಬರಲ್ಲಿ ಹೇಳಲು ಸಾಕಷ್ಟು ಪ್ರಯತ್ನ ಪಡುತ್ತದೆ. ಅದರ ಪ್ರತಿಯೊಂದು ಪ್ರಯತ್ನವೂ ಮನಕೆ ಒಂದೊಂದು  ರೀತಿಯ ಅರ್ಥ ಕೊಡುತ್ತಿರುತ್ತದೆ. ಆದರೆ ತನ್ನ ಕರುಳ ಬಳ್ಳಿಯನು ಒಂಬತ್ತು ತಿಂಗಳು ಹೊತ್ತು ಹೆತ್ತು ಪೋಷಿಸಿದವಳಿಗೆ ಮಾತ್ರ ಆ ಮಗುವಿನ ಭಾವನೆ ತೊದಲು ನುಡಿ ಅರ್ಥವಾಗುವುದು. ತದನಂತರ ಮನದೊಳಗಿನ ಭಾವನೆಗಳನು ಅಭಿವ್ಯಕ್ತಪಡಿಸಲು ಸಹಾಯ ಮಾಡುವ ಮತ್ತೊಬ್ಬ ತಾಯಿಯೇ ಭಾಷೆ! ಮಾತು ಕಲಿಸುವ ಭಾಷೆಯೇ ಮಾತೃಭಾಷೆ! ಮಾತೃ ಎಂದು ಅದರಲ್ಲಿಯೇ ಇದೆಯಲ್ಲ ಎಲ್ಲವನ್ನು ನಾವು ಹೇಳದಿದ್ದರೂ ಅಭಿವ್ಯಕ್ತಪಡಿಸಲು ಇರುವ ಭಾವಸೇತುವೆ!

ವರ್ಷದಲ್ಲಿ ಮೂರು ಕಾಲಗಳು ನಿರಂತರವಾಗಿ ಸಾಗುತ್ತಿರುತ್ತವೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ಆಯಾ ಕಾಲಕ್ಕೆ ತಕ್ಕಂತೆ ನಮ್ಮಲ್ಲಿನ ಜೀವನದ ಅಳವಡಿಕೆ ಮತ್ತು ಚಟುವಟಿಕೆ ಬದಲಾಗುತ್ತ ಹೋಗುತ್ತದೆ. ಹಾಗೆಯೇ ಭಾವನೆಯೂ ಕೂಡ. ದಿನಗಳೆದಂತೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ. ಯೌವ್ವನ ಕುಂದುತ್ತಿರುತ್ತದೆ. ಆದರೆ ಮಾನಸಿಕವಾಗಿ, ಭಾವನಾತ್ಮಕವಾಗಿ ಇನ್ನಷ್ಟು ಬೆಳೆದು ಪರಿಪಕ್ವತೆ ಪಡೆದುಕೊಳ್ಳುತ್ತೇವೆ. ಇದೇ ರೀತಿ ಮರವೂ ಕೂಡ. ಅದು ಬೆಳೆಯುತ್ತಲೇ ಇದ್ದರೂ , ತನ್ನೆಲ್ಲ ಪೊರೆಯನ್ನು ಒಮ್ಮೆ ಕಳಚಿ ಹೊರ ಹಾಕುವ ಹಾವಿನಂತೆ, ತನ್ನ ಎಲ್ಲಾ ಜಡ ಎಲೆ ರೆಂಬೆ ಕೊಂಬೆಗಳನ್ನು ಉದುರಿಸುತ್ತದೆ. ಮತ್ತೆ ಹೊಸ ಚಿಗುರು ಹೊಸ ಉಸಿರು ಹೊಸ ಗಾಳಿ ಹೊಸ ಹುರುಪು ಮತ್ತೆ ತನ್ನೊಳಗಿನ ಚಿರಯೌವ್ವನವ ತಾನೂ ಅನುಭವಿಸಿ ತನ್ನ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳಿಗೂ ಒದಗಿಸುತ್ತ ನಿಸ್ವಾರ್ಥ ಭಾವದಿಂದ ತಟಸ್ಥವಾಗಿ ನಿಂತು, ತನ್ನ ಕರ್ತವ್ಯವನು ಮರೆಯದ ರೀತಿಯಲ್ಲಿ ಬದುಕುತ್ತಾ ಸಾಗುತ್ತಿರುತ್ತದೆ.

ಅದೇ ರೀತಿ ನಮ್ಮ ಪೂರ್ವಜರು ನಮಗಾಗಿ ಬಿಟ್ಟಿರುವ, ತಮ್ಮ ನಿಸ್ವಾರ್ಥ ಭಾವದಿ ಕೊಟ್ಟಿರುವ ಅನುಭವವೆಂಬ ಸಾಹಿತ್ಯ ಜ್ಞಾನಕ್ಕೆ ಚಿರ ಯೌವ್ವನ ಹೊತ್ತ ಭಾವನೆಯೆಂಬ ಕೀಲಿ ಕೈಯಲ್ಲಿ ನಡೆಯುವ ಸಾಹಿತ್ಯ ಮನಸ್ಸಿನ ಬೊಂಬೆಗೆ ಜೀವ ಕೊಟ್ಟು ಆತ್ಮಾನುಭೂತಿ, ಆತ್ಮಾವಲೋಕನ, ಆತ್ಮಸಂತೃಪ್ತಿ, ಆತ್ಮಶೋಧನೆ ಈ ರೀತಿ ತನ್ನೊಳಗಿನ ಮೂಕ ಅಭಿನಯವನ್ನು ಅಕ್ಷರದ ಮೂಲಕ ಹೊರ ತರಿಸುವ ಪ್ರಯತ್ನ ಮಾಡಬೇಕು. ದಿನ ನಿತ್ಯದ ಬದುಕಿನಲ್ಲಿ ಸುಖ ದುಃಖಗಳನ್ನು ಭಾವನೆಯ ತಕ್ಕಡಿಯಲಿ ಸರಿಯಾಗಿ ತೂಗುತ್ತಾ! ಅದರ ಸಾಧಕ ಬಾಧಕಗಳ ಏರು ಇಳಿತಗಳ ಅವಲೋಕಿಸಿ ಬದುಕಿನ ಮುಂದಿನ , ಹಿಂದಿನ ಹಾಗೂ ವಾಸ್ತವದ ಇನ್ನು ಮಿಗಿಲಾಗಿ ಮೂರಕ್ಕೂ ನಿಲುಕದ ಕಲ್ಪನೆಯ ಲೋಕದಲ್ಲಿ ಮನಕೆ ಬೇಕಾದಂತೆ ಭಾವನೆಯ ಜೊತೆ ಆಟವಾಡುತ್ತ ಆತ್ಮದೊಳಗಿನ ಲೋಕಕೆ ನಾವೇ ಸೃಷ್ಟಿಕರ್ತನಾಗಿ ಅನುಭವಿಸುವ ವಿನೋದವೇ ವಿಸ್ಮಯ. ಹಳೆಯ ನೆನಪುಗಳ ಮೆಲುಕು ಹಾಕುತ್ತ ತನ್ನ ತಪ್ಪು ಒಪ್ಪುಗಳ ಅವಲೋಕನ, ಜೊತೆಗೆ ಹೊಸ ಕನಸುಗಳಿಗೆ ಸರಕುಗಳ ಹುಡುಕುವ ಪ್ರಯತ್ನ ನಿರಂತರವಾಗಿ ಸಾಗುತ್ತಿರಬೇಕು.

ಮನುಷ್ಯ ಜೀವನದಲ್ಲಿ ಏಕಾಂತವೆಂಬುದು ಅತೀ ಉನ್ನತವಾದ ಘಟ್ಟ. ಏಕೆಂದರೆ ತನ್ನ ಬದುಕಿನ ಅಮೂಲ್ಯ ಕ್ಷಣವನ್ನು ಕಳೆಯುವ, ತನ್ನನ್ನೂ ತನ್ನ ಸಾಮರ್ಥ್ಯವನ್ನು ಅರಿಯುವ ಪ್ರಯತ್ನ ಮಾಡುವ, ತನ್ನ ಸಂಪೂರ್ಣ ವ್ಯಕ್ತಿತ್ವದ ಬಗ್ಗೆ ಜ್ಞಾನೋದಯವಾಗುವ ಕ್ಷಣವದು . ಇಂತಹ ಸಮಯದಲ್ಲಿಯೇ ಮನುಷ್ಯ ಭಾವಜೀವಿಯಾಗುವುದು, ಈ ಭಾವುಕತೆಯನ್ನು ಪ್ರತಿಯೊಬ್ಬರೂ ಸವಿಯಬೇಕು. ಬರುವ ಭಾವನೆಯಲ್ಲಿ , ಭಾವುಕತೆ, ಭಾವೋದ್ವೇಗ, ಭಾವೋಲ್ಲಾಸ ಎನ್ನುವ ಮೂರು ರಸಗಳು ಅತ್ಯುನ್ನತ ಪಾತ್ರ ವಹಿಸುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಭಾಷಾ ಜ್ಞಾನದ ಮೇಲೆ ನಿರ್ಧರಿತವಾಗುತ್ತದೆ. ಮಾತೃಭಾಷೆಯಾದಂತಹ ಕನ್ನಡವೂ ಸಹ ತಾಯಿಯಂತೆ. ಆಕೆಯ ಸಹಾಯದೊಂದಿಗೆ ನಮ್ಮ ಪ್ರಯತ್ನ ಸಾಗಬೇಕು ಅದಕ್ಕಾಗಿ ಡಿಗ್ರಿಗಳು ಬೇಕಿಲ್ಲ ಕೇವಲ ಕನ್ನಡವನ್ನು ಓದುವ ಮತ್ತು ಬರೆಯುವ ಅಕ್ಷರಮಾಲೆಯ ಉಪಯೋಗ ಸಾಕು. ತಿಳಿದಿರುವ ಭಾಷೆಗೆ ಅಕ್ಷರಗಳ ಅರಿತು ಬರೆಯಲು ಸಾಕಷ್ಟು ಸಮಯ ಬೇಕಾಗುವುದಿಲ್ಲ. ಸ್ವಲ್ಪ ಗಮನಹರಿಸುವ ತಾಳ್ಮೆ ಬೇಕು ಮತ್ತು ಆಸಕ್ತಿ ಇರಬೇಕಾಗುತ್ತದೆ. ಹೇಳಿದ ಆ ಮೂರು ಭಾವಗಳ ಜೊತೆಗೆ ತಲ್ಲೀನರಾದರೆ ಒಳಗಿರುವ ಕವಿಯ ಭಾವ ತಾನಾಗಿಯೇ ಹೊರಬರುತ್ತದೆ. ಆ ಭಾವನೆಗಳನ್ನು ಬಾಹ್ಯ ಪ್ರಪಂಚಕ್ಕೆ ಹೇಳುವ ಅಭಿವ್ಯಕ್ತಪಡಿಸುವ ಶಕ್ತಿ ಅಂತಹ ಪದಗಳಿಗೆ ಮಾತ್ರ ಇವೆ ಎಂದು ಹೇಳಬಹುದು. ಅಂತಹ ಶಕ್ತಿಯೇ ಸಾಹಿತ್ಯ. ಸಾಮಾನ್ಯ ಮಾತಿನಲ್ಲಿ ಹೇಳಬಹುದಾದರು, ಅದರ ಸಾರವನ್ನು ವಿಭಿನ್ನ ರೀತಿಯಲ್ಲಿ ತನ್ನದೇ ಆದ ಭಾಷಾ ಶಕ್ತಿಯ ಮೂಲಕ ಹೊರ ತರುವ ಮತ್ತು ಅದನ್ನು ಓದುಗರಿಗೆ ಆಸ್ವಾದಿಸಲು ಅಂತರಂಗವನ್ನು ಅರ್ಥೈಸಿಕೊಳ್ಳಲು ಎಡೆ ಮಾಡಿಕೊಡುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳು ವಿಭಿನ್ನ ರೀತಿಯ ಆತ್ಮಾನುಭೂತಿಕೊಡುತ್ತವೆ.

ಓದುವಾಗ ಮನದೊಳಗಿನ ಭಾವಲೋಕದಲ್ಲಿ ಸ್ವಂತ ಅನುಭವಗಳ ಸಹಾಯದಿಂದ ಭಾವಚಿತ್ರಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಮನಸ್ಸಿಗೆ ಉಲ್ಲಾಸ ಜೊತೆಗೆ ಇನ್ನೊಂದು ಆತ್ಮದ ಭಾವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಬರುತ್ತದೆ. ಮನುಷ್ಯ-ಮನುಷ್ಯನನ್ನು ಇಂದ್ರಿಯಾತ್ಮಕವಾಗಿ ಗ್ರಹಿಸುವದಕ್ಕಿಂತ ಭಾವನಾತ್ಮಕವಾಗಿ ಮತ್ತು ಅವನ ಅಂತರಾಳವನ್ನು ಓದುವ ಶಕ್ತಿ ಬೆಳೆಸಿಕೊಳ್ಳಬೇಕಾಗುತ್ತದೆ. ಅಂತಹ ಕಲೆಗಳಲ್ಲಿ ಸಾಹಿತ್ಯವೂ ಒಂದು ಉತ್ತಮವಾದ ಕಲೆ ಎಂದೇ ಹೇಳಬಹುದು. ಕನ್ನಡದ ಕಂಪು ಎಲ್ಲೆಲ್ಲೂ ಸೂಸುತಿರಲಿ. ಆತ್ಮದ ಸತ್ಯಾನ್ವೇಷಣೆಯಾಗಲು ಬರೆಯುವುದು ಹಾಗು ಓದುವುದೂ ಒಂದು ಮಾಧ್ಯಮ ಕೂಡ ಹೌದು. ಹೆಚ್ಚು ಓದುತ್ತಾ ಓದುತ್ತಾ ತನ್ನ ಸ್ವಂತ ಅನುಭವಗಳ ಅವಲೋಕನ ಮಾಡಬೇಕಾಗುತ್ತದೆ. ತನ್ನ ಅನುಭವಕ್ಕೆ ಭಿನ್ನವಾಗಿದಲ್ಲಿ, ತನ್ನ ಅನುಭವವನ್ನು ತನ್ನದೇ ಆದ ಸಾಮರ್ಥ್ಯದೊಂದಿಗೆ ಅಭಿವ್ಯಕ್ತಪಡಿಸುವ ರೀತಿಯಲ್ಲಿ ಬರಹವಾಗಿ ಮಾರ್ಪಡಿಸಿದರೆ ಎಲ್ಲರನ್ನು ತಲುಪಬಹುದಾಗಿದೆ. ಜಗತ್ತಿಗೆ ಏನನ್ನೂ ಕೊಡಲಾಗದಿದ್ದರೂ ಜ್ಞಾನದ ಬುಟ್ಟಿಯ ಕೊಟ್ಟು, ಮನುಷ್ಯರಾಗಿ ಬಾಳುತ್ತ ಮನುಕುಲದ ಮನುಷ್ಯತ್ವವ ಉಳಿಸಿಕೊಳ್ಳೋಣ . ಅನುಭವಗಳ ಸರಮಾಲೆಯ ಹೊತ್ತ ಸಾಹಿತ್ಯಗಳ ಸುಗಂಧ ಸದಾ ಹಸಿರಾಗಿರಲಿ, ಅದರ ಪರಿಮಳ ಎಲ್ಲೆಲ್ಲೂ ಹರಡುತ್ತಿರಲಿ. ಬದುಕಿನ ಸುಖ -ದುಃಖಗಳ ಅರಿತು ಜ್ಞಾನವೆಂಬ ದೀವಿಗೆಯ ಹೊತ್ತಿಸಿ ಸಾಹಿತ್ಯದ ಲೋಕವ ಎಲ್ಲರಿಗೂ ಗೋಚರವಾಗುವಂತೆ ಬೆಳೆಸೋಣ. ಕನ್ನಡದ ಹೆಸರನ್ನು ಉಳಿಸೋಣ!

ಪ್ರೀತ್ಯಾದರಗಳೊಂದಿಗೆ,
ಗಣೇಶ್ ಜಿ ಪಿ
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Sunday 31 March 2013

ಬನ್ನಿ ಜೊತೆಯಾಗೋಣ!

ಆತ್ಮೀಯ ಸದಸ್ಯರೇ,

ಕನ್ನಡ ಬ್ಲಾಗ್ ಮಾರ್ಚ್ ತಿಂಗಳ ಸಂಪಾದಕೀಯ ಅನಿವಾರ್ಯವಾಗಿ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಅತಿ ಬೇಸರದ ವಿಷಯವೊಂದನ್ನು ಮತ್ತೆ ನಾವು ಪ್ರಸ್ತಾಪಿಸಲೇ ಬೇಕಾದ ಸಂದರ್ಭ. ೨೦೧೦ರ ಸರಿ ಸುಮಾರಿನಲ್ಲಿ ಕನ್ನಡ ಬ್ಲಾಗ್ ಎಂಬ ಈ ಗುಂಪು ತನ್ನ ಮೊಗ್ಗರಳಿಸುತ್ತಿರುವಾಗ ಅದನ್ನು ಪೋಷಿಸಿ, ಬೆಳೆಸುವ ಮಹದಾಸೆ ಹೊತ್ತು, ನಿರ್ವಾಹಕರೆಲ್ಲರಿಗೆ ಬೆನ್ನೆಲುಬಾಗಿ ನಿಂತು, ಮನದಾಳದ ಅರುಹುಗಳ ಮೂಲಕ ಬರಹಗಾರರಿಗೆ ಮಾರ್ಗದರ್ಶನ, ಸ್ಪೂರ್ತಿಯಾದಂತವರು ರವಿ ಮೂರ್ನಾಡ್. ಅಗಲಿದ ಆ ಕನ್ನಡ ಕುವರರಿಗೆ ಕುಸುಮಾಂಜಲಿಯನ್ನು ಅರ್ಪಿಸುತ್ತಾ ಈ ಸಂಪಾದಕೀಯವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅವರು ಕನ್ನಡ ಬ್ಲಾಗ್ ಬಗ್ಗೆ ಹೊತ್ತ ಕನಸುಗಳನ್ನು ನನಸುಗೊಳಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳನ್ನಿಡುವ ಮುಖಾಂತರ ಆ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ.

ಅಂದು ಮಾರ್ಚ್ ಹದಿನೇಳು ಭಾನುವಾರ. ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧವಾದ 'ಮಂಕುತಿಮ್ಮನ ಕಗ್ಗ'ವನು ಸಾಹಿತ್ಯ ಲೋಕಕ್ಕಿತ್ತ ಧೀಮಂತ ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪನವರ ೧೨೬ನೇ ಜನ್ಮದಿನಾಚರಣೆಯ ಸುದಿನ. ವರುಷದ ಹಿಂದೆ ಕಂಡ ಕನಸೊಂದು ನನಸಾಗಿ ನಿಂತು ಅಭೂತಪೂರ್ವ ಕ್ಷಣವೊಂದು ಸಾರ್ಥಕ್ಯವನ್ನು ಕಂಡದ್ದು ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ತನ್ನ ಜೀವನದನುಭವಗಳನ್ನು ಡಿ.ವಿ.ಜಿ ಯವರ ಪ್ರತೀ ಮುಕ್ತಕಕ್ಕೂ ಅಳವಡಿಸಿಕೊಂಡು, ಆ ಮುಕ್ತಕಗಳ ವ್ಯಾಖ್ಯಾನ ಮಾಡಿ ನಮಗೆ ಉಣಬಡಿಸಿದವರು ಶ್ರೀಯುತ ರವಿ ತಿರುಮಲೈ. ಇದೇ ವ್ಯಾಖ್ಯಾನ ಇದೀಗ ಕಗ್ಗರಸಧಾರೆಯೆಂಬ ಮೊದಲ ಸಂಪುಟ.

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ, ಸನ್ಮಾನ್ಯ ವಿಶುಕುಮಾರ್, ಚಂದ್ರಮೌಳಿ, ಸುಬ್ಬಕೃಷ್ಣ, ಪಿ ಎಸ್ ರಾಜ್ ಗೋಪಾಲ್, ಪ್ರೊ.ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ ಇವರ ಉಪಸ್ತಿತಿಯ ಮೆರುಗಿತ್ತು ಈ ಕಾರ್ಯಕ್ರಮದಲ್ಲಿ. ಡಿ.ವಿ.ಜಿಯವರ ಜೀವನದ ಮೇಲೆ ಬೆಳಕು ಚೆಲ್ಲುವ ಕಿರುಚಿತ್ರದ ಮುಖೇನ ಗಮನಸೆಳೆದ ಈ ವಿನೂತನ ಕಾರ್ಯಕ್ರಮದ ಮುಖಾಂತರ ಕನ್ನಡ ಬ್ಲಾಗ್ ಫೇಸ್ಬುಕ್ ಪ್ರಪಂಚದಿಂದ ತನ್ನಡಿಯಿಟ್ಟದ್ದು ಹೊರಜಗತ್ತಿಗೆ.ಕಾರ್ಯಕ್ರಮದ ರೂವಾರಿಗಳ ಕಾರ್ಯದಕ್ಷತೆಗೆ ನಮ್ಮ ನಮನ ತನ್ಮೂಲಕ. ವೇದಿಕೆಯ ಮೇಲೆ ಉಪಸ್ಥಿತರಿದ್ದ ಅನುಭವಿಗಳ ಹಿತನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಹೃದಯರನ್ನೂ ರೋಮಾಂಚನಗೊಳಿಸಿತ್ತು ಅನ್ನುವುದಕ್ಕೆ ಬಂದ ಮೆಚ್ಚುಗೆಗಳೇ ಸಾಕ್ಷಿಯೆಂದು ಕೊಳ್ಳುತ್ತೇವೆ.

ಏನೇ ಇರಲಿ, ಕಾರ್ಯಕ್ರಮವೊಂದು ಉತ್ತಮರೀತಿಯಲಿ ಸಂಘಟಿತವಾಗಬೇಕಾದರೆ ಅದರ ಹಿಂದೆ ಕಾರ್ಯನಿರ್ವಹಿಸುವ ನಿಸ್ವಾರ್ಥ ಮನಸುಗಳು ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಅತ್ಯದ್ಭುತ ಕಾರ್ಯಕ್ರಮದ ರೂವಾರಿಯಾದವರು ಎಮ್. ಎಸ್ ಪ್ರಸಾದ್. ಅವರನ್ನು ಅಭಿನಂದಿಸದಿದ್ದರೆ ಬಹುಷಃ ನಮ್ಮೀ ಸಂಪಾದಕೀಯಕ್ಕೆ ಮೆರುಗು ಸಿಗಲಾರದು. ಪ್ರತಿಯೊಬ್ಬರ ಹೆಸರನ್ನೂ ಪ್ರಸ್ತುತ ಪ್ರಸ್ತಾಪಿಸಲಾಗದಿದ್ದರೂ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಪ್ರತಿಯೋರ್ವರಿಗೂ ಕನ್ನಡ ಬ್ಲಾಗ್ ತಂಡ ಚಿರಋಣಿ.

ಹಾಗಂಥ ಈ ಕಾರ್ಯಕ್ರಮವನ್ನು ಕೇವಲ ಕಗ್ಗರಸಧಾರೆಯ ಮಟ್ಟಿಗೆ ಸೀಮಿತಗೊಳಿಸಲಾಗುತ್ತಿಲ್ಲ ಮಿತ್ರರೇ. ಕನ್ನಡ ಬ್ಲಾಗ್ ಕೇವಲ ಒಂದು ಗುಂಪಾಗದೇ, ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿದೆಯೆಂದರೆ ಅದು ತಪ್ಪು, ಮುಂದಿನ ದಿನಗಳಲ್ಲಿ ಕಲೆ, ಸಂಸ್ಕೃತಿ, ಸಾಮಾಜಿಕ ಕಳಕಳಿಯನ್ನು ಹೊತ್ತು ತರುವ ಕಾರ್ಯಕ್ರಮಗಳ ಇಂಗಿತವನ್ನೂ ಹೊಂದಿದೆ. ತನ್ನ ಕಾರ್ಯಕ್ಷೇತ್ರದ ವ್ಯಾಪಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಲವು ಸದಸ್ಯರಿಂದ ಬಂದ ಮನವಿ, ಪ್ರೋತ್ಸಾಹವನ್ನು ಸದ್ಯದಲ್ಲೇ ಕಾರ್ಯಗತಗೊಳಿಸುವ ಇರಾದೆಯೂ ಕೂಡ. ಇದು ಕೇವಲ ನಿರ್ವಾಹಕರು, ಕನ್ನಡ ಬ್ಲಾಗ್ ಸದಸ್ಯರಲ್ಲದೇ ಅನೇಕ ಸಹೃದಯರ ಸಲಹೆ, ಸೂಚನೆಯ ಮೇರೆಗೆ ಮುಂದುವರಿಯುತ್ತಿದ್ದೇವೆ. ಕನಸುಗಳನ್ನು ನನಸುಗೊಳಿಸುವ ದಿಟ್ಟ ಹೆಜ್ಜೆ ನಮ್ಮ-ನಿಮ್ಮೆಲ್ಲರದು.

ಆ ಕನಸುಗಳನ್ನು ನನಸುಗೊಳಿಸುವ ಪ್ರಪ್ರಥಮ ಹೆಜ್ಜೆಯಾಗಿ ಕಗ್ಗರಸಧಾರೆಯಂಥ ಕಾರ್ಯಕ್ರಮಗಳ ಆಯೋಜನೆ. ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮ, ಕಲೋಪಾಸನೆಯಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮುಖೇನ ನಮ್ಮ ತರುಣ ಹೃದಯಗಳನ್ನು ಸೆಳೆಯುವ ಪ್ರಯತ್ನ . ಎತ್ತೆತ್ತಲೋ ಸಾಗುತ್ತಿರುವ ನಮ್ಮ ಯುವ ಮನಸ್ಸುಗಳ ದಾರಿಯಲ್ಲಿ ಈ ಸೆಳೆತಗಳ ಮೂಲಕ ನಮ್ಮ ಕಲೆ, ಸಂಸ್ಕೃತಿಗೆ ಅಳಿಲು ಸೇವೆಗೈವ ತವಕ.

ಪ್ರಿಯ ಸದಸ್ಯರೇ, ಇದು ನಿಮ್ಮದೇ ಕಾರ್ಯಕ್ರಮ. ನಿಮ್ಮ ಕೃತಿಗಳ ಬಿಡುಗಡೆಗೂ ನಾವಿದ್ದೇವೆ. ನಿಮ್ಮೊಳಗಿನ ಕಲೆ,ಸಾಹಿತ್ಯ, ಸಂಗೀತದೊಲವಿಗೂ ನಾವು ಜೊತೆಗಿರುತ್ತೇವೆ. ನೀವು ನಾವಾಗುತ್ತೇವೆ. ನಿಮ್ಮ ಕಾರ್ಯಕ್ರಮ ನಮ್ಮದಾಗಲಿ. ನಮ್ಮ ನಿಮ್ಮೆಲ್ಲರದಾಗಲಿ. ಬನ್ನಿ ಕೈ ಜೋಡಿಸೋಣ. ಡಿ.ವಿ.ಜಿ, ಜೀಪಿ ರಾಜರತ್ನಂ, ಕುವೆಂಪು, ಬೇಂದ್ರೆ, ಪು.ತಿ.ನ, ಕೆ.ಎಸ್.ನ ಒಬ್ಬಿಬ್ಬರಲ್ಲ, ಎಲ್ಲರನೂ ಮತ್ತೆ ಕರೆತರೋಣ. ಅವರೊಳಗಿನ ತುಡಿತವನು ಮತ್ತೆ ಅರಿಯೋಣ ಬನ್ನಿ, ಮೆರೆಯೋಣ ಬನ್ನಿ.

ಆತ್ಮೀಯತೆಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಾಹಕ ತಂಡ

Thursday 28 February 2013

ಅರುಹುಗಳ ಅರಿತು ಅರಗಿಸಿಕೊಂಡು ಬರೆಯೋಣ ಬನ್ನಿ!


ಕಾಲ ಬದಲಾಗಿದೆ ನಿಜ. ನವೋದಯ, ನವ್ಯ, ನವ್ಯೋತ್ತರ, ಪ್ರಗತಿಶೀಲ, ಬಂಡಾಯ ಹೀಗೆ ನಿನ್ನೆ ಮೊನ್ನೆ ಇದ್ದಂತೆ ಇಂದಿಲ್ಲ ಈ ಸಾಹಿತ್ಯ ಯುಗ. ನಾಳೆ ಮತ್ತೊಂದು ಹೊಸ ಪ್ರಕಾರಕ್ಕೂ ಅಡಿಗಲ್ಲಿಡಲೂಬಹುದು. ಕಾಲ ಬದಲಾದಂತೆ ಬದಲಾವಣೆಯ ಗಾಳಿ ಬೀಸುವುದು ಅನಿವಾರ್ಯ. ನಿಂತ ನೀರಲ್ಲ ಈ ಸಾಹಿತ್ಯಕೃಷಿ. ಹರಿವ ನದಿಯಂತೆ ಅನುದಿನವೂ ಹೊಸಹೊಸ ಹರಿವನ್ನು ಈ ಸಾಹಿತ್ಯಕಡಲಿನ ಒಡಲಿಗೆ ಹರಿಯಗೊಡುತ್ತಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣೀಭೂತರು ನಮ್ಮ ಬರಹಗಾರ ಬಳಗ. ಕಾಲ ಬದಲಾದಂತೆ ಪ್ರಾಯಃ ಬರಹಗಾರರಿಗೇನೂ ಕೊರತೆಯಾದಂತಿಲ್ಲ. ಬರಹವನ್ನೇ ವೃತ್ತಿ ಮಾಡಿಕೊಂಡವರು ಹಲವರಾದರೆ, ಇನ್ನೂ ಪ್ರವೃತ್ತಿಯಾಗಿ ಮಾಡಿಕೊಂಡವರದು ಮತ್ತೊಂದು ಬಳಗ. ಈ ಎರಡೂ ಪಂಗಡಗಳು ಬರಹಕ್ಷೇತ್ರಕ್ಕೆ ಅಪಾರವಾದ ಅಷ್ಟೇ ಅಪೂರ್ವವಾದ ಕೊಡುಗೆಗಳನ್ನಿತ್ತದ್ದು ದಿಟ.

ಈ ಉದಾರ ಕೊಡುಗೆಗಳ ಹಿಂದಿನ ಬೆಳಕು ಬರಹಗಾರರೆನ್ನುವುದು ನಿಜ. ಆದರೆ ಕೇವಲ ಬರಹಗಾರ ತನ್ನ ಕೊಡುಗೆಗಳನ್ನು ಕೊಟ್ಟು ಸುಮ್ಮನೇ ಕೂತರೆ ಅದು ಬೆಳಕಿಗೆ ಬರುವುದಾದರೂ ಹೇಗೆ? ತನ್ನ ಅಪೂರ್ವತನವನ್ನು, ಅದರೊಳಗಿನ ಸುಗಂಧವನ್ನು ಹೊರಸೂಸುವುದಾದರೂ ಹೇಗೆ? ಆ ಸುಗಂಧವನ್ನು ಹೀರಲು ಬರುವ ದುಂಬಿ ಓದುಗ ಮಹಾಶಯ. ಈ ಓದುಗ ಮಹಾಶಯರನ್ನು ಸೃಷ್ಟಿಸುವುದಾದರೂ ಹೇಗೆ?ಬರಹಗಾರ ತನ್ನ ಬರಹಗಳನ್ನು ಪ್ರಕಟಿಸುವಾಗ ಆ ಬರಹಕ್ಕೆ ಓದುಗರಿರುತ್ತಾರೆ ಎನ್ನುವ ಆಶಯವನಿಟ್ಟುಕೊಂಡೇ ಪ್ರಕಟಿಸುತ್ತಾನೆ. ಹೌದು. ಯಾವುದೇ ಬರಹಕ್ಕಾದರೂ ಓದುಗನಿರಲೇಬೇಕು. ಅವನಿಲ್ಲದಿದ್ದರೆ ಬರಹದ ಉದ್ದೇಶ ಸಾರ್ಥಕವಾಗದು. ಮೂಲಭೂತವಾಗಿ ಪ್ರತಿಯೊಬ್ಬ ಬರಹಗಾರನ ಮನದಲ್ಲಿ ಮೂಡಬಹುದಾದ ಪ್ರಶ್ನೆ "ಓದುಗನ ಸೃಷ್ಟಿ ಹೇಗೆ" ಅನ್ನುವುದು. ಈ ಅಂಶಕ್ಕೆ ಯಾವ ಲೇಖಕನೂ ಹೊರತಾಗಿರಲಾರ, ಅದಂತೂ ಸತ್ಯ. ಆದರೆ ಓದುಗ ಪ್ರಪಂಚದ ಸೃಷ್ಟಿ ಸಾಧ್ಯವೇ? ಹೇಗೆ ಎನ್ನುವ ಪ್ರಶ್ನಾರ್ಥಕ ಚಿಹ್ನೆಗೂ ಉತ್ತರವಿರದಿರದು. ಪ್ರತಿಯೊಬ್ಬ ಲೇಖಕನು ತನ್ನ ಬರಹಗಳ ಮೂಲಕ ಸೆಳೆದು ತನ್ನದೇ ಆದ ಓದುಗ ಪ್ರಪಂಚವನ್ನು ಸೃಷ್ಟಿಸಿಕೊಳ್ಳುವ ಕಾತರ ಹೊಂದಿರುತ್ತಾನೆ. ಬಹುಷಃ ಈ ಪ್ರಕ್ರಿಯೆಗೆ ಆತ ತನ್ನ ಬರಹಗಳನ್ನು ಮಾರಬೇಕಾದ ಸನ್ನಿವೇಶ ಬಂದರೂ ಅಚ್ಚರಿಯಿಲ್ಲ. ಇಲ್ಲಿ ಮಾರಾಟ ಪದವೆನ್ನುವುದು ಅದು ದುಡ್ಡಿಗೆ ಕೊಂಡುಕೊಳ್ಳು ಎಂಬರ್ಥದಲ್ಲಿ ಇಲ್ಲ. ಹೊಸಬರಹಗಾರನಾಗಿ ತಾನು ಅರಳುವ ಸಮಯದಲ್ಲಿ ಆತ ಬರಹದ ಘಮವನ್ನು ಬಿತ್ತಲೇ ಬೇಕಾಗುತ್ತದೆ. ತನ್ಮೂಲಕ ಬರಹಕ್ಕೆ ಓದುಗನನ್ನು ಎಳೆದು ತರಬೇಕಾದ. ಸಕಲ ಸಾಹಸವನ್ನು ಮಾಡಲೇಬೇಕಾಗುತ್ತದೆ. ಈಗಾಗಲೇ ಬರಹ-ಮಾರುಕಟ್ಟೆಯಲ್ಲಿ ನೆಲೆಯೂರಿರುವ ಅತಿರಥ ಮಹಾರಥರ ಎದುರಿಗೆ ತನ್ನ ಬರಹವನ್ನು ವಾಣಿಜ್ಯಕರಣಗೊಳಿಸಬೇಕಾದ ಸಂದರ್ಭವೂ ಎದುರಾದರೆ ಅದು ಅಚ್ಚರಿಯೇನಲ್ಲ.

ಮೇಲೆ ಉಲ್ಲೇಖಿಸಿದಂತೆ, ವಾಣಿಜ್ಯಕರಣಗೊಳಿಸುವ ಉದ್ದೇಶದಿಂದಲೇ ಬರಹಗಾರ ಸನ್ನದ್ಧನಾಗಿ ನಿಂತು ಪ್ರತಿಯೊಬ್ಬ ಓದುಗರನ್ನೂ ಆಕರ್ಷಿಸುವ ಆತುರಕ್ಕೊಳಗಾದರೆ ಕಷ್ಟ. ಮತ್ತದು ಸರಿಯೂ ಅಲ್ಲ. ಆಯಾಯ ಬರಹಕ್ಕೆ ಆಯಾಯ ಓದುಗರಿರುತ್ತಾರೆ ಎನ್ನುವ ಸತ್ಯ ಆರಿಯಬೇಕಾದದ್ದು ಬರೆಯುವವನ ಧರ್ಮ. ಒಬ್ಬರಿಗೊಂದು ರುಚಿಸಿದರೆ, ಇನ್ನೊಬ್ಬರಿಗೊಂದು. ಮಳೆಗಾಲದಲ್ಲಿ ಹಪ್ಪಳವೇ ಗತಿಯಾದರೆ, ಬೇಸಗೆಯಲ್ಲೂ ಅದನ್ನೇ ಮುಂದುವರಿಸುವ ಪರಿಪಾಠ ಓದುಗನದಲ್ಲ. ವೈವಿಧ್ಯಮಯವಿದ್ದರೆ ಬೆಲ್ಲಕ್ಕಿರುವೆ ಮುತ್ತಿದಂತೆ ಮುತ್ತುವುದು ಸಹಜವಾಗಬಹುದು. ಹಾಗಂಥ ಎಲ್ಲವನ್ನೂ ಸಿಹಿಯಾಗಿಯೇ ಬರೆಯಲೂ ಅಸಾಧ್ಯ. ಪ್ರಸ್ತುತ ಸನ್ನಿವೇಶ, ಸಾಮಾಜಿಕ ನಡವಳಿಕೆ, ರಾಜಕೀಯ ವಿದ್ಯಮಾನಗಳ ಸಮ್ಮಿಳನವಲ್ಲಿರಲೇಬೇಕು. ಕೆಲವೊಮ್ಮೆ ಕಹಿ ಎನಬಹುದಾದ ಖಡಕ್ ಚಹಾದಂತ ಒಗರುಗಳನ್ನೂ ಓದುಗನೆದೆಗೆ ಇಳಿಸುವಂಥ ಪ್ರಯತ್ನವನ್ನೂ ಮಾಡಲೇಬೇಕು. ಆದರೆ ಓದುಗನು ಎಲ್ಲಾ ಬರಹದೊಳಗೆ ಇಳಿಯಲೇಬೇಕೆನ್ನುವ ಹಕ್ಕೊತ್ತಾಯ ಸಲ್ಲ.

ಇನ್ನುಳಿದಂತೆ ಬರವಣಿಗೆಯ ಸಂಖ್ಯೆ, ಅಂಕಿಅಂಶಗಳು. ಲೇಖಕ ಜೋಗಿಯವರು ತನ್ನ 'ಹಲಗೆ ಬಳಪ' ಎನ್ನುವ ಹೊತ್ತಗೆಯಲ್ಲಿ ಒಂದು ಕಡೆ ಅತಿವೃಷ್ಟಿ ಸಾಹಿತ್ಯಕ್ಕೆ ಶತ್ರು ಎನ್ನುತ್ತಾರೆ. ಇದನ್ನು ಲೇಖಕರೆನಿಸಿಕೊಂಡವರೆಲ್ಲರೂ ಗಮನಿಸಲೇಬೇಕು. ಏನನ್ನಾದರೂ ಬರೆದೇ ತೀರುವೆ ಎನ್ನುವ 'ಹಠಮಾರಿ' ಧೋರಣೆಯಲ್ಲಿ ಬರೆವ ಸಾಲುಗಳು ಬಹುಶಃ ಹೆಚ್ಚಿನ ಓದುಗರನ್ನು ತಲುಪದಿರಬಹುದು. ದಿನಕ್ಕೆ ಹತ್ತು ಹಲವು ಬರೆವ ಬರವಣಿಗೆಗಾರ ತಾನು ಏನನ್ನು ಮೊದಲು ಹೇಳಹೊರಟಿದ್ದೇನೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗಬೇಕು. ನಿನ್ನೆ ಬಳಸಿದ ಪದ, ಅಕ್ಷರಗಳೇ ಇಂದಿನ ಬರಹದಲ್ಲೂ, ಅದರ ಭಾವವೇ ಇಂದಿನದರಲ್ಲೂ ಪದೇ ಪದೇ ಮರುಕಳಿಸಬಾರದು. ಬರೆದುದದನ್ನು ಮತ್ತೆ ಓದಿ. ಮಗದೊಮ್ಮೆ ಓದಿ, ಈ ಪ್ರಕ್ರಿಯೆ ಮರುಕಳಿಸಿ ಆ ಬರಹವೆನ್ನುವುದು ಕುಲುಮೆಯದ್ದಿದ ಲೋಹದ ಹೊಳಪಿನಂತನಿಸಿದರೆ ಓದುಗ ಮಹಾಶಯನ ತೆಕ್ಕೆಗೆ ಹರಿಯಬಿಡಬಹುದು. ಅದು ಮುಂಜಾವ ಚಿನ್ನವರ್ಣದ ರವಿರಶ್ಮಿಯಂತೆ ಕಂಗೊಳಿಸದರೆ ಸಾರ್ಥಕತೆ ಪಡೆಯಬಹುದು. ಆ ನಿಟ್ಟಿನಲ್ಲಿ ಬರಹಗಾರರು ತಮ್ಮ ಪ್ರಯತ್ನ ಮುಂದುವರಿಸಬೇಕಾದದ್ದು ಅನಿವಾರ್ಯ.

ಬನ್ನಿ ಒಂದಷ್ಟು ಓದೋಣ ಮೊದಲು... ಅರಿತು, ಅರಗಿಸಿಕೊಂಡು, ಅರುಹೋಣ ನವಿರಾಗಿ ಬರಹರೂಪದಲಿ!

ಶುಭವಾಗಲಿ ಸರ್ವರಿಗೂ

ಪ್ರೀತಿಯಿಂದ,
ಪುಷ್ಪರಾಜ್ ಚೌಟ
ಕನ್ನಡ ಬ್ಲಾಗ್ ನಿರ್ವಹಣಾ ತಂಡ.

Thursday 31 January 2013

ಬಂಡಾಯ - ಸಾಹಿತ್ಯದಲ್ಲೊಂದು ಹೊಸ ಹುಟ್ಟು ಹಾಕುತ್ತಾ!


ಯಾವುದೇ ಒಂದು ಸಾಹಿತ್ಯದ ಹುಟ್ಟು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಎಲ್ಲಾ ತರಹದ ಸಾಹಿತ್ಯಗಳು ಸಾರ್ವಕಾಲಿಕವಾಗಲಾರವು, ಸಾರ್ವಕಾಲಿಕವೆನ್ನಿಸಿದವು ಕೆಲವೇ ಕೆಲವು, ಸಮಾಜದ ಸೈದ್ಧಾಂತಿಕ ಹಾಗೂ ತಾತ್ವಿಕ ಹಿನ್ನೆಲೆಗಳನ್ನು ಕುರಿತು ಗಂಭೀರವಾಗಿ ವಿಚಾರ ಮಾಡತೊಡಗಿದಾಗ ಸಾಹಿತ್ಯ ಚಳುವಳಿಗಳು ಹುಟ್ಟಿಕೊಳ್ಳುತ್ತವೆ, ಇಂಥಹ ವಿಚಾರಗಳೇ ಮನೋಧರ್ಮಗಳಾಗಿ ತನ್ನದೇ ಆದ ಒಂದು ಸಾಹಿತ್ಯದ ವಿಧವನ್ನೇ ಹುಟ್ಟುಹಾಕುವ ಸಂದರ್ಭಗಳು ಬರಬಹುದು. ಹೀಗೆ ರೂಪುತಳೆದದ್ದೇ 'ಬಂಡಾಯ ಅಥವಾ ದಲಿತ ಸಾಹಿತ್ಯ ಎನ್ನುವ ಒಂದು ಪ್ರಕಾರ. ಕನ್ನಡ ಸಾಹಿತ್ಯದಲ್ಲಿ ನವ್ಯೋತ್ತರ ಅಥವಾ ಬಂಡಾಯ ಸಾಹಿತ್ಯ ತನ್ನ ಅಸ್ಥಿತ್ವ ಕಂಡುಕೊಂಡದ್ದು ಎಪ್ಪತ್ತರ ದಶಕದಲ್ಲಿ, ಹೊಸಗನ್ನಡ ಸಾಹಿತ್ಯದ ಈ ನಾಲ್ಕನೆಯ ಆಯಾಮವನ್ನೇ ಇವತ್ತು ಬಂಡಾಯ ಸಾಹಿತ್ಯದ ಸಂದರ್ಭವೆಂದು ಗುರುತಿಸಲಾಗುತ್ತದೆ. ಈ ಮೊದಲೇ ಹೇಳಿದಂತೆ ಬಂಡಾಯ ಅನ್ನುವುದೊಂದು ಮನೋಧರ್ಮ. ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳನ್ನು, ಒಟ್ಟಾರೆಯಾಗಿ ವಸ್ತುಸ್ಥಿತಿಯನ್ನು ಪ್ರಶ್ನಿಸುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಪ್ರತಿಭಟಿಸುವ ಒಂದು ಪ್ರವೃತ್ತಿ ಈ ಮನೋಧರ್ಮದ ಮುಖ್ಯ ಲಕ್ಷಣವಾಗಿದೆ. ಈ ಕಾಲಘಟ್ಟದ ತನಕ ನಮ್ಮ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳಿದ್ದುವೇ ಹೊರತು, ಪ್ರತಿಭಟನೆಯನ್ನೇ ಒಂದು ಮೌಲ್ಯವೆಂದು ಒಪ್ಪಿಕೊಂಡ ಪ್ರತಿಭಟನಾ ಸಾಹಿತ್ಯವೆಂಬುದು ಇರಲಿಲ್ಲ. ಇದಕ್ಕಿಂತ ಮೊದಲು ಶರಣರ ವಚನ ಸಾಹಿತ್ಯದಲ್ಲಿ ನೇರವಾಗಿ ಪ್ರಶ್ನಿಸುವ ಅಂಶಗಳಿದ್ದವಾದರೂ ಪರಿಪೂರ್ಣವಾಗಿ ಪ್ರಶ್ನಿಸುವ ಗುಣವಿರಲಿಲ್ಲ. ಹೀಗೆ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶವಿರುವುದಕ್ಕಿಂತ ಸಾಹಿತ್ಯವೇ ಪ್ರತಿಭಟನೆಯಾಗಿ ಹೊಸಹುಟ್ಟು ಕಂಡಿತ್ತು ಬಂಡಾಯ.

ನವೋದಯ ಚಳುವಳಿಯ ಹಿಂದೆ ಪಶ್ಚಿಮದ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯವೂ, ಪ್ರಗತಿಶೀಲ ಚಳುವಳಿಯ ಹಿಂದೆ ಯೂರೋಪಿನ ವಾಸ್ತವವಾದೀ ಚಳುವಳಿಗಳೂ, ನವ್ಯದ ಹಿಂದೆ ಪಶ್ಚಿಮದ ಎಲಿಯಟ್, ಅಡೆನ್, ಎಝ್ರಾಪೌಂಡ್ ಇವರ ಕಾವ್ಯದ ಮಾದರಿಗಳೂ, ದಲಿತ-ಬಂಡಾಯದ ಹಿಂದೆ ಎಡಪಂಥೀಯ ಧೋರಣೆಗಳಿಂದ ರೂಪುಗೊಂಡ ಭಾರತೀಯ ಹಾಗೂ ಜಾಗತಿಕ ಪ್ರತಿಭಟನಾ ಸಾಹಿತ್ಯ ಸಂದರ್ಭಗಳೂ ಪ್ರೇರಣೆಗಳಿಂದ ಕೆಲಸ ಮಾಡಿವೆ. ಆದರೆ ಕನ್ನಡದಲ್ಲಿ ಈ ಚಳುವಳಿಗಳ ಸಂದರ್ಭದಲ್ಲಿ ರೂಪುಗೊಂಡ ಬಂಡಾಯ ಸಾಹಿತ್ಯವು ತಾನು ಪ್ರೇರಣೆ ಪಡೆದ ಪಶ್ಚಿಮದ ಸಾಹಿತ್ಯಗಳ ಅನುಕರಣೆಯಾಗಲೀ, ಅನುಸರಣವಾಗಲೀ ಆಗಿಲ್ಲ ಎನ್ನುವುದು ತುಂಬ ಮಹತ್ವದ ಸಂಗತಿ. ಮನುಷ್ಯ ಮನುಷ್ಯನನ್ನು ಶೋಷಣೆಗೆ ಒಳ ಪಡಿಸುವ ತಂತ್ರಗಳನ್ನು ಕುರಿತು ಪ್ರತಿಭಟನೆಯೂ ಪ್ರಜಾಪ್ರಭುತ್ವವಾದೀ ನಿಲುವುಗಳ ಬಗ್ಗೆ ಗಾಢವಾದ ಕಾಳಜಿಗಳೂ ಸಾಂಪ್ರದಾಯಿಕ ಅಥವಾ ಸಾಂಸ್ಥಿಕ ಧರ್ಮಗಳ ನಿರಾಕರಣೆಯೂ ಸಾಹಿತ್ಯದ ಮೂಲದ್ರವ್ಯಗಳಾದದ್ದು ವಿಶೇಷವಾದ ಅಂಶ. ಆನಂತರ ಕೆಲವು ಕಾಲದಲ್ಲಿ ಕಾಣಿಸಿಕೊಂಡ ಪ್ರಗತಿಶೀಲ ಸಾಹಿತ್ಯದ ಧೋರಣೆಗಳು ನವೋದಯಕ್ಕಿಂತ, ಹೆಚ್ಚು ಸಾಮಾಜಿಕ ಕಳಕಳಿಯನ್ನು ಒಳಗೊಂಡದ್ದಕ್ಕೆ ಕಾರಣ, ಅದು ಮಧ್ಯಮವರ್ಗದ ಬದುಕಿನ ಸಂವೇದನೆಗಳನ್ನು ತನ್ನ ವಸ್ತುವನ್ನಾಗಿ ಮಾಡಿಕೊಂಡಿದ್ದರಿಂದ ಮುಂದೆ ಬಂದ ನವ್ಯ ಸಾಹಿತ್ಯ ಮುಖ್ಯವಾಗಿ ನಗರಕೇಂದ್ರಿತವಾಗುತ್ತ ಸ್ವಾತಂತ್ರ್ಯೋತ್ತರ ಭಾರತೀಯ ಪರಿಸರದ ಮೌಲ್ಯಗಳ ಅವನತಿಯನ್ನೂ, ಮನುಷ್ಯನ ಅಂತರಾಳದ ವಿಕಾರಗಳನ್ನೂ, ಪ್ರಖರವಾದ ವಿಮರ್ಶನ ಪ್ರಜ್ಞೆಯಲ್ಲಿ ನಮ್ಮ ವಾಸ್ತವವನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಪ್ರವೃತ್ತಿಯನ್ನೂ ತನ್ನ ವಸ್ತುವನ್ನಾಗಿ ಮಾಡಿಕೊಂಡಿತು. ಈ ಅನುಕ್ರಮವಾದ ಬೆಳವಣಿಗೆಯ ಪರಿಣಾಮವಾಗಿ, ಶತಮಾನಗಳ ಕಾಲ ಅಕ್ಷರಜ್ಞಾನದ ಸವಲತ್ತುಗಳಿಂದ ವಂಚಿತವಾಗಿದ್ದು ಮತ್ತು ಮೇಲಿನ ಎಲ್ಲ ವರ್ಗದವರುಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮಾಜದ ಕೆಳಗಿನ ಸ್ತರವೊಂದು, ಮಾತನಾಡಲು ಕಲಿತು ತನ್ನ ಪ್ರತಿಭಟನೆಯನ್ನು ಅಭಿವ್ಯಕ್ತಪಡಿಸತೊಡಗಿದಾಗ, ಮೂಡಿಬಂದಿದ್ದು ಬಂಡಾಯ ಸಾಹಿತ್ಯ.

ಹಿಂದಿನ ಎಲ್ಲ ಸಾಹಿತ್ಯ ಚಳುವಳಿಗಳೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳದೆ ಹೋದ, ಸಮಾಜದ ಕೆಳವರ್ಗದವರ ಬದುಕನ್ನು, ನಿರ್ಲಕ್ಷಿತರ ಬದುಕನ್ನು ಬಂಡಾಯ ಸಾಹಿತ್ಯ ತನ್ನ ವಸ್ತುವನ್ನಾಗಿ ಮಾಡಿಕೊಂಡಿದೆ. ನಿಜವಾದ ಭಾರತ ಕೇವಲ ರಮ್ಯ ನಿಸರ್ಗದಲ್ಲಾಗಲಿ, ನಗರದ ಮಧ್ಯಮ ವರ್ಗದಲ್ಲಾಗಲೀ, ಗೊಂದಲಪುರದ ಬುದ್ಧಿ ಜೀವಿಗಳ ತಾಕಲಾಟಗಳಲ್ಲಾಗಲಿ ಇಲ್ಲ; ಅದು ಇರುವುದು ಬಹುಸಂಖ್ಯಾತ ಹಳ್ಳಿಗಳ ಬದುಕಿನಲ್ಲಿ. ಹಳ್ಳಿಗಳಲ್ಲಿ ಇರುವ ಈ ಅಸಂಖ್ಯಾತ ಜನಸಾಮಾನ್ಯರು, ಒಂದೆಡೆ ತಮಗಿಂತ ಮೇಲಿನ ವರ್ಗದವರಿಂದ, ಮತ್ತೊಂದೆಡೆ ಭ್ರಷ್ಟ ರಾಜಕಾರಣಿಗಳಿಂದ ಹಾಗೂ ಅಧಿಕಾರಶಾಹೀ, ಪುರೋಹಿತಶಾಹೀ ಕುತಂತ್ರಗಳಿಂದ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾರತದ ಈ ಶೋಷಿತ ಜನಾಂಗ, ತನ್ನೊಳಗಿನ ಸಂಕಟಗಳಿಗೆ, ತನ್ನೊಳಗಿನ ರೊಚ್ಚಿಗೆ, ತನಗಾಗಿರುವ ಅನ್ಯಾಯಗಳಿಗೆ, ಪ್ರತಿಭಟನೆಯ ದನಿ ಎತ್ತುತ್ತಿರುವುದು ನ್ಯಾಯವಾಗಿದೆ. ಹೀಗಾಗಿ ಪ್ರತಿಭಟನೆಯನ್ನು ಒಂದು ಮೌಲ್ಯವಾಗಿ ಉಳ್ಳ, ರಾಜಕೀಯ ಪ್ರಜ್ಞೆಯಿಂದ ಮೂಡಿದ ಈ ಸಾಹಿತ್ಯ, ಸೌಂದರ್ಯದ ತನ್ಮತೆಯನ್ನು ತರುವ, ಉದಾತ್ತ ತತ್ವಗಳನ್ನು ಹೇಳುವ, ಪೌರಾಣಿಕ-ಧಾರ್ಮಿಕ ಅದ್ಭುತಗಳನ್ನು ತೆರೆದು ತೋರುವ, ಬುದ್ಧಿಯ ಕಸರತ್ತುಗಳನ್ನು ಪ್ರದರ್ಶಿಸುವ ಉದ್ದೇಶದ್ದಲ್ಲ. ಅದು ಇರುವ ವಾಸ್ತವವನ್ನು ತೆರೆದು ತೋರುತ್ತ, ವೈಚಾರಿಕ ಎಚ್ಚರವನ್ನು ಹುಟ್ಟಿಸುತ್ತ, ಪ್ರಶ್ನೆ ಹಾಗೂ ಪ್ರತಿಭಟನೆಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವ ಉದ್ದೇಶದ್ದು. ಬಂಡಾಯ ಸಾಹಿತ್ಯದ ಧೋರಣೆಗಳು ಈಗ ಬರೆಯುತ್ತಿರುವ ಎಲ್ಲ ತಲೆಮಾರಿನ ಅಂದರೆ ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿ ವಿವಿಧ ಮಾರ್ಗದ ಬರಹಗಾರರ ಮೇಲೆ ತನ್ನ ಪ್ರಭಾವಗಳನ್ನು ಬೀರಿವೆ. ಸಮಕಾಲೀನ ಬರಹಗಾರರೆಲ್ಲರಲ್ಲೂ ಕಾಣಿಸಿಕೊಳ್ಳುತ್ತಿರುವ ಸಾಮಾಜಿಕ ಕಳಕಳಿ ಬಹುಶಃ ಈ ಬಂಡಾಯ ಸಾಹಿತ್ಯದ ಪರಿಣಾಮವೇ, ಇನ್ನೊಂದು ವಿಶೇಷವೆಂದರೆ, ಕಳೆದ ಒಂದು-ಒಂದೂವರೆ ದಶಕಗಳ ಕಾಲಮಾನದಲ್ಲಿ ಬಹುಸಂಖ್ಯಾತ ಮಹಿಳೆಯರು ಬರೆಯಲು ಶುರುಮಾಡಿರುವುದು ಮತ್ತು ಅವರ ಬರಹಗಳಲ್ಲಿ ಕಂಡುಬರುತ್ತಿರುವ ವೈಚಾರಿಕತೆಗಳು ಹಾಗೂ ದೃಷ್ಟಿಕೋನಗಳು ಖಂಡಿತವಾಗಿಯೂ ಬಂಡಾಯ ಸಾಹಿತ್ಯ ಚಳುವಳಿಯ ಪರಿಣಾಮಗಳಾಗಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಎಚ್ಚರಗೊಂಡು ಮಾತನಾಡಲು ತೊಡಗಿದ ಶೋಷಿತ ಸಾಮಾಜಿಕ ವರ್ಗಕ್ಕೆ ಮಹಿಳೆಯರೂ ಸೇರುತ್ತಾರೆ.

ಸ್ವಾತಂತ್ರ್ಯ ಪೂರ್ವ ಭಾರತದ ಪರಿಸರದಲ್ಲಿ ನವೋದಯ ಸಾಹಿತ್ಯ ಸಂದರ್ಭದಲ್ಲಿಯೇ ಪ್ರಗತಿಶೀಲವೆಂಬ ಹೆಸರಿನ ಸಾಹಿತ್ಯ ಚಳುವಳಿಯೊಂದು ಹುಟ್ಟಿಕೊಂಡಿತು. ಉತ್ತರದ ಲಕ್ನೋದಲ್ಲಿ ೧೯೩೬ ರಂದು ಸಾಹಿತಿ ಪ್ರೇಮಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಪ್ರಗತಿಶೀಲ ಲೇಖಕರ ಪ್ರಥಮ ಅಧಿವೇಶನವೊಂದು ಈ ಚಳುವಳಿಗೆ ಚಾಲನೆ ನೀಡಿತು. ಬದುಕಿನಲ್ಲಿ ಹೊಸ ಸೌಂದರ್ಯವನ್ನು ಅನ್ವೇಷಿಸುವ, ಜನಸಮುದಾಯದ ಮೇಲೆ ನಡೆಯುವ ದಬ್ಬಾಳಿಕೆಗಳನ್ನು ವಿರೋಧಿಸುವ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವುದಕ್ಕಾಗಿ, ಸಾಮ್ರಾಜ್ಯಷಾಹಿ, ಹಾಗೂ ಬಂಡವಾಳಷಾಹೀ ಶಕ್ತಿಗಳ ವಿರುದ್ಧ ದನಿಯೆತ್ತುವ ಮತ್ತು ನಿಜವಾದ ಸಮಾನತಾ ಸಾಮಾಜಿಕ ವ್ಯವಸ್ಥೆಯೊಂದನ್ನು ರೂಪಿಸುವ ಹೊಸ ಎಚ್ಚರಗಳನ್ನು ಹುಟ್ಟಿಸುವುದು ತನ್ನ ಉದ್ದೇಶವೆಂದು ಈ ಅಧಿವೇಶನ ಘೋಷಿಸಿತು. ಇದರಿಂದ ಪ್ರೇರಣೆಗೊಂಡು ಕನ್ನಡದಲ್ಲಿ ೧೯೪೩ರ ವೇಳೆಗೆ ಪ್ರಗತಿಶೀಲ ಲೇಖಕರ ಸಂಘವೊಂದು ಅಸ್ತಿತ್ವಕ್ಕೆ ಬಂದಿತು. ಅ.ನ. ಕೃಷ್ಣರಾಯರು ಈ ಸಂಘದ ಮುಖ್ಯ ವಕ್ತಾರರಾದರು. ಅವರೊಂದಿಗೆ, ನಿರಂಜನ, ತ.ರಾ.ಸು, ಕಟ್ಟೀಮನಿ ಮೊದಲಾದ ಉತ್ಸಾಹೀ ಬರಹಗಾರರು ಸೇರಿಕೊಂಡು ಕನ್ನಡದಲ್ಲಿ ಪ್ರಗತಿಶೀಲ ಚಳುವಳಿಯೊಂದು ಹುಟ್ಟಿಕೊಂಡು ಬಹುಸಂಖ್ಯೆಯ ಕತೆ ಕಾದಂಬರಿಗಳ ನಿರ್ಮಿತಿಯಲ್ಲಿ ಇದು ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿತು.

ಅಲ್ಲದೆ ಭಾರತೀಯ ಪರಿಸರದ ಲೋಹಿಯಾ ಹಾಗೂ ಜೆ.ಪಿ. ಚಳುವಳಿಗಳು, ೧೯೭೪ರಂದು ಕರ್ನಾಟಕದಲ್ಲಿ ರೂಪುಗೊಂಡ ಬರಹಗಾರರ ಒಕ್ಕೂಟ, ರೈತ ಚಳುವಳಿ, ಜಾತಿ ವಿನಾಶ ಸಮ್ಮೇಳನ ಇತ್ಯಾದಿಗಳು ಬಂಡಾಯ ಚಳುವಳಿಯ ಸೈದ್ಧಾಂತಿಕ ನೆಲೆಯನ್ನು ರೂಪಿಸುವುದರಲ್ಲಿ ತಕ್ಕ ಪ್ರಭಾವವನ್ನು ಬೀರಿ ೧೯೭೯ ರಲ್ಲಿ ಪ್ರಥಮ ಬಂಡಾಯ ಸಾಹಿತ್ಯ ಸಂಘಟನೆಯೊಂದು ಪ್ರಾರಂಭವಾಯಿತು. ಸಾಹಿತ್ಯಕವಾಗಿ ಹೇಳುವುದಾದರೆ ಕನ್ನಡದ ದಲಿತ-ಬಂಡಾಯ ಚಳುವಳಿಗೆ ಇದೇ ಬಗೆಯ ಜಾಗತಿಕ ಹಾಗೂ ಭಾರತೀಯ ಪರಿಸರದ ಸಾಹಿತ್ಯ ಚಳುವಳಿಗಳು ಪ್ರೇರಣೆಯನ್ನೊದಗಿಸಿವೆ. ಪಶ್ಚಿಮದ ಕಪ್ಪು ಕಾವ್ಯ, ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳುವಳಿ, ತೆಲುಗಿನ ದಿಗಂಬರ ಕಾವ್ಯದ ಧೋರಣೆಗಳೂ ಕನ್ನಡ ಕವಿಗಳನ್ನು ಪ್ರಭಾವಿಸಿವೆ. ಒಂದು ಮಾತಿನಲ್ಲಿ ಹೇಳುವುದಾದರೆ ದಲಿತ – ಬಂಡಾಯ ಚಳುವಳಿ ಎಡಪಂಥೀಯ ನಿಲುವುಗಳನ್ನೊಳಗೊಂಡ, ಪ್ರತಿಭಟನೆಯನ್ನೆ ತನ್ನ ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡ ಒಂದು ಜನಪರ ಸಾಹಿತ್ಯ ಚಳುವಳಿಯಾಗಿದೆ.

ವಾಸ್ತವವಾಗಿ ‘ದಲಿತ’ ಎಂಬ ಮಾತಿಗೆ ತುಳಿಯಲ್ಪಟ್ಟವನು ಎಂಬ ಅರ್ಥವಿದೆ. ನಮ್ಮ ಸಾಮಾಜಿಕ ಪರಿಸರದಲ್ಲಿ ಅಸ್ಪೃಶ್ಯರಂತೆ ಇತರ ಹಿಂದುಳಿದ ವರ್ಗಗಳವರೂ ಮೇಲಿನ ವರ್ಗಗಳವರಿಂದ ತುಳಿತಕ್ಕೆ ಶೋಷಣೆಗೆ ಒಳಗಾಗಿರುವ ಕಾರಣದಿಂದ, ಉಚ್ಚ ವರ್ಗದವರಲ್ಲದ ಎಲ್ಲರೂ ಒಂದರ್ಥದಲ್ಲಿ ದಲಿತರೇ ಆಗುತ್ತಾರಲ್ಲವೆ ಎಂಬ ಪ್ರಶ್ನೆಯೊಂದನ್ನು ಎತ್ತಲು ಅವಕಾಶವಿದೆ. ಆದರೆ “ಒಬ್ಬ ಅವಮಾನಿತ ವ್ಯಕ್ತಿ ಸ್ವಾಭಿಮಾನಿಯೂ ಆದಾಗ ಹುಟ್ಟುವ ಸಾಹಿತ್ಯಕ್ಕೆ ಒಂದು ಗುಣವಿರುತ್ತದೆ. ಅದನ್ನು ಪ್ರಪಂಚದ ಎಲ್ಲ ಕಡೆಯೂ ನಾವು ಪ್ರತಿಭಟನಾ ಸಾಹಿತ್ಯವೆಂದು ಕಾಣುತ್ತೇವೆ. ಹೀಗೆ ಅವಮಾನಿತ ಸ್ವಾಭಿಮಾನಿಯಾದವನು ಅಸ್ಪೃಶ್ಯನೂ ಆಗಿದ್ದಲ್ಲಿ ದಲಿತ ಸಾಹಿತ್ಯ ಹುಟ್ಟಿಬರುತ್ತದೆ” – ಎಂಬ ಅನಂತಮೂರ್ತಿಯವರ ವಿಶ್ಲೇಷಣೆಯಲ್ಲಿ ದಲಿತ ಹಾಗೂ ಬಂಡಾಯ ಸಾಹಿತ್ಯಗಳ ಸರಿಯಾದ ವ್ಯತ್ಯಾಸವು ನಿರೂಪಿತವಾಗಿದೆ. ಕನ್ನಡದಲ್ಲಿ ಮೊಟ್ಟಮೊದಲಿಗೆ ಈ ದಲಿತ ಧ್ವನಿ ಕಾಣಿಸಿಕೊಂಡದ್ದು ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಕೃತಿಯ ಮೂಲಕ ಮತ್ತು ದೇವನೂರು ಮಹಾದೇವ ಅವರ ಕತೆಗಳ ಮೂಲಕ. ಅವರ ‘ಒಡಲಾಳ’ ಈ ಬರವಣಿಗೆಯ ಶ್ರೇಷ್ಠ ನಿದರ್ಶನವಾಗಿದೆ. ಈಗಾಗಲೇ ಪ್ರಸ್ತಾಪಿಸಿದಂತೆ ಬಂಡಾಯ ಸಾಹಿತ್ಯ ಸಂಘಟನೆ ಪ್ರಾರಂಭವಾದದ್ದು, ೧೯೭೯ ರಂದು. ಪ್ರತಿಭಟನೆಯನ್ನು ಒಂದು ಮೌಲ್ಯವನ್ನಾಗಿ ಅಂಗೀಕರಿಸಿದ ಬರಹಗಾರರೆಲ್ಲರ ಒಕ್ಕೂಟ ಇದು. ಈ ಬಂಡಾಯ ಸಾಹಿತ್ಯದ ಮುಖ್ಯವಸ್ತು ಗ್ರಾಮೀಣ ಪರಿಸರದ ಅನುಭವ ದ್ರವ್ಯವಾಗಿದೆ. ಡಾ|| ಬೆಸಗರಹಳ್ಳಿ ರಾಮಣ್ಣ, ಕುಂ. ವೀರಭದ್ರಪ್ಪ, ಕಾಳೇಗೌಡ ನಾಗವಾರ, ಚಂದ್ರಶೇಖರ ಪಾಟೀಲ, ಚನ್ನಣ್ಣವಾಲೀಕಾರ, ಅರವಿಂದ ಮಾಲಗತ್ತಿ, ಮನಜ, ಬರಗೂರು ರಾಮಚಂದ್ರಪ್ಪ ಇಂಥವರ ಕವಿತೆ, ಕಾದಂಬರಿಗಳು ಬಂಡಾಯ ಚಳುವಳಿಯ ಪ್ರತಿನಿಧಿಗಳಾಗಿವೆ.

ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಅತ್ಯಂತ ಗಮನಾರ್ಹವಾದ ಪರಿಣಾಮವೆಂದರೆ, ಬಹುಸಂಖ್ಯಾತ ಮಹಿಳೆಯರು ಸಾಹಿತ್ಯಲೋಕವನ್ನು ಪ್ರವೇಶಿಸಿದ್ದು. ಒಂದರ್ಥದಲ್ಲಿ ಈ ದೇಶದ ಮಹಿಳೆಯರೂ ‘ದಲಿತ’ರೇ ಆದ ಕಾರಣ, ದಲಿತ-ಬಂಡಾಯ ಚಳುವಳಿ ನಿರ್ಮಿಸಿದ ಹೊಸ ಎಚ್ಚರದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಂಡವರಲ್ಲಿ ಮಹಿಳೆಯರೂ ಸೇರುತ್ತಾರೆ. ಕೇವಲ ವಿದ್ಯಾವಂತ ಮಧ್ಯಮ ವರ್ಗದ ಮಹಿಳೆಯರೇ ನವೋದಯ ಸಂದರ್ಭದಲ್ಲಿ, ಬರೆಹಗಾರರಾಗಿ ಕಾಣಿಸಿಕೊಂಡರೂ, ಅವರಲ್ಲಿ ಸಂಪ್ರದಾಯ ಪ್ರಿಯತೆಯೇ ಮುಖ್ಯವಾಗಿತ್ತೆ ಹೊರತು ತಮ್ಮನ್ನು ನಿಯಂತ್ರಿಸುತ್ತಿದ್ದ ಪಾರಂಪರಿಕ ಮೌಲ್ಯಗಳನ್ನು ಕುರಿತು ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಪ್ರವೃತ್ತಿ (ತ್ರಿವೇಣಿ, ವೀಣಾ ಇಂಥ ಒಬ್ಬಿಬ್ಬರನ್ನು ಬಿಟ್ಟರೆ) ಅಷ್ಟಾಗಿ ಅಭಿವ್ಯಕ್ತವಾಗಲೇ ಇಲ್ಲ ಎನ್ನಬಹುದು. ಆದರೆ ಕಳೆದ ಕೆಲವು ವರ್ಷಗಳಲ್ಲಿ ವರ್ಧಿಸಿರುವ ಮಹಿಳಾ ಬರಹಗಾರ್ತಿಯರೂ, ಅವರಲ್ಲಿ ಪ್ರಕಟವಾಗುತ್ತಿರುವ ಪ್ರತಿಭಟನಾ ಪ್ರವೃತ್ತಿಯೂ, ಖಂಡಿತವಾಗಿಯೂ ಈ ಬಂಡಾಯ ಚಳುವಳಿಯ ಪರಿಣಾಮಗಳಾಗಿವೆ. ಜತೆಗೆ ಕರ್ನಾಟಕದ ಉಪಸಂಸ್ಕೃತಿಯಾದ ಮುಸ್ಲಿಂ ಜನಾಂಗದ ಹಲವರೂ, ಮೊಟ್ಟಮೊದಲಿಗೆ ತಮ್ಮ ಧಾರ್ಮಿಕ – ಸಾಂಸ್ಕೃತಿಕ ಪಟ್ಟಭದ್ರಹಿತಾಸಕ್ತಿಗಳ ಶೋಷಣೆಯನ್ನು ತಮ್ಮ ಬರೆಹಗಳ ಮೂಲಕ ದಾಖಲು ಮಾಡುತ್ತಿರುವುದೂ, ಈ ಚಳುವಳಿಯ ಚೌಕಟ್ಟಿನಲ್ಲಿಯೇ ರಹಮತ್ ತರಿಕೆರೆ, ರಂಜಾನ್ ದರ್ಗಾ, ಸಾರಾ ಅಬೂಬಕರ್, ಬಾನುಮುಷ್ತಾಕ್, ಫಕೀರ್ ಮಹಮದ್ ಕಟ್ಪಾಡಿ, ಬೋಳುವಾರು ಮಹಮ್ಮದ್ ಕುಂಞ – ಇಂಥವರ ಬರಹಗಳು ಈ ಮಾತಿಗೆ ನಿದರ್ಶನವಾಗಿವೆ.

ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರೌರ್ಯ, ದಬ್ಬಾಳಿಕೆ, ಹಿಂಸೆ, ಅನಾಚಾರಗಳೇ ತಾಂಡವವಾಡುವ ಈ ಸನ್ನಿವೇಷದಲ್ಲಿ ಈ ಮೇಲೆ ಅಭಿವ್ಯಕ್ತ ಪಡಿಸಿದಂತೆ ಚಾರಿತ್ರಿಕವಾಗಿ ಉದಯವಾದ ಬಂಡಾಯ ಸಾಹಿತ್ಯ ಮತ್ತಷ್ಟು ಮೊನಚಾಗಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ತನ್ಮೂಲಕ ಈ ಕಲುಷಿತ ವ್ಯವಸ್ಥೆಯನ್ನು ತಿಳಿಗೊಳಿಸುವಲ್ಲಿ ಅದು ಮಹತ್ತರ ಪಾತ್ರವಹಿಸಲಿ ಎನ್ನುವುದೇ ಆಶಯ.
===========
ವಂದನೆಗಳೊಂದಿಗೆ,
ಪ್ರವರ ಕೊಟ್ಟೂರು
ಕನ್ನಡ ಬ್ಲಾಗ್ ನಿರ್ವಾಹಕ ತಂಡ.
[ಸಲಹೆ, ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ]
[ಆಕರ: ಜಿ.ಎಸ್.ಶಿವರುದ್ರಪ್ಪ ಅವರ ಸಮಗ್ರ ಗದ್ಯ]