Monday 31 December 2012

ಗತವರ್ಷದ ಮೆಲುಕು ಹೊಸವರ್ಷದಾಗಮನಕೆ!


ನಮಸ್ಕಾರ ಕನ್ನಡ ಬ್ಲಾಗ್ ಸದಸ್ಯವೃಂದಕ್ಕೆ,

ಯುಗವೊಂದು ಉರುಳಿ ಮಗದೊಂದು ಯುಗ ನಗಲು ಅಣಿಯಾಗುತ್ತಿದೆ. ಎರಡು ಸಾವಿರದ ಹನ್ನೆರಡರ ಅಂತಿಮ ಕ್ಷಣಗಣನೆ ಆರಂಭವಾಗಿದೆ. ಕಂಡ ಕನಸುಗಳೆಷ್ಟೋ, ನನಸುಗಳಾದವೆಷ್ಟೋ? ಅವಲೋಕನ ಮಾಡಬೇಕಾದ ಅವಶ್ಯಕತೆ ಇದ್ದೇ ಇದೆ ಪ್ರತಿಯೊಬ್ಬರಿಗೂ. ಹೌದು ವರ್ಷದ ಮೊದಲಿಗೆ ರೂಪಿಸಿಕೊಂಡ ಹಲವು ಯೋಜನೆಗಳಲ್ಲಿ ಕೆಲವು ಕಾರ್ಯರೂಪಕ್ಕಿಳಿದು, ಇನ್ನೂ ಹಲವೂ ತಣ್ಣನೆ ಮನದೊಳಗೆ ಹಾಗೆ ಮಲಗಿರಲೂಬಹುದು. ಮತ್ತೆ ಎಚ್ಚರಿಸುವ ಕಾಲ ಬಂದಿದೆ. ಅದು ಈ ವರ್ಷದ ಕೊನೆ. ಕಳೆದ ಸಂವತ್ಸರದಲಿ ನೆನೆಗುದಿಗೆ ಬಿದ್ದವುಗಳನ್ನು ಮತ್ತೊಮ್ಮೆ ಆರಿಸಿ, ವಿಶ್ಲೇಷಿಸಿ, ಹದಗೊಳಿಸಿ ಹೊಸವರುಷಕೆ ಹೊಸತನ ಕೊಡಬೇಕು. ಹಾಗೆಯೇ ನನಸುಗೊಂಡವುಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುವ ಸಿಂಹಾವಲೋಕನ ಕೂಡ ಅವಶ್ಯ. ಬನ್ನಿ ಸಣ್ಣದೊಂದು ದೃಷ್ಟಿ ಹಾಯಿಸೋಣ ಕಳೆದೊಂದು ವರ್ಷದಿಂದ ಕನ್ನಡ ಬ್ಲಾಗ್ ಕುಂಟುತ್ತಾ, ತೆವಳುತ್ತ, ನಲಿಯುತ್ತಾ ಸಾಗಿಬಂದ ಪರಿಯನ್ನು ನಾವು ನೀವು ಜೊತೆಯಾಗಿ, ಹಿತವಾಗಿ! 

ಹಲವು ನೀತಿ-ನಿಯಮ, ರೂಪುರೇಷೆಗಳ ಅಡಿಯಲ್ಲಿ ನೆಲೆನಿಂತು ತನ್ನೆಲ್ಲಾ ಸದಸ್ಯರ ಕ್ರಿಯಾಶೀಲತೆಗಳನ್ನು ಬೆಳಕಿಗೆ ತರುವ ಪ್ರಯತ್ನದತ್ತ ಮುಂದಡಿ ಇಟ್ಟಿತ್ತು ಕನ್ನಡ ಬ್ಲಾಗ್. ೨೦೧೨ರ ಆದಿಯಲ್ಲಿ, ಇತರೆ ಗುಂಪುಗಳಿಗಿಂತ ಭಿನ್ನವಾಗಿ ನಿಂತು ಎಲ್ಲರ ಪ್ರೋತ್ಸಾಹದೊಂದಿಗೆ ತನ್ನ ಸಂಪಾದಕೀಯ ಸರಣಿ ಆರಂಭಿಸಿತ್ತು. ತನ್ಮೂಲಕ ಫೇಸ್ಬುಕ್ ಗುಂಪುಗಳಲ್ಲೇ ವಿಶಿಷ್ಟ ಸಂಪ್ರದಾಯವೊಂದನ್ನು ಹುಟ್ಟುಹಾಕಿದ್ದು ನಮ್ಮ ಈ ತಂಡ. ಸಫಲತೆಯ ಹಾದಿಯಲ್ಲಿ ಸಾಗುತ್ತಿದೆ ಈ ಪ್ರಯತ್ನ. ಜನವರಿ ೨೦೧೨ರ ಮೊದಲ ಸಂಪಾದಕೀಯದಿಂದ ಮೊದಲ್ಗೊಂಡು ಎಲ್ಲ ಲೇಖನಗಳಿಂದ ಆಯ್ದ ಸದಾಶಯದ ತುಣುಕುಗಳನ್ನು ಸಂಕಲನಗೊಳಿಸಿ ಪ್ರಸ್ತುತ ಸಂಪಾದಕೀಯವಾಗಿ ನಿಮ್ಮೆದುರು ಅರ್ಪಿಸುತ್ತಿದ್ದೇವೆ. 

ಸಾಗುವ ದಾರಿಯಲ್ಲಿ ಎಡರು ತೊಡರುಗಳು ಸಹಜ. ಈ ಎಲ್ಲದಕೂ ಕಾಲವೇ ಉತ್ತರ ನೀಡುತ್ತದೆ. ಯುಗಯುಗಗಳು ಕಳೆದರೂ ಯುಗಾದಿ ಮರಳಿ ಬರುತ್ತಿದೆ ಅನ್ನುವಂತೆ ಹಳೆಯದ್ದೆಲ್ಲ ಹಳತಾಗಿ ಕಳಚಿ ಹೊಸಚಿಗುರುಗಳು ವಸಂತನಾಗಮನದಿ ಸತ್ಯಸಹಜ. ನಿರಂತರ ಸಂಕ್ರಮಣವದು. ಆದರೆ ಈ ಕಾಲ ಕಳೆಯುತ್ತಾ ಸಾಗಿದಂತೆ ನಮ್ಮ ಭಾಷಾಭಿಮಾನವನ್ನು ನಶಿಸಲು ಬಿಡದೇ, ನಮ್ಮ ಭಾಷೆಯ ಬೆಳವಣಿಗೆಯ ಬಗ್ಗೆ ನಮ್ಮ ನಿಮ್ಮೆಲ್ಲರ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನ ಇರಲಿ. "ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು. ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು ಎನ್ನುವ ಕರೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಕೂಡ.

ಬರಹ/ಕವಿತ್ವ ನಮ್ಮೊಳಗಿನ ಶಕ್ತಿ. ಬರಹ ಸ್ವಂತವಾಗದ ಹೊರತು ನಮ್ಮೊಳಗಿನ ಬರಹಗಾರ ಹೊರ ಬರಲಾರ. ಬದುಕಿಗೆ ವರ್ಣ ಪೇರಿಸಿ ಉಸಿರಾಡಿಸುವ ಬಗೆ ಈ ಕವಿತ್ವಕ್ಕೆ ಗೊತ್ತು. ಅದು ದೇಹ ಗೋರಿ ಸೇರಿದರೂ ಕವಿಯನ್ನು ಜೀವಂತವಾಗಿರಿಸುತ್ತದೆ! ಹೌದು, ಯಾರೂ ಹುಟ್ಟುತ್ತಾ ದೊಡ್ಡ ಕವಿಯಾಗಿ ಹುಟ್ಟಲಿಲ್ಲ.ಕೆಲವೊಮ್ಮೆ ತನ್ನ ಮೇಲಿನ ಅಪನಂಬಿಕೆಯಿಂದಲೊ ಅಥವಾ ಯಾವುದಾದರೂ ವಿಮರ್ಶೆಗಳು ತನ್ನಸ್ಥಿತ್ವವನ್ನು ಪ್ರಶ್ನಿಸುವ ಭಯದಲ್ಲಿ ಕವಿತ್ವ ಕಾಡಬೆಳದಿಂಗಳಾಗುತ್ತದೆ. ಅದು ಜೀವ ರಾಶಿಗಳಿಗೆ ಶಕ್ತಿಯಾಗಬೇಕು. ಅವರ ಪರಿಶ್ರಮದ ಫಲವಾಗಿ ಒಂದು ಕಾಲಘಟ್ಟ ಅವರನ್ನು ಆದರಿಸಿ ಗೌರವಿಸಿರುತ್ತದೆ. ಎಲ್ಲಾ ಕವಿ-ಕಲಾವಿದರ ಬದುಕಿನಲ್ಲೂ ಆ ಕಾಲ ಬರುತ್ತದೆ. ಕಾಯಬೇಕಷ್ಟೇ. ಮೊದಲು ಜನಿಸಿದರೇನು, ಕೊನೆಯಲಿ ಜನಿಸಿದರೇನು, ಎಲ್ಲರೂ ಶಾರದಾಂಬೆಯ ಗರ್ಭಸಂಜಾತರೇ! ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ನಂಬಿಕೆಯಿರಬೇಕಷ್ಟೆ. ಅವಕಾಶ ಅದೃಷ್ಟಗಳು ಕೆಲವರನ್ನು ಅರಸಿ ಬರುತ್ತವೆ. ಇನ್ನೂ ಕೆಲವರು ತಾನಾಗಿಯೇ ಅದನ್ನು ಅರಸಿ ಹೋಗಬೇಕು. ಎಂದಾದರೂ ಅವಕಾಶ-ಅದೃಷ್ಟಗಳು ನಂಬಿದವರ ಕೈ ಹಿಡಿಯುತ್ತದೆಂಬುದು ನಿತ್ಯಸತ್ಯ!  ಈ ಸತ್ಯದ ಸ್ಪೂರ್ತಿ ನಮ್ಮೊಳಗೂ ಬರಲಿ ಉದ್ದೀಪನವಾಗಲಿ. ಹೀಗೆ ಸಾಹಿತ್ಯವನ್ನು ನಿಂತ ನೀರಾಗಿಸದೆ ಹರಿಯುವ ನದಿಯಂತೆ ನಿರಂತರತೆಯನ್ನು ಮುಂದುವರೆಸುವ ವೇಗವರ್ಧಕಗಳಾಗಿವೆ ಎಂಬ ತಿಳುವಳಿಕೆ ಮುಖ್ಯ. ನಿಜವಾದ ಕೃತಿಯ ನಿರ್ಮಾಣವಾಗುವುದು ಬರಹಗಾರನೊಬ್ಬನ ಸತ್ವ ಹಾಗೂ ವ್ಯಕ್ತಿ ಪ್ರತಿಭೆಯ ಪರಿಣಾಮ. ಸಾಹಿತ್ಯ ಚಳುವಳಿಗಳು ಸ್ವರೂಪತಃ ಸಾಮೂಹಿಕ, ಆದರೆ ಸಾಹಿತ್ಯ ನಿರ್ಮಾಣ ವೈಯಕ್ತಿಕವಾಗಿ ರೂಪುಗೊಳ್ಳುವುದು . ಸಾಹಿತ್ಯದಲ್ಲಿ ಮೂಲಭೂತ ಬದಲಾವಣೆ ಹೊರತರುವ ಸಲುವಾಗಿ ರೂಪುಗೊಳ್ಳುವ ಸಾಹಿತ್ಯವು ಒಂದು ಗಟ್ಟಿಯಾದ ಪರಂಪರೆಯನ್ನು ನಿರ್ಮಿಸುವಂತಿರಬೇಕು ಆ ನಿಟ್ಟಿನಲ್ಲಿ ಸಾಹಿತ್ಯ ಚಳುವಳಿ ಮಹತ್ವದ್ದಾಗಿದೆ ಎಂದು ವಿಷದೀಕರಿಸುತ್ತಾ ಇಂಥ ಮಹೋನ್ನತವಾದ ಸಾಹಿತ್ಯ ಸೃಷ್ಟಿಯ ತಿಳಿವಳಿಕೆಯೊಂದಿಗೆ ಇಂದಿನ ನಮ್ಮ ಬರಹಗಾರರು ತಮ್ಮ ಸುಂದರ ಸೃಷ್ಟಿಗಳಿಗೆ ಕಾರಣೀಭೂತರಾಗಲಿ ಎನ್ನುವ ಆಶಯ ಕೂಡ ನಮ್ಮೆಲ್ಲರಲ್ಲಿದೆ. ಹೀಗೆ ಅಂತರ್ಜಾಲ ಲೋಕದಲ್ಲಿ ನಮ್ಮ-ನಿಮ್ಮೆಲ್ಲರ ಕ್ರಿಯಾಶೀಲತೆ. ಅದು ಬರವಣಿಗೆಯ ಮುಖೇನವಾಗಿರಬಹುದು, ಅಥವಾ ಸಹೃದಯರಾಗಿ ಇರಬಹುದು. ಓದುಗರಾಗಿ ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂಒಡಮೂಡಿದೆ ಅನ್ನುವುದು ಸಂತಸದ ವಿಚಾರ ಕೂಡ. ಈ ನಿಟ್ಟಿನಲ್ಲಿ ಇನ್ನಷ್ಟು ಎತ್ತರದ ಮೆಟ್ಟಿಲುಗಳನ್ನು ನಾವು ಏರಬೇಕಾದ ಅವಶ್ಯಕತೆಯೂ ಇದೆ. ಅದಕ್ಕಾಗಿ ನಮ್ಮೆಲ್ಲರ ಪ್ರಯತ್ನವಿರಲಿ ಕೂಡ. ಅದಲ್ಲದೇ ವೈಶಿಷ್ಟ್ಯಪೂರ್ಣ ಸಾಹಿತಿಗಳ ಅಭೂತಪೂರ್ವ ರಚನೆಗಳನ್ನು ನಮ್ಮ ಸ್ವಂತ ಪುಸ್ತಕ ಸಂಗ್ರಹಗಳಲ್ಲಿ ಹೊಂದಿರದಿದ್ದರೆ ಅದೊಂದು ಬಹುದೊಡ್ಡ ಕೊರತೆಯಾದೀತು. ಕನ್ನಡಿಗರಾಗಿ ಕನ್ನಡ ಸಾಹಿತ್ಯಕೃತಿಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳೋಣ ತನ್ಮೂಲಕ ಕನ್ನಡ ಸಾಹಿತ್ಯಕ್ಕೂ ನಮ್ಮದೇ ಹೃದಯಸ್ಪರ್ಷಿ ಕೊಡುಗೆಯನ್ನೂ ನೀಡೋಣ.

ಮುಂದುವರಿಸಿದಂತೆ, ಒಂದು ಬರಹದ ಬಗೆಗಿನ ವಿಮರ್ಶೆ ಮತ್ತು ಟೀಕೆ ಎಷ್ಟೇ ಕಾರಣಬದ್ಧವಾಗಿದ್ದರೂ ಚುಚ್ಚುವ, ವ್ಯಂಗ್ಯ ಅಥವಾ ಪೂರ್ವಗ್ರಹಪೀಡಿತವಾಗಿರಬಾರದು. ಕನ್ನಡಬ್ಲಾಗ್ ನಲ್ಲಿ ಯಾವುದೇ ವಿಮರ್ಶೆಯೂ ಆ ನಿಟ್ಟಿನಲ್ಲಿ ಹಾದಿ ತಪ್ಪಿಲ್ಲವೆಂಬ ಭರವಸೆಯಿದೆ. ವೈಯುಕ್ತಿಕ ನಿಂದನೆಗಿಳಿದವರನ್ನು, ವಿಚಾರ ಸಂಬಂಧವಿಲ್ಲದ ತುಂಟು ಓತಪ್ರೋತ ಮಾತುಗಾರರನ್ನು ನಿರ್ದಾಕ್ಷೀಣ್ಯವಾಗಿ ಕನ್ನಡಬ್ಲಾಗ್ ನ ನಿಯಮಕ್ಕನುಸಾರವಾಗಿ ಬ್ಲಾಗ್ ನಿಂದ ಅನರ್ಹಗೊಳಿಸಿದ್ದೇವೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ, ತೀಡಿ ಒಂದು ಸತ್ವ ಬೆಳವಣಿಗೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಇಲ್ಲಿನ ವಿಮರ್ಶೆಗಳ ಅಂತರ್ ಶಕ್ತಿಯಿಂದ ಲೇಖಕ ಮತ್ತೊಂದು ಬರವಣಿಗೆಗೆ ಕೂಡಲೇ ಅನುವಾಗಿ ನಿಧಾನವಾಗಿ ಸಾಹಿತ್ಯದ ಆಯಾಮಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ. ಎಲ್ಲರೂ ಸಂಪೂರ್ಣರಲ್ಲ, ಎಲ್ಲಾ ಬರಹಗಳು ಪಕ್ವವಲ್ಲ. ನಮ್ಮ ಕೊರತೆಗಳನ್ನು ಓದುಗರು ತೋರಿಸಿಕೊಡುವಾಗ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ತಾಳ್ಮೆಯಿರಬೇಕು. ಬೆಳವಣಿಗೆ ಹಂತ ಹಂತವಾಗಿ ಸಾಗುತ್ತದೆ, ಹೂ ಮೃದು ಅರಿವಾಗಬೇಕಾರೆ, ಮುಳ್ಳಿನಿಂದ ಒಮ್ಮೆ ಚುಚ್ಚಿಸಿಕೊಂಡಿರಬೇಕು. ಕಹಿ ಸಿಹಿಗೆ ಶುದ್ಧ ಕನ್ನಡಿ. ಬರಹದ ಪ್ರಕಾರಗಳನ್ನು ತಿಳಿದುಕೊಂಡವರೊಬ್ಬರು ನಮ್ಮಲ್ಲಿರುವ ಯಾವುದೋ ಕೊರತೆಯನ್ನು ನೀಗಿಸಲು ಪ್ರಯತ್ನ ಪಟ್ಟಾಗ ನಾವು ಗೌರವಿಸಿ ಮುಂದುವರೆಯುವುದು ಕಲಿಯಬೇಕು ಎನ್ನುವ ಜಿಜ್ಞಾಸೆ ಸಾರ್ವಕಾಲಿಕ. ಎಂದೆಂದಿಗೂ ಪ್ರಸ್ತುತ.

ಇನ್ನುಳಿದಂತೆ ಸಾಹಿತಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಬರಹದಂತೆ ನಡವಳಿಕೆಯಲ್ಲೂ ಜನ ಸಾಮಾನ್ಯರಿಗೆ ಸಾಹಿತಿಗಳು ಪ್ರೇರಣೆಯಾಗಿದ್ದಾರೆ. ನಮ್ಮ ಬರವಣಿಗೆಗಳು ಕೇವಲ ಪುಸ್ತಕ, ಬ್ಲಾಗು, ನೆಟ್ಟುಗಳಿಗೆ ಸೀಮಿತವಾಗಿರದೆ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿ, ಪ್ರಗತಿಶೀಲ ವಿಷಯಗಳ ಮೂಲಕ ಜನರಲ್ಲಿ ಜಾಗೃತಿ ತರುವ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವತ್ತ ಅನುವು ಮಾಡಿಕೊಡಲಿ. ಕನ್ನಡದ ಮೇಲಿನ ಪ್ರೀತಿ, ಒಲವು ಸಾಮಾಜಿಕ ಅಭಿವೃದ್ಧಿಯತ್ತ ಮುಖ ಮಾಡುವುದು ಮುಖ್ಯ ಅಂಶ. ಹಾಗಾಗಿ ಸಾಹಿತಿಯಾದವನು ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದನ್ನು! ವಾಸ್ತವವಾದ ಎಂದರೆ ಸುತ್ತಣ ಬದುಕು ಹಾಗೂ ಪರಿಸರವನ್ನು ಪ್ರಾಮಾಣಿಕವಾಗಿ ಯಥಾವತ್ತಾಗಿ ಚಿತ್ರಿಸಬೇಕೆನ್ನುವ ಒಂದು ಮನೋಧರ್ಮ. ಸಾಹಿತಿಯಾದವನು ಕಂಡದ್ದನ್ನು ಕಂಡ ಹಾಗೆ ಚಿತ್ರಿಸಬೇಕೆನ್ನುವ ಈ ಭಾವ, ಎಲ್ಲ ಕಾಲದ ಸಾಹಿತ್ಯದ ಉದ್ದೇಶಕ್ಕೆ ಹೊರತಾದುದಲ್ಲ ಎಂಬುದು ನಿರ್ವಿವಾದವಾದ ಅಂಶ. ಕಾವ್ಯ ಅಥವಾ ಸಾಹಿತ್ಯದ ವಸ್ತು ಉದಾತ್ತವಾಗಿರಬೇಕು, ಉಳಿದವರಿಗೆ ಉದಾತ್ತ ವ್ಯಕ್ತಿಗಳ ನಡವಳಿಕೆ ಮಾದರಿಯಾಗುವಂತಿರಬೇಕು. ಸಾಹಿತಿಯಿಂದ ಹೊಮ್ಮುವ ಸಾಹಿತ್ಯ ಮಾಡುವ ಕೆಲಸವೆಂದರೆ ಕಂಡದ್ದರ ಅನುಕರಣೆಯಲ್ಲ, ಕಾಣಬಹುದಾದ್ದರ ಅಥವಾ ಸಂಭಾವ್ಯವಾದ ಸಂಗತಿಗಳ ಆದರ್ಶ ರೂಪಗಳನ್ನು ನಿರ್ಮಿಸುವುದು. ಸಾಹಿತ್ಯದಿಂದ ರಾಷ್ಟ್ರಜೀವನ ಹಸನಾಗಬೇಕೆಂಬ, ಜನರ ಮನಸ್ಸು ಸಂಸ್ಕಾರಗೊಳ್ಳಬೇಕೆಂಬ, ಸಮಾಜವನ್ನು ಶ್ರೇಯಸ್ಸಿನ ಕಡೆಗೆ ಕೊಂಡೊಯ್ಯಬೇಕೆಂಬ ಮಾತು ಹಾಗೂ ಮನಸ್ಸು ಸಾಹಿತಿಯದಾಗಿರುತ್ತದೆ. ಇದು ಎಲ್ಲಾ ಸಾಹಿತಿಗಳ ಸಾಹಿತ್ಯದ ಧೋರಣೆಯೂ ಆಗಿರುತ್ತದೆ ಎಂದರೆ ತಪ್ಪಾಗಲಾರದು.

ಅಂತಿಮವಾಗಿ ಒಂದು ಮಾತಂತೂ ಸತ್ಯ. ಬರೆದ್ದದ್ದೆಲ್ಲವೂ ಸಾಹಿತ್ಯವಲ್ಲ.ಎಲ್ಲಾ ಕವಿತೆಗಳೂ ಗೀತೆಗಳಾಗುವುದಿಲ್ಲ, ಎಲ್ಲಾ ಹಾಡೂಗಳೂ ಕವಿತೆಗಳಾಗುವುದಿಲ್ಲ,ಸತ್ವಶಾಲಿಯಾದ ಬರಹದೊಂದಿಗೆ ಬರಹಗಾರರು ಬದ್ಧತೆಯೊಳಗಿದ್ದು ರಚಿಸುವಷ್ಟು ಪ್ರಬುದ್ಧ ಹಾಗೂ ಚಿಂತನಾಶೀಲರಾಗಬೇಕು. ಬರಹಗಾರರೆಲ್ಲ ಈ ಅಂಶಗಳತ್ತ ಚಿತ್ತಹರಿಸಿ ತಮ್ಮ ಲೇಖನಿಗೆ ಶಕ್ತಿ ತುಂಬುವುದರ ಜೊತೆಗೆ, ಜೀವನ ಮೌಲ್ಯಗಳನ್ನು ಅತ್ಯಂತ ಬದ್ಧವಾಗಿ ಎತ್ತಿ ಹಿಡಿದು ಭಾವತೀವ್ರತೆಯಿರುವ ಅರ್ಥಪೂರ್ಣ, ಸಂದೇಶವನ್ನು ಸಾರುವಂತಹ ಸಾಹಿತ್ಯವನ್ನು ರಚಿಸುವತ್ತ ಮುಂದಡಿ ಇಡಲೆಂದು ಆಶಿಸುತ್ತಾ....

ಹೊಸವರ್ಷವನು ಸಂಭ್ರಮದಿ ಆದರಿಸಲು ಮುಂದಡಿಯಿಡೋಣ.

ಶುಭವಾಗಲಿ.

ಸಂಕಲನ: ಪುಷ್ಪರಾಜ್ ಚೌಟ
ಸಹಾಯ, ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ.

Friday 30 November 2012

ಸಾಹಿತ್ಯ ಚಳುವಳಿಯು ನಿಂತ ನೀರಾಗದೆ ಹರಿವ ನದಿಯಾಗಲಿ!


ಶತ ಶತಮಾನಗಳಿಂದ ತನ್ನ ವೈವಿಧ್ಯತೆ, ಸತ್ವ ಮತ್ತು ಪಕ್ವತೆಯನ್ನು ಕಾಪಾಡಿಕೊಂಡು ಬಂದಿರುವ ಕನ್ನಡ ಸಾಹಿತ್ಯ ಪ್ರಕಾರಗಳು ಮಾನವೀಯ ಮೌಲ್ಯಗಳನ್ನು ಬದುಕಿನ ಅನುಭವಗಳ ಮೂಲಕ ಸಾರವತ್ತಾಗಿ ಉಣಬಡಿಸುತ್ತಲೇ ಬಂದಿವೆ.ಈ ಸಾಹಿತ್ಯ ಪರಿಕರಗಳೊಂದಿಗೆ ಜೀವ ದ್ರವ್ಯಗಳನ್ನಾಗಿ ಮಾಡಿಕೊಂಡು ಸಮಾಜಮುಖಿ ಚಿಂತನೆಗಳಿಗೆ ಒತ್ತು ಕೊಟ್ಟು ಸಾಹಿತ್ಯ ಸೃಷ್ಟಿಮಾಡಿ ಅಮೋಘ ಯಶಸನ್ನು ಪಡೆದ ಮಹಾನ್ ಮೇಧಾವಿಗಳು, ಕವಿಗಳು, ಲೇಖಕರು, ವಿಮರ್ಶಕರನ್ನು ಹುಟ್ಟಿ ಬೆಳಸಿದ ಮತ್ತು ಅವರಿಂದ ತನ್ನ ಕೀರ್ತಿ, ಮೌಲ್ಯಗಳನ್ನು ಹೆಚ್ಚಿಸಿಕೊಂಡ ಕರುನಾಡಿನ ಕನ್ನಡ ಸಾಹಿತ್ಯ ಮತ್ತು ಅವುಗಳ ನಿರ್ಮಾತೃಗಳ ಬಗ್ಗೆ ತಿಳಿಯುವ ಹಂಬಲ ಪ್ರತಿಯೊಬ್ಬ ಕನ್ನಡಿಗನಲ್ಲೂ ಬರಬೇಕು. ಅದಕ್ಕಿಂತ ಮಿಗಿಲಾಗಿ ಸೃಜನಶೀಲವಾದುದನ್ನು ಸೃಷ್ಟಿಸುವ ಬರಹಗಾರನಾಗಬೇಕೆಂಬ ಹಂಬಲವಿರುವವನಿಗೆ ಇದರ ಅರಿವು ಮತ್ತು ತಿಳಿವಳಿಕೆ ಇರಬೇಕಾದ್ದು ಅತ್ಯವಶ್ಯಕವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಾಹಿತ್ಯ ಸೃಷ್ಟಿಯ ದಿಕ್ಕು ಸಾಗಲೆಂಬ ಆಶಯದೊಂದಿಗೆ ಕನ್ನಡ ಸಾಹಿತ್ಯದ ಕುರಿತಾದ ನನ್ನ ಅನಿಸಿಕೆಗಳನ್ನು ಹರಿಯಬಿಡುತ್ತಿದ್ದೇನೆ. 

ನನ್ನೀ ಅಭಿವ್ಯಕ್ತಿಗೆ ಪ್ರೇರಣೆ ಮತ್ತು ಪ್ರಚೋದನೆ ಮೂಡಿಸಿದ್ದು ಡಾ|ಜಿ .ಎಸ್ .ಶಿವರುದ್ರಪ್ಪನವರ ಸಮಗ್ರ ಗದ್ಯ -2 ಮತ್ತು ವಿ .ಬಿ .ತಾರಕೇಶ್ವರ ಅವರ 'ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು' ಎಂಬ ಪುಸ್ತಕಗಳು. ಈ ಶತಮಾನದ ಸಾಹಿತಿಗಳಿಗೆ ಸಾಹಿತ್ಯ ನಿರ್ಮಾಣಕ್ಕೆ ಬೇಕಾಗುವ ಅಂಶಗಳತ್ತ ಒಂದು ಮುನ್ನುಡಿಯಾಗಿ ಈ ಪುಸ್ತಕಗಳು ಅಪರೂಪದ್ದೆನಿಸುತ್ತವೆ. ಸಾಮಾನ್ಯವಾಗಿ, ಸಾಹಿತ್ಯ ಎಂದರೇನು? ಅವುಗಳ ಪ್ರಕಾರಗಳೇನು? ಸಾಹಿತ್ಯದ ಬರವಣಿಗೆ ಮತ್ತದರ ಉದ್ದೇಶಗಳೇನು? ಇಂತಹ ಹಲವಾರು ಪ್ರಶ್ನೆಗಳಿಗೆ ಈ ಗ್ರಂಥಗಳು ಉತ್ತರವಾಗುತ್ತವೆ.

ಸಾಹಿತ್ಯ ನಿರ್ಮಾಣ ಕೇವಲ ಪುಸ್ತಕಗಳ ಅಧ್ಯಯನದಿಂದ ಆಗುವ ಕೆಲಸವಲ್ಲ ,ಅದು ಸಾಹಿತಿಯೊಬ್ಬನ ಜೀವನದ ಅನುಭವದಿಂದ ಆಗುವಂತಹುದು. ತನ್ನ ಪರಿಸರದಲ್ಲಿ ಪರಿಚಿತವಾಗುವ ಸಮಕಾಲೀನ ಸಾಹಿತ್ಯ ಮತ್ತು ತನ್ನಂತೆಯೇ ಸಮಕಾಲೀನತೆಗೆ ದನಿ ನೀಡುತ್ತಿರುವ ಸೃಜನಶೀಲ ಲೇಖಕರು ಮತ್ತು ಅವರ ಸಾಹಿತ್ಯ ನಿರ್ಮಾಣದ ಶೈಲಿ ಹೆಚ್ಚು ಪ್ರಸ್ತುತವಾಗಿರುತ್ತದೆ. ನಂತರ ಅವರಿಂದ ಸಾಹಿತ್ಯ ನಿರ್ಮಾಣದ ಕಿಡಿ ಹೊತ್ತಿ ಅವರ ಬರವಣಿಗೆ, ದೃಷ್ಟಿ-ಧೋರಣೆಗಳು ಮತ್ತು ಅಭಿವ್ಯಕ್ತಪಡಿಸುವ ವಿಧಿ-ವಿಧಾನಗಳು ಪರಿಣಾಮ ಬೀರುತ್ತದೆ. ಅದರ ಜೊತೆಯಲ್ಲಿ ಸೃಷ್ಟಿಕರ್ತನು ತನ್ನ ಅಭಿವ್ಯಕ್ತಗೊಳಿಸುವ ವಿವಿಧ ಆಯಾಮಗಳನ್ನು ಬದಲಾಯಿಸಿಕೊಳ್ಳಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಸಾಹಿತಿಗಳ ಬರಹದ ಜ್ಞಾನ, ಸ್ವಂತ ಅನುಭವ ಮತ್ತು ತನ್ನ ಬುದ್ಧಿ-ಕ್ಷಮತೆಯಿಂದ ಅವಲೋಕಿಸಿ ಮನದಲ್ಲಿನ ಭಾವನೆಗಳನ್ನು ಕ್ರಿಯಾತ್ಮಕವಾಗಿ ಓದುಗನನ್ನು ತಲುಪುವಂತೆ ಅಭಿವ್ಯಕ್ತಗೊಳಿಸುವ ರೂಪವನ್ನು "ಸಾಹಿತ್ಯ" ಎನ್ನಬಹುದು.

ಸಾಹಿತ್ಯ ಪರಂಪರೆಯ ಪುಟಗಳ ತಿರುವಿ ನೋಡಿದರೆ ಬದುಕೇ ಸಾಹಿತ್ಯ ನಿರ್ಮಾಣದ ಮೂಲ ವಸ್ತುವಾಗಿದೆ. ಕಾಲ ಅನಂತ, ಬದುಕು ನಿರಂತರ! ಇಂತಹ ಅಂತ್ಯವಿಲ್ಲದ ಬದುಕನ್ನು ಅನೇಕ ಮೇಧಾವಿಗಳು ತಮ್ಮ ಅನುಭವದ ಮೂಲಕ ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಗೊಳಿಸುತ್ತಾರೆ. ನಿರಂತರತೆಯ ಒಂದು ಅಂಗವಾಗಿ ನಿಲ್ಲುವ ಸಮಕಾಲೀನ ಸಾಹಿತಿಯ ಹಿಂದೆ, ಹಿಂದಿನ ಅನುಭವ ಪರಂಪರೆ ಗಾಢವಾಗಿ ಪ್ರವಹಿಸುತ್ತದೆ ಹಾಗೂ ನಿಯಂತ್ರಿಸುತ್ತದೆ ಅಂದರೆ ಪ್ರಸ್ತುತ ಸಾಹಿತಿಯ ಹಿಂದೆ, ಒಂದು ಅಖಂಡವಾದ ಶತಶತಮಾನಗಳ ಜೀವನಾನುಭವ ಮತ್ತು ಅದನ್ನು ಅಂದಂದಿನ ಕಾಲಕ್ಕೆ ಹಿಡಿದಿರಿಸಿದ ಲೇಖಕರ ಅಭಿವ್ಯಕ್ತಿ ಪರಂಪರೆ ಈ ಎರಡೂ ಇರುತ್ತದೆ. ಹೀಗೆ ಹಿಂದಿನದು ಸ್ವಲ ಮಟ್ಟಿಗೆ ಅಪ್ರಜ್ಞಾಪೂರ್ವಕ ಮತ್ತು ಬಹುಮಟ್ಟಿಗೆ ಪ್ರಜ್ಞಾಪೂರ್ವಕ ಪ್ರಯತ್ನಗಳ ಮೂಲಕ, ಸಮಕಾಲೀನ ಲೇಖಕನಲ್ಲಿ ಅವನ ಸಾಹಿತ್ಯ ನಿರ್ಮಾಣಕ್ಕೆ ನೆರವಾಗುತ್ತದೆ. ಈ ದೃಷ್ಟಿಯಿಂದ ಇಂದಿನ ಸಾಹಿತಿಗೆ, ಹಿಂದಿನ ಸಾಹಿತ್ಯ ಕೃತಿಗಳ ಅಧ್ಯಯನ ಅತ್ಯಂತ ಅಗತ್ಯವಾದ ಪರಿಕರಗಳಲ್ಲಿ ಒಂದಾಗಿದೆ.

ಆಯಾ ಭಾಷೆಯ ಚಲನಶೀಲ ಚರಿತ್ರೆಯನ್ನು ಪ್ರತಿಯೊಬ್ಬ ಸಾಹಿತಿಯೂ ತಿಳಿದುಕೊಳ್ಳಬೇಕು. ಅದರಿಂದ ವಿವಿಧ ಕವಿ-ಮನೋಧರ್ಮಗಳ ಅಭಿವ್ಯಕ್ತಿಯನ್ನು ಮತ್ತು ಅಭಿವ್ಯಕ್ತಿಗೊಳಿಸುವಾಗ ಎದುರಿಸಿದ ಸೋಲು-ಗೆಲುವು, ಸಾಧನೆ-ಸಿದ್ಧಿಗಳನ್ನು ಅವುಗಳ ಅಧ್ಯಯನದಿಂದ ಅರಿವಿಗೆ ತಂದುಕೊಳ್ಳಬೇಕು. ಪ್ರಸ್ತುತ ಸಮಾಜದಲ್ಲಿ ಸ್ವದೇಶಿ ಪರಂಪರೆಯಷ್ಟೇ ಸಾಲದು. ಅದರ ಜೊತೆಗೆ ತನ್ನ ಪರಿಚಯ ಮತ್ತು ಕಲಿಕೆಯ ಮೂಲಕ ಅನ್ಯ ಭಾಷಾ ಸಾಹಿತ್ಯಗಳೂ ಅವನ ಪರಂಪರೆಯ ಒಂದು ಭಾಗವಾಗುತ್ತದೆ.ಈ ಎರಡರ ಸಮ್ಮಿಲನವು ಸಾಹಿತಿಯಾಗುವನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.

ಸಾಹಿತ್ಯ ಪ್ರಕಾರಗಳ ಹಿನ್ನಲೆ ಮತ್ತು ಅವುಗಳನ್ನು ಉಗಮವಾಗಿಸಿದ ಸಾಹಿತ್ಯ ಚಳುವಳಿಗಳ ಬಗ್ಗೆ ಸಹ ತಿಳಿದುಕೊಳ್ಳಲೇಬೇಕು. ಒಂದು ಸಾಹಿತ್ಯ ಪೀಳಿಗೆಯಿಂದ-ಪೀಳಿಗೆಗೆ ಹಸ್ತಾಂತರವಾಗಬೇಕಾದರೆ ಪ್ರಗತಿಶೀಲ ಕವಿಮನಗಳ ದಿಟ್ಟ ಧೋರಣೆಗಳ ಮೂಲಕವೇ ಸಾಧ್ಯ. ಅದೇ ಸಾಹಿತ್ಯ ಚಳುವಳಿ. ಅಂದಿನಿಂದ ಇಂದಿನವರೆಗೆ ಕೃತಿ, ಕರ್ತೃವಿನ ವಿವರಣೆಯೊಂದಿಗೆ ವಿವಿಧ ಕಾಲಘಟ್ಟಗಳಲ್ಲಿ ಸಾಹಿತ್ಯ ಪರಂಪರೆಯನ್ನು ವಿಂಗಡಿಸುವುದನ್ನು ಕಾಣಬಹುದು. ಭಾಷೆಯಲ್ಲಿನ ಬದಲಾವಣೆ ಆಧರಿಸಿ ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂದಾಗಿಯೂ; ಸಾಹಿತ್ಯ ಪ್ರಕಾರಕ್ಕನುಗುಣವಾಗಿ ಚಂಪೂಯುಗ, ವಚನಯುಗವಾಗಿಯೂ; ಕೃತಿಕಾರರನ್ನಾಧರಿಸಿ ಪಂಪಯುಗ, ಬಸವಯುಗ, ಕುಮಾರವ್ಯಾಸಯುಗ ಎಂದು ಇತಿಹಾಸ ರಚನೆಯಾಗಿವೆ.

ಪಂಪನಿಂದ ನಯಸೇನನವರೆಗೂ ಎರಡು ಶತಮಾನಗಳ ಕಾಲವನ್ನು ಹಳೆಗನ್ನಡ ಸಾಹಿತ್ಯ ಎಂದು ಕರೆಯುತ್ತಾರೆ. ಈ ಸಾಹಿತ್ಯ ಪರಂಪರೆಯಲ್ಲಿ ಧರ್ಮನಿಷ್ಠೆ ಮತ್ತು ಪ್ರಭುನಿಷ್ಠೆ ಇವು ಮೂಲ ಲಕ್ಷಣಗಳಾಗಿವೆ. ಪಂಪನ ಕಾಲದಲ್ಲಿ ರಚಿತವಾದ ಆದಿಪುರಾಣವು ಆಗಿನ ಕಾಲಕ್ಕೆ ಮಹಾಕಾವ್ಯವಾಗಿ ಒಂದು ಉತ್ತಮ ಪ್ರಕಾರವೆನಿಸಿತ್ತು. ಅವನೇ ಹೇಳುವಂತೆ "ಆದಿಪುರಾಣದೊಳರಿವುದು ಧರ್ಮಮಂ ಕಾವ್ಯಧರ್ಮಮುಮಂ" ಎನ್ನುವ ಘೋಷಣೆಯ ಮೂಲಕ ಧರ್ಮ ಮತ್ತು ಕಾವ್ಯಧರ್ಮಗಳೆರಡನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕಲೆಗಾರಿಕೆಯನ್ನು ಕಲಿಸಿಕೊಟ್ಟವನು ಪಂಪ. ಸಾಹಿತ್ಯ ಬದಲಾವಣೆ ಎಂದರೆ ಮೂಲಭೂತವಾಗಿ ಬರವಣಿಗೆಯ ಕ್ರಮ ಅಥವಾ ರೀತಿ ಅಥವಾ ಶೈಲಿಯಲ್ಲಿ ಬದಲಾವಣೆ. ಇವು ಆತ್ಮಸಂತೃಪ್ತಿ ಹಾಗು ಜನಪರ ಅಭಿಪ್ರಾಯಗಳ ಮೇರೆಗೆ ಪೂರಕವಾಗಿರುತ್ತವೆ. ಹಾಗೆಯೇ ಪಂಪನಿಗೆ ಎದುರಾದ ರಾಜಭಾಷೆಯಾದ ಸಂಸ್ಕೃತ ಮತ್ತು ಪ್ರಾದೇಶಿಕ ಭಾಷೆ ಕನ್ನಡ. ಇದರ ಸಮಸ್ಯೆ ಬಿಡಿಸಿದ್ದು ಕನ್ನಡ ಮೊದಲ ಕೃತಿ ಎಂದೇ ಪ್ರಸಿದ್ದವಾಗಿರುವ "ಕವಿರಾಜಮಾರ್ಗ" ಅದರ ವಿಧಿ-ವಿಧಾನದಲ್ಲಿ ಕೃತಿ ರಚನೆ ಮಾಡುವಾಗ "ಸಂಸ್ಕೃತ ಪದದ ಬಳಕೆಯಿಂದ ಕನ್ನಡ ನಾಡು-ನುಡಿಯ ಸೊಗಡನ್ನು ಕಬಳಿಸುವಂತಿರಬಾರದೆಂದು ಉಲ್ಲೇಖಿಸಿದ್ದಾನೆ. ಇದನ್ನು ಪಂಪ ಎತ್ತಿ ಹಿಡಿದು ತಿರುಳ್ಗನ್ನಡ ಅಂದರೆ ದೇಸೀ ಕನ್ನಡ ಎಂದು ಕರೆಯುತ್ತಾನೆ. ಆ ಕಾಲಕ್ಕೆ ದೇಸೀ ಸಾಹಿತ್ಯ ನಿರ್ಮಾಣ ಪಂಪನಿಂದ ಆಯಿತು ಅದು 'ಏಕವ್ಯಕ್ತಿ ಚಳುವಳಿ' ಎಂದು ಘೋಷಿತಗೊಂಡಿದೆ. ನಂತರ ನಯಸೇನನು ಸಂಸ್ಕೃತ ಮತ್ತು ಕನ್ನಡವನ್ನು ಬೇರ್ಪಡಿಸಿ ಶುದ್ಧ ಕನ್ನಡವನ್ನು 'ಧರ್ಮಾಮೃತ' ಎಂಬ ಕೃತಿಯ ಮೂಲಕ ರೂಢಿಗೆ ತರುತ್ತಾನೆ.

ಭಕ್ತಿ ಮತ್ತು ಅನುಭಾವ ಸಾಹಿತ್ಯ ಚಳುವಳಿಗಳು ಕನ್ನಡ ಸಾಹಿತ್ಯ ಪರಂಪರೆಗೆ ತಿರುವು ಕೊಟ್ಟ ಅತೀ ಉತ್ತಮ ಚಳುವಳಿಗಳಾಗಿವೆ. ಇದರಲ್ಲಿ ಹರಭಕ್ತಿ ಪ್ರೇರಣೆಯಿಂದಾದ ವಚನಗಳು ಮತ್ತು ಹರಿಭಕ್ತಿ ಪ್ರೇರಣೆಯಿಂದಾದ ದಾಸ ಕೀರ್ತನೆಗಳು ಭಕ್ತಿ ಮತ್ತು ಅನುಭಾವದ ನೆಲೆಗಟ್ಟು ಹೊಂದಿ ಆದ ಹೊಸ ಪ್ರಕಾರಗಳು. ಹಳೆಗನ್ನಡ ಸಾಹಿತ್ಯ ನಿರ್ಮಾಣವಾದಾಗ ವಚನ, ರಗಳೆ, ಷಟ್ಪದಿ, ಕೀರ್ತನೆ ಈ ರೀತಿಯ ಆವಿಷ್ಕಾರಗಳಾದವು. ಒಂದು ಸಾಮಾಜಿಕ, ಧಾರ್ಮಿಕ ಎಚ್ಚರವನ್ನು ಹುಟ್ಟಿಸಿದ್ದು ಈ ಚಳುವಳಿಗಳು ಎಂಬುದು ವಿಶೇಷತೆಯಾಗಿದೆ. ಈ ಹಾದಿಯಲ್ಲಿ ಹನ್ನೆರಡನೆ ಶತಮಾನದ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ಮುಂತಾದವರು ಶಿವಭಕ್ತಿಯ ಆಸರೆಯಲ್ಲಿ ಸಾಮಾಜಿಕ ನೆಲೆಗಟ್ಟನ್ನು ಮಾನವೀಯ ಮೌಲ್ಯಗಳಿಂದ ಸುಭದ್ರಗೊಳಿಸಲು ಶ್ರಮಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಇದರಲ್ಲಿನ ಧಾರ್ಮಿಕ ನಿಲುವು ವಾಸ್ತವ ಜೀವನವನ್ನು ಒಪ್ಪಿಕೊಂಡ ಒಂದು ಕ್ರಮ, ಆದರೆ ಹನ್ನೆರಡನೇ ಶತಮಾನದಲ್ಲಾದ ಸಾಮಾಜಿಕ-ಧಾರ್ಮಿಕ ಚಳುವಳಿಗಳು ಹೆಣ್ಣು-ಗಂಡೆಂಬ ತಾರತಮ್ಯವಿಲ್ಲದೆ ಪ್ರೋತ್ಸಾಹ ಪಡೆದವು.ಅಕ್ಕಮಹಾದೇವಿ ಮೊದಲ ಕವಯಿತ್ರಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದರು .ಇದಾದ ನಂತರ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ನರಹರಿತೀರ್ಥರು ಕನ್ನಡದಲ್ಲಿ ಮೊತ್ತಮೊದಲ ದೇವರನಾಮಗಳನು ಬರೆದರು. ಕೃಷ್ಣದೇವರಾಯನ ಗುರುಗಳಾಗಿದ್ದ ವ್ಯಾಸರಾಯರು ವಿಜಯನಗರಕ್ಕೆ ಬಂದು ಬ್ರಹ್ಮಸೂತ್ರಗಳ ಅರ್ಥವೆಲ್ಲರಿಗೂ ತಿಳಿಯುವಂತೆ ಕನ್ನಡದಲ್ಲಿ ಹೊಸ ಪ್ರಯತ್ನ ಮಾಡಿದರು. ಒಟ್ಟಾರೆ ವಚನಗಳು ಮತ್ತು ಕೀರ್ತನೆಗಳು ಕನ್ನಡ ಸಾಹಿತ್ಯದ ಅತ್ಯಂತ ವಿಶಿಷ್ಟ ರೂಪಗಳು. 

ನಂತರ ಆದ ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳು ಕನ್ನಡ ಸಾಹಿತ್ಯದ ವೇಗ ಮತ್ತು ಅದಕ್ಕೆ ಕಾರಣವಾದ ಸಾಹಿತ್ಯ ಸ್ವರೂಪವು ಬೆರಗು ಹುಟ್ಟಿಸುವಂತವು, ಅದರಲ್ಲಿ ನವೋದಯಸಾಹಿತ್ಯ, ಪ್ರಗತಿಶೀಲಸಾಹಿತ್ಯ, ನವ್ಯಸಾಹಿತ್ಯ ಮತ್ತು ದಲಿತ - ಬಂಡಾಯ ಸಾಹಿತ್ಯ ಚಳುವಳಿಗಳೆಂದು ನಿರ್ದೇಶಿತವಾಗುವುದು.
ಹೀಗೆ ಸಾಹಿತ್ಯ ಚಳುವಳಿಗಳಿಂದ ಈ ಸಾಹಿತ್ಯ ಪರಂಪರೆ ಒಂದು ಮತ್ತೊಂದಕ್ಕೆ ಪೂರಕವಾಗುತ್ತ ,ಸಾಹಿತ್ಯವನ್ನು ನಿಂತ ನೀರಾಗಿಸದೆ ಹರಿಯುವ ನದಿಯಂತೆ ನಿರಂತರತೆಯನ್ನು ಮುಂದುವರೆಸುವ ವೇಗವರ್ಧಕಗಳಾಗಿವೆ ಎಂಬ ತಿಳುವಳಿಕೆ ಮುಖ್ಯ. ನಿಜವಾದ ಕೃತಿಯ ನಿರ್ಮಾಣವಾಗುವುದು ಬರಹಗಾರನೊಬ್ಬನ ಸತ್ವ ಹಾಗೂ ವ್ಯಕ್ತಿ ಪ್ರತಿಭೆಯ ಪರಿಣಾಮ. ಸಾಹಿತ್ಯ ಚಳುವಳಿಗಳು ಸ್ವರೂಪತಃ ಸಾಮೂಹಿಕ, ಆದರೆ ಸಾಹಿತ್ಯ ನಿರ್ಮಾಣ ವೈಯಕ್ತಿಕವಾಗಿ ರೂಪುಗೊಳ್ಳುವುದು . ಸಾಹಿತ್ಯದಲ್ಲಿ ಮೂಲಭೂತ ಬದಲಾವಣೆ ಹೊರತರುವ ಸಲುವಾಗಿ ರೂಪುಗೊಳ್ಳುವ ಸಾಹಿತ್ಯವು ಒಂದು ಗಟ್ಟಿಯಾದ ಪರಂಪರೆಯನ್ನು ನಿರ್ಮಿಸುವಂತಿರಬೇಕು ಆ ನಿಟ್ಟಿನಲ್ಲಿ ಸಾಹಿತ್ಯ ಚಳುವಳಿ ಮಹತ್ವದ್ದಾಗಿದೆ ಎಂದು ವಿಷದೀಕರಿಸುತ್ತಾ ಇಂಥ ಮಹೋನ್ನತವಾದ ಸಾಹಿತ್ಯ ಸೃಷ್ಟಿಯ ತಿಳಿವಳಿಕೆಯೊಂದಿಗೆ ಇಂದಿನ ನಮ್ಮ ಬರಹಗಾರರು ತಮ್ಮ ಸುಂದರ ಸೃಷ್ಟಿಗಳಿಗೆ ಕಾರಣೀಭೂತರಾಗಲಿ ಎನ್ನುವ ಆಶಯ ನನ್ನದು.

ವಂದನೆಗಳೊಂದಿಗೆ,

ಪ್ರೀತಿಯಿಂದ,
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿಯ ಪರವಾಗಿ,
ನಿಮ್ಮ ಜಿ. ಪಿ .ಗಣಿ.
ಸಲಹೆ/ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ)

Tuesday 30 October 2012

ಗೀತಸಾಹಿತ್ಯ - ಬದ್ಧತೆಯನ್ನು ಬದಿಗೊತ್ತಿ ಸತ್ವಹೀನ ನಡೆಯತ್ತ!


ಕನ್ನಡ ಚಿತ್ರರಂಗ, ರಂಗಭೂಮಿಯನ್ನು ಸಮೃದ್ಧಗೊಳಿಸಿ ಮನಸೂರೆಗೊಳಿಸುವಂತಿದ್ದ  "ಗೀತ (ಚಿತ್ರ) ಸಂಗೀತ"ವೆಂಬ ಸಾಹಿತ್ಯ ಪ್ರಕಾರವು ಎಗ್ಗಿಲ್ಲದ ಸಿಗ್ಗಿಲ್ಲದ ಅರ್ಥಹೀನ, ಭಾವಹೀನ, ಥಳುಕುಬಳುಕಿನ ಕೊಳಕು ಸಾಹಿತ್ಯ ರಚನೆಗಷ್ಟೇ ಸೀಮಿತಗೊಂಡು ಕವಲುದಾರಿಯತ್ತ ಸಾಗುತ್ತಿದ್ದು ನಮ್ಮ ಇಂದಿನ ಚಿತ್ರ(ಗೀತ) ಸಾಹಿತಿಗಳ ಬೌದ್ಧಿಕ ದಿವಾಳಿತನಕ್ಕೆ ಜೀವಂತ ಸಾಕ್ಷಿಯಾಗಿ ನೂರಾರು ರಚನೆಗಳನ್ನು ಪುಷ್ಠೀಕರಿಸಿ ವಿಷದೀಕರಿಸಬಹುದಾಗಿದೆ. ನಮ್ಮ ಇತ್ತೀಚಿನ ಕೆಲವು ಕವಿಗಳಂತೂ ಮನಸ್ಸಿಗೆ ತೋಚಿದ್ದನ್ನೆಲ್ಲಾ ಗೀಚಿ, ತಮ್ಮದು ಶ್ರೇಷ್ಠ ರಚನೆಯೆಂದು ಬೀಗಿಕೊಳ್ಳುತ್ತಾ ನಾನೊಬ್ಬ ಮಹಾನ್ ಕವಿಯೇ ಆಗಿ ಬಿಟ್ಟಿರುವೆನೆಂಬ ಗುಂಗಿನಲ್ಲಿ ವಿಹರಿಸುತ್ತಾ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವ ಮೌಲ್ಯಗಳ ಬಗ್ಗೆ ಬದ್ಧತೆಯನ್ನೇ ಕಳೆದುಕೊಂಡಿರುವುದನ್ನು ಗಮನಿಸಿದರೆ ಅತ್ಯಂತ ಕಳವಳವಾಗುತ್ತದೆ. 'ಹೊಡಿ ಮಗ ಹೊಡಿ ಮಗ ಬಿಡಬ್ಯಾಡ ಅಂವನ್ನ...' ಇಂಥ ಪಲ್ಲವಿಯಿಂದಾರಂಭಗೊಳ್ಳುವ ಚಿತ್ರ ಗೀತೆಯೂ ಜನಪ್ರಿಯವಾಗುತ್ತದೆ! ರಚನಾ ಕರ್ತೃವೂ ಪ್ರಸಿದ್ಧಿಗೆ ಬರುತ್ತಾನೆ. ಅದೇ 'ನನ್ನ ಪ್ರೀತಿಯ ದೇವತೆಯೂ ಬಳಿ ಬಂದಳು, ನನ್ನ ಹೃದಯದ ಬಾಗಿಲಿಗೇ ಬೆಳಕಾದಳು...’ ಎನ್ನುವ ಭಾವ ತೀವ್ರತೆಯ ಗೀತೆ ಹಿಟ್ ಆಗುತ್ತಿಲ್ಲದಿರುವುದಕ್ಕೆ ಇಂದಿನ ಪೀಳಿಗೆಯ ಆಸ್ವಾದನೆಯ ದೃಷ್ಠಿ ಎತ್ತ ಸಾಗಿದೆ ಎಂಬುದರ ದ್ಯೋತಕವಾಗಿದೆ.

ಗೀತ ಸಾಹಿತ್ಯದ ಹೆಮ್ಮೆಯ ಖಣಿಗಳಾಗಿದ್ದ ಕಣಗಾಲ್ ಪ್ರಭಾಕರ ಶಾಸ್ತ್ರಿ, ಜಿ.ವಿ.ಅಯ್ಯರ್, ಹುಣಸೂರು ಕೃಷ್ಣಮೂರ್ತಿ, ಕರೀಂಖಾನ್, ಚಿ.ಉದಯಶಂಕರ್, ಸಿದ್ಧಲಿಂಗಯ್ಯ ಅವರಂಥ ಕವಿ ಮಾನ್ಯರು ಅದೆಂಥ ರಮ್ಯ ಮನೋಹರ ಭಾವ ದುಂದುಭಿಯನ್ನು ಹರಿಸಿಲ್ಲ? ನವ ರಸಗಳ ಮಾಧುರ್ಯ ಬೆರೆತ ರಸಸ್ವಾದನೆಯ ಗಮ್ಮತ್ತು ಮನದಲ್ಲಿ ಗುಂಯ್ ಗುಡಿಸುತ್ತಿದ್ದವು. 'ಇವಳು ಯಾರು ಬಲ್ಲೇ ಏನು| ಇವಳ ಹೆಸರು ಹೇಳಲೇನು....,'  'ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ...,'  'ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ | ಸುಳಿದಾಡಬೇಡ ಗೆಳತಿ | ಮುದ್ದಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವು ಬೆಳ್ಳಿ ಕಿರಣ....', 'ಮಾನವನಾಗುವೆಯಾ ಇಲ್ಲಾ ದಾನವನಾಗುವೆಯ, ನೀ ಮಾನವ ಕುಲಕ್ಕೆ ಮುಳ್ಳಾಗುವೆಯಾ.....', ‘ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು | ಮೀಸೆ ತಿರುವಿ ಮೆರೆದವರೆಲ್ಲ ಮಣ್ಣಾದರು.....ಮುಂತಾಗಿ ಈ ಸುಂದರ ಗೀತ ಸಾಹಿತ್ಯ ಪ್ರಕಾರಗಳಲ್ಲಿ ಅದೆಂಥ ಅದ್ಭುತ ಸಂದೇಶ ಅಡಗಿದೆ, ಅದೆಷ್ಟು ಹಿತವಡಗಿದೆಯಲ್ಲವೇ? ’ಪ್ರೀತಿನೆ ಆ ದ್ಯಾವ್ರು ತಂದ ಆಸೆ ನಮ್ಮ ಬಾಳ್ವೆಗೆ...', 'ಸ್ವಾಭಿಮಾನದ ನಲ್ಲೆ,ಸಾಕು ಸಂಯಮ ಬಲ್ಲೆ | ಹೊರಗೆ ಸಾಧನೆ ಒಳಗೆ ವೇದನೆ | ಇಳಿದು ಬಾ ಬಾಲೆ......ಹೀಗೆ ಹೆಣ್ಣನ್ನು ನವೀರಾಗಿ ಛೇಡಿಸುವ ಈ ಸುಂದರ ಹಾಡುಗಳ ಜೊತೆಗೆ 'ಬಳಿ ನೀನಿರಲು, ಬಿಸಿಲೇ ನೆರಳು, ಮಧುಪಾನ ಪಾತ್ರೆ ನಿನ್ನೊಡಲು....', ಎಂದೂ ಸೇರಿಸಿ ಶೃಂಗಾರ ಬೆರೆಸಿ ಉಣಿಸಿದ ಕವಿಸಾಲುಗಳು ಇಂದಿಗೂ ಅನುರುಣಿಸುತ್ತವೆಯಲ್ಲವೇ?

ಇಂದಿನ ಗೀತ ಸಾಹಿತಿಗಳ ಬಗ್ಗೆ ಪಾಪ ಎನಿಸುವುದು ಕಿವಿಗಡಚಿಕ್ಕುವ ಸಂಗೀತೋಪಕರಣಗಳ ಸದ್ದಿನಿಂದ ಹೊರಬಂದು ಕಿವಿ ತೆರೆದರೆ ಸಾಕು, ಕೇಳುವುದು ಈ ಕೊಳಕು ಗೀತೆಗಳೇ, ' ಹೂಂ ಅಂದ್ಲು ಆ ದಿನ|ಊಹೂಂ ಅಂದ್ಲು ಈ ದಿನ...', 'ಮನೆತಂಕ ಬಾರೆ ಮನೆತಂಕ| ಹೊಡಿತಿನಿ ಡವ್ವು ಕೊನೆತಂಕ....', 'ಥೂ...ಅಂತಾ ಉಗಿದರೂ ನಿನ್ನೇ ಪ್ರೀತಿ ಮಾಡ್ತೇನಿ ಹೋಗೇ ಹೋಗಮ್ಮ ಹೋಗೇ ಹೋಗೆ....', 'ಯಾಕಿಂಗಾಡ್ತರೋ ಈ ಹುಡುಗರು......', ಇತ್ಯಾದಿ ಇತ್ಯಾದಿ ಇಂಪಿಲ್ಲದ ಕಂಪಿಲ್ಲದ ಸೊಂಪಿಲ್ಲದ ಮಸಾಲೆ ಗೀತೆಗಳು ಸಾರುವ ಸಂದೇಶ, ನೀಡುವ ಆನಂದವಾದರೂ ಏನು? ಈ ಗೀತೆಗಳಿಗಿಂತ ನಮ್ಮ ಹಿಂದಿನ ಗೀತ ಸಾಹಿತಿಗಳ 'ಗಿಲ್ ಗಿಲಿ ಗಿಲಕ್, ಕಾಲು ಗೆಜ್ಜೆ ಝಣಕ್ಕು ಕೈ ಬಳೆ ಠಣಕ್ಕು....', 'ಸಿಟ್ಯಾಕೊ ಸಿಡುಕ್ಯಾಕೋ ನನ್ನ ಜಾಣಾ,ಇಟ್ಟಾಯ್ತು ನಿನಮೇಲೆ ನನ್ನ ಪ್ರಾಣ....', ಮುಂತಾಗಿ ಹೊರಬಂದ ಅದೆಷ್ಟೋ ಹಾಡುಗಳೇ ವಾಸಿ ಎನಿಸುತ್ತವೆ.

'ಬಾ ತಾಯೆ ಭಾರತಿಯೇ, ಭಾವ ಭಾಗೀರಥಿಯೇ...', 'ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ,ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀಯೆ....', ಇತ್ಯಾದಿಯಾಗಿ ಬರೆದು ಪಾವನಗೊಳಿಸಿದ ಅಯ್ಯರ್ ಅವರ ಗೀತಗಾನಗಳು ನಮ್ಮ ಹೃನ್ಮನಗಳನ್ನು ತಣಿಸಿ ಆನಂದ ನೀಡುತ್ತವೆ.ಇಂಥ ರಚನೆ ಇಂದೇಕೆ ಇಲ್ಲ? ನಮ್ಮ ಕವಿ ಮನಸುಗಳ ಚಿಂತನಾ ಲಹರಿಗೇನಾಗಿದೆ? ಎಂದು ಪ್ರಶ್ನಿಸಬೇಕಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಜನಮಾನಸದಲ್ಲಿ ಸದಾಕಾಲ ಉಳಿಯುವಂತಹ ಗೀತ ಸಾಹಿತ್ಯವನ್ನು ರಚಿಸುವಲ್ಲಿ ಎಡವಿರುವುದರ ಹಿಂದೆ ದುಡ್ಡೊಂದನ್ನೇ ಮಾಡಬೇಕೆಂಬ ವ್ಯಾಪಾರ ಮನೋವೃತ್ತಿಯ ಕ್ಷಣಿಕ ಲಾಭದ ಪಾಲಷ್ಟೇ ಗೋಚರವಾಗುತ್ತದೆ!

ಒಲವಿನ ಕವಿ, ಚಿತ್ರ(ಗೀತ)ಸಾಹಿತಿಯಾಗಿದ್ದ ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಈ ಹಾಡು ಮನದಲ್ಲಿ ಇಂದಿಗೂ ಮಾರ್ದನಿಸುವುದಿಲ್ಲವೇ?
"ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ
ದುಂಬಿಯ ಹಾಡಿನ ಝೇಂಕಾರದಲ್ಲೂ
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ
ತುಂಬಿದೆ ಒಲವಿನ ಸಾಕ್ಷಾತ್ಕಾರ....." 
-ಇಂಥ ಸುಂದರ ಅರ್ಥಪೂರ್ಣ ಪದಗಳ ಲಾಲಿತ್ಯದಲ್ಲಿ ಒಡಮೂಡಿದ ಶಾಸ್ತ್ರಿಯವರ ಒಲವಿನೊರತೆಯ ಕವಿತೆಗಳು ಇಂದೇಕೆ ಕಾಣುತ್ತಿಲ್ಲ ಎಂಬ ಕೊರಗು ಇಂದಿನ ಕನ್ನಡ ಚಿತ್ರರಂಗದ್ದು, ಕನ್ನಡ ಗೀತ ಸಾಹಿತ್ಯ ಪ್ರಕಾರದ್ದು ಎನ್ನಬೇಕಾಗಿದೆ. ಒಲವಿನ ಭಾವ ತೀವ್ರತೆಯು ಕಣಗಾಲ ಕವಿತೆಯ ಶಕ್ತಿಯಾಗಿತ್ತೆಂಬುದಕ್ಕೆ ಈ ಕವಿತೆಯನ್ನು ಗಮನಿಸಿ.

ಹಾಡೋಣ ಒಲವಿನ ರಾಗಮಾಲೆ
ಆಡೋಣ ಒಲವಿನ ರಾಸಲೀಲೆ
ಈ ಧರೆಯ ಆ ಗಿರಿಯ ಬೆಳ್ಮುಗಿಲ ಮೇಲೆ
ಹೂಬಳ್ಳಿ ಹೂಗಾಳಿ ನದಿಯಲೆಯ ಮೇಲೆ
ಮೈ ಮರೆಸೋ ಒಲವಿನ ನಾದಲೇಲೆ
ಒಲವೇ....... ಬಾಡದ ಸಂಬಂಧ ಮಾಲೆ| 
-ಈ ತರಹದ ಸುಮಧುರ ಪ್ರೇಮ ಗೀತೆಯು ಜಿ.ಎಸ್.ಎಸ್.ರವರ 'ಹಳೆಯ ಹಾಡು ಹಾಡು ಮತ್ತೆ| ಅದನೆ ಕೇಳಿ ಸುಖಿಸುವೆ, ಹಳೆಯ ಹಾಡಿನಿಂದ ಹೊಸತು ಜೀವನವನೇ ಕಟ್ಟುವೆ| ಎಂಬ ಇಂಪಾದ, ಅರ್ಥವಂತಿಕೆಯ ನವಿರಾದ ಸಾಲುಗಳು ಮನೋಗತವಾಗುತ್ತವೆಯಲ್ಲವೇ?

ಇಂದಿನ ಗೀತ ಸಾಹಿತ್ಯ ಪ್ರಕಾರದಲ್ಲಿ ರಚನೆಯಾಗುತ್ತಿರುವ ಕವಿತೆಗಳಲ್ಲಿ ಸ್ವಲ್ಪವಾದರೂ ಹೆಮ್ಮೆ ಉಳಿದಿದ್ದರೆ ಅದು ಜಯಂತ ಕಾಯ್ಕಿಣಿ ಅವರಂಥ ಸತ್ವಯುತ, ಅಪರೂಪದ ಕವಿಗಳಿಂದ ಎನ್ನಲೇಬೇಕು.(ಕಾಯ್ಕಿಣಿ ಅವರನ್ನು ಉದಾಹರಣೆಗಷ್ಟೇ ತೆಗೆದುಕೊಳ್ಳಲಾಗಿದೆ). ಈ ಹಿಂದೆ ಗೀತ ಸಾಹಿತ್ಯಕ್ಕೆ ಕೃತಿ ರಚನೆಯಾದ ಆನಂತರ ರಾಗ ಸಂಯೋಜನೆ ಮಾಡಬೇಕಾಗಿತ್ತು. ಅದು ತುಂಬಾ ಕಷ್ಟದಾಯಕವಾಗಿತ್ತು. ಚಲನ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಹಾಡು ಬರೆಯಬೇಕಾದಾಗ, ಅದರ ನಿರ್ದೇಶಕ ಗೀತ ಸಾಹಿತಿಯನ್ನು ಆ ಹಾಡಿನ ಚಿತ್ರೀಕರಣ ನಡೆಯುವ ಸ್ಥಳವನ್ನು ತೋರಿಸಿ, ಕಥೆಯ ಸನ್ನಿವೇಶ ಸಂದರ್ಭವನ್ನು ವಿವರಿಸಿ ಅದಕ್ಕೆ ತಕ್ಕಂತೆ ಹಾಡು ಬರೆಸುತಿದ್ದರು. ಆದರೆ ಈಗ ಮೊದಲೇ ಸಿದ್ಧಪಡಿಸುವ ರಾಗಕ್ಕೆ ತಕ್ಕಂತೆ ಸಾಹಿತ್ಯ ರಚಿಸಬೇಕಾಗುತ್ತದೆ. ರಚನೆಕಾರ ಈ ಇಕ್ಕಟ್ಟಿನಲ್ಲಿ 'ಮೀಟರ್' ಎನ್ನುವ ಕಟ್ಟುಪಾಡಿಗೆ ಗಂಟುಬಿದ್ದು ಯದ್ವಾತದ್ವಾ ಸಾಹಿತಿಯಾಗುವುದು ಸಹಜ. ಉದಾ; ರಾಂಬೋ ಚಿತ್ರದ ಹಾಡು ''ಜಯ ಜಯ ಜಾಕೆಟ್ಟು, ಜಯನ್ ಗಂಡ ರಾಕೆಟ್'' ಇದು ಯಾವ ಗೀತ ಸಾಹಿತ್ಯವೋ ಅರ್ಥವಾಗಲಿಲ್ಲ. ಹಾಗಾಗಿ ಇತ್ತೀಚಿನ ಅಧ್ವಾನದ ಗೀತ ಸಾಹಿತ್ಯಕ್ಕೆ ಕವಿ ಕಾರಣನಲ್ಲ. ಗೀತ ಸಾಹಿತಿಯೂ ಒಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಆಣತಿಯಂತೆ ಬರೆಯಬೇಕಾಗುತ್ತದೆ. ಇಲ್ಲಿ ಕವಿಗೆ ಯಾವುದೇ ಸ್ವಾತಂತ್ರ್ಯ ಇರುವುದಿಲ್ಲವೆಂಬುದನ್ನು ಅರಿಯಬೇಕಾಗುತ್ತದೆ. 

ಹೊಸತಲೆಮಾರಿಗೆ ನವ ಗೀತಸಾಹಿತ್ಯ ರಚಿಸಿ ರಾಗ ಸಂಯೋಜಕರಾದ ಹಂಸಲೇಖ, ಗೀತಪ್ರಿಯ, ವಿಜಯನಾರಸಿಂಹ, ಆರ್. ಎನ್. ಜಯಗೋಪಾಲರಂಥವರಲ್ಲದೇ, ಗೀತ ಸಾಹಿತ್ಯಕ್ಕಷ್ಟೇ ತಮ್ಮನ್ನು ಮುಡಿಪಾಗಿಡದ ದೊಡ್ಡರಂಗೇಗೌಡರಂಥಹ ಕವಿವರ್ಯರೂ ಪರಸಂಗದ ಗೆಂಡೆತಿಮ್ಮ ಚಿತ್ರದ ತೇರ ಏರಿ ಅಂಬರದಾಗೆ ನೇಸರ ನಗುತಾನೆ ಹಾಗು ನೋಟದಾಗೆ ನಗೆಯ ಮೀಟಿ ಮೋಜಿನಾಗೆ ಎಲ್ಲೆಯ ದಾಟಿ ಎಂಬ ಹಾಡು ಬರೆದು ಪ್ರಸಿದ್ಧರಾದರು. ಈಗಲೂ ಸಹ ಚಲನಚಿತ್ರಕ್ಕೆ ಗೀತೆಗಳನ್ನು ಬರೆಯುತಿದ್ದಾರೆ. ಅದಲ್ಲದೇ ಪಿ.ಲಂಕೇಶ್ ಸಾಹಿತಿಯಾಗಿ ಬಹು ದೊಡ್ಡ ಹೆಸರು. ಲೇಖಕರು ಉತ್ತಮ ಕವಿಗಳು ಕೂಡ. ಇವರೇ ಬರೆದು ನಿರ್ದೇಶನ ಮಾಡಿದ ಎಲ್ಲಿಂದಲೋ ಬಂದವರು ಚಿತ್ರದ ಹಾಡು ಕೆಂಪಾದವೋ ಎಲ್ಲ ಕೆಂಪಾದವೋ, ಹಸಿರಿದ್ದ ಗಿಡಮರ, ಬೆಳ್ಳಗಿದ್ದ ಹೂವೆಲ್ಲ ನೆತ್ತಾರ ಕುಡಿದಾಂಗೆ ಕೆಂಪಾದವೋ ಎಂಬ ಗೀತೆ ಸಮಾಜದಲ್ಲಿನ ಅಸಮತೋಲನವನ್ನು ಎತ್ತಿ ಹಿಡಿದ ಕವಿತೆ. ಈ ರೀತಿಯ ಗೀತ ಸಾಹಿತ್ಯವನ್ನು ನಾವು ಇಂದಿನ ಚಲನಚಿತ್ರದಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಡಾ|ಚಂದ್ರಶೇಖರ ಕಂಬಾರರು ಕೈ ಆಡಿಸದ ಕ್ಷೇತ್ರವಿಲ್ಲ ಎಂದು ಹೇಳಬೇಕು. ಪ್ರಸಿದ್ಧ ನಾಟಕಕಾರರು, ಜಾನಪದ ಶೈಲಿಯ ರಚನೆಯಲ್ಲಿ ಎತ್ತಿದ ಕೈ. ಇವರು ಬರೆದು ನಿರ್ದೇಶನ ಮಾಡಿದ ಕಾಡು ಕುದುರೆ ಚಿತ್ರದ ಕಾಡುಕುದುರೆ ಓಡಿ ಬಂದಿತ್ತಾ ಎಂಬ ಗೀತೆಯನ್ನು ಕೇಳುತಿದ್ದಂತೆ ಈಗಲೂ ಕೇಳುಗನ ಹೃದಯ ರೋಮಾಂಚನಗೊಳ್ಳುತ್ತದೆ. ಮೇಲಿನ ಎಲ್ಲಾ ಉದಾಹರಣೆಗಳ ಹೊರತಾಗಿಯೂ ಕುವೆಂಪು, ದ.ರಾ.ಬೇಂದ್ರೆಯಂಥ ಮಹಾನ್ ಕವಿಗಳ ರಚನೆಗಳನ್ನು ಅಳವಡಿಸಿಕೊಂಡು ಒಂದು ಕಾಲದಲ್ಲಿ ಶ್ರೀಮಂತಿಕೆಯನ್ನು ಪ್ರದರ್ಶಿಸಿತ್ತು ನಮ್ಮ ಚಿತ್ರಜಗತ್ತು ಎಂದರೆ ತಪ್ಪಾಗಲಾರದು.

ಇನ್ನು ಯೋಗರಾಜ್ ಭಟ್ಟರು ಮುಂಗಾರು ಮಳೆಯಲ್ಲಿ ''ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ. ನಿನ್ನ ಮುಗಿಲ ಸಾಲೆ, ಧರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ'' ಎಂದು ಹೃದಯವನ್ನು ಬಸಿದು ಬರೆದವರು, ಜಂಗ್ಲೀ ಚಿತ್ರಕ್ಕೆ '' ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತಾರಾ ಹೋಯಿ '' ಅನ್ನೋದನ್ನು ಬರೆಯುವುದಲ್ಲದೆ ಮುಂದುವರಿದು ಚಿಂಗಾರಿ ಎಂಬ ಚಿತ್ರದಲ್ಲಿ ಅರ್ಥವೇ ಇಲ್ಲದ '' ಕೈ ಕೈಯ್ಯ ಕಚ್ಚಾಸುಡಾ ಬೊಸುಡಾ, ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ, ನಡಬಾರಿ ಗಟ್ಟಿ ಕಾ ಮುಕುಡ'' ಎಂದು ಬರೆಯುತ್ತಾರೆ. ಮೊದಲೇ ಸಿದ್ಧ ಪಡಿಸಿದ್ದ ರಾಗಕ್ಕೆ ಸುಮ್ಮನೆ ಈ ಅಧ್ವಾನದ ಪದಗಳನ್ನು ತುಂಬಿದ್ದಾರೆ. ಅವರೇ ಹೇಳಿಕೊಳ್ಳುವಂತೆ ಈ ಹಾಡಿಗೆ ಯಾವುದೇ ಅರ್ಥವಿಲ್ಲ. ಈ ಹಾಡನ್ನು ಪ್ರಯೋಗಶೀಲತೆಯ ಹೆಸರಲ್ಲಿ ಪ್ರೇಕ್ಷಕ ಏನನ್ನಾದರೂ ಸ್ವೀಕರಿಸುತ್ತಾನೆ ಎಂಬ ದುರಹಂಕಾರದಿಂದ ಬರೆಯುತ್ತಾರೆ. ಉತ್ತಮ ಚಲನ ಚಿತ್ರಗೀತ ಸಾಹಿತ್ಯ ಹೊರಹೊಮ್ಮುವುದಕ್ಕೆ ನಿರ್ದೇಶಕ ಹಾಗು ನಿರ್ಮಾಪಕರು ಸಹ ಮನಸ್ಸು ಮಾಡಬೇಕು. ಇಂದಿಗೂ ಸಹ ಒಬ್ಬ ನಿಜವಾದ ಪ್ರೇಕ್ಷಕ ಕೇಳುವುದು ದೊಡ್ಡ ರಂಗೇ ಗೌಡರು ರಚಿಸಿರುವ ''ಜನ್ಮ ನೀಡಿದ ಭೂ ತಾಯಿಯ, ನಾ ಹೇಗೆ ತಾನೇ ತೊರೆಯಲಿ'' ಎಂಬ ಗೀತೆಯನ್ನು. ಚಿ:ಉದಯಶಂಕರ್ ರಚಿಸಿರುವ '' ಮಾಮರವೆಲ್ಲೋ ಕೋಗಿಲೆಯೆಲ್ಲೋ , ಏನೀ ಸ್ನೇಹ ಸಂಬಂಧ, ಎಲ್ಲಿಯದು ಈ ಅನುಬಂಧ'', ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ರಚಿಸಿರುವ ವೀರಕೇಸರಿ ಚಿತ್ರದ ''ಮೆಲ್ಲುಸಿರೇ ಸವಿಗಾನ ''  ಎಂಬ ಗೀತೆಗನ್ನು ಮಾತ್ರವೇ.  ಅರ್ಥವಿಲ್ಲದ ರಚನೆಗಳನ್ನು ರಚಿಸಿ ಮನರಂಜನೆಯ ಹೆಸರಲ್ಲಿ ಸಂಸ್ಕೃತಿ ಹಾಗು ಕನ್ನಡ ಸಾಹಿತ್ಯದ ತುಚ್ಛೀಕರಣ ಸಲ್ಲದು. ಇದು ಕೀಳು ಅಭಿರುಚಿಯ ನಿರ್ಮಾಪಕರಿಗೆ ಮಾತ್ರ ಸಾಧ್ಯ. ವ್ಯಾಪಾರ ವ್ಯವಹಾರದಲ್ಲಿ ಲಾಭವೇ ಮುಖ್ಯ,  ಹಾಗೆಂದು ಪ್ರೇಕ್ಷನ ಅಭಿರುಚಿ ಇವರಿಗೆ ನಗಣ್ಯವಾಗಬಾರದು.

ನಮ್ಮ ಕನ್ನಡ ಬ್ಲಾಗಿನ ಸಾವಿರಾರು ಸಕ್ರಿಯ ಸದಸ್ಯರ ಪೈಕಿ ನೂರಾರು ಕವಿಗಳ ಅನುಭೂತಿ ನೀಡುವಂತ ಅರ್ಥಪೂರ್ಣ ಕವಿತೆಗಳನ್ನು ಓದಿ ನಾನು ಆಸ್ವಾದಿತನಾಗಿರುವೆನೆಂದು ತಿಳಿಸಲು ಹೆಮ್ಮೆಯಾಗುವುದು. ಈ ಕವಿಗಳಲ್ಲಿ ಕೆಲವರು ಪ್ರಸಿದ್ಧರು ಇನ್ನು ಕೆಲವರು ಪ್ರಸಿದ್ಧಿಗೆ ಬರಬೇಕಾದವರೂ ಆಗಿದ್ದಾರೆ. ಶ್ರೀಯುತರುಗಳಾದ ಹೃದಯಶಿವ , ರವಿ ಮೂರ್ನಾಡು, ಬದರಿನಾಥ ಪಲವಲ್ಲಿ, ಲತಾ ದಾಮ್ಲೆ, ಭೀಮಸೇನ, ಗುರುನಾಥ ಬೋರಗಿ, ತಿರುಮಲೈ ರವಿ, ಸತೀಶ ರಾಮನಗರ, ಮೋಹನ್ ಕೊಳ್ಳೆಗಾಲ, ಪುಷ್ಪರಾಜ್ ಚೌಟ, ಈಶ್ವರ ಕಿರಣ ಭಟ್ಟ, ಪವನ ಹರಿತಸ, ಪ್ರಮೋದ್ ಡೀವಿ, ಪ್ರವರ ಕೊಟ್ಟೂರು, ಪ್ರಸಾದ್ ವಿ ಮೂರ್ತಿ, ಗಣೇಶ ಜೀ ಪಿ, ಪರೇಶ್ ಸರಾಫ್, ಆರತಿ ಘಟಿಕರ್, ವಿಶ್ವಜಿತ್ ರಾವ್, ಕೃಷ್ಣಮೂರ್ತಿ ಭದ್ರಾವತಿ, ಕೃಷ್ಣಮೂರ್ತಿ ಅವರಂಥ ಕವಿಗಳಿಗೆ ಈ ಗೀತ ಸಾಹಿತ್ಯವನ್ನು ಸೃಷ್ಟಿಸುವ ಅದಮ್ಯ ಶಕ್ತಿ ಇರುವುದನ್ನು ನೋಡಿದ್ದೇನೆ. (ನನ್ನ ನೆನಪಿನಂಗಳದಿಂದ ತೆಕ್ಕೆಯಲ್ಲಿನ ಕೆಲವು ಹೆಸರುಗಳನ್ನಷ್ಟೇ ಉದ್ಗರಿಸಿದ್ದೇನೆ. ಇನ್ನೂ ಹಲವಾರು ಬರಹಗಾರರನ್ನು ನಮೂದಿಸಲು ಇನ್ನಷ್ಟು ಕಾಲಾವಕಾಶ ಬೇಕು ಮತ್ತು ಅದರ ಅಳವಡಿಕೆ ನಮ್ಮ ಮುಂದಿನ ಲೇಖನದಲ್ಲಿ).  ಇಂಥಹ ಎಲೆಮರೆಕಾಯಿಯಂಥವರು ರಚಿಸಿದ ಎಲ್ಲವೂ ಗೀತ ಸಾಹಿತ್ಯವಾಗಿಲ್ಲ.  ಆದರೆ ಗೀತ ಸಾಹಿತ್ಯ ಸೃಷ್ಟಿಸುವಷ್ಟು ಬೌದ್ಧಿಕ ವಿಸ್ತಾರವಿರುವುದನ್ನು ಇವರಲ್ಲಿ ನಾವು ಗಮನಿಸಬಹುದು. 

ಅಂತಿಮವಾಗಿ ಒಂದು ಮಾತಂತೂ ಸತ್ಯ. ಎಲ್ಲಾ ಕವಿತೆಗಳೂ ಗೀತೆಗಳಾಗುವುದಿಲ್ಲ, ಎಲ್ಲಾ ಹಾಡೂಗಳೂ ಕವಿತೆಗಳಾಗುವುದಿಲ್ಲ,ಇವುಗಳನ್ನು ಅರ್ಥೈಸುವಷ್ಟು ಶಕ್ತನೂ ನಾನಲ್ಲ. ಆದರೆ ನಮ್ಮ ಬ್ಲಾಗಿನ ನೂರಾರು ಸತ್ವಶಾಲಿಯಾದ ಕವಿಗಳು ಬದ್ಧತೆಯಿದ್ದು ರಚಿಸುವಷ್ಟು ಪ್ರಬುದ್ಧ ಹಾಗೂ ಚಿಂತನಾಶೀಲರಾಗಿದ್ದಾರೆ.ಕನ್ನಡ ಬ್ಲಾಗಿನ ನಮ್ಮೆಲ್ಲ ಹಿರಿ/ಕಿರಿಯ ಕವಿ ಹೃದಯರು ಈ ಅಂಶಗಳತ್ತ ಚಿತ್ತಹರಿಸಿ ತಮ್ಮ ಲೇಖನಿಗೆ ಶಕ್ತಿ ತುಂಬುವುದರ ಜೊತೆಗೆ,ಜೀವನ ಮೌಲ್ಯಗಳನ್ನು ಅತ್ಯಂತ ಬದ್ಧವಾಗಿ ಎತ್ತಿ ಹಿಡಿದು ಭಾವತೀವ್ರತೆಯಿರುವ ಅರ್ಥಪೂರ್ಣ,ಸಂದೇಶವನ್ನು ಸಾರುವಂತಹ ಗೀತ ಸಾಹಿತ್ಯ ಪ್ರಕಾರವನ್ನು ರಚಿಸುವತ್ತ ಮುಂದಡಿ ಇಡಲೆಂದು ಆಶಿಸುತ್ತಾ ನಮ್ಮ ಬ್ಲಾಗಿನ ಸದಸ್ಯರುಗಳಿಗೆಲ್ಲ ಈ ಸಂಪಾದಕೀಯವು ಮಾಹಿತಿಪೂರ್ಣವಾಗಿದ್ದು ಇಷ್ಟವಾಗುವುದೆಂದು ಭಾವಿಸುತ್ತೇನೆ.

ಎಲ್ಲರಿಗೂ ಶುಭವಾಗಲಿ!

ಪ್ರೀತಿಯಿಂದ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿಯ ಪರವಾಗಿ,
 ಬನವಾಸಿ ಸೋಮಶೇಖರ್
===== 
ಸಲಹೆ/ಸಹಕಾರ: ಕನ್ನಡ ಬ್ಲಾಗ್ ನಿರ್ವಹಣಾ ತಂಡ.

Thursday 27 September 2012

ಸಾಮಾಜಿಕ ಬದಲಾವಣೆಯತ್ತ ಸಾಹಿತಿಯ ಬದ್ಧತೆ!


ಸಾಹಿತಿಯಾದವನು ಚಿತ್ರಿಸಬೇಕಾದದ್ದು ಇದ್ದುದನ್ನಲ್ಲ, ಇರಬೇಕಾದುದನ್ನು! ವಾಸ್ತವವಾದ ಎಂದರೆ ಸುತ್ತಣ ಬದುಕು ಹಾಗೂ ಪರಿಸರವನ್ನು ಪ್ರಾಮಾಣಿಕವಾಗಿ ಯಥಾವತ್ತಾಗಿ ಚಿತ್ರಿಸಬೇಕೆನ್ನುವ ಒಂದು ಮನೋಧರ್ಮ. ಸಾಹಿತಿಯಾದವನು ಕಂಡದ್ದನ್ನು ಕಂಡ ಹಾಗೆ ಚಿತ್ರಿಸಬೇಕೆನ್ನುವ ಈ ಭಾವ, ಎಲ್ಲ ಕಾಲದ ಸಾಹಿತ್ಯದ ಉದ್ದೇಶಕ್ಕೆ ಹೊರತಾದುದಲ್ಲ ಎಂಬುದು ನಿರ್ವಿವಾದವಾದ ಅಂಶ. ಕಾವ್ಯ ಅಥವಾ ಸಾಹಿತ್ಯದ ವಸ್ತು ಉದಾತ್ತವಾಗಿರಬೇಕು, ಉಳಿದವರಿಗೆ ಉದಾತ್ತ ವ್ಯಕ್ತಿಗಳ ನಡವಳಿಕೆ ಮಾದರಿಯಾಗುವಂತಿರಬೇಕು. ಸಾಹಿತಿಯಿಂದ ಹೊಮ್ಮುವ ಸಾಹಿತ್ಯ ಮಾಡುವ ಕೆಲಸವೆಂದರೆ ಕಂಡದ್ದರ ಅನುಕರಣೆಯಲ್ಲ, ಕಾಣಬಹುದಾದ್ದರ ಅಥವಾ ಸಂಭಾವ್ಯವಾದ ಸಂಗತಿಗಳ ಆದರ್ಶ ರೂಪಗಳನ್ನು ನಿರ್ಮಿಸುವುದು. ಸಾಹಿತ್ಯದಿಂದ ರಾಷ್ಟ್ರಜೀವನ ಹಸನಾಗಬೇಕೆಂಬ, ಜನರ ಮನಸ್ಸು ಸಂಸ್ಕಾರಗೊಳ್ಳಬೇಕೆಂಬ, ಸಮಾಜವನ್ನು ಶ್ರೇಯಸ್ಸಿನ ಕಡೆಗೆ ಕೊಂಡೊಯ್ಯಬೇಕೆಂಬ ಮಾತು ಹಾಗೂ ಮನಸ್ಸು ಸಾಹಿತಿಯದಾಗಿರುತ್ತದೆ. ಇದು ಎಲ್ಲಾ ಸಾಹಿತಿಗಳ ಸಾಹಿತ್ಯದ ಧೋರಣೆಯೂ ಆಗಿರುತ್ತದೆ ಎಂದರೆ ತಪ್ಪಾಗಲಾರದು.

ಸಾಹಿತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಗೌರವ ಭಾವನೆಯಿದೆ. ಸಾಹಿತಿಯಾದವನಿಗೆ ಮುಖ್ಯವಾಗಿ ಇರಬೇಕಾದ ಗುಣವೆಂದರೆ, ತನ್ನ ಸುತ್ತ ಮುತ್ತಣದ ಸಮಾಜವನ್ನು ಕುರಿತ ಹೊಸ ಎಚ್ಚರ ಹುಟ್ಟಿಸುವುದು. ನಾವೆಲ್ಲರೂ ಸಮಾಜದ ಒಂದು ಭಾಗ, ಈ ಕಾರಣದಿಂದ ತಾನು ಬೇರೂರಿ ಬದುಕುವ ಸಮಾಜದ ವಿವರವಾದ ಹಾಗೂ ಯಥಾವತ್ತಾದ ಚಿತ್ರವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ಕಟ್ಟಿಕೊಡುವುದು, ಸಮಾಜದ ಅಸಾಂಗತ್ಯಗಳನ್ನು ಬಯಲಿಗಿಡುವುದು, ಮತ್ತು ಆ ಮೂಲಕ ಓದುಗರ ಸಾಮಾಜಿಕ ಅರಿವನ್ನು ವಿಸ್ತರಿಸುವುದು ತನ್ನ ಮೊದಲ ಕರ್ತವ್ಯ ಎಂಬ ನಂಬಿಕೆ ನಿಜವಾದ ಬರಹಗಾರನಿಂದ ಹೊಮ್ಮಿದಾಗ ಮಾತ್ರ ಬದಲಾವಣೆಯನ್ನು ನಿರೀಕ್ಷಿಸಬಹುದು. ವ್ಯಕ್ತಿನಿಷ್ಠತೆಯ ಬದಲು, ಒಂದು ಬಗೆಯ ವಸ್ತುನಿಷ್ಠ ನಿಲುವಿನಲ್ಲಿ ನಿಂತು ತನ್ನ ಸುತ್ತಣ ಸಾಮಾಜಿಕ ಪರಿಸರದಲ್ಲಿ ಇದ್ದುದನ್ನು ಇದ್ದ ಹಾಗೆ, ಯಾವ ಉತ್ಪ್ರೇಕ್ಷೆ, ಆದರ್ಶಗಳ ಸೋಂಕೂ ಇಲ್ಲದೆ, ಯಾವ ರೀತಿಯ ನಾಸ್ತಿಕತೆ ಅಥವಾ ಆಶಾವಾದದ ಸ್ಪರ್ಶವಿಲ್ಲದಂತೆ ಚಿತ್ರಿಸುವುದು ಸಮಾಜಮುಖಿ ಬರಹಗಾರನಿಗೆ ಮಾತ್ರ ಸಾಧ್ಯ. ಹಾಗೆಂದು ಎಲ್ಲರೂ ಬರೆಯುವುದಕ್ಕೆ ಪ್ರಾರಂಭಿಸಿದರೆ ಎಲ್ಲರೂ ಸಾಹಿತಿಗಳಾಗಲು ಸಾಧ್ಯವಿಲ್ಲ. ಸಾಹಿತಿಗಳು ಸಾಮಾಜಿಕ ಬದ್ಧತೆಯನ್ನು ಹೊಂದಿದವರಾಗಿದ್ದು, ವಸ್ತುನಿಷ್ಠವಾಗಿ ಚಿಂತಿಸುವ ಬರೆಯುವ ಹಾಗೂ ಜನಸಾಮಾನ್ಯರ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ದಾರ್ಶನಿಕರಿವರು ಎಂಬ ಅಗೋಚರ ಅಂಕಿತವನ್ನು ಮನಸಲ್ಲೇ ಹಾಕಿಕೊಂಡ ಓದುಗ ಮಹಾಶಯನನ್ನು ಕಾಣಬಹುದು.

ಸಾಹಿತ್ಯ ಆಯಾ ಕಾಲಘಟಕ್ಕೆ ಅನುಗುಣವಾಗಿ ಬದಲಾಗುತ್ತಾ ಸಾಗುವುದನ್ನು ನಾವು ಕಾಣಬಹುದು. ಹಳಗನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೊಸಗನ್ನಡ ಸಾಹಿತ್ಯ ಬಂಡಾಯ ಸಾಹಿತ್ಯ, ನವೋದಯ ಸಾಹಿತ್ಯ, ಈಗ ಪ್ರಗತಿಪರ ಸಾಹಿತ್ಯ . ನವ್ಯ ಸಾಹಿತ್ಯ. ಜೊತೆಗೆ ದಾಸ ಸಾಹಿತ್ಯ, ವಚನ ಸಾಹಿತ್ಯಾದಿಯಾಗಿ ಹತ್ತು ಹಲವು ಪ್ರಕಾರಗಳು ಅರಳಿ ನಿಂತದ್ದು ಅರಿವಿನ ವಿಷಯ. ಹಾಗೆಯೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವ ಬರಹಗಾರನ ದೃಷ್ಟಿಕೋನಗಳು ಸಹ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಒಬ್ಬ ಬರಹಗಾರನ ಕವಿತೆಗೆ, ಕಥೆಗೆ, ಕಾದಂಬರಿಗೆ ಕೆಲವು ಘಟನೆಗಳು ಪ್ರೇರಣೆಯಾಗಬಹುದು. ನೈಜ ಘಟನೆಗಳು ಕಥೆಯ ವಸ್ತುವಿಷಯವಾಗಬಹುದು. ಅಥವಾ ಕಾಲ್ಪನಿಕವಾಗಿ ಚಿತ್ರಿಸಿ ಮತ್ತೊಂದು ದೃಷ್ಟಿಕೋನದತ್ತ ಓದುಗನನ್ನು ಕರೆದೊಯ್ಯಬಹುದು. ಒಟ್ಟಿನಲ್ಲಿ ಹೊಸದೊಂದು ಚಿಂತನೆಗೆ ಸಾಹಿತ್ಯ ಬರಹ ಕಾರಣವಾಗುತ್ತದೆ ಎಂಬುದು ಸುಳ್ಳಲ್ಲ. ಹೀಗೆ ಒಬ್ಬ ಸೃಜನಶೀಲ ಬರಹಗಾರನ ಬರಹ ವಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ಎರಡು ಸ್ತರಗಳಲ್ಲಿ ತೆರೆದುಕೊಳ್ಳುತ್ತದೆ. ತನ್ನ ಆತ್ಮ ಸಂತೋಷಕ್ಕೆ ಬರೆದುಕೊಂಡ ವೈಯಕ್ತಿಕ ಬರಹದ ಬಗ್ಗೆ ಸಾಹಿತಿಗೆ ಯಾವ ವಿಧವಾದ ಕಟ್ಟುಪಾಡುಗಳಿರುವುದಿಲ್ಲ. ಆದರೆ ಸಾರ್ವಜನಿಕ ಸಮಸ್ಯೆಗಳನ್ನು ತನ್ನ ಬರಹಕ್ಕೆ ವಸ್ತುವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ರಚಿಸಿದ ಕಥೆ, ಕವಿತೆ, ಲೇಖನ ಯಾವುದೇ ಆಗಲಿ ಅದು ಚರ್ಚಿತ ವಿಷಯವಾಗಿ ಅನಾವರಣಗೊಳ್ಳುತ್ತದೆ. ನಮ್ಮಲ್ಲಿನ ಕೆಲ ಸಾಹಿತಿಗಳು ತಮ್ಮ ಬರವಣಿಗೆಯಲ್ಲಿ ಮಾತ್ರ ಸಕ್ರಿಯರಾಗಿದ್ದು, ಕೃತಿಯಲ್ಲಿ ಮೌನ ತಾಳುವ ಚಾಳಿಯನ್ನು ರೂಢಿಸಿಕೊಂಡಿರುವುದು ಸುಳ್ಳಲ್ಲ. ಈ ಹಿಂದೆ ಕನ್ನಡ ಸಾಹಿತ್ಯ ರಾಜಾಶ್ರಯ ಹಾಗು ಧರ್ಮಾಶ್ರಯಗಳಲ್ಲಿ ಬೆಳೆದು ಬಂದಿತ್ತು. ಆಗ ಆಸ್ಥಾನ ಕವಿಗಳು ಕೆಲವೊಮ್ಮೆ ರಾಜನನ್ನು ಸಂತೃಪ್ತಿಪಡಿಸುವ, ರಾಜನ ಆಳ್ವಿಕೆಯನ್ನು ಹೊಗಳುವ ಹೊಗಳುಭಟ್ಟ ಕಾರ್ಯಕ್ಕೆ ಮಾತ್ರ ಸೀಮಿತವಾಗಿದ್ದುದ್ದನ್ನು ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ನಮಗೆ ಅರಿವಾಗುತ್ತದೆ. ನಮ್ಮ ಕೆಲ ಸಾಹಿತಿಗಳು ರಾಜ್ಯೋತ್ಸವ ಪ್ರಶಸ್ತಿ ತಪ್ಪಿಹೊಗುವುದೆಂಬ ಭಯದಿಂದ, ಸರ್ಕಾರವು ಸಾಹಿತಿಗಳಿಗೆ ನೀಡುವ ನಿವೇಶನ ತಮ್ಮ ಕೈ ತಪ್ಪಿ ಹೋಗುತ್ತದೆಂಬ ಸ್ವಾರ್ಥದಿಂದ ಬಾಯಿಗೆ ಬೀಗ ಜಡಿದುಕೊಂಡು ಕುಳಿತಿರುತ್ತಾರೆ. ಸರಕಾರದ ಮಾರಕ ನೀತಿಗಳನ್ನು ಧಿಕ್ಕರಿಸುವ, ಪ್ರತಿಭಟಿಸುವ ಸೊಲ್ಲು ಇಂಥಹವರಲ್ಲಿ ಪಾತಾಳ ಸೇರಿರುತ್ತದೆ. ಮತ್ತೊಬ್ಬರನ್ನು ಓಲೈಸುವ ಸಂಸ್ಕೃತಿಗೆ ಒಗ್ಗಿಹೊಗಿರುತ್ತಾರೆ. ಹಾಗೆಂದು ಎಲ್ಲರು ಇದೇ ರೀತಿಯಲ್ಲಿ ಯೋಚಿಸುತ್ತಾರೆ ಎಂಬುದು ಅಕ್ಷಮ್ಯವಾಗುತ್ತದೆ. ಇವರ ನಡುವೆ ಅಸ್ಪೃಶ್ಯತೆ ಎಂಬ ಜಾಡ್ಯದ ನಿವಾರಣೆಗಾಗಿ ಹೋರಾಡಿದ, ಬಾಲ್ಯವಿವಾಹದ ಅನಾಹುತಗಳ ಬಗ್ಗೆ ಎಚ್ಚರಿಸುವ, ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸುವ, ಜಾತಿಗಳಲ್ಲಿರುವ ಮೌಢ್ಯದ ಬಗ್ಗೆ ದನಿ ಎತ್ತುವ ಮೂಲಕ ಸುಧಾರಣೆಗೆ ಕಾರಣೀಕರ್ತರಾದ ಮಹನೀಯರನ್ನು ಸಹ ಕಾಣಬಹುದು. ಸರಕಾರದ ಅನೀತಿಯುತ ಕಾರ್ಯಗಳನ್ನು ಕಂಡು ಪ್ರತಿಭಟನಾ ಸೂಚಕವಾಗಿ ತಮಗೆ ಸರಕಾರ ನೀಡಿದ್ದ ಪ್ರಶಸ್ತಿಯನ್ನು ಹಿಂದಿರುಗಿಸಿದ ಸಾಹಿತಿಗಳು ಸಹ ನಮ್ಮ ಕಣ್ಣ ಮುಂದೆ ಇದ್ದಾರೆ. ಇವರ ನಡುವೆ ಸಮಾಜಕ್ಕೆ ಯಾವೊಂದೂ ಉಪಯೋಗವಿಲ್ಲದ ಸುದ್ದಿಯ ಸದ್ದಿಗೆ ಬಿದ್ದ ಕೆಲವರು, ಪಳಿಯುಳಿಕೆಗಳನ್ನು ಹೆಕ್ಕಿಕೊಂಡು ಕೆಸರಾಟದಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯವನ್ನು ಕೆದಕುವ ಕೆಲಸಕ್ಕೆ ಕೈ ಹಾಕಿ ಸುದ್ದಿಯ ಶೂರನೆಸಿಕೊಂಡ ಮತಿಹೀನರನ್ನು ಸಹ ಕಾಣಬಹುದಾಗಿದೆ. 

’ಸಾಹಿತಿ’ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹಲವಾರು ಬಿರುದು ಬಾವಲಿಗೆ ಭಾಜನರಾಗಿ ಕಾಗದದ ಮೇಲಿನ ಅಕ್ಷರಗಳಿಗೆ ಮಾತ್ರ ಸೀಮಿತರಾಗುವ ಸಾಹಿತಿಗಳ ನಡುವೆ, ತಮ್ಮ ಬರಹಕ್ಕೆ ನ್ಯಾಯ ಸಲ್ಲಿಸುವ ಮೂಲಕ ಕೃತಿಗಿಳಿದು ಕನ್ನಡವನ್ನು ಪಸರಿಸಿ, ತಮ್ಮದು ಕೇವಲ ಕಾಗದದ ಮೇಲಿನ ಬರಹವಲ್ಲ ಅಂತರಂಗದಲ್ಲಿ ಹುಟ್ಟಿ ಕೃತಿಯಲ್ಲಿ ಹೊರಹೊಮ್ಮುವುದು ಎಂದು ತೋರಿಸಿಕೊಟ್ಟ ಕೆಲ ಸಾಹಿತಿಗಳು ಕರ್ನಾಟಕ ಏಕೀಕರಣದಲ್ಲಿ ತೊಡಗಿಸಿಕೊಂಡು ಬೀದಿಗಿಳಿದು ಹೋರಾಡಿದರು. ಜತೆಗೆ ತಮ್ಮ ಅತ್ಯಮೂಲ್ಯ ಕೊಡುಗೆಯನ್ನು ನೀಡಿದರು. ಇಂತಹ ಕೆಲ ದಾರ್ಶನಿಕರ ಉಲ್ಲೇಖ ಮಾಡುವುದು ಈ ಸಂದರ್ಭದಲ್ಲಿ ಸೂಕ್ತವೆನಿಸುತ್ತದೆ.

ಕನ್ನಡ ನಾಡಿಗೆ ಪಾದ್ರಿಯಾಗಿ ಬಂದು ಕನ್ನಡಾಭಿಮಾನಿಗಳಿಗೆ ಮಾದರಿಯಾದ ಜಾರ್ಜ್ ಫರ್ಡಿನೆಂಡ್ ಕಿಟ್ಟೆಲ್ ರವರು ಸುಮಾರು ೭೦,೦೦೦ ಶಬ್ದಗಳನ್ನೊಳಗೊಂಡ ಕನ್ನಡ-ಇಂಗ್ಲಿಷ್ ನಿಘಂಟನ್ನು ಅಂತಿಮವಾಗಿ ೧೮೯೨ ರಲ್ಲಿ ಸಿದ್ಧಪಡಿಸಿದರು. ನೆನಪಿರಲಿ ಈ ನಿಘಂಟಿನ ಕಾರ್ಯವನ್ನು ತಮ್ಮ ಒಳಿತಿಗಾಗಿ ಮಾಡಿಕೊಂಡವರಲ್ಲ. ಈ ನಿಘಂಟನ್ನು ರಚಿಸಲು ಅಪಾರವಾಗಿ ಶ್ರಮಿಸಿದರು. ಇದರಿಂದಾಗಿ ಅವರು ಕಣ್ಣು ನೋವು ಹಾಗೂ ನರಗಳ ದೌರ್ಬಲ್ಯಕ್ಕೂ ತುತ್ತಾದರು. ಅಂತಿಮವಾಗಿ ೧೮೯೪ ರಲ್ಲಿ ಕಿಟ್ಟೆಲ್ ರವರ ನಿಘಂಟು ಪ್ರಕಟವಾಯಿತು. ಜೊತೆಗೆ ಕನ್ನಡದಲ್ಲಿ ಆರು ಪುಸ್ತಕಗಳನ್ನು ಕೂಡ ಅವರು ರಚಿಸಿದ್ದಾರೆ. 

ಖ್ಯಾತಿವೆತ್ತ ಇಂಜಿನಿಯರ್ ಆದರೂ ಅದಕ್ಕಂಟದೇ ದಕ್ಷ ಆಡಳಿತಗಾರ ಜೊತೆಗೆ ಒಳ್ಳೆಯ ಬರಹಗಾರನಾಗಿ ಕನ್ನಡನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮತ್ತೋರ್ವ ಮಹನೀಯ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಈ ದಿನ ನಾವು ಕಾಣುತ್ತಿರುವ ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯ ಹಿಂದೆ ಸರ್ ಎಂ.ವಿಯವರ ನೆರಳಿದೆ ಎಂಬುದನ್ನು ಮರೆಯಬಾರದು. ಕನ್ನಡದ ಏಕೀಕರಣದಲ್ಲಿ ಕಾಣಬರುವ ಮತ್ತೊಂದು ಮುಖವೆಂದರೆ ಬೆಂಜಮಿನ್ ಲೂಯಿ ರೈಸ್. ಪುರಾತತ್ವ ಇಲಾಖೆಯಲ್ಲಿ ಸುಮಾರು ೨೨ ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಗ್ರಾಮಗಳ ದೇವಾಲಯಗಳ ಬಳಿ ನಿಲ್ಲಿಸಿದ್ದ ಶಾಸನಗಳನ್ನು ಸ್ವಪ್ರಯತ್ನದಿಂದ ಓದಿ ಅರ್ಥೈಸಿಕೊಂಡು ಲೇಖನಗಳನ್ನು ಸಹ ಬರೆಯುತಿದ್ದರು. ನಾಗವರ್ಮನ ಕರ್ನಾಟಕ ಭಾಷಾಭೂಷಣ, ಕರ್ನಾಟಕ ಶಬ್ದಾನುಶಾಸನ, ಪಂಪರಾಮಾಯಣ ಹಾಗು ಅಮರಕೋಶವೆಂಬ ಹಲವಾರು ಗ್ರಂಥಗಳನ್ನು ತಾಳೆ ಒಲೆಯಿಂದ ಸಂಪಾದಿಸಿ ಪ್ರಕಟಿಸಿದ ಕೀರ್ತಿ ರೈಸ್ ರವರಿಗೆ ಸಲ್ಲುತ್ತದೆ. 

ಮಾತೃಭಾಷೆ ತಮಿಳಾದರೂ ಹುಟ್ಟು ಕನ್ನಡಿಗರಾದ ಟಿ.ಪಿ ಕೈಲಾಸಂ ರವರ ಕೊಡುಗೆ ಅಪಾರ. ತಮ್ಮ ಕಾಲದಲ್ಲಿ ಸಮಾಜ ಅನುಭವಿಸುತಿದ್ದ ಸಮಸ್ಯೆಗಳನ್ನು ವಸ್ತು ವಿಚಾರವಾಗಿಟ್ಟುಕೊಂಡು ರಚಿಸಿದ ತಮ್ಮ ನಾಟಕಗಳನ್ನು ಓದುಗರ ಮುಂದೆಸೆದು ಸುಮ್ಮನಾಗುತ್ತಿರಲಿಲ್ಲ. ತಾವು ನಾಟಕ ತಂಡವನ್ನು ಕಟ್ಟಿ ಅದರ ಮೂಲಕ ಎಚ್ಚರಿಕೆಯ ಸಂದೇಶಗಳನ್ನು ರಂಜನೀಯವಾಗಿ ಸ್ವಾರಸ್ಯಪೂರ್ಣವಾಗಿ ಜನರಿಗೆ ಮುಟ್ಟಿಸುತಿದ್ದರು. ೨೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರಿವರು. ಎಲ್ಲಾ ಕನ್ನಡಿಗರ ಮನೋಭಾವ ಒಂದಾಗಬೇಕು, ಕೇವಲ ರಾಜಕೀಯ ಪ್ರಾದೇಶಿಕ ಏಕೀಕರಣ ಮಾತ್ರವಲ್ಲವೆಂಬುದು ಕೈಲಾಸಂ ರವರ ಮನೋಗತವಾಗಿತ್ತು. ಈ ನಿಟ್ಟಿನಲ್ಲಿ ಶ್ರಮಿಸಿದ್ದರು. 

ಸಣ್ಣ ಕಥೆಗಳ ಜನಕ ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರನ್ನು ನಾವು ಸ್ಮರಿಸಿಕೊಳ್ಳದೆ ಇದ್ದಲ್ಲಿ ಅದು ಅಪೂರ್ಣ ಕಥೆಯಂತಾಗುತ್ತದೆ. ಇವರ ಚಿಕ್ಕವೀರ ರಾಜೇಂದ್ರ ಎಂಬ ಐತಿಹಾಸಿಕ ನಾಟಕಕ್ಕೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಇವರು ಸುಮ್ಮನೆ ಕೃತಿಗಳನ್ನು ರಚಿಸುತ್ತಾ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಎಲ್ಲಾ ಭಾಗಗಳ ಜನತೆಯ ಅಭಿಪ್ರಾಯ ಹಾಗೂ ಕರ್ನಾಟಕ ಏಕೀಕರಣದ ಮಹತ್ವವನ್ನು ತಿಳಿಸಲು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಸಂಚರಿಸಿದರು. ಆಗ ತಮಿಳುನಾಡಿನ ಸರಹದ್ದಿನಲ್ಲಿದ್ದ ಹೊಸೂರು, ಡೆಂಕಣಿ ಕೋಟೆ, ಕೊಳ್ಳೇಗಾಲ, ಸತ್ಯ ಮಂಗಲ ಕೃಷ್ಣಗಿರಿ, ಧರ್ಮಪುರಿ , ಗೋಪಿಚೆಟ್ಟಿಪಾಳ್ಯ ಈ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕ ಭಾಷಣಗಳ ಮೂಲಕ ಏಕೀಕರಣದ ಅಗತ್ಯತೆಯನ್ನು ಮನಗಾಣಿಸಿದರು. ಬಳ್ಳಾರಿ ಜಿಲ್ಲೆಯು ಇಡಿಯಾಗಿ ಕರ್ನಾಟಕದಲ್ಲೇ ಉಳಿಯಬೇಕೆಂದು ಹೋರಾಟಮಾಡಿದವರಲ್ಲಿ ಮಾಸ್ತಿಯು ಒಬ್ಬರು ಎಂಬುದು ನಿರ್ವಿವಾದ. 

ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ ಎಂದು ಹೇಳುತ್ತಾ ಕನ್ನಡ ನಾಡಿನ ಏಕೀಕರಣಕ್ಕೆ ದುಡಿದ ಮತ್ತೋರ್ವ ಸಾಹಿತಿ ಅ. ನ. ಕೃ ರವರು. ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರವರ್ತಕರಿವರು. '' ರಾಜಕೀಯ ದೃಷ್ಟಿಯಿಂದ ನಮಗೊಂದು ಪ್ರಾಂತ ಲಭಿಸಿದರೂ, ಇದಿನ್ನೂ ಕನ್ನಡ ಪ್ರಾಂತವಾಗಿಲ್ಲ. ಒಂದು ಭಾಗದ ಕನ್ನಡಿಗರಿಗೂ, ಇನ್ನೊಂದು ಭಾಗದ ಕನ್ನಡಿಗರಿಗೂ ಸ್ನೇಹ, ಸೌಹಾರ್ದ ಬೆಳೆಯುವುದರ ಬದಲು ಈರ್ಷೆ, ವೈಷಮ್ಯಗಳು ಹೆಚ್ಚಿವೆ. ಕನ್ನಡಿಗರೆಲ್ಲರ ಹೃದಯ ಬೆಸೆದು, ಅವರಲ್ಲಿ ಉತ್ಕಟ ಕನ್ನಡಾಭಿಮಾನವನ್ನು ಹುಟ್ಟಿಸುವ ಕೆಲಸ ಇನ್ನೂ ಉಳಿದಿದೆ. ಈ ನಾಡನ್ನು ಒಂದುಗೂಡಿಸಲು ಹಿಂದೊಮ್ಮೆ ಹೊರಟ ಕನ್ನಡ ಭಂಟರು, ಮತ್ತೆ ಈ ಕೆಲಸಕ್ಕೆ ಟೊಂಕ ಕಟ್ಟಿ ನಿಲ್ಲಬೇಕು. ರಾಜಕಾರಣಿಗಳ ಕೈಗೆ ಸಿಕ್ಕ ಕರ್ನಾಟಕ ಮತ್ತೆ ಹೋಳು ಹೋಳಾಗುವುದಕ್ಕೆ ನಾವು ಅವಕಾಶ ಕೊಡಬಾರದು'' ಎಂಬ ಎಚ್ಚರಿಕೆಯನ್ನು ನೀಡಿದ್ದಲ್ಲದೆ, ಅಖಂಡ ಕರ್ನಾಟಕ ಏಕೀಕರಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಲೇಖನ, ಭಾಷಣ, ಹೋರಾಟಗಳ ಮೂಲಕ ಕನ್ನಡಿಗರನ್ನು ಎಚ್ಚರಿಸುವ ಕೆಲಸವನ್ನು ಮಾಡುವ ಮೂಲಕ ಕನ್ನಡಿಗರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚನ್ನು ಬಿತ್ತುವಲ್ಲಿ ಅ.ನ.ಕೃರವರ ಪಾತ್ರ ಕಡಿಮೆಯಿಲ್ಲ. 

ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ ಸಾಕು ಇಂದು ಅದೇ ಗೋವರ್ಧನಗಿರಿಯಾಗುತ್ತದೆ. ಈ ಸಾಲುಗಳನ್ನು ಬರೆದವರಾರೆಂದು ತಿಳಿಯಲು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಅವರೇ ನಮ್ಮ ರಾಷ್ಟ್ರ ಕವಿ ಕುವೆಂಪು. ಇಂಟರ್ ಮೀಡಿಯಟ್ ಹಂತದಲ್ಲೇ ಕನ್ನಡ ಮಾಧ್ಯಮ ಶಿಕ್ಷಣವನ್ನು ಜಾರಿಗೆ ತಂದವರು ಕುವೆಂಪು. ಶಿಕ್ಷಣದ ಎಲ್ಲಾ ಹಂತಗಳಲ್ಲೂ ಕನ್ನಡದ ವ್ಯಾಪಕ ಬಳಕೆಗೆ ಪ್ರಯತ್ನಿಸಿದರು. ಇವರ ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಗೆ ೧೯೬೮ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಪ್ರಸಾರಾಂಗದ ಮೂಲಕ ಕನ್ನಡ ಪುಸ್ತಕಗಳ ಪ್ರಕಣೆಗೆ ಬುನಾದಿ ಹಾಕಿದರು. ಕನ್ನಡ ಅಧ್ಯಾಪಕ, ಉಪಪ್ರಾಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನ ಬೋಧನೆ ಮಾಡಿದರು. ಕನ್ನಡನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು. ಎಲ್ಲಾ ವಿದ್ಯಾಸಂಸ್ಥೆಗಳಲ್ಲಿಯೂ ಕನ್ನಡವೇ ಬೋಧಕ ಭಾಷೆಯಾಗಬೇಕು. ಕೋರ್ಟು ಕಚೇರಿ ಮೊದಲಾದ ಸರ್ಕಾರಿ ಸಂಸ್ಥೆಗಳ ವ್ಯವಹಾರವೆಲ್ಲಾ ಕನ್ನಡದಲ್ಲಿಯೇ ನಡಿಯಬೇಕು, ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್ ಇರುವಂತೆ ಕರ್ನಾಟಕದಲ್ಲಿ ಕನ್ನಡವಿರಬೇಕು ಎಂದು ಹೋರಾಡಿದ ಬಹುಮುಖ ಪ್ರತಿಭೆಯುಳ್ಳವರು ಪುಟ್ಟಪ್ಪನವರು. ಏಕೀಕರಣದ ಪರವಾಗಿ ಕಾಲೇಜಿನ ಸಮಾರಂಭವೊಂದರಲ್ಲಿ ಮಾತನಾಡಿದರು ಎಂಬ ಕಾರಣಕ್ಕೆ ಸಚಿವ ಮಹಾಶಯನೊಬ್ಬನಿಂದ ಎಚ್ಚರಿಕೆಯ ನೋಟೀಸ್ ಬಂದಾಗ ಕುವೆಂಪುರವರಿಂದ ಮೊಳಗಿದ ಕವನ '' ಅಖಂಡ ಕರ್ನಾಟಕ ''ಅಖಂಡ ಕರ್ಣಾಟಕ ಅಲ್ತೋ ನಮ್ಮ ಬೂಟಾಟದ ರಾಜಕೀಯ ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲರಚಿಸುವುದೊಂದು ಕೃತಕವಲ್ತೋಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ! ಅಖಂಡ ಕರ್ಣಾಟಕ ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ! ನೃಪತುಂಗನೆ ಚಕ್ರವರ್ತಿ! ಪಂಪನಿಲ್ಲಿ ಮುಖ್ಯಮಂತ್ರಿ ! ರನ್ನ ಜನ್ನ ನಾಗವರ್ಮರಾಘವಾಂಕ ಹರಿಹರಬಸವೇಶ್ವರ ನಾರಣಪ್ಪಸರ್ವಜ್ಞ ಷಡಕ್ಷರ ಸರಸ್ವತಿಯೇ ರಚಿಸಿದೊಂದು ನಿತ್ಯ ಸಚಿವ ಮಂಡಲತನಗೆ ರುಚಿರ ಕುಂಡಲ!ಕರ್ಣಾಟಕ ಎಂಬುದೇನು ಹೆಸರೇ ಬರಿಯ ಮಣ್ಣಿಗೆ? ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ! ಕಾವಕೊಲುವ ಒಲವ ಬಲವಪಡೆದ ಛಲದ ಚಂಡಿ ಕಣಾ ಋಷಿಯ ಕಾಣ್ಬ ಕಣ್ಣಿಗೆ. ಈ ರೀತಿ ಕನ್ನಡ ನಾಡಿನ ಬಗ್ಗೆ ಭಾವುಕರಾಗಿ ಅಷ್ಟೇ ತೀವ್ರವಾಗಿ ಆ ಸಚಿವನಿಗೆ ತಮ್ಮ ಕವನದ ಮೂಲಕ ಪ್ರತ್ಯುತ್ತರವನ್ನು ನೀಡಿದ್ದರು ಕುವೆಂಪು. 

ಹೀಗೆ ಕೇವಲ ಬರಹಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಕರ್ನಾಟಕ ಏಕೀಕರಣಕ್ಕೆ ದುಡಿದ ನೂರಾರು ಮಹನೀಯರಿದ್ದಾರೆ. ಅವರಲ್ಲಿ ಕೆಲವರನ್ನು '' ಬರಹಗಾರನ ಸಾಮಾಜಿಕ ಬದ್ಧತೆ '' ಗೆ ಉದಾಹರಣಾಪೂರ್ವಕವಾಗಿ ಎತ್ತಿಕೊಂಡಿದ್ದೇವೆ. ಇಲ್ಲಿ ಉದಾಹರಿಸಿದಂತೆ ಹಲವು ಸಾಹಿತಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಬರಹದಂತೆ ನಡವಳಿಕೆಯಲ್ಲೂ ಜನ ಸಾಮಾನ್ಯರಿಗೆ ಸಾಹಿತಿಗಳು ಪ್ರೇರಣೆಯಾಗಿದ್ದಾರೆ. ನಮ್ಮ ಬರವಣಿಗೆಗಳು ಕೇವಲ ಪುಸ್ತಕ, ಬ್ಲಾಗು, ನೆಟ್ಟುಗಳಿಗೆ ಸೀಮಿತವಾಗಿರದೆ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿ, ಪ್ರಗತಿಶೀಲ ವಿಷಯಗಳ ಮೂಲಕ ಜನರಲ್ಲಿ ಜಾಗೃತಿ ತರುವ ಮೂಲಕ ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸುವತ್ತ ಅನುವು ಮಾಡಿಕೊಡಲಿ. ಕನ್ನಡದ ಮೇಲಿನ ಪ್ರೀತಿ, ಒಲವು ಸಾಮಾಜಿಕ ಅಭಿವೃದ್ಧಿಯತ್ತ ಮುಖ ಮಾಡಲಿ. 

ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳೋಣ. ಆರೋಗ್ಯವಂತ ಆರಾಮದಾಯಕ ವಾತಾವರಣ ನಿರ್ಮಿಸೋಣ.
===================
ವಂದನೆಗಳೊಂದಿಗೆ
ಸತೀಶ್ ಡಿ. ಆರ್. ರಾಮನಗರ
ಕನ್ನಡ ಬ್ಲಾಗ್ ನಿರ್ವಹಣಾ ತಂಡ

Friday 31 August 2012

ಕವಿಮನದ ವಿಸ್ಮಯ-ಸಾಹಿತ್ಯ ಮತ್ತದರೊಳಗಿನ ಭಾವ ಸಾರ್ಥಕ್ಯ!


ಇಡೀ ಜೀವ ಕೇಂದ್ರದ ವಿಸ್ಮಯಗಳತ್ತ ಕಣ್ಣಾಡಿಸಿದರೆ, ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುವ ವಿಸ್ಮಯಗಳಲ್ಲಿ ಸಾಹಿತ್ಯ ಪ್ರಪಂಚವೂ ಒಂದು. ಹೌದು, ಇಂದು ಸಾಹಿತ್ಯ ಪ್ರಪಂಚ ವಿಸ್ಮಯವನ್ನು ಸೃಷ್ಟಿಸುತ್ತಿರುವುದರ ದ್ಯೋತಕವಾಗಿದೆ. ಮಾನವ  ಕಾಲ ಬದಲಾದಂತೆ ವಿಕಾಸ ಹೊಂದುತ್ತಾ, ತಾನು ಕಂಡುಕೊಂಡ, ಅರಗಿಸಿಕೊಂಡ ಎಲ್ಲವನ್ನೂ ಬರೆದಿಡಲು ಶುರು ಮಾಡಿದ. ತನ್ನ ಅನುಭವದಿಂದ ಒಲಿದ ಜ್ಞಾನದ ಹಣತೆಯನ್ನು ಚಿರವಾಗಿ ಉಳಿಸುವ ಸಲುವಾಗಿ  ವಿನೂತನವಾಗಿ ಬರೆಯಲು ಪ್ರಾರಂಭಿಸಿದ.ಬರೆಯುವುದರಲ್ಲಿ ಸುಖ ಕಂಡುಕೊಂಡ ಆತ ಸಾಹಿತ್ಯ ಪ್ರಪಂಚವನ್ನು ಮತ್ತಷ್ಟು,ಮಗದಷ್ಟು ವಿಸ್ತರಿಸುವತ್ತ ಹೆಜ್ಜೆಹಾಕ ತೊಡಗಿದ. ಹೀಗೆ ಸಾಹಿತ್ಯದೊಂದಿಗೆ ಭಾಷೆಗಳು ಸಮೃದ್ಧವಾದವು. ಬಲಿಯುತ್ತಾ ಹಸಿರಾದವು.

ತನ್ನ ಭಾವುಕ ಮನದ ಮಾತುಗಳಿಗೆ ರೂಪ ಕೊಟ್ಟು ಕವಿತೆ ಎಂಬ ಕೂಸನ್ನು ಹೆತ್ತು, ಉಸಿರಾಡಿಸಿ, ಪೋಷಿಸುವುದು ಕವಿ ಮನಸಿನ ಆಶಯವಾಯಿತು.ಬಣ್ಣ ಬಣ್ಣದ ಪದಗಳ ಲಾಲಿತ್ಯದೊಂದಿಗೆ  ತೊಟ್ಟಿಲಿನಲ್ಲಿಟ್ಟು ತೂಗಿ ಸಲಹುತ್ತ ಸಾಗಿದ ಕವಿಮನವೇ ಎಲ್ಲಾ ಸಾಹಿತ್ಯ ಪ್ರಕಾರದ ಬೇರು. ಬೇರು ಭದ್ರವಾಗಿದ್ದರೆ  ತಾನೇ ಕೂಸು ಸಮೃದ್ಧವಾಗಿ ಚಿಗುರುವುದು? ಎಲ್ಲಾ ಋತುಗಳ ಮೀರಿ ನಿಲ್ಲುವ ಬೇರಿನ  ಸೆಲೆಯ ಸ್ವಾಸ್ಥ್ಯವೇ ಇಡೀ ಸಾಹಿತ್ಯದ ಸ್ವಾಸ್ಥ್ಯಕ್ಕೆ ಕಾರಣ. ಬೇರು ಸಡಿಲವಾಗಿದ್ದರೆ ಮಳೆಗೊ, ಇಲ್ಲ ಬರಸಿಡಿಲಿಗೊ ತೊಡರಿ ಬುಡ ಸಮೇತ ಮಣ್ಣು ಪಾಲಾಗುತ್ತದೆ.

ಕೇವಲ ಕಲ್ಪಿಸಿ ಒಂದಷ್ಟನ್ನು ಗೀಚಿದರೆ ಅದೇ ಕವಿತೆಯಾಗುತ್ತದೆಂದು ಅರುಹುವವರಿಗೆ ಸಾಹಿತ್ಯವೆಂದರೆ ಕನ್ನಡಿಯೊಳಗಿನ ಗಂಟೇ ಸರಿ. ಸಾಹಿತ್ಯವನ್ನು ಸಂಕೀರ್ಣ ದೃಷ್ಟಿಯಿಂದ ಅಳೆಯಲಸಾಧ್ಯ. ಅದೆಷ್ಟೋ ಕವಿತೆಗಳ ಬರೆದು ಯಶವಾದವರಿಗೂ ಕವಿತೆ ಸೆರಗಸುಕ್ಕಾಗುತ್ತದೆ. ಕರೆದರೂ ಬರದ ಮಾಯಾಮೃಗವಾಗಿ ಬಿಡುತ್ತದೆ. ಕಾವ್ಯರಚನೆಗೆ ಪೂರಕವಾದ ಮನಸ್ಸಿರಬೇಕು. ವಿಷಯದ ಬಗ್ಗೆ ಅರಿವಿರಬೇಕು, ಪದಭಂಡಾರ ತೀರದಷ್ಟಿರಬೇಕು. ಸಾಹಿತ್ಯದಲ್ಲಿ ಗತ್ತಿರಬೇಕು. ರಸಾಸ್ವಾದನೆಯ ನೈಜ ತೃಪ್ತಿ ಗೊತ್ತಿರಬೇಕು. ಈ ಎಲ್ಲಾ ಗುಣಗಳನ್ನು ಕರಗತ ಮಾಡಿ ಅಳವಡಿಸಿಕೊಂಡಿರುವ ಕವಿಮನದ ಕವಿತೆಗೆಳು ಎಲ್ಲಾ ಮನದ ಜಿಹ್ವೆಗೆ ರುಚಿಸುತ್ತದೆ, ಭಾವಗಳ ಅನುಭವವನ್ನು ಉಣಬಡಿಸುತ್ತದೆ.

ಕನ್ನಡದ ಮಹಾನ್ ಕವಿಯೊಬ್ಬರು "ನಮ್ಮ ಬರವಣಿಗೆಯನ್ನು ನಾವೇ ಕವಿತೆಯೆಂದು ಕರೆಯಬಾರದು., ಅದನ್ನು ಓದಿದವರು ಅದಕ್ಕೆ ಕವಿತೆ ಎಂದು ಹೆಸರಿಡಬೇಕು! ಒಂದು ಕವಿತೆ ಓದುಗರಿಗೆ ಮೈ ಜುಮ್ಮೆನ್ನುವ ಅನುಭವ ನೀಡಿದರೆ ಅದು ಯಶ ಯಾನ ನಡೆಸಿ ಬಂದಿದೆ ಎಂದರ್ಥ. ಕವಿತೆ ಕೇವಲ ಅವರವರ ಮನದ ಮಾತುಗಳಾಗದೆ ಎಲ್ಲರ ಮನದ ಪ್ರತಿರೂಪವಾಗಿರಬೇಕು ಆಗ ಅದಕ್ಕೆ ಸಲ್ಲಬೇಕಾದ ಮನ್ನಣೆ ಸಲ್ಲುತ್ತದೆ" ಎಂದು ಹೇಳುತ್ತಾರೆ. ಹೌದು ಇದು ಅಕ್ಷರಶಃ ಸತ್ಯ. ಕವಿತೆಯ ಸಾರ್ಥಕ್ಯವಿರುವುದು ಓದುಗನ ಮನವನ್ನು ಮುಟ್ಟುವುದರಲ್ಲಿ, ನಮ್ಮಷ್ಟಕ್ಕೆ ನಾವು ಒಂದಷ್ಟನ್ನು ಗೀಚಿ, ಅದನ್ನು ನಾವೇ ಕವಿತೆಯೆಂದು ನಾಮಕರಣ ಮಾಡಿ ಪ್ರಕಟಿಸುತ್ತೇವೆ, ನಮ್ಮನಮ್ಮದೇ ವಿಚಾರಕ್ಕೆ ನೆಲಗಚ್ಚಿ ನಿಂತು, ನಾವೇ ಸರಿ ಎಂದು ಪರರ ಯೋಚನಾ ಪಥವನ್ನು ತರ್ಕಿಸದೆ ವಿತಂಡತನ ತೋರುವುದು ಕವಿ ಮನಕ್ಕೆ ಮಾರಕವೇ ಹೌದು.

ನಾ ಬರೆಯುತ್ತೇನೆ,
ಬರೆಯಬೇಕೆಂದು ಅನ್ನಿಸಿದ್ದಕ್ಕೆ 
ನೀವು ಕವಿತೆಯೆಂದು ಮನ್ನಿಸಿದ್ದಕ್ಕೆ
- ಚುಟುಕು ಕವಿ ಡುಂಡಿರಾಜರು ಬರೆದ ಈ ಸಾಲು ಓದುಗರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಒಂದು ಕವಿತೆಗೆ ಓದುಗನೂ ಕೂಡ ಕವಿಯಷ್ಟೇ ಮುಖ್ಯ. ಒಂದು ಜಡಶಿಲೆಯನ್ನು ಮೂರ್ತಿಯನ್ನಾಗಿಸುವುದರಲ್ಲಿ ಹೇಗೆ ಶಿಲ್ಪಿಯ ಪರಿಶ್ರಮವಿರುತ್ತದೋ ಹಾಗೇ ಒಂದು ಸಾಹಿತ್ಯ ಕೃತಿಯ ಹಿಂದೆ ಬರೆದವನ ಪರಿಶ್ರಮ, ಶ್ರದ್ಧೆ, ಆಸೆ, ಕನಸುಗಳಿರುತ್ತದೆ.ಎಲ್ಲಾ ಕವಿಮನಕ್ಕೂ ತನ್ನ ಕೂಸು ಜಗದ್ವಿಖ್ಯಾತಿ ಗಳಿಸಬೇಕೆಂಬ ಹಂಬಲವಿರುತ್ತದೆ. ತನ್ನ ಬರಹ ಎಲ್ಲರ ನಾಲಗೆಯಲ್ಲಿ ನಲಿದಾಡಬೇಕೆಂಬ,ಎಲ್ಲರ ಮೆಚ್ಚುಗೆಯನ್ನು ಪಡೆಯಬೇಕೆಂಬ ಆಶಯ ಇದ್ದೇ ಇರುತ್ತದೆ. ಆದರೆ ಕೆಲವು ಗೆಲ್ಲುತ್ತವೆ, ಕೆಲವು ಸೋಲುತ್ತವೆ. ಇನ್ನು ಕೆಲವು ಬಿದ್ದು ಮತ್ತೆದ್ದು ನಿಲ್ಲುತ್ತವೆ, ಹಾಗೇ ಓಡುತ್ತವೆ. ಸಾಹಿತ್ಯವನ್ನು ರಚಿಸುವವನು ಕವಿಯೇ ಆದರೂ ಅದನ್ನು ಗೆಲ್ಲಿಸುವವನು ಓದುಗ. ಒಬ್ಬ ಒಳ್ಳೆಯ ಓದುಗನೇ ಒಬ್ಬ ಸಶಕ್ತ ಬರಹಗಾರನಾಗುತ್ತಾನೆ. ಎಲ್ಲಿ ಓದಿರುತ್ತದೋ ಅಲ್ಲಿ ಜ್ಞಾನದ ಬುಗ್ಗೆ ಚಿಮ್ಮುತ್ತದೆ. ಎಲ್ಲಿ ಜ್ಞಾನವಿರುತ್ತದೋ ಅದೇ ಗಟ್ಟಿ ಸಾಹಿತ್ಯದ ನೆಲೆಯಾಗಿರುತ್ತದೆ. ಕವಿಯಾಗಬಯಸುವವನು ಮೊದಲು ಒಳ್ಳೆಯ ಓದುಗನಾಗಬೇಕು!

ಸಾಹಿತ್ಯ ಮೂಲಗಳತ್ತ ಚಿತ್ತ ಹರಿಸಿದರೆ ಕವಿಮನ ತನ್ನೊಳಗಿನ ತುಮುಲಗಳನ್ನು ಕಾವ್ಯ ರೂಪದಲ್ಲಿ ಹೊರಚೆಲ್ಲುತ್ತದೆ.ಅದೆಷ್ಟೋ ಶತಮಾನಗಳ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲೆಂದೇ ಬಂಡಾಯ ಕವಿತೆಗಳು ಹುಟ್ಟಿಕೊಂಡವು.ಅಟ್ಟಹಾಸ ಮೆರೆದವರ ಕ್ರೌರ್ಯವನ್ನು, ಶೋಷಿತರ ಅಸಹಾಯಕತೆಯನ್ನು ಬಿಚ್ಚಿಡುತ್ತಾ ಈ ನಾಡ ಕಟ್ಟಿದೋರು ನಾವೆಲ್ಲಿಗ್ಹೋಗಬೇಕು,ಈ ಮಣ್ಣಿನ ಮಕ್ಕಳು ನಾವೆಲ್ಲ ಎನ್ನುತ್ತಾ ಸ್ವಾತಂತ್ರ ಸಂಗ್ರಾಮದಲ್ಲಿ ಹಲವು ನಾಯಕರು ಜನರಲ್ಲಿ ಅರಿವು ಮೂಡಿಸಲು ಇದೆ ಹಾದಿ ಅನುಸರಿಸಿದರು. ನಾವೆದ್ದು ಬರುತ್ತೇವೆ, ನಮ್ಮ ರಾಜ್ಯ ತರುತ್ತೇವೆ ಎಂದು  ಎಲ್ಲರನ್ನೂ ಒಗ್ಗೂಡಿಸಿ ಕ್ರಾಂತಿ ನಗಾರಿ ಬಾರಿಸುತ್ತಿದ್ದರು. ಸೋತ ಮನಸ್ಸು ಸೋಲಿನ ಸೂತಕವನ್ನು ತೆರೆದಿಡುತ್ತದೆ.ಗೆದ್ದ ಮನಸ್ಸು ಗೆಲುವಿನ ಸಂಭ್ರಮವನ್ನು ಅನುಭವಿಸುತ್ತದೆ.ನವಿರೇಳಿಸುವ ಪ್ರಕೃತಿ ಸೌಂದರ್ಯವನ್ನು ಕಂಡು ಪುಳಕಗೊಂಡ ಮನಸ್ಸು ಮತ್ತದನ್ನು ಆರಾಧಿಸುವ ಸಲುವಾಗಿ ಕಾವ್ಯಗಳ ಮೊರೆ ಹೋಗುತ್ತನೆ ಸಹೃದಯಿ ಕವಿ.

ಬಾಹ್ಯದ ಆಸೆ ನಿರಾಸೆಗಳ ಫಲವಾಗಿ ಒಡಮೂಡಿ ಬಂದ ಅನುಭವಗಳ ಹರವಿ ಬಿಡುವುದಕ್ಕೆ ಕವಿಗಳು ತುಡಿಯುತ್ತಾರೆ.ಮಡುಗಟ್ಟಿದ ದುಃಖ ಹಾಗೇ ಕರಗಿ ಎಲ್ಲರೆದೆಯ ಇಳೆಗೆ ಮಳೆಯಾಗಿಳಿದರೆ ಮೋಡಕ್ಕೆ ಮುಕ್ತಿ. ಚಿತ್ತಧರೆಗೆ ಮಳೆಯಲಿ ತೋಯ್ದ ಪುಳಕ, ಕೇವಲ ಕಪೋಲ ಕಲ್ಪಿತ ಸಾಲುಗಳೇ ಕವಿತೆಯಲ್ಲ.ಇಲ್ಲದಿರುರುವುದನ್ನು ಇದೆಯೆಂದು ಬಿಂಬಿಸುವುದೇ ಕಾವ್ಯವೆಂಬುದನ್ನು ಕವಿ ಮನ ಒಪ್ಪುವುದಿಲ್ಲ.ಸೌಂದರ್ಯವನ್ನು ವೈಭವೀಕರಿಸುವುದು ಕವಿಮನದ ಮಂತ್ರ. ಹಿಂದೆ ರಾಜರುಗಳ ಆಶ್ರಯ ಪಡೆಯುತ್ತಿದ್ದ ಕವಿವರ್ಯರು ರಾಜರ ಹೃದಯವೈಶಾಲ್ಯತೆಯನ್ನು, ಸಾಮರ್ಥ್ಯವನ್ನು ಕುರಿತು ಬಿಂಬಿಸುತ್ತಿದ್ದರು. ಕೇವಲ ರಾಜರ ದೃಷ್ಟಿಯಲ್ಲಲ್ಲ, ಇಡೀ ರಾಜ್ಯದ ಜನರ ಪ್ರೀತಿ ಮನ್ನಣೆ ಗಳಿಸುತ್ತಿದ್ದರು. ಕಾವ್ಯವೇ ಅವರ ಆಸ್ತಿ. ಹೊಟ್ಟೆ ತುಂಬಿಸುವ ಕೃತಿ!

ಕೇವಲ ಕಾವ್ಯಗಳಿಂದ ಏರಿಳಿತ ಸಾಧ್ಯವೇ? ಬದುಕಿನ ಮೇಲೆ ಪ್ರಭಾವ ಬೀರುತ್ತದೆಯೇ? ಎಂಬ ಪ್ರಶ್ನೆಗಳು ಮನದಲ್ಲೇ ಉಳಿದಿರಬಹುದು. ಅದಕ್ಕೆ ಉತ್ತರಗಳೆಂಬಂತೆ ಎರಡು ನಿದರ್ಶನಗಳು ಸಿಗುತ್ತವೆ.,
 (೧) ಒಮ್ಮೆ ಅನ್ಯದೇಶೀ ಯೋಧನೊಬ್ಬ ರವೀಂದ್ರನಾಥ ಠಾಗೋರರನ್ನು ಸಂಧಿಸಲು ಭಾರತಕ್ಕೆ ಬರುತ್ತಾನೆ. ರವೀಂದ್ರನಾಥ ಠಾಗೋರರನ್ನು ಕಂಡಾಕ್ಷಣ ಅವರನ್ನು ಬಿಗಿದಪ್ಪಿ  ಕೃತಜ್ಞತೆ ಸಲ್ಲಿಸುತ್ತಾನೆ. ಆಶ್ಚರ್ಯಗೊಂಡ ಠಾಗೋರರು ಆತನನ್ನು ಎಂದೂ ಕಂಡಿಲ್ಲ, ತನಗೆ ಕೃತಜ್ಞತೆ ಸಲ್ಲಿಸುತ್ತಿರುವುದಕ್ಕೆ ಕಾರಣವೇನು ಎಂದು ಕೇಳಿದಾಗ, ಆತ ಯುದ್ಧದ ಸಮಯದಲ್ಲಿ ಭೀತನಾದ ತನ್ನೊಳಗೆ ಚೇತನ ತುಂಬಿದ್ದು ನಿಮ್ಮ ಕವಿತೆ ಎಂದರುಹುತ್ತಾನೆ. ಎಂದೋ ಬರೆದದ್ದು ಒಬ್ಬನ ಮನವನ್ನು ಚುಂಬಿಸಿದರೆ, ಪ್ರಭಾವ ಬೀರಿದರೆ ಅಂದೇ ಆ ಬರಹದ ಸಾರ್ಥಕ್ಯ! ಬರಹದ ಮುಖೇನ ಬದಲಾವಣೆ ಖಂಡಿತ ಸಾಧ್ಯ. ಆದರೆ ಬದಲಾವಣೆ ಮೊದಲು ಕವಿಯಿಂದ ಮೊದಲ್ಗೊಳ್ಳಬೇಕು. ಆ ಬದಲಾವಣೆಯಿಂದ ಖಂಡಿತ ಸಮಾಜ ಸ್ವಾಸ್ಥ್ಯವಾಗುತ್ತದೆ ಹಾಗೂ ಮಾನವೀಯ ಬದುಕು ಕಟ್ಟಲು ಪೂರಕವಾಗುತ್ತದೆ.

(೨) ಮೊದಲ ಜ್ಞಾನಪೀಠ ಪ್ರಶಸ್ತಿಯ ಸನ್ಮಾನ ಪಡೆದು ಮನೆಗೆ ಬಂದಾಗ ಅವರ ತಾಯಿ ಅವರಿಗೆ ಕೈ ಮುಗಿದರಂತೆ!ಮುಜುಗರಕ್ಕೊಳಗಾದ ಕುವೆಂಪುರವರು, "ಅಮ್ಮಾ ನೀವು ನನಗಿಂತ ಹಿರಿಯರು, ಕೈಮುಗಿಯಬಾರದು, ಕಿರಿಯರಿಗೆ ಅದು ಶೋಭೆಯಲ್ಲ!" ಎಂದು ಹೇಳಿದರಂತೆ. ಆಗ ಅವರ ತಾಯಿ "ಕೈ ಮುಗಿದದ್ದು ನಿನಗಲ್ಲಪ್ಪ, ನಿನ್ನೊಳಗಿರುವ ಶಾರದಾಂಬೆಗೆ!" ಎಂದು ಹೇಳಿದರಂತೆ.ಅವರ ತಾಯಿಯ ಮಾತುಗಳನ್ನು ಕೇಳಿ ಕುವೆಂಪುವರವರ ಹೃದಯ ತುಂಬಿ ಬರುತ್ತದೆ. ನಮ್ಮೊಳಗಿನ ಕವಿತ್ವ ನಮ್ಮ ಶಕ್ತಿ. ಬದುಕಿಗೆ ವರ್ಣ ಪೇರಿಸಿ ಉಸಿರಾಡಿಸುವ ಬಗೆ ಈ ಕವಿತ್ವಕ್ಕೆ ಗೊತ್ತು. ಅದು ದೇಹ ಗೋರಿ ಸೇರಿದರೂ ಕವಿಯನ್ನು ಜೀವಂತವಾಗಿರಿಸುತ್ತದೆ!

ಯಾರೂ ಹುಟ್ಟುತ್ತಾ ದೊಡ್ಡ ಕವಿಯಾಗಿ ಹುಟ್ಟಲಿಲ್ಲ.ಕೆಲವೊಮ್ಮೆ ತನ್ನ ಮೇಲಿನ ಅಪನಂಬಿಕೆಯಿಂದಲೊ ಅಥವಾ ಯಾವುದಾದರೂ ವಿಮರ್ಶೆಗಳು ತನ್ನಸ್ಥಿತ್ವವನ್ನು ಪ್ರಶ್ನಿಸುವ ಭಯದಲ್ಲಿ ಕವಿತ್ವ ಕಾಡಬೆಳದಿಂಗಳಾಗುತ್ತದೆ. ಅದು ಜೀವ ರಾಶಿಗಳಿಗೆ ಶಕ್ತಿಯಾಗಬೇಕು. ಅವರ ಪರಿಶ್ರಮದ ಫಲವಾಗಿ ಒಂದು ಕಾಲಘಟ್ಟ ಅವರನ್ನು ಆದರಿಸಿ ಗೌರವಿಸಿರುತ್ತದೆ. ಎಲ್ಲಾ ಕವಿ-ಕಲಾವಿದರ ಬದುಕಿನಲ್ಲೂ ಆ ಕಾಲ ಬರುತ್ತದೆ. ಕಾಯಬೇಕಷ್ಟೇ. ಮೊದಲು ಜನಿಸಿದರೇನು, ಕೊನೆಯಲಿ ಜನಿಸಿದರೇನು, ಎಲ್ಲರೂ ಶಾರದಾಂಬೆಯ ಗರ್ಭಸಂಜಾತರೇ! ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ನಂಬಿಕೆಯಿರಬೇಕಷ್ಟೆ. ಅವಕಾಶ ಅದೃಷ್ಟಗಳು ಕೆಲವರನ್ನು ಅರಸಿ ಬರುತ್ತವೆ. ಇನ್ನೂ ಕೆಲವರು ತಾನಾಗಿಯೇ ಅದನ್ನು ಅರಸಿ ಹೋಗಬೇಕು. ಎಂದಾದರೂ ಅವಕಾಶ-ಅದೃಷ್ಟಗಳು ನಂಬಿದವರ ಕೈ ಹಿಡಿಯುತ್ತದೆಂಬುದು ನಿತ್ಯಸತ್ಯ! ನಮ್ಮ ಕನ್ನಡ ಬ್ಲಾಗಿನ ನೆಚ್ಚಿನ ಸಹೃದಯಿಗಳಿಗೆಲ್ಲ ಈ ಬರಹದ ದಿವ್ಯಾನಭೂತಿಯಾಗಿ ಸ್ಪೂರ್ತಿಯಾದರೆ ನಮ್ಮ ಈ ಬರಹ ಸಾರ್ಥಕ್ಯವಾಯಿತೆಂದು ಭಾವಿಸುತ್ತೇವೆ.

ಎಲ್ಲರಿಗೂ ಶುಭವಾಗಲಿ!

ಪ್ರೀತಿಯಿಂದ,
ಡೀ.ವಿ. ಪ್ರಮೋದ್
ಮೈಸೂರು
ಕನ್ನಡ ಬ್ಲಾಗ್ ನಿರ್ವಾಹಕ
[ಸಲಹೆ/ಸಹಕಾರ: ಕನ್ನಡ ಬ್ಲಾಗ್ ನಿರ್ವಾಹಕ ತಂಡ]

Monday 30 July 2012

ಓದುಗನ ಒಡಲಾಳದೊಳಗೆ ಹೊಕ್ಕುವ ಮೇರುಕೃತಿಗಳು!

ನಮಸ್ಕಾರ ಓದುಗ ಮಿತ್ರರಿಗೆ,

ಕನ್ನಡ ಬ್ಲಾಗ್ ಸಂಪಾದಕೀಯ ಇಲ್ಲಿನ ತನಕದ ತನ್ನ ಧಾಟಿಯನ್ನು ಮುಂದುವರಿಸಿಕೊಳ್ಳದೇ ಏನಾದರೂ ಬದಲಾವಣೆ ಇರಬೇಕೆಂಬ ನಿರ್ಧಾರ ಹೊತ್ತು ತನ್ನ ಜುಲೈ ತಿಂಗಳ ಸಂಪಾದಕೀಯವನ್ನು ನಿಮ್ಮ ಮುಂದಿಡುತ್ತಿದೆ. ಬದಲಾವಣೆ ಎಂದಾಗ ಸಾಹಿತ್ಯವಲಯದಿಂದ ಹೊರಗಿರುವ ವಿಚಾರಧಾರೆಗಳನ್ನು ತನ್ನಂಗಳದಲ್ಲಿ ತೊಡಗಿಸಿಕೊಳ್ಳುತ್ತದೆ ಎಂದೆಣಿಸಿಕೊಳ್ಳದಿರಿ. ಸರಣಿಯ ಈ ತಿಂಗಳ ಕಂತು ಕೂಡ ಸಾಹಿತ್ಯ ಕ್ಷೇತ್ರದೊಳಗೆ ತನ್ನನಿಸಿಕೆಗಳನ್ನು ಪ್ರಸ್ತುತ ಪಡಿಸುವ ಒಂದು ಪ್ರಯತ್ನ. 

ಸಂಸಾರ, ಸಮಾಜ, ಪ್ರಭುತ್ವ, ಒಟ್ಟಿನಲ್ಲಿ ಮಾನವನ ನಾಗರಿಕತೆ ಮತ್ತು ಸಂಸ್ಕೃತಿ – ಇವುಗಳಿಗೆ ಪ್ರೇರಕವಾದ ಶಕ್ತಿಯೆಂದರೆ ಮಾನವನಲ್ಲಿರುವ ಪಾಲನೆಯ ಪ್ರವೃತ್ತಿ. ಸಾಮಾಜಿಕ ವ್ಯವಸ್ತೆಯೊಂದು ವಿನಾಶಕಾರಿಯಾಗಿದೆಯೆಂದು ನಮಗೆ ಅನಿಸುವುದು ಮನುಷ್ಯನ ಸಹಜವಾದ ‘ಪಾಲನೆ’ಗೆ ಅದು ಅಡ್ಡಿಯನ್ನುಂಟು ಮಾಡಿದಾಗ. ಮಕ್ಕಳನ್ನು ಬೆಳೆಸುವುದು, ಓದಿಸುವುದು, ವಂಶಾಭಿವೃದ್ಧಿಗೆ ಹಾತೊರೆಯುವುದು, ಆಸ್ತಿಗಾಗಿ ಆಸೆಪಡುವುದು ಎಲ್ಲವುದಕ್ಕೂ ತಳದಲ್ಲಿರುವುದು ‘ಪಾಲನೆ’ಯ ಪ್ರವೃತ್ತಿಯೇ. ನಮ್ಮ ನೈತಿಕತೆಯ ಉಗಮವಿರುವುದು ಈ ‘ಪಾಲನೆ’ಯಲ್ಲೇ.

ಮೇಲಿನ ಮಾತುಗಳನ್ನು ಉದ್ದರಿಸಿಕೊಂಡು, ಕನ್ನಡ ಸಾಹಿತ್ಯದ ಮೇರು ಕೃತಿಯೊಂದರ ಸಾಲುಗಳನ್ನು ಪ್ರಸ್ತುತ ಪಡಿಸದಿದ್ದರೆ ತಪ್ಪಾದೀತು. 
"ಆ ಕತ್ತಲಲ್ಲಿ ಸಾಕವ್ವ ಊರುಗೋಲು ಊರ್ಕಂಡು ಶಿವೂ ಕಯ್ಯ ಹಿಡ್ಕೊಂಡು ಎದುರಾದ ಹಟ್ಟಿ ಮುಂದ ನಿಲ್ಲುತ್ತಿದ್ದಳು. ನಿಂತು ಉಸುರು ಬಲವಾಗಿ ಎಳುದು ನೋಡುತ್ತಿದ್ದಳು. ನೋಡಿ ಮುಂದಕ ನಡೆಯೋದ ಮಾಡುತ್ತಿದ್ದಳು. ಹೀಗೆ ಹತ್ತು ಹಟ್ಟಿಗಳಾದವು, ಇಪ್ಪತ್ತು ಹಟ್ಟಿಗಳಾದವು, ಯಾರಾರು ‘ಯಾರೋ’ ಅಂದರೆ ಸಾಕವ್ವ ‘ನಾನು ಕಪ್ಪ’ ಅನ್ನೋದು. ‘ಯಾಕಮ್ಮೋ’ ಅಂದರೆ ‘ಇಲ್ಲೆಕಪ್ಪೋ’ ಅನ್ನುತ್ತ ನಡೆಯುವುದಾಗುತ್ತಿತ್ತು. ಕಾಲು ಸೇದುವವರೆಗೂ ನಿಂತು ಸವುತಿ ಕೆಂಪಮ್ಮನ ಹಟ್ಟೀವಾಸನೆಯನ್ನು ಹೀರಿದರೂ ಏನೂ ಮೂಗಿಗೆ ಸೋಂಕದೆ ಸಾಕವ್ವ ಪೇಚಿಕೊಂಡು ಮುನ್ನಡೆದಳು"

ಈ ತುಣುಕನ್ನು ಓದಿದ ಕ್ಷಣಕೆ ಇದೇನು ಅಪ್ಪಟ ಹಳ್ಳೀಗಾಡಿನ ಭಾಷೆಯ ಧಾಟಿ ಅಂದುಕೊಳ್ಳಲೇಬೇಕು. ಹೌದು, ಅದು ಆ ಮೇರು ಸಾಹಿತಿಯ ವಿಶೇಷ. ಓದಲು ಶುರುವಿಟ್ಟರೆ ಸಾಕು, ಓದುಗನನ್ನೇ ತನ್ನ ಏರಿಳಿತದಲ್ಲಿ ತೂಗಾಡಿಸುತ್ತಾ ಕರೆದೊಯ್ಯುವ ಅತ್ಯಂತ ಸ್ಥಳೀಯ ಭಾಷೆಯಲ್ಲಿ, ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ ಹಾಗು ಚಿಂತಕ ದೇವನೂರು ಮಹಾದೇವನವರು ಬರೆದಂತಹ, ಬಹುಷಃ ಭಾರತದ ಕಥಾಸಾಹಿತ್ಯದಲ್ಲೇ ಅಪೂರ್ವ ಶೋಭೆಯ ಕೃತಿ ‘ಒಡಲಾಳ’ದಲ್ಲಿನ ಒಂದು ಸನ್ನಿವೇಶ ಇದು. ಮನುಷ್ಯನ ಅಸ್ತಿತ್ವಕ್ಕೇ ಅಡಿಪಾಯವಾದ ‘ಕಾಮ’ ಮತ್ತು ‘ಪಾಲನೆ’ಗಳಲ್ಲಿ ಕಾಮದ ಮಹತ್ವವನ್ನು ಮನಗಾಣಿಸುವ ಎಷ್ಟೋ ಕನ್ನಡ ಕೃತಿಗಳ ಮಧ್ಯೆ ‘ಪಾಲನೆ’ಯನ್ನೇ ಕೇಂದ್ರವಸ್ತುವಾಗಿಟ್ಟುಕೊಂಡು ಸಮಾಜಕ್ಕೆ ಪರೋಕ್ಷವಾದ ಸಂದೇಶ ಕೊಟ್ಟಂತಹ ಕೃತಿ.

'ಒಡಲಾಳ’ದ ಸಾಕವ್ವ, ಮಾರಿಕೊಂಡವರು, ಗ್ರಸ್ತರು, ಒಂದು ದಹನದ ಕತೆ, ದತ್ತ, ಡಾಂಬರು ಬಂದುದು, ಮೂಡಲ ಸೀಮೆಲಿ ಕೊಲೆಗಿಲೆ ಮುಂತಾಗಿ, ಅಮಾಸ, ದ್ಯಾವನೂರು, ಕುಸುಮಬಾಲೆ ಗಳಂತಹಾ ಕಥಾನಕಗಳ ಮೂಲಕ ಮನದ ತುಮುಲವನ್ನೆಲ್ಲಾ ಹೇಳುತ್ತಾ ‘ಪಾಲನೆ’ಗೆ ತೊಡಕಾಗಿರುವ ವಿಚಾರಗಳನ್ನ ಸೂಕ್ಷ್ಮವಾಗಿ ಬಿಚ್ಚಿಡುತ್ತಾ ಓದುಗರಿಗೆ ಹೊಸರುಚಿ ಉಣಬಡಿಸಿದ್ದು ದೇವನೂರು ಮಹಾದೇವನವರು.

ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಜನನ ೧೯೪೯ರಲ್ಲಿ. ನಂಜನಗೂಡು ಹಾಗು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿ, ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು. ದೇವನೂರರಿಗೆ ಈವರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಇದಲ್ಲದೆ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಶನಲ್ ರೈಟಿಂಗ್ ಪ್ರೋಗ್ರಾಮ್'ನಲ್ಲಿ ಭಾಗವಹಿಸಿದ್ದಾರೆ. ಇವರ ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಮೈಸೂರು ಪ್ರಾಂತ್ಯದ ಗ್ರಾಮ್ಯ ಧಾಟಿಯಲ್ಲಿ ಬರೆದ ೭೫ ಪುಟಗಳ "ಕುಸುಮಬಾಲೆ"ಎಂಬ ಕಿರುಕಾದಂಬರಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು” ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು. ಉದ್ದೇಶ ವಿಡಂಬನೆಯಾಗಿರಲಿಲ್ಲ. ಬದಲಾಗಿ ಬಳಸಲ್ಪಟ್ಟ ಭಾಷಾಕೌಶಲ್ಯ ಮತ್ತು ನಿರೂಪಣೆಯಲ್ಲಿನ ಉತ್ಕೃಷ್ಟ ಗುಣಮಟ್ಟವಾಗಿತ್ತು. ಇದೇ ಕೃತಿಗೆ ೧೯೯೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. "ದ್ಯಾವನೂರು" ಮತ್ತು "ಒಡಲಾಳ" ಇವೆರಡು ದೇವನೂರರ ಕಥಾಸಂಕಲನಗಳು. . ಈವರೆಗಿನ ಇವರ ಸಾಹಿತ್ಯ ಸುಮಾರು ೨೦೦ ಪುಟಗಳಷ್ಟಾಗಬಹುದು. ಆದರೂ ದೇವನೂರರು ಕಥಾಸಾಹಿತ್ಯದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ.

ಹೊಸಗನ್ನಡದ ಇಲ್ಲಿಯವರೆಗಿನ ಸಣ್ಣ ಕತೆಗಳ ಚರಿತ್ರೆಯನ್ನು ಮಾಸ್ತಿ ಯುಗ, ಲಂಕೇಶ ಯುಗ ಹಾಗು ದೇವನೂರು ಯುಗ ಎಂದು ವಿಂಗಡಿಸಬಹುದೆನ್ನುವುದು ಸೋಜಿಗವಲ್ಲ. ಬಡವರ ನೋವನ್ನು ಎದೆಯೊಳಗೆ ಇಟ್ಟುಕೊಂಡು ಸಮ ಸಮಾಜದ ಕನಸು ಕಾಣುತ್ತಾ ಬಂದ ಯೋಗಿ ದೇವನೂರು ಮಹಾದೇವ. ಅವರು ಬರೆದದ್ದು ಕಡಿಮೆ ಆದರೆ ಬರೆದದ್ದೆಲ್ಲಾ ಚಿನ್ನ, ಬದುಕಿದ್ದೆಲ್ಲವೂ ತಪಸ್ಸು. ಅವರ ಕುಸುಮಬಾಲೆ, ಒಡಲಾಳ ಕನ್ನಡದ ಅತ್ಯಂತ ಶ್ರೀಮಂತ ಕೃತಿಗಳ ಸಾಲಿನಲ್ಲಿ ಸೇರಿವೆ. ದೇಮಾ ಎಂದರೆ ಅದು ಕರ್ನಾಟಕದ ಒಂದು ಬರಹದ ಮಹಾ ಮಾದರಿ ಹಾಗೂ ಬದುಕಿನ ಮಹಾಮಾದರಿ.

ಇಂಥ ವೈಶಿಷ್ಟ್ಯಪೂರ್ಣ ಸಾಹಿತಿಗಳ ಅಭೂತಪೂರ್ವ ರಚನೆಗಳನ್ನು ನಮ್ಮ ಸ್ವಂತ ಪುಸ್ತಕ ಸಂಗ್ರಹಗಳಲ್ಲಿ ಹೊಂದಿರದಿದ್ದರೆ ಅದೊಂದು ಬಹುದೊಡ್ಡ ಕೊರತೆಯಾದೀತು. ಕನ್ನಡಿಗರಾಗಿ ಕನ್ನಡ ಸಾಹಿತ್ಯಕೃತಿಗಳನ್ನು ಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳೋಣ ತನ್ಮೂಲಕ ಕನ್ನಡ ಸಾಹಿತ್ಯಕ್ಕೂ ನಮ್ಮದೇ ಹೃದಯಸ್ಪರ್ಷಿ ಕೊಡುಗೆ ನೀಡೋಣ.

ವಂದನೆಗಳೊಂದಿಗೆ,
ಅಬ್ದುಲ್ ಸತ್ತಾರ್ ಕೊಡಗು
ಕನ್ನಡ ಬ್ಲಾಗ್ ನಿರ್ವಹಣಾ ತಂಡ

Monday 25 June 2012

ಸಾಹಿತ್ಯದಲ್ಲಿ ಗದ್ಯದ ಆಯಾಮಗಳು


ಕನ್ನಡ ಸಾಹಿತ್ಯದ ಉಗಮ ಎಂದು ಆಗಿರಬಹುದೆಂಬುದರ ಸ್ಪಷ್ಟ ಕಲ್ಪನೆ ಯಾರಿಗೂ ಇರದಿದ್ದರೂ, ಕೆಲವು ಹಳೆಗನ್ನಡ ಕೃತಿಗಳ ಅಥವಾ ಕಾವ್ಯಗಳ ಸಂಗ್ರಹದ ಪರಾಮರ್ಶೆಯ ಆಧಾರದ ಮೇಲೆ ಕನ್ನಡ ಸಾಹಿತ್ಯಕ್ಕೆ ಸುಮಾರು ಇಷ್ಟು ವರ್ಷಗಳ ಇತಿಹಾಸವಿದೆ, ಅಷ್ಟು ವರ್ಷದ ಇತಿಹಾಸವಿದೆ ಎಂಬ ತರ್ಕಗಳನ್ನು ಕೇಳಿದ್ದೇವೆ. ಆದರೆ ಅಸಲಿಗೆ ಸಾಹಿತ್ಯ ಎಂದರೆ ಏನು? ತನ್ನ ಒಡಲಾಳದಲ್ಲಿ ಹಲವಾರು ಅರ್ಥಗಳನ್ನು ಹೊಂದಿದ್ದರೂ ಓದುಗನ ಮಡಿಲಲ್ಲರಳಿ ಕರ್ತೃವಿನ ಭಾವಗಳನ್ನು  ಮನಕ್ಕೆ ವೇದ್ಯವಾಗಿಸುವ ಕಾವ್ಯ ಕುಸುರಿಯೇ ಸಾಹಿತ್ಯ. ಸಾಹಿತ್ಯಕ್ಕೆ ಅದರದೇ ಆದ ಕೆಲವು ಮಾನದಂಡಗಳಿರುತ್ತವೆ. ಎಲ್ಲರೂ ಬರೆಯುತ್ತಿದ್ದಂತೆ ಅವುಗಳನ್ನು ಮೈಗೂಡಿಸಿಕೊಂಡು ಬರೆಯುವುದಲ್ಲ. ಆದರೆ ಅದು ಬೆಳವಣಿಗೆಯ ಹಾದಿಯಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳುವುದು ಬರಹಗಾರನ ಜವಾಬ್ದಾರಿಯಾಗಿರುತ್ತದೆ. ಓದುಗ ಎಂದಿಗೂ ಸಾಹಿತ್ಯದ ಜೊತೆಗಾರ. ಬರಹಗಾರ ಬರಹದ ದಿಕ್ಕನ್ನು ಹೇಗೆ ನಿರ್ಧರಿಸುತ್ತಾನೋ ಹಾಗೆ ಓದುಗನೂ ತನಗೆ ಹೇಗೆ ಬೇಕೋ ಹಾಗೆ ಬರೆಸಿಕೊಳ್ಳುತ್ತಾನೆ. ಹಾಗಾಗಿಯೇ ಸಾಹಿತಿ ಮತ್ತು ಓದುಗ ಇಬ್ಬರೂ ಸಾಹಿತ್ಯ ಬೆಳವಣಿಗೆಯ ಕಣ್ಣುಗಳು ಎಂದೇ ಹೇಳಬೇಕು. 

ಇಪ್ಪತ್ತನೇ ಶತಮಾನದ ಆದಿಯಲ್ಲಿ ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ ಇನ್ನೂ ಮುಂತಾದ ಪ್ರಯೋಗಶೀಲ ಸಾಹಿತಿಗಳ ಸೃಜನಾತ್ಮಕತೆಯಿಂದ ಹಳೆಗನ್ನಡ ಮತ್ತು ನಡುಗನ್ನಡದ ಛಾಯೆಗಳಿಂದ ದೂರ ಸರಿದು ನವೋದಯ ಕಾವ್ಯ ಉಗಮವಾಯ್ತು. ಸಾಹಿತ್ಯದ ರೂಪುರೇಷೆಗಳು ನವೀಕರಣಗೊಂಡು ಲಯ ಮತ್ತು ಗೇಯತೆಗಳು ಕಾವ್ಯದೊಳಗೆ ಮೈಗೂಡಿ ನಿಂತವು. ಕನ್ನಡ ಸಾಹಿತ್ಯ ಭಂಡಾರ ಸಂಪದ್ಭರಿತವಾದ ಕಾಲವದು. ನವೋದಯ ಸಾಹಿತ್ಯದ ಪ್ರಯೋಗಶೀಲತೆಯಲ್ಲಿ ಪ್ರಕೃತಿ ಮಾತೆ, ಪ್ರೇಮ, ಮಾನವ ಶೃಂಗಾರ ಭಾವ, ಸ್ತ್ರೀ-ಪುರುಷ ಭಾವ, ಪ್ರಕೃತಿಯಲ್ಲಿ ದೈವತ್ವ, ಹೀಗೆ ಅನೇಕ ಭಾವಗಳು ಗರಿಬಿಚ್ಚಿ ಕುಣಿದವು. ಈ ಪ್ರಯೋಗ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕ್ರಾಂತಿಯಾಗಿ ಸಾವಿರಾರು ಯುವ ಬರಹಗಾರರು ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲಲು ಪ್ರೇರೇಪಿಸಿತು. ಈ ರೀತಿಯ ಅನೇಕ ಕಟ್ಟಲೆಗಳಿಂದ ಹೊರ ಬರಲು ಬರಹಗಾರರು ಪ್ರಯತ್ನಿಸಿದರು. ಆದರೆ ಧೈರ್ಯವಾಗಿ ಆ ಕೆಲಸ ಮಾಡಿ ತೋರಿಸಿದವರು ಗೋವಿಂದ ಪೈ ಎನಿಸುತ್ತದೆ. ನಂತರ ಸುಮಾರು 1950 ರ ಸಮಯದಲ್ಲಿ ಅಡಿಗರು ನವ್ಯ ಸಾಹಿತ್ಯಕ್ಕೆ ಅಡಿಗಲ್ಲು ಹಾಕಿದರು. ನಡುವಲ್ಲೆ ತಿಳಿ ಹಾಸ್ಯ ಬರಹಗಳು ಮತ್ತು ಹನಿಗವನಗಳು ಬೆಳಕು ಕಂಡವು. ಸಾಹಿತ್ಯಕ್ಕೆ ಇನ್ನಷ್ಟು ಭವ್ಯವಾದ ಆಯಾಮ ಸಿಕ್ಕಂತಾಯಿತು. ಹೀಗೆ ಸರಾಗವಾಗಿ ಹರಿಯುತ್ತಿದ್ದ ಸಾಹಿತ್ಯ ಜನರು ಅನುಭವಿಸುತ್ತಿದ್ದ ಹಿಂಸೆ, ಕಷ್ಟಗಳು ಮತ್ತು ವ್ಯವಸ್ಥೆಯ ವಿರುದ್ಧದ ದನಿಗಳು ಪ್ರಕಟಗೊಳ್ಳಲು ಹವಣಿಸುವ ತವಕವು ಭಂಡಾಯ ಸಾಹಿತ್ಯಕ್ಕೆ ವರವಾಗಿ ಪ್ರೇರಣೆಗೊಂಡಿತು. ಸಾಹಿತ್ಯದಲ್ಲಿ ಮತ್ತಷ್ಟು ಪ್ರಯೋಗಗಳು ನಡೆದು ಜಾಗತಿಕ ಕನ್ನಡ ಸಾಹಿತ್ಯ ಬೆಳಕು ಕಂಡಿತು. ಸಾಹಿತಿ ,ಬರಹಗಾರರು ಪ್ರಸ್ತುತಿಯನ್ನು ಮತ್ತಷ್ಟು ಆಡುಜನರ ಭಾಷೆಗೆ ಹತ್ತಿರವಾಗುವಂತೆ ಮಾಡಲು ಪ್ರಯತ್ನಿಸಿದರು. ಭಂಡಾಯ ಮತ್ತು ಜಾಗತಿಕ ಸಾಹಿತ್ಯ ಬೆಳವಣಿಗೆಗಳು ಒಟ್ಟುಗೂಡಿ ಸಾಹಿತ್ಯದ ಮಾನದಂಡಗಳನ್ನು ಮತ್ತೆ ನವೀಕರಿಸುವಂತೆ ಮಾಡಿದರು. ಕಾವ್ಯದಲ್ಲಿ ಉಪಮೆ ಮತ್ತು ಪ್ರತಿಮೆಗಳ ಪ್ರಭಾವಳಿಯನ್ನು ನವೀಕರಿಸಿ ಸಾಹಿತ್ಯವನ್ನು ಜಗತ್ತಿಗೆ ಕಾಣಿಕೆಯಾಗಿತ್ತರು. ಕಾವ್ಯದ ಮಾನದಂಡಗಳ ಬಗ್ಗೆ ನೀವು ಕನ್ನಡ ಬ್ಲಾಗ್ ನ ಮೊದಲ ಸಂಪಾದಕೀಯದಲ್ಲಿ ಗಮನಿಸಿದ್ದೀರಿ.

ಇನ್ನು ಹಿಂದಿನಿಂದಲೂ ಗದ್ಯದ ರಚನೆಯಾಗುತ್ತಲೆ ಬಂದಿದೆ. ಹಿಂದೆ ಕೇವಲ ಕಥೆಗಳು, ಕಾದಂಬರಿಗಳು ಮತ್ತು ಕೃತಿಗಳಿಗೆ ಸೀಮಿತವಾಗಿದ್ದ ಗದ್ಯಗಳು ಹತ್ತೊಂಬತ್ತನೆ ಶತಮಾನದಲ್ಲಿ ಪತ್ರಗಳು, ಲೇಖನಗಳು ಮತ್ತು ಪ್ರಬಂಧಗಳ ಆಯಾಮ ಪಡೆದುಕೊಂಡವು. ಗದ್ಯಕ್ಕೂ ಅದರದೇ ಆದ ಲಯವಿರುತ್ತದೆ. ಆದರೆ ಗದ್ಯ ಮತ್ತು ಪದ್ಯದ ಲಯಗಳು ಬೇರೆ ಬೇರೆಯದೇ ಆಗಿರುತ್ತವೆ. ಪದ್ಯ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡರೆ, ಗದ್ಯ ಅನುಭೂತಿ ನೀಡುತ್ತಾ ಓದುಗನ ಕಲ್ಪನೆಗಳನ್ನರಳಿಸುತ್ತಾ ಸಾವಕಾಶವಾಗಿ ಬಿಚ್ಚಿಕೊಳ್ಳುತ್ತದೆ. ಗದ್ಯದ ಅಂದವನ್ನು ಹೆಚ್ಚಿಸಲು ಕೆಲವು ಅಲಂಕಾರಿಕ ಪದಗಳನ್ನು ನಾವು ಹೆಚ್ಚಾಗಿ ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಪಡೆದಿರುತ್ತೇವೆ ಆದರೆ ಅದು ಓದುಗನ ಅಭಿರುಚಿಗೆ ಧಕ್ಕೆ ತರುವಂತಿರಬಾರದು.

ಇನ್ನು ಕಾದಂಬರಿ ಎಂದರೆ ಒಂದು ಮುಖ್ಯ ವಸ್ತುವಿನ ಸುತ್ತ ನವಿರಾಗಿ ಹರಡಿಕೊಳ್ಳುವ ಸಾಹಿತ್ಯ ಪ್ರಕಾರ. ಕಾದಂಬರಿಕಾರನ ಸಂಪೂರ್ಣ ಶ್ರಮವನ್ನು ಬಸಿಯುತ್ತದೆ ಈ ಪ್ರಕಾರ. ಏಕೆಂದರೆ ಬರಹಗಾರ ಕಾದಂಬರಿಯನ್ನು ಸುದೀರ್ಘವಾಗಿ ಬೆಳಸಿ ಕಥೆಯ ಪ್ರಕಾರದಿಂದ ಕಾದಂಬರಿಯಾಗಿಸುವ ಜವಾಬ್ದಾರಿ ಬರಹಗಾರನ ಮೇಲಿರುತ್ತದೆ. ಕಥೆ ಒಂದು ಪರಿಕಲ್ಪನೆಯ ಸುತ್ತ ಸ್ಥೂಲವಾಗಿ ಹರಡಿಕೊಳ್ಳುತ್ತದೆ. ಕಥೆ ನೇರ ಮತ್ತು ಸರಳವಾಗಿದ್ದು, ತನ್ನ ಪರಿಮಿತಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿಕೊಳ್ಳುವುದರೊಂದಿಗೆ ಬರಹಗಾರನ ಅಭಿಪ್ರಾಯಗಳು ಪಾತ್ರಗಳ ಮೂಲಕ ವ್ಯಕ್ತವಾಗಬೇಕು. ಸಂದರ್ಭದ ಸೂಕ್ಷ್ಮತೆಯನ್ನು ಪಾತ್ರಗಳು ಹೇಳಬೇಕೇ ಹೊರತು ಕಥೆಗಾರನ ಧ್ವನಿ ಎಲ್ಲಿಯೂ ನೇರವಾಗಿ ಕೇಳಿಸದಿರುವಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಸಾಹಿತ್ಯವನ್ನು ಮತ್ತಷ್ಟು ಬೆಳಸಿದ ಹೆಗ್ಗಳಿಕೆ ಪತ್ರಗಳಿಗೆ ಸಲ್ಲುತ್ತದೆ. ಖಾಸಗಿ ಮತ್ತು ಕಛೇರಿ ಪತ್ರಗಳು ಓದುಗರ ಆವಗಾಹನೆಗೆ ಬರುವುದಿಲ್ಲ ಆದರೆ ಬಹಿರಂಗ ಪತ್ರಗಳು ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ ಮತ್ತು ಸ್ಮರಣೀಯ. ಈಗ ಬಹಿರಂಗ ಪತ್ರಗಳಿಗಾಗಿ ಪತ್ರಿಕೆಗಳಲ್ಲಿ ಪ್ರತ್ಯೇಕ ಕಾಲಂಗಳನ್ನೇ ನೀಡಿ ಬದ್ಧತೆ ತೋರುತ್ತಿರುವುದನ್ನು ಕಾಣಬಹುದಾಗಿದೆ.

ಗದ್ಯಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಕಾಡುವ ಪ್ರಶ್ನೆ, ಪ್ರಬಂಧ ಮತ್ತು ಲೇಖನಗಳಿಗಿರುವ ವ್ಯತ್ಯಾಸವೇನು? ಪ್ರಬಂಧ ಎಂಬುದು ಒಂದು ಗದ್ಯ ಪ್ರಸ್ತುತಿಯಾಗಿದ್ದು ಹೆಚ್ಚು ಮಾಹಿತಿಯಾಧಾರಿತವಾಗಿದ್ದು, ತರ್ಕಬದ್ಧವಾಗಿರುತ್ತದೆ. ಬರಹಗಾರ ತನ್ನ ಎಲ್ಲಾ ನಿಲುವು ಅಥವಾ ವಸ್ತುವಿಗೆ ಪುಷ್ಠಿ ನೀಡುವ ಸ್ಪಷ್ಠೀಕರಣಗಳನ್ನು ಕೊಡುತ್ತಾ ಪ್ರಬಂಧವನ್ನು ಮುಂದುವರೆಸುತ್ತಾನೆ. ಪ್ರಬಂಧದಲ್ಲಿ ಮೂರು ಅಂಶಗಳಿದ್ದು, ವಿಷಯ ಪ್ರಸ್ತಾಪದಲ್ಲಿ ವಸ್ತುವನ್ನು ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಿ ಅದನ್ನು ವಿಷಯ ವಿಸ್ತಾರದಲ್ಲಿ ಮಾಹಿತಿಯಾಧಾರಿತವಾಗಿ ವೇಧ್ಯವಾಗಿಸಿಬೇಕು. ಮೂರನೆ ಅಂಶ ವಿಷಯ ಸಂಹಾರ, ಪ್ರಬಂಧದ ವಸ್ತುವಿಗೆ ಒಂದು ಚೌಕಟ್ಟು ನೀಡಿ ಪ್ರಬಂಧಕ್ಕೆ ಸಂಪೂರ್ಣತೆ ಕೊಡುವುದು. ಲೇಖನದಲ್ಲಿ ಬರಹಗಾರನಿಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ. ತನ್ನ ಅಭಿಪ್ರಾಯಗಳನ್ನು ತನ್ನದೇ ಶೈಲಿಯಲ್ಲಿ ಹೊರಹೊಮ್ಮಿಸಬಹುದು. ಲೇಖನ ಹೆಚ್ಚಾಗಿ ಒಂದು ವಸ್ತುವಿನ ಬಗ್ಗೆ ಲೇಖಕ ತನಗಿರುವ ಅಭಿಪ್ರಾಯವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಮೂಡಿ ನಿಲ್ಲುತ್ತದೆ.

ಒಟ್ಟಾರೆ ಗದ್ಯಗಳೂ ಸಾಹಿತ್ಯ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ಬಂದಿವೆ. ನಮ್ಮ ಕನ್ನಡ ಬ್ಲಾಗ್ ನಲ್ಲಿ ಗದ್ಯ ರಚನೆಗಳು ಇನ್ನಷ್ಟು ಹೆಚ್ಚಾಗಲಿ ಎಂಬ ಸದುದ್ದೇಶದಿಂದ ಈ ಸಂಪಾದಕೀಯವನ್ನು ಹೊರ ತರಲಾಗುತ್ತಿದೆ. ಗದ್ಯ ನಮ್ಮದೇ ಅಭಿಪ್ರಾಯಗಳನ್ನು ಹೊಂದಿರಬೇಕೆಂಬ ಕಟ್ಟುಪಾಡು ಏನಿಲ್ಲ. ಆದರೆ ಬೇರೆಯವರ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಬರೆದರೂ, ಬರವಣಿಗೆಯನ್ನು ಸ್ವಂತ ಮಾಡಿಕೊಳ್ಳಬೇಕು, ನಿಮ್ಮದೇ ಶೈಲಿಯಲ್ಲಿ ಮೂಡಿ ಬರಬೇಕು. ಬರಹ ಸ್ವಂತವಾಗದ ಹೊರತು ನಿಮ್ಮೊಳಗಿನ ಬರಹಗಾರ ಹೊರ ಬರಲಾರ.

ಮುಂಗಾರನ್ನೂ ಸ್ವಾಗತಿಸುವಂತೆ ಸಾಹಿತ್ಯ ಕೃಷಿಯಾಗಲಿ. ಕನ್ನಡಮ್ಮನ ಮಡಿಲು ಶ್ರೀಮಂತವಾಗಲಿ.
=====
ವಂದನೆಗಳೊಂದಿಗೆ,
ಪ್ರಸಾದ್ ವಿ ಮೂರ್ತಿ, ಮೈಸೂರು
=====
ಸಲಹೆ: ಕನ್ನಡ ಬ್ಲಾಗ್ ನಿರ್ವಾಹಕ ತಂಡ

Tuesday 22 May 2012

ಬರಹಗಾರನ ಹೃದಯಕ್ಕೆ ಸ್ಫೂರ್ತಿಯ ಸಿಂಚನಗರೆವ ನಮ್ಮ ಓದುಗರು ಸಹೃದಯಿಗಳು

ಕನ್ನಡ ಬ್ಲಾಗ್ ಗುಣಮಟ್ಟ ಕಾಯುವಲ್ಲಿ ನೀವುಗಳು ತೋರುತ್ತಿರುವ ಉತ್ಸಾಹ ಕನ್ನಡ ಬ್ಲಾಗಿನ ಸಾಹಿತ್ಯ ಸಂಪಿಗೆಯ ಈ ಸುಂದರ ಅಂಗಳವನ್ನು ಫೇಸ್ಬುಕ್-ನಂಥ ಸಾಮಾಜಿಕ ತಾಣದಲ್ಲಿ ಅತಿ ಎತ್ತರದಲ್ಲಿ ನಿಲ್ಲಿಸಿವೆ ಎಂದರೆ ಅತಿಶಯೋಕ್ತಿಯಾಗದು. ನಿಮ್ಮ ಕ್ರಿಯಾಶೀಲತೆ, ತಾಳ್ಮೆ, ನಿಮ್ಮಲ್ಲಿನ ಸಾಹಿತ್ಯ ಅಭಿರುಚಿಗಳು, ಓದುವ ಹಂಬಲ ಇಲ್ಲಿನ ಹಲವು ಬರಹಗಾರರಿಗೆ ದಾರೀದೀಪವಾಗುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಕಚೇರಿಯ ಅತೀವ ಒತ್ತಡದ  ಕಾರ್ಯ, ವ್ಯಯುಕ್ತಿಕ ಜಂಜಡಗಳ ನಡುವೆಯೂ ನಮ್ಮೀ ತಾಣಕ್ಕೆ ಬಂದು ನಿಮ್ಮ ಬರಹಗಳನ್ನು ಪ್ರಕಟಿಸಿ, ತನ್ಮೂಲಕ ಖುಷಿ ಪಡೆದು ಅಥವಾ ಇತರ ಬರಹಗಾರರನ್ನು ಓದಿ ಪ್ರೋತ್ಸಾಹಿಸುವ ಉದಾರ ಮನಸು ನಿಮ್ಮದು. ಖಂಡಿತವಾಗಿಯೂ ಇಲ್ಲಿನ ಎಲ್ಲರಿಗೂ ಇದೊಂದು ತೃಪ್ತಿ ಕೊಡುವ ವಿಚಾರ.

ಅಂತರ್ಜಾಲ ಅಂದಾಕ್ಷಣ ಬಹುಶ ಒಳ್ಳೆಯದಕ್ಕಿಂತ ಹಾಳು ಪ್ರವೃತ್ತಿಗೆ ಮುಖ ಮಾಡುವುದು ಸಹಜವಾಗಿದೆ. ಅದಕ್ಕೆ ಅಪವಾದವೆಂಬಂತೆ ಹಲವು ಉತ್ತಮತೆಗಳು ಇಲ್ಲಿ ಇಲ್ಲವೆಂದೇನಿಲ್ಲ. ತಮ್ಮ ಕೆಲಸಕಾರ್ಯಗಳ ಬಿಡುವಿನಲ್ಲಿ ತಮ್ಮಲ್ಲಿನ ಕ್ರಿಯಾಶೀಲತೆಗಳನ್ನು ಬ್ಲಾಗ್ ರೂಪಗಳಲ್ಲಿ ಸಂಗ್ರಹಿಸಿಡುವ ಒಂದು ಹವ್ಯಾಸವನ್ನು ರೂಢಿಸಿಕೊಂಡ ಸಾವಿರಾರು ಮಂದಿ ನಾವುಗಳು ಇಲ್ಲಿದ್ದೇವೆ. ಈ ಬ್ಲಾಗ್ ಲೋಕದಲ್ಲಿ ಹಲವಾರು ಅದ್ಭುತ ರಚನೆಗಳನ್ನು ಕಂಡಿದ್ದೇವೆ. ಬಹುಶಃ ಈ ಬ್ಲಾಗ್ ಪ್ರಪಂಚ ಅತೀ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದೆ ಎಂಬುದೇ ಸೋಜಿಗದ ವಿಷಯ. ಇದು ಕ್ಷಣಕ್ಷಣಕೆ ವಿವಿಧ ಬರಹದ ಸರಂಜಾಮುಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಬರವಿಲ್ಲದ ಮತ್ತು ಬರಡಾಗದ ಬರಹ ಪ್ರಪಂಚವಿದು ಎಂದು ಬಣ್ಣಿಸಬಹುದಾಗಿದೆ. ಹಲವಾರು ಅದ್ಭುತ ಬರಹಗಳನ್ನು, ಸಾಹಿತ್ಯ ಕೃಷಿಗಳನ್ನೂ, ವಿಭಿನ್ನ ವಿಚಾರಧಾರೆಗಳನ್ನು ಮನಸಿಗೆ ಮುದಕೊಡುವಂತೆ ನಮ್ಮ ಮುಂದೆ ತೆರೆದಿಡುವ ಚತುರರು ಇಲ್ಲಿದ್ದಾರೆ. ಹನಿ, ಕತೆ, ಕವಿತೆ, ಕಾವ್ಯ, ಆತ್ಮಕಥನ, ಹರಟೆ, ಹಾಸ್ಯ, ಪ್ರಬಂಧ, ತತ್ವ ಹೀಗೆ ಯಾವ ಪ್ರಕಾರವೂ ಇಲ್ಲದಿಲ್ಲವೆಂಬಂತೆ ಸಕಲವನ್ನೂ ನಾವಿಲ್ಲಿ ಕಾಣಬಹುದು. 

ಬ್ಲಾಗ್ ಪ್ರಪಂಚದಲ್ಲಿ ಎಲ್ಲವೂ ಹಿತವಾದುದೆಂದು ನಾನೂ ಹೇಳುತ್ತಿಲ್ಲ. ಇಲ್ಲಿ ಬಾಲಿಶತನಗಳು, ಮನಸಿಗೆ ಬಂದಂತೆ ಗೀಚುವ ಸ್ವೇಚ್ಚಾಚಾರ, ಯಾವುದೇ ಅಥವಾ ಯಾರದೇ ಕರಡು ತಿದ್ದುಪಡಿಯಿಲ್ಲದೆ ಪ್ರಕಟಿಸಬಹುದಾದ ಸ್ವಾತಂತ್ರ್ಯಇರುವುದರಿಂದ ಕೆಲವೊಮ್ಮೆ ಓದುಗನನ್ನು ಮುಜುಗರಕ್ಕೆ ಒಳಪಡಿಸಬಹುದು. ಅಥವಾ ಮುಖ್ಯವಾಹಿನಿಯ ಎದುರು ಬ್ಲಾಗ್ ಬರಹಗಾರರು ಅಪಹಾಸ್ಯಕ್ಕೆ ಒಳಗಾಗಬಹುದಾದ ಸನ್ನಿವೇಶ ಸೃಷ್ಟಿ ಆಗಿದ್ದೂ ಇದೆ, ಆಗುತ್ತಿರಲೂ ಬಹುದು. ಅದು ಒತ್ತಟ್ಟಿಗಿರಲಿ. ಈ ಎಲ್ಲ ಕುಂದು ಕೊರತೆಗಳನ್ನು ಮೀರಿ ನಿಂತು, ಮುಖ್ಯವಾಹಿನಿಯಲ್ಲಿನ ಬರಹಗಳಿಗಿಂತ ಮೇಲುಗೈ ಸಾಧಿಸುವ ಸಾಮರ್ಥ್ಯ ಕೂಡ ಬ್ಲಾಗಿಗರಲ್ಲಿದೆ. ಈ ಸಾಮರ್ಥ್ಯಕ್ಕೆ ಬಲಕೊಟ್ಟಿದ್ದು ಅಂತರ್ಜಾಲ ವ್ಯವಸ್ಥೆ. ಎಲ್ಲೋ, ಯಾವುದೋ ದೇಶದ ಮೂಲೆಯಲಿ ಕೂತ ಸಮಾನ ಮನಸ್ಕರನು ಒಗ್ಗೂಡಿಸುವ, ತನ್ಮೂಲಕ ಬರಹ ಪ್ರಪಂಚಕ್ಕೊಂದು ಕೊಡುಗೆ ನೀಡುವ ಅವಕಾಶ ಇತ್ತು ತನ್ಮೂಲಕ ಅಂತರ್ಜಾಲ ಓದುಗರ ಹಸಿವನ್ನು ತಣಿಸುವ ಕಾರ್ಯವನ್ನೂ ಅವ್ಯಾಹತವಾಗಿ ಮಾಡುತ್ತಿದೆ.

ಇನ್ನು ಓದುಗ ಮಹಾಶಯರು. ಸಹೃದಯರು ಎನ್ನುವದಕ್ಕೆ ಸಮಾನಾಗಿ ಬರಹಗಾರನ ಹೃದಯಕ್ಕೆ ಸ್ಪೂರ್ತಿಯ ರಕ್ತ ನೀಡುವವರು ಇವರು. ಈ ಬ್ಲಾಗ್ ಲೋಕದಲ್ಲಿ ಇವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಓದಿನ ಆಸ್ವಾದನೆಯ ಬೆನ್ನು ಹತ್ತಿದ ಇವರುಗಳಲ್ಲೂ ವಿವಿಧತೆಯಿದೆ. ಪ್ರೋತ್ಸಾಹದ ಮೇರುಗಳು, ಮಾರ್ಗದರ್ಶಕರೂ, ಉತ್ತಮ ವಿಮರ್ಶಕರೂ ಹೀಗೆ ಪಟ್ಟಿ ಬೆಳೆಯುತ್ತದೆ. ಬರಹಗಾರನ ಬರಹಕ್ಕೆ ಮೆಚ್ಚುಗೆ, ಟಿಪ್ಪಣಿ, ವಿಮರ್ಶೆಗಳ ಮೂಲಕ ಬರಹದ ಜೀವನಾಡಿಯನ್ನು ಜೀವಂತವಾಗಿರಿಸುವ ಕಾಯಕ ಈ ಓದುಗರು ಮಾಡುತ್ತಲೇ ಇರುವುದನ್ನು ಕಾಣಬಹುದು. ಅಷ್ಟರ ಮಟ್ಟಿನ ತೃಪ್ತಿ ಕೂಡ ಬರಹಗಾರನಿಗೆ ಈ ಓದುಗರಿಂದ. ಇಲ್ಲೂ ಕೂಡ ಒಂದು ಕೊರತೆ ಎದ್ದು ಕಾಣುತ್ತದೆ.ಅದು ಅಂತರ್ಜಾಲ ಓದುಗರು ಸಹ ಕ್ಷೀಣಿಸುತ್ತಿರುವ ಅಂಶ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಲ್ಲಿ ಹೆಚ್ಚಿನ ಓದುಗರು ಮೂಲತಃ ಸ್ವತ ಬರಹಗಾರನಾಗಿರುವುದು. ಆತ ತನ್ನ ಬರಹಕ್ಕೆ ಮಾತ್ರ ಹೆಚ್ಚಿನ ನಿರೀಕ್ಷೆ ಸಹ-ಓದುಗರಿಂದ ಇಟ್ಟುಕೊಳ್ಳುವುದು ತದ್ವಿರುದ್ಧವಾಗಿ ತಾನೂ ಒಬ್ಬ ಓದುಗನಾಗಬೇಕು ಎನ್ನುವುದನ್ನು ಮರೆಯುವುದು. ಇದು ಸಲ್ಲ. ಅನ್ಯರೂ ತನ್ನಂತೆ ಪ್ರೋತ್ಸಾಹದ ಕಿರು ಕಾಣಿಕೆಯನ್ನು ಬಯಸುವುದು ಸಹಜ ಅನ್ನುವ ಭಾವನೆ ಪ್ರತಿಯೊಬ್ಬನಿಗೂ ಇರಬೇಕು. ಹೀಗಾದಲ್ಲಿ ಮಗದಷ್ಟು ಉತ್ತಮ ಕೃತಿಗಳು ಹೊರಬರಬಹುದು.

ಮೊದಲೇ ಹೇಳಿದಂತೆ ಬ್ಲಾಗ್ ಪ್ರಪಂಚದ ಕ್ರಿಯಾಶೀಲತೆ ಮೆಚ್ಚಲೇ ಬೇಕಾದ ಅಂಶ. ಅದು ಬರಹಗಾರನದ್ದಾಗಿರಬಹುದು ಅಥವಾ ಓದುಗನೇ ಆಗಿರಬಹುದು . ಎರಡೂ ವರ್ಗಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ. ಇದಕ್ಕೆ ತಧ್ವಿರುದ್ಧವೆಂಬಂತೆ ವ್ಯರ್ಥಾಲಾಪ ಮಾಡುವ ಹಲವಾರು ಮನಸುಗಳಿಗೂ ಇಲ್ಲಿ ಕೊರತೆಯಿಲ್ಲ. ಧರ್ಮ, ಜಾತಿ, ಪಂಗಡ, ಪಕ್ಷ, ಆಸ್ತಿಕ, ನಾಸ್ತಿಕರ ಬಡಿದಾಟ ಕಚ್ಚಾಟಗಳೂ ಕೂಡ ಇಲ್ಲವೆಂದಿಲ್ಲ. ಒಂದು ವಾದಕ್ಕೋ, ತತ್ವಕ್ಕೋ ನೆಚ್ಚಿಕೊಂಡು ಕಚ್ಚಾಡುವ ಮನೋಭಾವ ಇಲ್ಲಿ ಮರೆಯಾಗಬೇಕು. ಆ ವಾದಗಳು ಆರೋಗ್ಯಕರವಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕು. ಪ್ರತಿಯೊಬ್ಬನೂ ಹುಟ್ಟಿದಾಗಲೇ ಪಕ್ವವಾಗಿರುವುದಿಲ್ಲ. ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸುವ, ಬಾಲಿಶತನಕ್ಕೊಂದಷ್ಟು ತಿದ್ದುಪಡಿ, ಸಲಹೆ, ಮಾತಿನ ಏಟು ಕೊಟ್ಟರೂ ಬರಹಗಾರನಾಗಿ ಸ್ವೀಕರಿಸಿ ಅದು ತನ್ನ ಮುಂದಿನ ಬರವಣಿಗೆಯನ್ನು ಪಕ್ವಗೊಳಿಸುತ್ತದೆ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಬೇಕು. ಮನದ ತರಲೆಗಳನ್ನು ಬದಿಗೊತ್ತಿ, ವ್ಯರ್ಥ ಕಾಲಹರಣವನ್ನು ಸದ್ವಿಚಾರಗಳಿಗೆ ವಿನಿಯೋಗಿಸೋಣ. ಬ್ಲಾಗ್ ಲೋಕದಲೊಂದು ಸಂಚಲನ ಮೂಡಿಸೋಣ.

ಕಳೆದ ಹಲವಾರು ದಿನಗಳಿಂದ ನಮ್ಮ ಕನ್ನಡ ಬ್ಲಾಗಿನ ಹಲವು ಸದಸ್ಯರ ಬರಹಗಳು ಅಲ್ಲಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳು ಸಂತಸ ಕೊಡುತ್ತಿವೆ. ಇದು ದ್ವಿಗುಣವಾಗಲಿ. ಪ್ರತಿಯೊಬ್ಬರಿಗೂ ಅಭಿನಂದನೆಗಳು. ಹೀಗೆಯೇ ಸಾಗಲಿ ನಮ್ಮ ಪಯಣ. ಎಲ್ಲರಿಗೂ ಶುಭವಾಗಲಿ.
===

ಸಿರಿಗನ್ನಡಂ ಗೆಲ್ಗೆ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿ ಪರವಾಗಿ,
ಪ್ರೀತಿಯಿಂದ
ಪುಷ್ಪರಾಜ್ ಚೌಟ
[
ತಿದ್ದುಪಡಿ ಸಲಹೆ:  ಸೋಮಶೇಕರ ಬನವಾಸಿ, ಮಂಗಳೂರು.]

Thursday 19 April 2012

ನಿರಭಿಮಾನದ ಪೊರೆ ಕಳಚಿ ಕನ್ನಡಾಭಿಮಾನ ಜಾಗೃತಗೊಳ್ಳಲಿ!

ಹಬ್ಬಕ್ಕೆಂದು ಕಳೆದ ವಾರ ಊರಿಗೆ ಹೋದಾಗ ನಾನು ಕಲಿತ ನನ್ನ ಪ್ರೀತಿಯ ಕನ್ನಡ ಶಾಲೆಗೆ ಹೋಗುವ ಭಾಗ್ಯ ನನ್ನದಾಯಿತು! ನೂರು ವರ್ಷ ವೈಭವದಿಂದ ಮೆರೆದು ಎಷ್ಟೋ ಅಮೋಘ ವ್ಯಕ್ತಿತ್ವಗಳನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ ಹೆಮ್ಮೆಯ ಶಾಲೆಯದು. ಹಾಗೆಯೇ ಶಾಲೆಯ ವರಾಂಡದಲ್ಲಿ ಒಮ್ಮೆ ಸುತ್ತಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಈಗಿನ ಸ್ಥಿತಿಯನ್ನು ನೋಡಿದಾಗ ಮನಸ್ಸಿಗೆ ನಿಜಕ್ಕೂ ಖೇದವಾಯಿತು.ಅತ್ಯಂತ ಪ್ರಶಾಂತ ವಾತಾವರಣದಿಂದ ಕೂಡಿದ್ದ ಆ ಶಾಲೆಯ ತರಗತಿ ಕೋಣೆಗಳಲ್ಲಿ ನೂರಾರು ಮಕ್ಕಳು ತುಂಬಿರುತ್ತಿದ್ದರು. ಆದರೀಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಣುತ್ತಿದ್ದುದನ್ನು ಗಮನಿಸಿ ವ್ಯಾಕುಲಗೊಂಡೆ. ಸದಾ ಚೈತನ್ಯದ ಚಿಲುಮೆಯಂತ್ತಿದ್ದ ಶಾಲೆಯ ಸುಂದರ ಪರಿಸರದಲ್ಲಿ ಗಾಢವಾದ ಮೌನ ಛಾಯೆ ಕವಿದುಕೊಂಡಂತೆ ಭಾಸವಾಯಿತು. ಮಕ್ಕಳಿಗಿಂತ ಶಿಕ್ಷಕರೇ ಜಾಸ್ತಿ ಇದ್ದಾರೇನೋ ಅನಿಸಿ ಈ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಪಾಠ ಹೇಳುವ ಉತ್ತೇಜನವಾದರೂ ಎಲ್ಲಿಂದ ಬರಬೇಕು ಎಂದುಕೊಂಡೆ.
ಹೌದು, ನಾನೀಗ ಹೇಳ ಹೊರಟಿರುವುದು ಕನ್ನಡ ಭಾಷೆ ಏಕೆ ಹಿಂದೆ ಸರಿಯುತ್ತಿದೆ ಮತ್ತು ತನ್ನ ಮಹತ್ವವನ್ನು ಏಕೆ ಕಳೆದುಕೊಳ್ಳುತ್ತಿದೆ ಎಂಬುದರ ಬಗ್ಗೆ. ಈ ಬಗ್ಗೆ ಹಿಂದಿರುಗಿ ನೋಡುತ್ತಾ ಹೋದಾಗ ಹತ್ತಾರು ಕಾರಣಗಳು ಕಣ್ಣೆದುರು ಬಂದು ನಿಲ್ಲುತ್ತವೆ.ನಮ್ಮದೇ ಅಕ್ಕ ಪಕ್ಕದ ರಾಜ್ಯಗಳಲ್ಲಿನ ಪ್ರಾದೇಶಿಕ ಭಾಷೆಯ ಜನರು ಹಲವು ಸಾಧನೆಗಳನ್ನು ಮಾಡಿ ದೇಶ-ವಿದೇಶಗಳ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದಾರೆ.ಆದರೆ ನಮ್ಮಲ್ಲಿ ಈ ಪ್ರಯತ್ನ ನಡೆಯುತ್ತಿಲ್ಲವೆಂಬುದೇ ಬೇಸರ ತರುವಂಥದ್ದು.ಅಂತ ಪಾಂಡಿತ್ಯ ಉಳ್ಳವರು ನಮ್ಮಲ್ಲಿ ಇಲ್ಲವೇ ಎಂಬೆಲ್ಲ ಪ್ರಶ್ನೆಗಳು ಮನದಲ್ಲಿ ಉದ್ಭವವಾಗುತ್ತವೆ.ಅದಕ್ಕೆ ಉತ್ತರ ಹುಡುಕಲು ಹೊರಟಾಗ ನಾನು ಕಂಡುಕೊಂಡಿದ್ದು- " ಖಂಡಿತ ಇದ್ದಾರೆ. ಬೇರೆ ಭಾಷೆಗಳಿಗಿಂತ ಹೆಚ್ಚಾಗಿದ್ದಾರೆ. ಅದ್ಭುತ ವಿಚಾರವಂತರು, ಮಹಾನ್ ಚಿಂತಕರಿದ್ದಾರೆ." ಎಂಬುದಾಗಿದೆ. ನಾನು ಸಾಮಾಜಿಕ ತಾಣಗಳಲ್ಲಿ ಕನ್ನಡದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆರಂಭಿಸಿದ ಮೇಲೆ ಕಂಡುಕೊಂಡ ಅಂಶವಿದು. ಅದೆಷ್ಟೋ ಸಾಹಿತಿಗಳು, ಕವಿಗಳು, ಚಿಂತಕರು, ಸಿನಿ ಕವಿಗಳು, ಕನ್ನಡದ ಕಂಪನ್ನು ಬಹು ವಿಧದಲ್ಲಿ ಪಸರಿಸಲು ನಿಂತಿರುವುದನ್ನು ಕನ್ನಡಿಗರು ಕಾಣುತ್ತಾರೆ.ಆದಾಗ್ಯೂ "ಕನ್ನಡದಲ್ಲಿ ಬರೆಯುವವರು ಇರಲಿ, ಕನ್ನಡ ಮಾತನಾಡುವವರನ್ನೂ ಹುಡುಕಿಕೊಂಡು ಹೋಗಬೇಕು" ಎಂದು ಎಷ್ಟೋ ಜನ ಭಾಷಣ ಬಿಗಿಯುವುದನ್ನು ಕೇಳಿದ ನನಗೆ, ಇಷ್ಟೆಲ್ಲಾ ಪ್ರತಿಭೆಯ ಮಹಾಪೂರ ಇದ್ದರೂ ಇಂಥಃ ನಿರಭಿಮಾನದ ಪರಿಸ್ಥಿತಿ ಯಾಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.
ಹೀಗೆ ಕಾರಣ ಹುಡುಕುತ್ತ ಹೋದಾಗ ಮೊಟ್ಟ ಮೊದಲು ಕಣ್ಣಿಗೆ ಕಂಡ ಉತ್ತರ- "ನಿರಭಿಮಾನ" ಮತ್ತು "ದುರಭಿಮಾನ". ನಮ್ಮ ಸುತ್ತ ಮುತ್ತಲಿನ ಭಾಷೆಗಳ ಬೆಳವಣಿಗೆಯನ್ನು ನೋಡಿದಾಗ, ಒಂದು ಹುಲ್ಲು ಕಡ್ಡಿಯನ್ನು ಬಂಗಾರವನ್ನಾಗಿ ತೋರಿಸುವಷ್ಟು ಭಾಷಾ ಪ್ರೇಮವನ್ನು ನಾವು ಕಾಣಬಹುದು. ಅವರ ಜೊತೆ ನಾವೂ ಪರ ಭಾಷೆಯ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುವುದು ಸರ್ವೇ ಸಾಮಾನ್ಯ ದೃಶ್ಯ. "ಹಿತ್ತಲ ಗಿಡ ಮದ್ದಲ್ಲ" ಎಂಬ ಜಾಯಮಾನದವರಾಗಿ ನಮ್ಮದೇ ಮನೆಯಲ್ಲಿರುವ ಮುತ್ತು ರತ್ನಗಳನ್ನು ತಿರಸ್ಕರಿಸಿ ಬೇರೆ ಮನೆಯ ಕಾಗೆ ಬಂಗಾರಕ್ಕೆ ಆಕರ್ಷಿತರಾಗುತ್ತಿದ್ದೇವೆ. ನಮ್ಮ ತಾಯಿಯನ್ನು ನಾವು ಪ್ರೀತಿಸದಿರುವಾಗ ಆ ಹೊಣೆಯನ್ನು ಬೇರೆಯವರ ಮೇಲೆ ಹೊರಿಸುವುದು ಎಷ್ಟು ಸಮಂಜಸ? ಅಗಾಧವಾದ ಸಾಹಿತ್ಯ ಭಂಡಾರವಿದೆ ನಮ್ಮ ಭಾಷೆಯಲ್ಲಿ. ಭಗವದ್ಗೀತೆಯ ಸಾಲಿನಲ್ಲಿ ನಿಲ್ಲುವ "ಕಗ್ಗ ಸಾಹಿತ್ಯ", ಬೀಚಿಯಂಥವರ ಅದ್ಭುತ ಹಾಸ್ಯ ಸಾಹಿತ್ಯವಿದೆ. ಶೃಂಗಾರ, ನಾಟಕ, ಕಾವ್ಯ, ಕಾದಂಬರಿ, ಕಥೆ,ವಿಚಾರ,ವಿಡಂಬನೆ,ವಿಮರ್ಶೆ, ಸಂಶೋಧನೆ ಇತ್ಯಾದಿ ಸಮಾಜಮುಖಿ ಚಿಂತನೆಯ ಎಲ್ಲ ಆಯಾಮಗಳಲ್ಲಿ ಯಾವ ಭಾಷೆಗೂ ಕಡಿಮೆ ಇಲ್ಲದ ಸಾಹಿತ್ಯ ಭಂಡಾರ ನಮ್ಮ ಭಾಷೆ ಹೊಂದಿದೆ ಎಂಬುದು ನಾವು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದಾದ ಹೆಮ್ಮೆಯ ವಿಚಾರ. ಪ್ರಸ್ತುತ ವರ್ತಮಾನದಲ್ಲಿ ನೋಡುವುದಾದರೆ ಅದೆಷ್ಟೋ ಜನ ಯುವ ಸಾಹಿತಿಗಳು ಸಕಾಲಿಕ ಸಾಹಿತ್ಯದಲ್ಲಿ ಅದ್ಭುತ ಸಾಧನೆ ಮಾಡುತ್ತ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ.ಇವರನ್ನೆಲ್ಲ ಮುಖ್ಯವಾಹಿನಿಗೆ ತಂದು ಇವರ ಪ್ರತಿಭೆ ಹೊರತರುವ ಹೆಚ್ಚುಗಾರಿಕೆ, ಮತ್ತು ಭಾಷಾಭಿಮಾನ ಕನ್ನಡಿಗರೆಲ್ಲರಲ್ಲಿ ಮೂಡಬೇಕಾಗಿದೆ.
ಕನ್ನಡವೆಂದು ಭಾಷಣದ ಮೇಲೆ ಭಾಷಣ ಬಿಗಿಯುವ ದೊಡ್ಡ ವ್ಯಕ್ತಿಗಳು, ಮತ್ತು ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖ್ಯಾತ ಲೇಖಕರು ತಮಗೆ ಪ್ರೀತಿ ಮತ್ತು ಅಭಿಮಾನದ ಧಾರೆ ಎರೆದು ಮುಂದೆ ತಂದವರು ಕನ್ನಡಿಗರೇ ಎಂಬುದನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಜನ ದುರಭಿಮಾನದ ಪರಾಕಾಷ್ಥೆಯಲ್ಲಿ ತಮ್ಮ ದೊಡ್ಡತನವನ್ನು ಮೆರೆಯಲು ಕನ್ನಡದ ಮೊಗ್ಗು ಮನಗಳನ್ನು ಚಿವುಟಿರುವ ನಿದರ್ಶನಗಳು ಎಷ್ಟೋ ಕಾಣಸಿಗುತ್ತವೆ. ಉತ್ಸಾಹದಿಂದ ಆಧುನಿಕತೆಯ ಜೊತೆ ಕನ್ನಡ ಬೆಳೆಸುವ ಯುವಕರ ಪ್ರಯತ್ನಗಳಿಗೆ ಆ ದೊಡ್ಡ ವ್ಯಕ್ತಿಗಳು ಪ್ರೋತ್ಸಾಹ ನೀಡಿ ಅವರಲ್ಲಿ ಮನಸ್ಥೈರ್ಯ ತುಂಬಬೇಕಾಗಿದೆ.ಕನ್ನಡದ ಕಾರ್ಯ ಎಲ್ಲಿಯೇ ನಡೆಯುತ್ತಿರಲಿ, ಅದನ್ನು ಯಾರೇ ಮಾಡುತ್ತಿರಲಿ ನಾನು ನೀನು ಎನ್ನದೇ ಇದು ನಮ್ಮದೆಂದು ತಿಳಿದು ಅದನ್ನು ಪ್ರೋತ್ಸಾಹಿಸುವ ಹೆಚ್ಚುಗಾರಿಕೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಬರಬೇಕಾಗಿದೆ.ಅದೆಷ್ಟೋ ಪ್ರತಿಭೆಗಳು ಬೇರೆ ರಾಜ್ಯಗಳಿಂದ ಬಂದು ಕನ್ನಡ ಕಲಿತು ಅಪಾರ ಪಾಂಡಿತ್ಯ ಮೆರೆದಿರುವುದನ್ನು ನೋಡಿದ್ದೇವೆ.ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದ ಹಲವು ಆಯಾಮಗಳನ್ನು ಅರಿತು ಬರೆಯುವ ಸಮಾಜಮುಖಿ ಕವಿಗಳಿದ್ದಾರೆ. ಈ ಕವಿಗಳನ್ನೆಲ್ಲ ಒಗ್ಗೂಡಿಸಿ, ಪ್ರೋತ್ಸಾಹಿಸಿ ನಿಸ್ವಾರ್ಥವಾಗಿ, ತಮ್ಮ ಜನಪ್ರಿಯತೆಯನ್ನು ಒತ್ತೆಯಿಟ್ಟು ದುಡಿಯುತ್ತಿರುವ ಮಹನೀಯರಿದ್ದಾರೆ. ಇಂಥವರ ಕಾರ್ಯಗಳಿಗೆ ಪ್ರೋತ್ಸಾಹಿಸುವುದಿರಲಿ, ಅದನ್ನು ನೋಡಿ ಸಹಿಸಿಕೊಳ್ಳಲಾಗದೆ ಅದಕ್ಕೆ ಕಲ್ಲೆಸೆಯುವ ಎಷ್ಟೋ ಬುದ್ಧಿಜೀವಿಗಳು ನಮ್ಮ ನೆಲದಲ್ಲೇ ಇದ್ದಾರೆ ಎನ್ನುವುದು ವಿಪರ್ಯಾಸ.ದುರಭಿಮಾನವಿಲ್ಲದೆ ಕನ್ನಡದ ಹೆಸರಾಂತರು ಇಂಥಃ ಹತ್ತು ಹಲವು ಎಲೆ ಮರೆಯ ಕಾಯಂತಿರುವ ಪ್ರತಿಭೆಗಳನ್ನು ಹೊರ ತಂದು ಅಂಥವರಿಗೆ ನೀರೆರೆದು ಪೋಷಿಸಿ ತಮ್ಮ ನಿಜವಾದ ದೊಡ್ಡತನವನ್ನು ಪ್ರದರ್ಶಿಸಿ ತನ್ಮೂಲಕ ಕನ್ನಡ ಬೆಳೆಸುವ ಅಗತ್ಯ ಕೈಂಕರ್ಯ ಮಾಡುವಂತಾಗಬೇಕು.
ಅಲ್ಲಿ ಕನ್ನಡ ಉಪಯೋಗಿಸಬೇಕು, ಇಲ್ಲಿ ಕನ್ನಡ ಉಪಯೋಗಿಸಬೇಕು ಎಂದು ನೀಡುವ ಹೇಳಿಕೆಗಳು ಬರೀ ಹೇಳಿಕೆಯಾಗದೆ, ಕರ್ನಾಟಕದಲ್ಲಿ ಎಲ್ಲ ಕಡೆ ಕನ್ನಡದ ಉಪಯೋಗ ಬಲವಂತದಿಂದಾಗದೆ ಅದು ಸಹೃದಯತೆಯಿಂದ ಪರಸ್ಪರ ಒಗ್ಗೂಡುವಿಕೆ ರೂಪದಲ್ಲಿ ಜಾರಿಯಾಗುವಂತೆ ನಾವೆಲ್ಲಾ ಪ್ರಯತ್ನಿಸಬೇಕಾಗಿದೆ. ಎಲ್ಲ ಕಡೆ ಎದೆಯುಬ್ಬಿಸಿ, ಲವ ಲೇಶ ಅಳುಕಿಲ್ಲದೆ ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ವ್ಯವಹರಿಸಿ, ರಾಜ್ಯದಲ್ಲಿರುವ ಎಲ್ಲರಿಗೂ ಕನ್ನಡದ ಕಲಿಕೆ ಒಂದು ಅಗತ್ಯತೆ ಎಂಬ ಮಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕನ್ನಡಿಗನೂ ವಹಿಸಿಕೊಂಡು ಹೋಗಬೇಕಾಗಿದೆ. ಆ ನಿಟ್ಟಿನಲ್ಲಿ ಕಾಯಾ ವಾಚಾ ಮನಸಾ ನಮ್ಮ ಕನ್ನಡ ಪ್ರೇಮವನ್ನು ತೋರಿಸುತ್ತಾ ನುಡಿದಂತೆ ನಡೆಯುವ ಔದಾರ್ಯ ನಮ್ಮದಾಗಬೇಕಾಗಿದೆ. ಈ ಕನ್ನಡದ ಸರ್ಕಾರವು ಸಹ ತನ್ನ ಜವಾಬ್ದಾರಿ ಅರಿತು ಕನ್ನಡಕ್ಕೆ ಪ್ರೋತ್ಸಾಹ ನೀಡುವ ಆದ್ಯ ಕೆಲಸವನ್ನು ಮಾಡಬೇಕು. ಜಾತಿ ಧರ್ಮದ ಮೇಲೆ ಇರುವ ಮೀಸಲಾತಿಯು ಕನ್ನಡ ಮಾಧ್ಯಮದ ಮೇಲೂ ಇರಲಿ.ಕನ್ನಡ ಮಾಧ್ಯಮದಲ್ಲಿ ಕಲಿಯುವವರಿಗೆ ಪ್ರೋತ್ಸಾಹ,ಉತ್ತೇಜನ ದೊರಕಬೇಕಾಗಿದೆ. ರಾಜ್ಯೋತ್ಸವ ಪ್ರಶಸ್ತಿಗಳಂತ ಸನ್ಮಾನಗಳು ವ್ಯಾಪಾರವಾಗದೆ, ಅವು ಅರ್ಹರಿಗೆ ದಕ್ಕಿ ಅಂಥವರಿಂದ ಮತ್ತಷ್ಟು ನಿಸ್ವಾರ್ಥ ಸೇವೆ ಲಭ್ಯವಾಗುವಂತಾಗಬೇಕು.
ಕನ್ನಡದಲ್ಲಿ ಅಪಾರ ಸಂಪತ್ತಿದೆ. ಮುತ್ತು ರತ್ನ ವಜ್ರ ಸಮಾನ ಸಾಹಿತ್ಯ ಗಣಿಯಿದೆ. ಅದಮ್ಯ ಪ್ರತಿಭೆಗಳಿದ್ದಾರೆ. ಆದರೆ ಇವೆಲ್ಲ ಕಣ್ಣಿಗೆ ಕಾಣದೆ ಮಸುಕಾಗಿ ಬಿಟ್ಟಿದೆ. ಇವನ್ನು ಹೊರಕ್ಕೆ ತಂದು ಪೋಣಿಸಿ ಸುಂದರ ಹಾರ ಮಾಡಿ ಕನ್ನಡಾಂಬೆಯ ಕೊರಳಿಗೆ ಹಾಕಿ ನಮ್ಮ ಶ್ರೀಮಂತ ಸಂಸ್ಕೃತಿ,ಪರಂಪರೆಯನ್ನು ಮೆರೆಯುವ ಅಭಿಮಾನ,ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಚಿಗುರಬೇಕು.ಕನ್ನಡ ಕಳೆದು ಹೋಗುತ್ತಿದೆ ಎಂದು ವ್ಯಾಕುಲವಾಗಿ ಮಾತನಾಡುವ ಬದಲು, ನಮ್ಮ ಬಳಿಯೇ ಇರುವ ಸಿರಿಗನ್ನಡದ ಸಿರಿಯನ್ನು ಜಗತ್ತಿಗೆ ತೋರಿಸುವ ಸದಾಶಯ ಪ್ರತಿಯೊಬ್ಬನಲ್ಲೂ ಮೂಡಿ ಬರಬೇಕು.ಇಂಥ ಮಹತ್ತರವಾದ ಸೇವೆಯಲ್ಲಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ತನ್ನ ಛಾಪನ್ನು ಅಚ್ಚಳಿಯದಂತೆ ಮೂಡಿಸಿಕೊಂಡಿರುವ ನಮ್ಮ ಈ "ಕನ್ನಡ ಬ್ಲಾಗು" ತನ್ನ ಪ್ರಾಮಾಣಿಕ ಮತ್ತು ನಿಸ್ಪೃಹವಾದ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆವು.


ಸಿರಿಗನ್ನಡಂ ಗೆಲ್ಗೆ
ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿ ಪರವಾಗಿ,
ಪರೇಶ ಸರಾಫ್.
[
ಮಾರ್ಗದರ್ಶನ: ಸೋಮಶೇಕರ ಬನವಾಸಿ, ಮಂಗಳೂರು.]

Thursday 22 March 2012

ವಸಂತನಾಗಮನಕೆ ಹೊಸ ಚಿಗುರ ಹಸಿರು

ನಮ್ಮ ಪ್ರೀತಿಯ ಕನ್ನಡ ಮನಸುಗಳೇ,
     ವಸಂತ ಋತುವಿನ ಆಗಮನ. ಚೈತ್ರದ ಮೊದಲ ದಿನ. ಸಸ್ಯಸಂಕುಲಗಳು ನವನವೀನ ಚಿಗುರುಗಳ ಹೊತ್ತು ಪ್ರಕೃತಿಯ ಸೊಬಗಿಗೆ ತೋರಣ ಕಟ್ಟುವ ಪರ್ವಕಾಲ. "ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ, ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ, ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ" ಎಂಬ ಕವಿಮಾತಿನ ಆಶಯದ ಪ್ರಕಾರ ಕಳೆದ ಕಹಿ ದಿನಗಳ ಮರೆತು ಜೀವನದಲ್ಲಿ ಹೊಸ ಚಿಗುರು ಸಂಭ್ರಮಗೊಳ್ಳಲಿ ಎಂಬ ಭಾವ.
         ಯುಗಾದಿಯ ಆಗಮನಕ್ಕೆ ಕಾಯುತ್ತಿರುವಂತೆ ಜೀವಲೋಕದ ಸ್ಪಂದನ ಎಲ್ಲೆಲ್ಲೂ ಕಂಡುಬರುತ್ತದೆ. ಈ ಸ್ಪಂದನದಲಿ ಮನದ ಮೂಲೆಯಲ್ಲಿ ಎದ್ದು ಬರುವ ತುಡಿತಗಳು ಅಕ್ಷರ ರೂಪಗಳಲ್ಲಿ ಮೆರೆದು ಹಲವಾರು ಭಾವವೈಭವಗಳನ್ನು ನಮಗಿತ್ತಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಹೀಗೆ ಚೈತ್ರದ ಭಾವ ಚಿಲುಮೆಗಳನ್ನು ಬಿತ್ತರಿಸುವಲ್ಲಿ ಕನ್ನಡ ಬ್ಲಾಗ್ ಸದಸ್ಯರ ಮನಸುಗಳು ಹೊಸ ಸಂವತ್ಸರದ ಹೊಸ್ತಿಲಲ್ಲಿ ಚಿಗುರಿ ನಿಂತಿವೆ.  
        
"ಚೈತ್ರದ ಕೋಗಿಲೆಯ ಸುಮಧುರ ಇಂಚರ
ಎನ್ನ ಹೃದಯ ತೋಟದಲಿ ಪಸರಿಸಿತು ಅಮೃತ ಸಿಂಚನ,
ಚಿಗುರೆಲೆಗಳು ಕೈ ಬೀಸಿ ಕರೆಯುತಿವೆ ನಿನ್ನ
ಬಾ ಬೇಗ ಕಾಯಿಸದಿರು ನಿನ್ನ ಈ ಗೆಳತಿಯನ್ನ…
ಯುಗ-ಯುಗದಿ ನಾ ನಿನಗಾಗಿ ಕಾಯುತ್ತಿರುವೆ
ಹಚ್ಚೋಣ ಬಾ ನಮ್ಮ ಹೊಸ ಬಾಳ ದೀವಿಗೆ
ಯುಗಾದಿಯಂದು ಜೊತೆಯಾಗಿ ಬೇವು- ಬೆಲ್ಲವ ಸವಿಯೋಣಾ,
ಹೊಸ ಚೈತನ್ಯದಿ ನಾವ್ ಬಾಳೋಣಾ.."-
      ಹೀಗೆ 'ಭರದಿ ಬಂತಿದೋ ಯುಗಾದಿ' ಎಂದು ಉತ್ಸುಕಗೊಂಡು ನವಕಾಲಕ್ಕೆ ಹೊಸ ಚೈತನ್ಯದ ಭಾಷ್ಯ ಬರೆದವರು ಸವಿತಾ ಇನಾಂದಾರ್ ಅವರು. ಅವರ ಮನದಂತರಾಳಕ್ಕೆ ಚೈತ್ರದ ಕೋಗಿಲೆಯ ಇಂಚರ ಅಮೃತದ ಹನಿಯ ಸವಿಯನ್ನು ಉಣಬಡಿಸಿದೆ.

"ನಗ್ನಸುಂದರಿಯಾಗಿದ್ದ
ಮನೆಮುಂದಿನ
ಹೊಂಗೆ,
ಯುಗಾದಿ ಎಂಬಿನಿಯನಾಗಮನಕ್ಕೆ
ಹರಿದ್ವರ್ಣದ
ಎಲೆಗಳಿಂದ
ಮೈ ಸಿಂಗರಿಸಿಕೊಳ್ಳುತ್ತಿದ್ದಾಳೆ!"-
        ಹೊಂಗೆ ಸುಂದರಿಯೋರ್ವಳು ವಸಂತನಾಗಮನಕೆ ಹರಿದ್ವರ್ಣದ ಸೀರೆಯನುಟ್ಟ ಚೆಲುವ ಪರಿಯನ್ನು ಬಣ್ಣಿಸಿದ ಮನಸು ಸುನೀತ ಮಂಜುನಾಥ್ ಅವರದ್ದು. ಹೀಗೆ ಹೊಂಗೆಯೊಂದಷ್ಟೇ ಅಲ್ಲ ಎಲ್ಲವೂ ಹಸಿರ ಉಸಿರು ಹೊತ್ತು ಮೈದಳೆದು ನಿಂತು ಭೂದೇವಿ ಎಲ್ಲರನ್ನೂ ಆಕರ್ಷಿಸತೊಡಗುತ್ತಾಳೆ. ಅವಳಿಗದೊಂದು ಸಂಕ್ರಮಣ ಕಾಲ. ಇದಕ್ಕೆ ಒತ್ತು ಕೊಡುವಂತೆ "ಕಮ್ಮನೆ ಬಾಣಕ್ಕೆ ಸೋತು ಜುಮ್ಮನೆ ಮಾಮರವು ಹೂತು ಕಾಮಗಾಗಿ ಕಾದಿದೆ. ಸುಗ್ಗಿ ಸುಗ್ಗಿ ಸುಗ್ಗಿ ಎಂದು ಹಿಗ್ಗಿ ಗಿಳಿಯ ಸಾಲು ಸಾಲು ತೋರಣದೊಳು ಕೋದಿದೆ" ಎನ್ನುವ ಆಕರ್ಷಕ ಭಾವ ವರಕವಿ ದ.ರಾ.ಬೇಂದ್ರೆಯವರದ್ದು. ಈ ಸಾಲುಗಳನ್ನು ನೆನಪಿಸಿಕೊಂಡು ನಮ್ಮ ಬರಹಗಾರ ವಸಂತ್ ಆರ್ ತನ್ನ "ವರುಷಕೊಂದು ಹೊಸತು ಜನ್ಮ" ಎಂಬ ಲೇಖನ ದಲ್ಲಿ ಹೀಗೆ ಉದ್ಗರಿಸುತ್ತಾರೆ ": ಆ ಕಾಲದಲ್ಲಿ ಈ ಹಬ್ಬಕ್ಕೆ ಕೊಡುತ್ತಿದ್ದ ಮನ್ನಣೆಯನ್ನು ಗುರ್ತಿಸಿ ಅಂಬಿಕಾತನಯದತ್ತರ ಕುಂಚದಿಂದ ಅರಳಿರುವ ಈ ಸಾಲುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ". ಹೌದು ಇದು ನಿಜ. ಅವರ ಸಾಲುಗಳಷ್ಟೇ ಅಲ್ಲ ಯುಗಾದಿಯ ಮಹತ್ವವೇ ಅಂಥಾದ್ದು.

    ಹಳೆಯ ವರುಷದ ನೋವುಗಳನ್ನು ಮರೆತು, ಭವಿತವ್ಯದ ಹೊಸ ಕನಸುಗಳಿಗೆ ಮೆಟ್ಟಿಲಾಗಿ ನಿಲ್ಲುತ್ತದೆ ನವ ವರುಷದ ಆಚರಣೆ. ಅದಕ್ಕೊಂದು ಹಬ್ಬದ ಸಡಗರವಿದ್ದರೆ ಮಾತ್ರ ಹೊತ್ತ ಕನಸುಗಳಿಗೆ ನೆಮ್ಮದಿಯ ತೇಲಾಟ, ಸಾಕಾರಗೊಳ್ಳಬಹುದೆಂಬ ಸಕರಾತ್ಮಕ ನಿಲುವು.

ಬಂದಿದೆ ಹೊಸ ಯುಗಾದಿ
ಮಾವು ಬೇವಿನ ತಳಿರು ತೋರಣದಿ..
ಸುಖ ದುಃಖಗಳರಿಯದೆ..
ಅಂತ್ಯವೇ ಇಲ್ಲದೆ,ಅನಾವರಣಗೊಳ್ಳುತ್ತಲೇ ಇದೆ.
ಕೊನೆಯೆಂಬುದಿಲ್ಲದ ಈ ಯುಗಾದಿ
ಮಧುರಾನುಭೂತಿಯ ಶುಭಕ್ಕೆ ನಾಂದಿ
ನಗು ನಗುತ್ತಾ, ಸಂಭ್ರಮದಿ ದೇವರಿಗೆ ನಮಿಸಿ
ಬೇವು-ಬೆಲ್ಲಗಳೊಡನೆ ಹೂರಣ ಹೋಳಿಗೆಯ ಸಿಹಿ ಸವಿದು
ಶುಭಕೋರೋಣ ನಾವೆಲ್ಲಾ - 
  ಭಾಗೀರಥಿ ಚಂದ್ರಶೇಕರ್ ಎನ್ನುವವರ ಸಾಲುಗಳಲ್ಲಿನ ಮಧುರಾನುಭೂತಿಯ ಅನಾವರಣ ಯುಗಾದಿಯ ಸಂಭ್ರಮಕ್ಕೆ ಶುಭದ ನಾಂದಿ ಹಾಡುತ್ತದೆ. ಹೀಗೆ ಜೀವನ ಎನ್ನುವುದು ಬೇವಿನ ಹಬೆಯಲ್ಲಿ ಬೆಂದು ಬೆಲ್ಲದ ಪಾಕದಲಿ ಮಿಂದಾಗ ಮಾತ್ರ ಪಕ್ವತೆಯ ಜೋಕಾಲಿಯಲಿ ತೇಲಬಹುದು. ಬೆಲ್ಲದ ಸಿಹಿ ಸುಖ, ಬೇವಿನ ಕಹಿ ದುಃಖದ ಸಮ್ಮಿಳಿತ, ಗಂಜಿಗಳ ಬಡತನದೂಟ, ಬಟ್ಟಲು ತುಂಬಾ ಸಿಹಿಗಳ ಶ್ರೀಮಂತಿಕೆ ಯಾವುದನ್ನೂ ಲೆಕ್ಕಿಸದೆ ವಸಂತ ಇಡಿಯ ಲೋಕವನ್ನು ಹೊಸತಾಗಿಸುತ್ತದೆ. "ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು, ಹೊಸತು ವರುಷ, ಹೊಸತು ಹರುಷ- ಹೊಸತು ಬಯಕೆ ನಮ್ಮವು. ತಳಿರ ತುಂಬಿದಾಸೆಯೆಲ್ಲ, ಹರಕೆಯೆಲ್ಲ ನಮ್ಮವು" ಎಂಬ ಕವಿ ಕೆ. ಎಸ್.ನರಸಿಂಹ ಸ್ವಾಮಿಯವರ ಕವನದ ತುಣುಕು ಹಬ್ಬದ ವಾತಾವರಣದಲ್ಲಿ ನಮ್ಮ ಮನದಲ್ಲಿನ ಭಾವವನ್ನೇ ಹೊರಸೂಸುತ್ತದೆ.
   
"ಸುಖ ದುಃಖಗಳ ಮಿಶ್ರಣವೇ ಜೀವನ , ಬೇವುಬೆಲ್ಲದ ತೆರದಿ
ಎದುರಿಸಿ ಎದೆಗುಂದದೆ, ಭದ್ರವಾಗಲಿ ಆತ್ಮವಿಶ್ವಾಸದ ತಳಹದಿ
ಉಕ್ಕಿಹರಿಯಲಿ ಬದುಕಿನಲಿ, ಸುಖ, ಶಾಂತಿ ನೆಮ್ಮದಿಗಳ ಜೀವನದಿ
ಈ ಯುಗಾದಿ ತೆರೆಯಲಿ ನಿಮ್ಮೆಲರ ಬಾಳಿನಲಿ ಹೊಸಬೆಳಕಿನ ಹಾದಿ"-
ಕನ್ನಡ ಬ್ಲಾಗಿನ ಮತ್ತೋರ್ವ ಬರಹಗಾರ 'ಅರುಣ್ ರಂಗ' ಅವರ ಯುಗಾದಿ ಶುಭಾಶಯದ ಸಾಲುಗಳು ಇವು.
ಚೈತ್ರಮಯವಾಗುವ ಭುವಿ ಹೊಸತನದ ತೊಟ್ಟಿಲಲಿ ತೂಗುವಾಗ ಹೀಗೆ ಭಾವುಕ ಮನಸುಗಳೂ ಅರಳುತ್ತವೆ. ಭೃಂಗದ ಕಂಪು ಹೊರಸೂಸಿ ಪ್ರತಿಯೊಬ್ಬರ ಮನವು ಹೊಸ ವರ್ಷದ ಹೊಸ್ತಿಲಲ್ಲಿ ಬದುಕನ್ನು ಹದಗೊಳಿಸುವ ಚಿಂತನೆಯತ್ತ ಸಾಗುತ್ತದೆ. ಕಳೆದ ಖರ ಸವಂತ್ಸರದಲಿ ಬೆಂದ ಮನಸುಗಳು 'ನಂದನ'ದಲಿ ನವ ಭರವಸೆಗಳನ್ನು ಹೊತ್ತುಕೊಂಡು ಜೀವಜಾಲದ ಹೊಸ ಚಿಗುರಿನ ಪಲ್ಲವಕೆ ಭಾಷ್ಯ ಬರೆಯಲಿ. ಹೊಸತನದ ಯುಗಾದಿ ಮತ್ತೆ ಮತ್ತೆ ಹರುಷವ ಹೊತ್ತು ಬರುತಿರಲಿ. ಈ ಹೊಸತನದಲಿ ಕನಸುಗಳನ್ನು ನನಸು ಮಾಡಿಕೊಳ್ಳೋಣ.
   
     ಮತ್ತದೇ ಹೊಸತನ ನಮ್ಮ ಚಿಂತನೆಗಳಲ್ಲಿ ಒಡಮೂಡಿ ನಮ್ಮ ಬರಹಗಳಲ್ಲಿ ಚಿಗುರೊಡೆಯಲಿ. ಕನ್ನಡ ಬ್ಲಾಗ್ ಮತ್ತಷ್ಟು ಬೆಳಗಲಿ.
ಕನ್ನಡ ಬ್ಲಾಗಿನ ಸರ್ವಸದಸ್ಯರಿಗೂ ಪರ್ವಕಾಲದ ಶುಭಾಶಯಗಳು.
    
ಪ್ರೀತಿಯಿರಲಿ,
ಪುಷ್ಪರಾಜ್ ಚೌಟ
======= 
 [ಮಾರ್ಗದರ್ಶನ: ಕನ್ನಡ ಬ್ಲಾಗ್ ನಿರ್ವಹಣಾ ತಂಡ. ಉತ್ತೇಜನ: ಕನ್ನಡ ಬ್ಲಾಗ್ ಕವಿ ಬಳಗ]

Sunday 19 February 2012

ಬರಹದ ಭಾವಗಳು - ಕನ್ನಡ ಬ್ಲಾಗಿನ ಬರಹಗಳ ಒಂದು ಜಿಜ್ಞಾಸೆ

    ಬರಹದ ವಸ್ತು ವಿಷಯ ಏನಾಗಿರಬೇಕು ಎಂಬುದೊಂದು ಜಿಜ್ಞಾಸು ವಿಚಾರ. ಭಿಕ್ಷೆ ಬೇಡುವ ಮಗುವಿನ ಬಗ್ಗೆ ಕವಿತೆ ಬರೆದು ಚಪ್ಪಾಳೆ ಗಿಟ್ಟಿಸಿಕೊಂಡರೆ ಆ ಮಗುವಿಗೆ ಅನ್ನ ದೊರಕದು, ಒಂದಷ್ಟು ಸಾಲುಗಳನ್ನು ಗೀಚಿದಂತಾಗುತ್ತದೆ ಅಷ್ಟೆ ಎಂದು ಅನೇಕರು ವಾದ ಮಾಡುತ್ತಾರೆ. ಓದುಗರು ಮೌಲಿಕ ತಳಹದಿಯಿರುವ ಸಾದೃಶ ವಿಚಾರಗಳನ್ನು ಹೆಚ್ಚು ಇಷ್ಟಪಡುತ್ತಾರೆಂಬುದು ಸಾರ್ವಕಾಲಿಕವಾಗಿ ಒಪ್ಪಿಕೊಳ್ಳುವಂತಹುದೆ. ತತ್ವಕ್ಕೆ ಕಾವ್ಯತ್ವವನ್ನು, ಸುತ್ತ ಕಾಣುವ ವಿಚಾರಕ್ಕೆ ವಿಸ್ಮಯವನ್ನು, ಯಾವುದೋ ತುಡಿತದ ವೈಭವೀಕರಣವನ್ನು ಕಾವ್ಯದಲ್ಲಿ ಒಗ್ಗಿಸಿಕೊಂಡರೆ ಶ್ರೇಷ್ಟವಾಗಿರುತ್ತದೆ ಎಂಬುದು ಒಪ್ಪಿತವೇ ಆದರೂ ಪ್ರತೀ ಬರಹಗಾರ ಒಂದು ಸಂಸ್ಕೃತಿ, ಭಾಷೆಯ ಪ್ರತೀಕವಾಗಿ ನಿಲ್ಲುತ್ತಾನೆ, ಕೆಲವು ವಿಚಾರಗಳ ಒಳ ಸುರುಳಿಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾನೆ, ಭಿಕ್ಷೆ ಬೇಡುವ ಮಗುವಿನ ಬಗ್ಗೆ ಮುಮ್ಮುಲ ಮರುಗಿ ಒಂದು ಸ್ಪಂದನೆಯನ್ನು ನಮಗೆ ಮುಟ್ಟಿಸುತ್ತಾನೆ, ಆ ಸ್ಪಂದನೆ ಸಮಾಜದ ಸ್ವಾಸ್ಥ್ಯಕ್ಕೆ ನೆರವಾಗಬಹುದು. ಈವೊತ್ತಿನ ಸ್ಥಿತಿಗೆ ಬರಹಗಳು ಹೆಚ್ಚಾಗಿ ಹುಟ್ಟಿಕೊಂಡು ತೊಡಕುಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತವೆ. ಒಂದು ಭಾಷೆಯ ಸಾಹಿತ್ಯ ಚರಿತ್ರೆ ಹೆಚ್ಚಾಗಿ ಅಂದಂದಿನ ಸ್ಥಿತಿಗನುಗುಣವಾಗಿ ರೂಪಾಂತರಗೊಳ್ಳುವುದೇ ಹೆಚ್ಚು.
       ಆದರೆ, ಕಥೆ ಕವನಗಳನ್ನು ನಮ್ಮ ಸಂತಸಕ್ಕೆ ಬರೆದರೂ ಅದನ್ನು ನಾವು ಪುಸ್ತಕದಲ್ಲಿಟ್ಟುಕೊಂಡು ನವಿಲುಗರಿಯಂತೆ ಮೊಟ್ಟೆ ಹಾಕಿಸುವುದಿಲ್ಲ. ಒಂದು ರಚನೆಯನ್ನು ಓದುಗರ ಮುಂದೆ ಇಟ್ಟ ಮೇಲೆ ಅದು ನಮ್ಮ ಸ್ವಂತಿಕೆಯನ್ನು ತಾತ್ಕಾಲಿಕವಾಗಿ ಕಳೆದುಕೊಂಡು ಓದುಗನ ತೆಕ್ಕೆಗೆ ಬೀಳುತ್ತದೆ. ಓದುಗನ ಮಟ್ಟಕ್ಕೆ ರಚನೆಯನ್ನು ಕೊಂಡೊಯ್ದು ಸಾರ್ವತ್ರಿಕ ಮಟ್ಟವನ್ನು ಬಿಂಬಿಸುವುದು ಬರಹಗಾರನ ಜವಾಬ್ದಾರಿ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಪಡಬೇಕು.
ವಿಮರ್ಶೆ ಮತ್ತು ಟೀಕೆ ಎಷ್ಟೇ ಕಾರಣಬದ್ಧವಾಗಿದ್ದರೂ ಚುಚ್ಚುವ, ವ್ಯಂಗ್ಯ ಅಥವಾ ಪೂರ್ವಗ್ರಹಪೀಡಿತವಾಗಿರಬಾರದು. ಕನ್ನಡಬ್ಲಾಗ್ ನಲ್ಲಿ ಯಾವುದೇ ವಿಮರ್ಶೆಯೂ ಆ ನಿಟ್ಟಿನಲ್ಲಿ ಹಾದಿ ತಪ್ಪಿಲ್ಲವೆಂಬ ಭರವಸೆಯಿದೆ. ವೈಯುಕ್ತಿಕ ನಿಂದನೆಗಿಳಿದವರನ್ನು, ವಿಚಾರ ಸಂಬಂಧವಿಲ್ಲದ ತುಂಟು ಓತಪ್ರೋತ ಮಾತುಗಾರರನ್ನು ನಿರ್ದಾಕ್ಷೀಣ್ಯವಾಗಿ ಕನ್ನಡಬ್ಲಾಗ್ ನ ನಿಯಮಕ್ಕನುಸಾರವಾಗಿ ಬ್ಲಾಗ್ ನಿಂದ ಅನರ್ಹಗೊಳಿಸಿದ್ದೇವೆ. ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ತಪ್ಪುಗಳನ್ನು ತಿದ್ದಿ, ತೀಡಿ ಒಂದು ಸತ್ವ ಬೆಳವಣಿಗೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ. ಇಲ್ಲಿನ ವಿಮರ್ಶೆಗಳ ಅಂತರ್ ಶಕ್ತಿಯಿಂದ ಲೇಖಕ ಮತ್ತೊಂದು ಬರವಣಿಗೆಗೆ ಕೂಡಲೇ ಅನುವಾಗಿ ನಿಧಾನವಾಗಿ ಸಾಹಿತ್ಯದ ಆಯಾಮಗಳಿಗೆ ಒಗ್ಗಿಕೊಳ್ಳುತ್ತಿದ್ದಾನೆ.
    ಎಲ್ಲರೂ ಸಂಪೂರ್ಣರಲ್ಲ, ಎಲ್ಲಾ ಬರಹಗಳು ಪಕ್ವವಲ್ಲ. ನಮ್ಮ ಕೊರತೆಗಳನ್ನು ಓದುಗರು ತೋರಿಸಿಕೊಡುವಾಗ ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ತಾಳ್ಮೆಯಿರಬೇಕು. ಬೆಳವಣಿಗೆ ಹಂತ ಹಂತವಾಗಿ ಸಾಗುತ್ತದೆ, ಹೂ ಮೃದು ಅರಿವಾಗಬೇಕಾರೆ, ಮುಳ್ಳಿನಿಂದ ಒಮ್ಮೆ ಚುಚ್ಚಿಸಿಕೊಂಡಿರಬೇಕು. ಕಹಿ ಸಿಹಿಗೆ ಶುದ್ಧ ಕನ್ನಡಿ. ಬರಹದ ಪ್ರಕಾರಗಳನ್ನು ತಿಳಿದುಕೊಂಡವರೊಬ್ಬರು ನಮ್ಮಲ್ಲಿರುವ ಯಾವುದೋ ಕೊರತೆಯನ್ನು ನೀಗಿಸಲು ಪ್ರಯತ್ನ ಪಟ್ಟಾಗ ನಾವು ಗೌರವಿಸಿ ಮುಂದುವರೆಯುವುದು ಕಲಿಯಬೇಕು. ಎಷ್ಟೋ ಜನ ನನ್ನ ಮನಸ್ಸಿನಲ್ಲಿರುವುದನ್ನು ನಾನು ಕೆತ್ತುತ್ತೇನೆ ಅದು ನನ್ನ ಯೋಗ್ಯತೆ, ನಿನ್ನ ಯೋಗ್ಯತೆ ಏನೆಂದೂ ಗೊತ್ತು, ನನ್ನ ಯೋಗ್ಯತೆ ನನಗೆ, ನಿನ್ನ ಯೋಗ್ಯತೆ ನಿನಗೆ ಎಂಬ ಅರ್ಥವಿಲ್ಲದ ಮಾತುಗಳನ್ನು ಹೇಳಿಕೊಂಡು ವಿಮರ್ಶೆ ಮಾಡಿದವರ ಮೇಲೆಯೇ ಅನೇಕ ಕವಿತೆಗಳನ್ನು ಕಟ್ಟಿದ್ದಾರೆ! ವಿಮರ್ಶೆಯು ನಿಮ್ಮನ್ನು ಹಂಗಿಸಲೆಂದೇ ನಿಂತಿದ್ದರೆ ನೀವು ಪ್ರಶ್ನೆ ಮಾಡುವುದರಲ್ಲಿ ಅಥವಾ ಸೂಕ್ತ ಸಮಜಾಯಿಷಿ ನೀಡುವುದರಲ್ಲಿ ತಪ್ಪಿಲ್ಲ.
    ಹಿರಿಯರ ಅನುಭವದ ಮಾತಿಗೆ ಹೆಗಲು ಕೊಟ್ಟು ಹೇಳುವುದಾದರೆ ಕನ್ನಡ ಬ್ಲಾಗ್ ನಲ್ಲಿನ ಕವಿತೆಗಳ ವಿಚಾರದಲ್ಲಿ ನನ್ನನ್ನೂ ಸೇರಿ ಇನ್ನೂ ಪಕ್ವ ಪ್ರಯತ್ನಗಳಾಗಬೇಕು. ನನ್ನ ಮನಸ್ಸಿನಲ್ಲಿರುವುದನ್ನು ಇಷ್ಟ ಬಂದಂತೆ ಕವಿತೆಯಲ್ಲಿ ಗೀಚುತ್ತೇನೆ ಎಂದರೆ ಅದು ನಮ್ಮ ಬೆಳವಣಿಗೆಯ ಉತ್ಪ್ರೇಕ್ಷೆಯಾದೀತು. ಅದೇ ಪದ್ಯಕ್ಕೂ ಗದ್ಯಕ್ಕೂ ಇರುವ ವ್ಯತ್ಯಾಸ. ಪದ್ಯದಲ್ಲಿ ಛಂದಶಾಸ್ತ್ರವಿದೆ, ಕಟ್ಟುಪಾಡಿದೆ. ಗದ್ಯಭಾಗಕ್ಕೆ ದೊರಕುವಷ್ಟು ಸ್ವಾತಂತ್ರ್ಯ ನಮಗೆ ಕವಿತೆ ಕಟ್ಟುವಾಗ ದೊರಕದು.ನನಗೆ ಕಬ್ಲಾದಲ್ಲಿ ಕಂಡು ಬಂದ ಒಂದಷ್ಟು ಕಾವ್ಯ ಮಜಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇನೆ. ಧನಾತ್ಮಕವಾಗಿ ತೆಗೆದುಕೊಳ್ಳುವ ಉದಾರತೆ ಅಣ್ಣಂದಿರು ಮತ್ತು ಅಕ್ಕಂದಿರಲ್ಲಿರಲಿ. 
    ಮೊದಲನೆಯದಾಗಿ ಕೆಲವು ಕವಿತೆಗಳಲ್ಲಿ ಭಾವ ಸಂಕೀರ್ಣತೆ ಎದ್ದು ಕಾಣುತ್ತದೆ. ಕಳೆದ ವಾರ ಅಶೋಕ್ ಗೌಡ ಎಂಬುವವರು ಕಳೆದುಹೋದ ಪ್ರಿಯತಮೆಯ ಬಗ್ಗೆ ಕವಿತೆ ಬರೆಯುವಾಗ ಮೊದಲ ಚರಣದಲ್ಲಿ 'ನರಳಿ ನರಳಿ ಸತ್ತೆ' ಎಂದಿದ್ದದ್ದು ಕೊನೆಯ ಚರಣಕ್ಕೆ ಬರುವಷ್ಟರಲ್ಲಿ 'ನೀ ಹೋದದ್ದು ಇಂದಿಗೂ ಒಳಿತೆ, ನೆಮ್ಮದಿಯ ಸಾವಿಗೆ ಕಾಯುತ್ತಿದ್ದೇನೆ' ಎಂದಿತ್ತು. ಇದನ್ನೇ ಭಾವಸಂಕೀರ್ಣತೆ ಎನ್ನುವುದು. ಕವಿತೆ ಕೆಲವೇ ಸಾಲುಗಳಲ್ಲಿ ವ್ಯಕ್ತಗೊಳ್ಳುವುದರಿಂದ ಭಾವನೆಯನ್ನು ಕವಲೊಡೆಸುವಾಗ ಜಾಗರೂಕರಾಗಿರಬೇಕು. ಈ ರೀತಿ ಅಭಿಮುಖಕೋನಗಳು ಒಟ್ಟಿಗೆ ಮೇಳೈಸಿದಾಗ ಓದುಗನ ಮನಸ್ಸಿನ ನಾಲಗೆ ತೊಡರುತ್ತದೆ. ಆಗ ಕವಿಯ ಭಾವ ಸಂಕೀರ್ಣತೆ ಮೇಲ್ನೋಟಕ್ಕೆ ಗೋಚರವಾಗುತ್ತದೆ. ಜೊತೆಗೆ ಕನ್ನಡಬ್ಲಾಗ್ ಓದುಗನ ಮಟ್ಟವನ್ನೂ ನಾವು ಅರಿತುಕೊಳ್ಳಬೇಕಾಗುತ್ತದೆ. ಎಷ್ಟೋ ಅಣ್ಣಂದಿರು, ಅಕ್ಕಂದಿರು ನನ್ನದೇ ಅನೇಕ ಕವಿತೆಗಳನ್ನು ಅರ್ಥವಾಗಿಲ್ಲವೆಂದು ಹೇಳಿದ್ದಾರೆ. ಅದು ನನಗೆ ಸ್ವೀಕೃತ. ಅಲ್ಲಿ ನಾನು ಪ್ರತಿಮೆಗಳನ್ನು ಉಪಯೋಗಿಸಿಲ್ಲ, ಕ್ಲಿಷ್ಟಭಾಷೆಯಿಲ್ಲವಾದರೂ ಕವಿತೆಯ ಭಾವ ಗ್ರಹಿಕೆಯ ವಿಚಾರದಲ್ಲಿ ತುಂಬಾ ಕ್ಲಿಷ್ಟವಾಗಿತ್ತು. ಓದುಗ ಗ್ರಹಿಕೆ ಮತ್ತು ಬೇಡಿಕೆಯನ್ನು ಅರ್ಥ ಮಾಡಿಕೊಳ್ಳವುದೂ ಔಚಿತ್ಯವಾಗಿರಲೆಂಬುದೆನ್ನ ಬಯಕೆ.
            ಎರಡನೆಯದಾಗಿ, ಕವಿತೆಯ ಪ್ರಮುಖ ಆಕರ್ಷಣೆಯೆಂದರೆ ಲಯ. ಲಯಬದ್ಧ ಸಾಲುಗಳು ಕವಿತೆಗೆ ಮೂರ್ತರೂಪ ಕೊಡುತ್ತದೆ, ಲಯವಿಲ್ಲದ ಬರಹ ಕವಿತೆಯಾಗುವುದಿಲ್ಲ. ಕನ್ನಡಬ್ಲಾಗ್ ನ ಹಿರಿಯರು, ಅನುಭವಿಗಳು ಈ ವಿಚಾರದಲ್ಲಿ ಮೊದಲಿನಿಂದಲೂ ರಾಜಿಯಾಗಿಲ್ಲ, ಅಲ್ಲಲ್ಲಿ ಇಂತಹ ಸೂಕ್ಷ್ಮಗಳನ್ನು ಬೊಟ್ಟು ಮಾಡುತ್ತಾ ಬರುತ್ತಿದ್ದಾರೆ.
ಉದಾಹರಣೆಗೆ:
ಯಾವ ದೇವರಿಗೂ
ಕೂಡ ಕರುಣೆ ಎಂಬುದೇ ಇಲ್ಲ.
"ಹುಟ್ಟಿಸಿದ ದೇವರು,
ಹುಲ್ಲು ತಿನ್ನಿಸುವುದಿಲ್ಲ'"
ಎನ್ನುವುದೆಲ್ಲವೂ ಬರೀ ಸುಳ್ಳು..!!
-ಯಾವ ದೇವರಿಗೂ ಕೂಡ ಕರುಣೆ ಎಂಬುದೇ ಇಲ್ಲ. ಹುಟ್ಟಿಸಿದ ದೇವರು ಹುಲ್ಲು ತಿನ್ನಿಸುವುದಿಲ್ಲ ಎನ್ನುವುದೆಲ್ಲವೂ ಬರೀ ಸುಳ್ಳು. - ಇದು ಗದ್ಯರೂಪ
ಮತ್ತೊಂದು ಉದಾಹರಣೆ:
ಪ್ರೀತಿ ಮಾಡಲು ನಾನು ಪ್ರಯತ್ನಿಸಿದೆ
ಆದರೆ ಅದೆ ಪ್ರೀತಿ ಇಷ್ಟು ನೋವನ್ನು
ನೀಡಿ ಹೃದಯ ಕೊಲ್ಲುತ್ತದೆಂಬುದು ತಿಳಿದಿರಲಿಲ್ಲ
 -ಪ್ರೀತಿ ಮಾಡಲು ನಾನು ಪ್ರಯತ್ನಿಸಿದೆ. ಆದರೆ ಅದೆ ಪ್ರೀತಿ ಇಷ್ಟು ನೋವನ್ನು ನೀಡಿ ಹೃದಯ ಕೊಲ್ಲುತ್ತದೆಂಬುದು ತಿಳಿದಿರಲಿಲ್ಲ
ಲಯಬದ್ಧವಾದ ಒಂದಷ್ಟು ತುಣುಕುಗಳು-
ವಿಸ್ತಾರದ ಸಾಗರವೂ ಇತ್ತು ಮೊದಲು ಬಿಂದು,
ಒಂದು ಕಾಳಿನಿಂದ ಬೆಳೆಯ ರಾಶಿಯಾಯಿತಿಂದು.
ಗಣಿತದೆಲ್ಲ ಎಣಿಕೆಗಳಿಗೆ ಆರಂಭವೇ ಒಂದು,
ಒಂದರಿಂದಲೇ ಅನಂತ, ಸತ್ಯವಿದೆಂದೆಂದೂ..
-ಇಲ್ಲಿ ಸಾಲುಗಳು ಲಯಬದ್ಧವಾಗಿದೆ. ಲಯ ಗಳಿಸುವ ಅವಸರದಲ್ಲಿ ಕವಿತೆಯ ಭಾವಕ್ಕೆ ಧಕ್ಕೆ ಬಂದಿಲ್ಲ, ಕವಿ ಭೀಮಸೇನ್ ಪುರೋಹಿತರು ತಮ್ಮ ವೈಚಾರಿಕತೆಯನ್ನೂ ಮರೆತಿಲ್ಲ, ಪಕ್ವವಾಗಿದೆ. ಜೊತೆಗೆ ಬಿಂದು, ರಾಶಿಯಾಯಿತಿಂದು, ಒಂದು, ಸತ್ಯವಿದೆಂದೆಂದೂ - ಈ ಪ್ರಾಸಪದಳು ಯಾವುದೋ ಹಂಗಿಗೆ ಬಂದಿಲ್ಲ. ಭಾವನೆಗಳಿಗೆ ಸಮರ್ಥವಾಗಿ ಆಸೀನವಾಗಿವೆ. ಕೆಲವೊಮ್ಮೆ ಪ್ರಾಸಪದಳಿಗೆ ತಡಕಾಡಿ ಕವಿತೆಯ ಭಾವಕ್ಕೆ ಧಕ್ಕೆ ತಂದುಕೊಳ್ಳುವ ಪೆದ್ದುತನವೂ ನಮ್ಮಲ್ಲಿದೆ.
 ಉದಾಹರಣೆಗೆ;
ನನ್ನವಳ ನೋಟ
ಸಿಹಿ ರಸದೂಟ
ಕೊಡುತ್ತಾಳೆ ಪ್ರೀತಿಯಲ್ಲಿ ಕಾಟ
 -ಇಲ್ಲಿ ಪ್ರೀತಿಯಲ್ಲಿ ಕಾಟ ಎಂದರೇನು, ನೋಟ ಸಿಹಿ ರಸದೂಟವಾದಮೇಲೆ ಕಾಟ ಬಂದದ್ದು ಯಾಕೆ? ರಸದೂಟ ಎಂಬ ಪದಕ್ಕೆ ಒಂದು ಪ್ರಾಸ ಬೇಕಾದ ನೆಪದಲ್ಲಿ ಕಾಟ ಎಂಬ ಪದ ಬಂದು ಕವಿತೆಯ ಭಾವಕ್ಕೆ ಧಕ್ಕೆಯಾಗಿದೆ.
     ಮೂರನೆಯದಾಗಿ, ಕವಿತೆಗಳಲ್ಲಿ ಸೂಕ್ತ ಪ್ರತಿಮೆಗಳಿದ್ದರೆ ಚೆನ್ನ. ಇರಲೇಬೇಕೆಂಬ ನಿಯಮವೇನಿಲ್ಲ. ಪ್ರತಿಮೆ ಗೊಂದಲಮಯವಾಗಿರಬಾರದು, ನೀವಂದುಕೊಂಡ ಭಾವನೆಯನ್ನು ಸಮರ್ಥವಾಗಿ ಓದುಗನಿಗೆ ಮುಟ್ಟಿಸುವ ಕೆಲಸವನ್ನು ಪ್ರತಿಮೆಯಿಂದ ಮಾಡಿಸಬೇಕು. ಪ್ರತಿಮೆ ಮತ್ತು ಪ್ರತೀಕಗಳು ಕವಿತೆಯನ್ನು ಓದುಗನಿಗೆ ತುಂಬಾ ಹತ್ತಿರವಾಗಿಸುತ್ತವೆ ಮತ್ತು ಭಾವನೆಯನ್ನು ಮನಸ್ಸಿಗೆ ಅತೀ ವೇಗವಾಗಿ ನಾಟಿಸುತ್ತವೆ ಹಾಗು ಕವಿತೆಯನ್ನು ಕೇರಿ ದಾಟಿಸಿ, ದೇಶದ ಗಡಿಯಾಚೆಗೆ ಕೊಂಡೊಯ್ಯುವ ತಾಕತ್ತು ಪ್ರತಿಮೆಗಿರುತ್ತದೆ.
ಒಂದಷ್ಟು ಉತ್ತಮ ಪ್ರತಿಮೆಗಳು;
ಎಡತಟಕ್ಕೊಂದು ಬಂಡೆ ನಾನು
ನಗುತ್ತೇನೆ ಹರಿವ ನದಿನೀರ ಕಂಡು
ದಿನಕ್ಕೊಂದು ರುಚಿ, ನಿನ್ನೆ ಕೆಸರು
ಇಂದು ತಿಳಿ, ನಾಳೆ ಬರಿದು
ಆಗಲೂ ಬಹುದು, ಭಯವಿಲ್ಲ
ನಾನು ಮಾತ್ರ ತಟಸ್ಥ!
-ಉದ್ದೇಶಿತ ಆಶಯವನ್ನು ಸ್ಫುಟವಾಗಿ ಅಚ್ಚೊತ್ತಿಸುವ ಪ್ರತಿಮೆ. ಈ ಚರಣದಲ್ಲಿನ ಎಡತಟ, ಬಂಡೆ, ಹರಿವ ನದಿನೀರ, ತಿಳಿ, ಬರಿದು, ತಟಸ್ಥ - ಈ ಪದಗಳ ನಡುವೆ ಆಕರ್ಷಣೀಯವಾದಂತಹ ಒಳ ಸೆಳೆತವಿದೆ. ಪುಷ್ಪರಾಜ ಚೌಟರ ಈ ಕವಿತೆಯಲ್ಲಿ ಬಂಡೆಯೆಂಬ ವಿಸ್ತಾರ ಪ್ರತಿಮೆ ವಿವಿಧ ಮಜಲುಗಳಲ್ಲಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸುತ್ತದೆ.
    ಇದರ ಜೊತೆಗೆ ಪದಗಳ ದೋಷ ಬರದಂತೆ ನಾವು ನೀವೆಲ್ಲ ಸಂಪೂರ್ಣವಾಗಿ ಗಮನ ಹರಿಸಬೇಕು. ಮುದ್ರಣದೋಷವಷ್ಟೇ ಅಲ್ಲ, ಪದಗಳು ಕವಿತೆಯ ಪಾದಕ್ಕೆ ಅಪಾರ್ಥವಾಗದಂತಿರಬಾರದು. ತರಂಗದಲ್ಲಿ ಪ್ರಕಟವಾಗಿದ್ದ ನನ್ನದೇ ಕವಿತೆಯಾದ 'ರಂಜಕದ ಕಡ್ಡಿಗಳು' ಕವಿತೆಯಲ್ಲಿ ಒಂದು ಕಡೆ 'ಭಂಡ ಗಂಡ ಅಮ್ಮ, ಸೊಸೆ ಕೊಂದು ಮತ್ತೊಂದು ತಂದಂತೆ' ಎಂಬ ಸಾಲುಗಳಲ್ಲಿ ಮತ್ತೊಂದು ಪದವನ್ನು ಮತ್ತೊಬ್ಬಳು ಪದ ಸಮೀಕ್ಷಿಸಿದ್ದರೆ ಚಂದವಿರುತ್ತಿತ್ತು ಎಂದೆನಿಸಿತ್ತು. ಹೀಗೆ ಕವಿತೆಯ ಪ್ರಕಾರಗಳು ಇನ್ನೂ ಇವೆ. ಮೂಲಭೂತವಾಗಿ ನಾವು ನೀವೆಲ್ಲಾ ಇಷ್ಟನ್ನು ತಿಳಿದುಕೊಂಡರೆ ಸ್ವಲ್ಪ ಮಟ್ಟಿನ ಯಶಸ್ಸನ್ನು ಕಾಣಬಹುದೆಂಬುದು ನನ್ನಾಶಯವಷ್ಟೆ.
         ಇದಲ್ಲದೇ ಉಳಿದ ಬರಹಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳಲಿ. ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಒಡಮೂಡಬೇಕು. ಕಥೆ ವರದಿ ಒಪ್ಪಿಸಿದಂತಿರಬಾರದು. ವರದಿ ಒಪ್ಪಿಸಲು ಪತ್ರಿಕೆಗಳಿವೆ, ವಿದ್ಯುನ್ಮಾನ ಮಾಧ್ಯಮ ಮಿತ್ರರಿದ್ದಾರೆ. ಕಥೆ ಓದುಗನಲ್ಲಿ ಓದುವ ಉತ್ಸಾಹ ಮೂಡಿಸಬೇಕು, ವೈಚಾರಿಕತೆಯಿರಬೇಕು, ತಿರುವುಗಳಿರಬೇಕು. ಈ ವಿಚಾರವನ್ನು ಪೂರೈಸುವ ಕೆಲವು ಕಥೆಗಳಿವೆ. ಈಶ್ವರ ಕಿರಣ ಭಟ್ಟರ 'ಇಬ್ಬಂದಿ' ಕಥೆಯು ತನ್ನ ವೈಚಾರಿಕತೆಯ ಪರದೆಯನ್ನು ಎಳೆ ಎಳೆಯಾಗಿ ಬಿಚ್ಚುತ್ತ ಸಾಗುತ್ತದೆ. ಅದು ಒಂದು ಘಟನೆಯ ಕೇವಲ ವರದಿಯಲ್ಲದೇ ಮೂರು ತಲೆ ಮಾರಿನ ಕಥೆಯನ್ನು ಒಂದೇ ಓಘದಲ್ಲಿ ಕೊಂಡೊಯ್ಯುತ್ತದೆ. ಜೊತೆಗೆ ಸತೀಶ್ ಡಿ ರಾಮನಗರ ರವರ 'ಕಥೆ ಹೇಳುವೆ' ಕಥೆಯೂ ತನ್ನ ನೈಜತೆಯಿಂದ, ಭಾವನೆಗಳ ತಾಕಲಾಟಗಳ ಸ್ಪಷ್ಟ ವಿಡಂಬನೆಯಿಂದ ಮನ ಗೆದ್ದಿದೆ. ತ್ಯಾಂಪ ಪುರಾಣ ತನ್ನ ವಿಶಿಷ್ಟ ಹಾಸ್ಯಲೇಪನದ ಮೂಲಕ ಎದೆ ಮಾತಾಗಿದೆ.
========
ಸರ್ವರಿಗೂ ಶುಭವಾಗಲಿ.
ಮೋಹನ್ ವಿ ಕೊಳ್ಳೇಗಾಲ
[ಮಾರ್ಗದರ್ಶನ:ರವಿ ಮೂರ್ನಾಡ್]
========
[ಅರಿಕೆ:ಇಲ್ಲಿ ತೆಗೆದುಕೊಂಡಿರುವ ಉದಾಹರಣೆಗಳು ಕೇವಲ ಸಾಂದರ್ಭಿಕ ಮತ್ತು ಆ ಕ್ಷಣಕ್ಕೆ ದೊರಕಿದವಷ್ಟೆ. ಕನ್ನಡ ಬ್ಲಾಗ್ ನ ಪ್ರತೀ ಬರಹದ ಮೇಲೂ ನನಗೆ ಅಪಾರ ಗೌರವವಿದೆ]